ಜೆಡಿಎಸ್‌ ಅಹೋರಾತ್ರಿ ಧರಣಿ ವಾಪಸ್: ಸಿಎಂ ಬೊಮ್ಮಾಯಿ ಮನವೊಲಿಕೆ

By Govindaraj SFirst Published Sep 23, 2022, 1:00 AM IST
Highlights

ಬಿಎಂಎಸ್‌ ಎಜುಕೇಷನಲ್‌ ಟ್ರಸ್ಟ್‌ನಲ್ಲಿ ಆಗಿರುವ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದ ಜೆಡಿಎಸ್‌ ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವೊಲಿಕೆ ಹಿನ್ನೆಲೆಯಲ್ಲಿ ಧರಣಿ ಹಿಂಪಡೆದಿದ್ದು, ಶುಕ್ರವಾರ ಸದನದಲ್ಲಿ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ.
 

ವಿಧಾನಸಭೆ (ಸೆ.23): ಬಿಎಂಎಸ್‌ ಎಜುಕೇಷನಲ್‌ ಟ್ರಸ್ಟ್‌ನಲ್ಲಿ ಆಗಿರುವ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದ ಜೆಡಿಎಸ್‌ ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವೊಲಿಕೆ ಹಿನ್ನೆಲೆಯಲ್ಲಿ ಧರಣಿ ಹಿಂಪಡೆದಿದ್ದು, ಶುಕ್ರವಾರ ಸದನದಲ್ಲಿ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ.

ಬಿಎಂಎಸ್‌ ಎಜುಕೇಷನಲ್‌ ಟ್ರಸ್ಟ್‌ನಲ್ಲಿ ಆಜೀವ ಟ್ರಸ್ಟಿ ನೇಮಕದಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ಇದಕ್ಕೆ ಪ್ರೋತ್ಸಾಹ ನೀಡಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್‌ ತಲೆದಂಡ ಆಗಬೇಕು ಹಾಗೂ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ವಹಿಸಬೇಕು ಎಂದು ಎಚ್‌.ಡಿ. ಕುಮಾರಸ್ವಾಮಿ ಅವರು ಆಗ್ರಹ ಮಾಡಿದ್ದರು. ಇದನ್ನು ತಳ್ಳಿ ಹಾಕಿದ ಸಚಿವ ಅಶ್ವತ್ಥ ನಾರಾಯಣ್‌ ಯಾವುದೇ ರೀತಿಯ ಅಕ್ರಮ ಆಗಿಲ್ಲ, ಹೀಗಾಗಿ ತನಿಖೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ವೇಳೆ ಉಂಟಾಗಿದ್ದ ಜಟಾಪಟಿಯ ನಡುವೆ ಸ್ಪೀಕರ್‌ ಸದನವನ್ನು ಶುಕ್ರವಾರಕ್ಕೆ ಮುಂದೂಡಿದ್ದರು.

ಇಂದು ಭ್ರಷ್ಟಾಚಾರಿಗಳ ಹೆಸರು ಬಯಲು: ಕಾಂಗ್ರೆಸ್‌ಗೆ ತಿರುಗೇಟು ಕೊಟ್ಟ ಸಿಎಂ

ಇದರಿಂದ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿ ವಿಧಾನಸಭೆಯಲ್ಲೇ ಬೀಡು ಬಿಟ್ಟಿದ್ದ ಕುಮಾರಸ್ವಾಮಿ ಹಾಗೂ ಸದಸ್ಯರು ರಾತ್ರಿ ವಾಸ್ತವ್ಯಕ್ಕೆ ಅಗತ್ಯ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಈ ವೇಳೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಹೋರಾತ್ರಿ ಧರಣಿ ಹಿಂಪಡೆಯುವಂತೆ ಮನವೊಲಿಸಿದ್ದಾರೆ.

ಸಿಎಂ ಉತ್ತರದ ಭರವಸೆ: ಪ್ರಕರಣದ ಬಗ್ಗೆ ಶುಕ್ರವಾರ ಖುದ್ದು ನಾನೇ ಉತ್ತರ ನೀಡುತ್ತೇನೆ. ಜತೆಗೆ ಶುಕ್ರವಾರ ಚರ್ಚೆಗೂ ಅವಕಾಶ ನೀಡಲಾಗುವುದು. ಹೀಗಾಗಿ ಅಹೋರಾತ್ರಿ ಧರಣಿಯನ್ನು ಹಿಂಪಡೆಯಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಅಹೋರಾತ್ರಿ ಧರಣಿ ಹಿಂಪಡೆದರು ಎಂದು ತಿಳಿದುಬಂದಿದೆ.

ವಕ್ಫ್ ಆಸ್ತಿ ಕಬಳಿಕೆಯ ವರದಿ ಸದನದಲ್ಲಿ ಮಂಡನೆ: ಸಿಎಂ ಬೊಮ್ಮಾಯಿ

ಶುಕ್ರವಾರವೂ ಹೋರಾಟ ಮುಂದುವರೆಸುತ್ತೇವೆ
ಮುಖ್ಯಮಂತ್ರಿಗಳ ಭರವಸೆ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿ ಹಿಂಪಡೆದಿದ್ದೇವೆ. ಶುಕ್ರವಾರವೂ ಸದನದಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ. ಅಕ್ರಮದ ವಿರುದ್ಧ ತನಿಖೆ ನಡೆಸುವ ಭರವಸೆ ನೀಡುವವರೆಗೂ ನಮ್ಮ ಹೋರಾಟ ಕೈಬಿಡಲ್ಲ.
- ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

click me!