ಸಿಎಂ ಅಭ್ಯರ್ಥಿ ಘೋಷಿಸಿದರೆ ಬಿಜೆಪಿ, ಕೈ ಹೋಳು: ಸಿ.ಎಂ.ಇಬ್ರಾಹಿಂ

Published : Jan 23, 2023, 09:46 AM IST
ಸಿಎಂ ಅಭ್ಯರ್ಥಿ ಘೋಷಿಸಿದರೆ ಬಿಜೆಪಿ, ಕೈ ಹೋಳು: ಸಿ.ಎಂ.ಇಬ್ರಾಹಿಂ

ಸಾರಾಂಶ

ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸುವ ಧೈರ್ಯ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಇಲ್ಲ. ಸಿಎಂ ಅಭ್ಯರ್ಥಿ ಯಾರೆಂದು ಘೋಷಿಸಿದ ದಿನವೇ ಕಾಂಗ್ರೆಸ್‌ ಹಾಗೂ ಬಿಜೆಪಿ ಒಡೆದು ಹೋಗುತ್ತವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಬೆಂಗಳೂರು (ಜ.23): ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸುವ ಧೈರ್ಯ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಇಲ್ಲ. ಸಿಎಂ ಅಭ್ಯರ್ಥಿ ಯಾರೆಂದು ಘೋಷಿಸಿದ ದಿನವೇ ಕಾಂಗ್ರೆಸ್‌ ಹಾಗೂ ಬಿಜೆಪಿ ಒಡೆದು ಹೋಗುತ್ತವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರಿಗೆ ಧೈರ್ಯವಿದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೋಷಿಸಬೇಕು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅಥವಾ ಜಿ. ಪರಮೇಶ್ವರ್‌ ಪೈಕಿ ಯಾರು ತಮ್ಮ ಅಭ್ಯರ್ಥಿ ಎಂದು ಹೇಳಬೇಕು. 

ಆದರೆ ಹೆಸರು ಹೇಳಿದ ದಿನವೇ ಕಾಂಗ್ರೆಸ್‌ ಒಡೆದು ಹೋಗುತ್ತದೆ. ಇದೇ ಸ್ಥಿತಿ ಬಿಜೆಪಿ ಪಕ್ಷದ್ದಾಗಿದೆ, ಎಲ್ಲರೂ ಸಾಮೂಹಿಕ ನಾಯಕತ್ವ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಮೋದಿ, ಅಮಿತಾ ಶಾ ಅವರ ನಿರ್ಧಾರವೇ ಅಂತಿಮವಾಗಿದೆ ಎಂದರು. ಕಾಂಗ್ರೆಸ್‌ ಮುಖಂಡರು ತಮ್ಮ ಕಾರ್ಯಕ್ರಮದಲ್ಲಿ ನಮ್ಮ ಪಕ್ಷದ ಬಗ್ಗೆ ಟೀಕೆ ಮಾಡಿಕೊಂಡು ಓಡಾಡುತ್ತಿದ್ದಾರೆ. ನಮ್ಮ ಸಮೀಕ್ಷೆ ಪ್ರಕಾರ ಜೆಡಿಎಸ್‌ 80 ಕ್ಷೇತ್ರಗಳಲ್ಲಿ ಗೆಲ್ಲುವುದು ಖಚಿತವಾಗಿದೆ. ನಮಗೆ ಯಾವುದೇ ರೀತಿ ಸಮೀಕ್ಷೆ ಮಾಡುವ ಅವಶ್ಯಕತೆ ಇಲ್ಲ, ಚುನಾವಣೆಯಾದ ಮೇಲೆ ಇವರೇ ನಮ್ಮ ಮನೆ ಬಾಗಿಲಿಗೆ ಬರುತ್ತಾರೆ ಎಂದರು.

ಸಿದ್ದರಾಮಯ್ಯ ಬಲವಂತಕ್ಕೆ ಕೋಲಾರದಿಂದ ಸ್ಪರ್ಧಿಸಲು ಬರುತ್ತಿದ್ದಾರೆ: ಸಿ.ಎಂ.ಇಬ್ರಾಹಿಂ

ಪಕ್ಷದ ಪಂಚಯಾತ್ರೆಗೆ ನಿರೀಕ್ಷೆ ಮೀರಿ ಜನರು ಸ್ಪಂದಿಸುತ್ತಿದ್ದು, ಕಾಂಗ್ರೆಸ್‌ನವರು ಎಸಿ ಬಸ್‌ನಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಹೋಗಿ ಕರೆದುಕೊಂಡು ಬಂದ ಜನಕ್ಕೆ ಭಾಷಣ ಮಾಡಿ ಬಿರಿಯಾನಿ ತಿಂದು ಬರುತ್ತಿದ್ದಾರೆ. ನಾವು ಹಳ್ಳಿಯಿಂದ ಹಳ್ಳಿಗೆ ಹೋಗಿ ಬಂದ ಜನರ ಮುಂದೆ ಭಾಷಣ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರು ಕೋಲಾರಕ್ಕೆ ಹೋಗಿ ಅಭ್ಯರ್ಥಿ ಎಂದು ಘೋಷಿಸುವ ವೇಳೆ 1400 ಜನರಿಗೆ ಕುರ್ಚಿ ಹಾಕಿ ಸಭೆ ನಡೆಸಿದ್ದಾರೆ. ನಾವೇ ಬೆಳೆಸಿದ ಸಿದ್ದರಾಮಯ್ಯ ಅವರ ಸ್ಥಿತಿಯನ್ನು ನೋಡಿದರೆ ಅಯ್ಯೋ ಎನಿಸುತ್ತದೆ ಎಂದು ವ್ಯಂಗ್ಯವಾಡಿದರು. ನಮ್ಮ ಪಕ್ಷವನ್ನು ಟೀಕಿಸುವ ಬದಲು ತಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ಎಂಬುದನ್ನು ಸಿದ್ದರಾಮಯ್ಯ ಅವರು ನೋಡಿಕೊಳ್ಳಲಿ ಎಂದು ಟೀಕಿಸಿದರು.

ಫೆಬ್ರವರಿ ನಂತರ ಜೆಡಿಎಸ್‌ಗೆ ಬರುವವರ ಪಟ್ಟಿ: ಫೆಬ್ರವರಿ ಮುಗಿದ ನಂತರ ಜೆಡಿಎಸ್‌ ಪಕ್ಷಕ್ಕೆ ಬರುವವರ ಪಟ್ಟಿಯನ್ನು ನಿಮ್ಮ ಮುಂದೆ ಇಡುವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ಕಾಂಗ್ರೆಸ್‌ ಪಕ್ಷಕ್ಕೆ ಇದುವರೆಗೂ ಸಿಎಂ ಅಭ್ಯರ್ಥಿ ಯಾರೆಂಬುವುದು ಘೋಷಿಸಲು ಆಗಿಲ್ಲ. ರಾಹುಲ್‌ ಗಾಂಧಿಗೆ ಭಾರತ ಜೋಡೋ ಒತ್ತಟ್ಟಿಗಿರಲಿ. ತಮ್ಮ ಪಕ್ಷವನ್ನೇ ಜೋಡಿಸಲಾಗಿಲ್ಲ ಎಂದ ಅವರು, ಬಿಜೆಪಿ ಹೆಸರು ತೆಗೆದರೆ ವಾಕರಿಕೆ ಬರುತ್ತದೆ. ಮೋದಿ ಬಂದರೆ ರೊಕ್ಕ ಕೊಟ್ಟು ರೈತರನ್ನು ಕರೆದುಕೊಂಡು ಹೋಗುತ್ತಿದ್ದಾರೆ. 

Mandya: ಇಬ್ರಾಹಿಂರಿಂದಲೇ ಜೆಡಿಎಸ್‌ ಅವನತಿ: ಸಿ.ಪಿ.ಯೋಗೇಶ್ವರ್‌

ಆದರೆ, ಮಣ್ಣಿನ ಮಗ ದೇವೇಗೌಡರ ಪುತ್ರ ಕುಮಾರಸ್ವಾಮಿ ತಾನೇ ರೈತರ ಬಳಿ ಬರುತ್ತಿದ್ದಾನೆ. ಇದು ನಿಜವಾದ ನಾಯಕತ್ವ ಎಂದು ತಿಳಿಸಿದರು. ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿರುವ ನಳಿನಕುಮಾರ ಕಟೀಲ್‌ ಅವರು ಬೇಷರತ್ತಾಗಿ ಕ್ಷಮೆ ಯಾಚಿಸಬೇಕು. ಇಲ್ಲವಾದರೇ ಅವರು ಕಾಲಿಡುವ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮುಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾಸ್ವಾಮಿ ಅವರು ಆಗದಿದ್ದರೇ ನಾನು ರಾಜಕೀಯದಿಂದ ನಿವೃತ್ತಿ ಹೊಂದುವೆ. ಮುಂದಿನ ಮುಖ್ಯಮಂತ್ರಿ ಯಾರು ಎಂಬುವುದನ್ನು ಹೇಳುವ ಶಕ್ತಿ ಕಾಂಗ್ರೆಸ್‌ ಬಳಿ ಇಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮನೆಯೊಂದು ಮೂರು ಬಾಗಿಲಾದ ಮೈಸೂರು JDS: ಅಪ್ಪನ ವಿರುದ್ಧವೇ ಮಗ? GTDಗೆ HDK ಬಿಗ್‌ ಶಾಕ್!
ಜ। ನರವಣೆ ಆತ್ಮಚರಿತ್ರೆ ಬಗ್ಗೆ ರಾಹುಲ್‌ ವರ್ಸಸ್ ಪೆಂಗ್ವಿನ್‌