
ಬೆಂಗಳೂರು(ಏ.23): ಕರ್ನಾಟಕ ವಿಧಾಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಪೈಪೋಟಿ ಜೋರಾಗಿದೆ. ಆದರೆ ಈ ಪೈಪೋಟಿಯಲ್ಲಿ ಕಾಂಗ್ರೆಸ್ ಹಲವು ಅವಾಂತರಗಳನ್ನು ಮಾಡಿದೆ. ಈ ಪಟ್ಟಿಯನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್ ಯುವ ಮೋರ್ಚಾ ಅಧ್ಯಕ್ಷ ಬಿವಿ ಶ್ರೀನಿವಾಸ್ ಮೇಲೆ ಕಾಂಗ್ರೆಸ್ ನಾಯಕಿ ಗಂಭೀರ ಆರೋಪ ಮಾಡಿದ್ದಾರೆ. ಆದರೆ ಆರೋಪ ಮಾಡಿದ ನಾಯಕಿಯನ್ನು ಕಾಂಗ್ರೆಸ್ ಅಮಾನತು ಮಾಡಿದೆ. ಇತ್ತ ಸಿದ್ದರಾಮಯ್ಯ ಲಿಂಗಾಯಿತ ಸಮುದಾಯವನ್ನೇ ಅವಮಾನಿಸಿದ್ದಾರೆ. ಮಾಫಿಯಾ ಡಾನ್ ಅತೀಕ್ ಅಹಮ್ಮದ್ ಆಪ್ತಇಮ್ರಾನ್ ಪ್ರತಾಪ್ ಕಾಂಗ್ರೆಸ್ ಸ್ಟಾರ್ ಪ್ರಚಾರಕನಾಗಿ ನೇಮಿಸಿಕೊಂಡಿದೆ. ಇವೆಲ್ಲಾ ಕಳೆದ 36 ಗಂಟೆಗಳಲ್ಲಿ ನಡೆದಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲಿನ ತನಿಖೆ ವಜಾ ಮಾಡಲು ಕೋರಿದ್ದ ಅರ್ಜಿ ತಿರಸ್ಕೃತಗೊಂಡಿದೆ. ಇನ್ನು ಕಾಂಗ್ರೆಸ್ ಪ್ರಮುಖ ನಾಯಕ ಎಂಬಿ ಪಾಟೀಲ್, ತಮ್ಮ ಕಾರ್ಯರ್ತನ ಮೇಲೆ ಹಲ್ಲೆ ಮಾಡಿದ್ದಾರೆ. ಇವೆಲ್ಲಾ ಕಳೆದ 36 ಗಂಟೆಯಲ್ಲಿ ಆಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜೀವ್ ಚಂದ್ರಶೇಖರ್, ಸಿದ್ದರಾಮಯ್ಯ ಸರ್ಕಾರದಲ್ಲಿ ಆಗಿರುವ ಭ್ರಷ್ಟಾಚಾರಗಳ ಪಟ್ಟಿಯನ್ನೇ ತೆರೆದಿಟ್ಟಿದ್ದಾರೆ.
ರಾಹುಲ್ ಗಾಂಧಿಯಿಂದ ಆಲಸಿತನದ ರಾಜಕೀಯ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಇಲ್ಲಿವಯರೆಗೆ ಜನರಿಗೆ ಅನುಕೂಲವಾಗುವ ಯಾವುದೇ ಕೆಲಸ ಮಾಡಿಲ್ಲ. ಕೊರೋನಾ ಸಮಯದಲ್ಲಿ ಜನರು ಸಂಕಷ್ಟದಲ್ಲಿರುವಾಗ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡಿದರು. ರಾಜ್ಯದಲ್ಲಿ ಸಿದ್ದರಾಮಯ ಸರ್ಕಾರದ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಹೀಗಾಗಿ 2018ರಲ್ಲಿ ಜನ ಸಿದ್ದರಾಮಯ್ಯ ಸರ್ಕಾರವನ್ನು ತಿರಸ್ಕರಿಸಿದರು. ಇದೀಗ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿದ್ದ ವೇಳೆ ಸಿದ್ದರಾಮಯ್ಯ ಲೋಕಾಯುಕ್ತಕ್ಕೆ ಬಾಗಿಲು ಹಾಕಿ, ಎಸಿಬಿ ಹುಟ್ಟು ಹಾಕಿದರು. ಈ ಮೂಲಕ ಸರ್ಕಾರ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿತು. ಇಂದು ನಾನು ಕಾಂಗ್ರೆಸ್ನ 2ಜಿ ಹಗರಣ ಸೇರಿದಂತೆ ಇತರ ಹಗರಣದ ಕುರಿತು ಮಾತನಾಡುವುದಿಲ್ಲ. ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದಿರುವ ಪ್ರಮುಖ ಹಗರಣದ ಕುರಿತು ಹೇಳುತ್ತೇನೆ ಎಂದ ರಾಜೀವ್ ಚಂದ್ರಶೇಖರ್, ಒಂದೊಂದೆ ಹಗರಣದ ಮಾಹಿತಿ ನೀಡಿದರು.
ಅರ್ಕಾವತಿ ಹಗರಣವನ್ನು ಜನರು ಮರೆತಿದ್ದಾರೆ ಎಂದು ಸಿದ್ದರಾಮಯ್ಯ ಭಾವಿಸಿದ್ದಾರೆ. ಸ್ಟೀಲ್ ಬ್ರಿಡ್ಡ್ ಹಗರಣ ಜನರ ಮನಸ್ಸಲ್ಲಿ ಇನ್ನು ಹಚ್ಚ ಹಸುರಾಗಿದೆ.ಹಣ ನೀಡಿದ ಪ್ರಕರಣ ಡೈರಿಯಲ್ಲಿ ಬಹಿರಂಗವಾಗಿದ್ದು ಜನ ಮರೆತಿಲ್ಲ. ಈ ಡೈರಿ ಯಾರದ್ದು ಅನ್ನೋದು ನಿಮಗೆಲ್ಲಾ ಗೊತ್ತಿದೆ. ಇಷ್ಟಕ್ಕೆ ಮುಗಿದಿಲ್ಲ. ಸಿದ್ದರಾಮಯ್ಯ ಹುಬ್ಲೋ ವಾಚ್ ಪ್ರಕರಣ ಸೇರಿದಂತೆ ಹಲವು ಹಗರಣಗಳು ಸಿದ್ದು ಕಾಲದಲ್ಲೇ ಆಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಅಕ್ರಣ ಗಣಿಗಾರಿಗೆ ಪ್ರಕರಣ ಒಂದೆಡೆ ಕಾಂಗ್ರೆಸ್ ಹಗರಣಗಳ ಗಂಭೀರತಯನ್ನು ಹೇಳುತ್ತಿದೆ. ಇತ್ತ ಡಿಕೆ ಶಿವಕುಮಾರ್ ಮೇಲಿನ ಪ್ರಕರಣ ವಿಚಾರಣೆ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದೆ. ಇದರ ಜೊತೆಗೆ ಸೋಲಾರ್ ಹಗರಣ ಒಂದಾ ಎರಡಾ ಎಂದು ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದ್ದಾರೆ. ಹೆಚ್ಸಿ ಮಹದೇವಪ್ಪ ಮರಳು ಹಗರಣದಲ್ಲಿ ಸಿಲುಕಿದ್ದರೂ ಟಿಕೆಟ್ ನೀಡಲಾಗಿದೆ. ಕೃಷ್ಣಪ್ಪ ಮೇಲೆ ಭ್ರಷ್ಟಾಚಾರ ಆರೋಪ ಇದೆ. ಇದೇ ಕಾರಣದಿಂದ ಜನರು 2018ರಲ್ಲಿ ಕಾಂಗ್ರೆಸ್ ತಿರಸ್ಕರಿಸಿದರು. ಆದರೂ ಹಿಂಭಾಗಿಲ ಮೂಲಕ ಅಧಿಕಾರ ಪಡೆಯಲು ಹೆಚ್ಡಿ ಕುಮಾರಸ್ವಾಮಿ ಜೊತೆ ಸರ್ಕಾರ ಮಾಡಿತು ಎಂದಿದ್ದಾರೆ.
ಕಾಂಗ್ರೆಸ್ ಧಿಕ್ಕರಿಸಿ ಕಮಲಕ್ಕೆ ಮತ ನೀಡಿ: ರಾಜೀವ್ ಚಂದ್ರಶೇಖರ್
ಸಿದ್ದರಾಮಯ್ಯರದು ಒಡೆದು ಆಳುವ ನೀತಿ. ಹಿಂದುಗಳನ್ನು ಒಡೆಯಲು ಮುಂದಾಗಿದ್ದಾರೆ. ಈಗ ಲಿಂಗಾಯಿತರನ್ನು ಭ್ರಷ್ಟರು ಎಂದು ಬಳಿಕ ಹೇಳಿಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಇತಿಹಾಸ ತೆಗೆದು ನೋಡಿದರೆ ಅವರ ಒಡೆದು ಆಳುವ ನೀತಿ ಸ್ಪಷ್ಟವಾಗುತ್ತದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಅಭಿವೃದ್ಧಿ ಕೆಲಸ ಮಾಡುತ್ತಿದೆ. ನಾಳೆ ಅಮಿತ್ ಶಾ ಹಾಗೂ ಜೆಪಿ ನಡ್ಡಾ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಸಕಲೇಶಪುರ, ಹಾಸನ ಮೈಸೂರು ಹುಬ್ಬಳ್ಳಿಯಲ್ಲಿ ಅಮಿತ್ ಶಾ ಕಾರ್ಯಕ್ರಮಗಳು ನಡೆಯಲಿದೆ. ಬೆಂಗಳೂರು ಚಿಕ್ಕಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ, ನೆಲಮಂಗಲದಲ್ಲಿ ಜೆಪಿ ನಡ್ಡಾ ಕಾರ್ಯಕ್ರಮದಲಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.