ಪರಿಷತ್‌ನಲ್ಲಿ ಸದ್ದು ಮಾಡಿದ ಡಿಫರೆಂಟ್ ಹಾರಗಳ ಅಬ್ಬರ: ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ

By BK AshwinFirst Published Feb 15, 2023, 2:21 PM IST
Highlights

ಸರ್ಕಾರ ಕೂಡಲೇ ಜೆಸಿಬಿ, ಕ್ರೇನ್‌ನಿಂದ ಹಾರ ಹಾಕಿಸೋದನ್ನ ರದ್ದು ಮಾಡಬೇಕು ಅಂತ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಒತ್ತಾಯ ಮಾಡಿದ್ದಾರೆ. 

ಬೆಂಗಳೂರು (ಫೆಬ್ರವರಿ 15, 2023): ಜೆಡಿಎಸ್‌ ಪಂಚರತ್ನ ಯಾತ್ರೆ ವೇಳೆ ಕರ್ನಾಟಕ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತರಹೇವಾರಿ ಹಾರ ಹಾಕಲಾಗುತ್ತಿದೆ. ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ವಿಷಯ ಪ್ರಸ್ತಾಪವಾಗಿದೆ. ಶೂನ್ಯ ವೇಳೆಯಲ್ಲಿ ಜೆಡಿಎಸ್‌ ಸದಸ್ಯ  ಮರಿತಿಬ್ಬೇಗೌಡ ಅವರಿಂದಲೇ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ಕುಮಾರಸ್ವಾಮಿ ಹೆಸರು ಹೇಳದೆ, ಕಾರ್ಯಕ್ರಮದ ಹೆಸರು ಹೇಳದೆ ಹಾರಗಳ ಬಗ್ಗೆ ಎಂಎಲ್‌ಸಿ ಮರಿತಿಬ್ಬೇಗೌಡ ಪ್ರಸ್ತಾಪ ಮಾಡಿದ್ದಾರೆ.  

ಮನೋರಂಜನೆ, ಪ್ರತಿಷ್ಠೆಗಾಗಿ ಜೆಸಿಬಿ, ಕ್ರೇನ್ ಮೂಲಕ ದೊಡ್ಡ ದೊಡ್ಡ ಹಾರ ಹಾಕುತ್ತಿದ್ದಾರೆ. ಅನಾನಸ್, ಕೊಬ್ಬರಿ, ಸೇಬು, ಮೂಸಂಬಿ, ಕಬ್ಬು, ಭತ್ತ, ಕಡಲೇಕಾಯಿ ಹಾರಗಳನ್ನ ಹಾಕಲಾಗುತ್ತಿದೆ. ಜನಸಂದಣಿ ಸೇರಿದ ಜಾಗದಲ್ಲಿ ಬೃಹತ್ ಕ್ರೇನ್, ಜೆಸಿಬಿ ಬಳಕೆ ಅಪರಾಧ. ಆದರೂ, ಸಮಾರಂಭ, ಮನರಂಜನೆ, ಜಾತ್ರೆ, ದುರವಣಿಗೆ ಮತ್ತು ಖಾಸಗಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗಣ್ಯ ವ್ಯಕ್ತಿಗಳಿಗೆ ಹಾಗೂ ರಾಜಕಾರಣಿಗಳಿಗೆ  ಅಭಿಮಾನಿಗಳು ಹಾರ ಹಾಕುತ್ತಿದ್ದಾರೆ. ದೊಡ್ಡ ಗಾತ್ರದ ಹಾರ, ತುರಾಯಿಗಳನ್ನು ಹಾಕಲಾಗುತ್ತಿದೆ ಎಂದು ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಟೀಕೆ ಮಾಡಿದ್ದಾರೆ. 

Latest Videos

ಇದನ್ನು ಓದಿ: ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಪಾಠ ಕಲಿಸಿ: ಎಚ್‌.ಡಿ.ಕುಮಾರಸ್ವಾಮಿ

ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಈ ವಾಹನಗಳ ಬಳಕೆಯನ್ನು ಮೋಟರ್ ವೆಹಿಕಲ್ ಆಕ್ಟ್‌ ಸೆಕ್ಷನ್‌-200 ಅಡಿ ನಿಷೇದಿಸಲಾಗಿದೆ. ಆದರೂ ಸಹ ಈ ರೀತಿ ವಾಹನಗಳ ಬಳಕೆ ಕೆಲದ ವರ್ಷಗಳಿಂದ ರಾಜ್ಯದಲ್ಲಿ ನಿರಂತರವಾಗಿ ಸಾಗುತ್ತಿದೆ. ಅವಘಡಗಳು ಸಂಭವಿಸುತ್ತಿದ್ದರೂ ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಸರ್ಕಾರಗಳು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಸರ್ಕಾರ ಕೂಡಲೇ ಜೆಸಿಬಿ, ಕ್ರೇನ್‌ನಿಂದ ಹಾರ ಹಾಕಿಸೋದನ್ನ ರದ್ದು ಮಾಡಬೇಕು ಅಂತ ಒತ್ತಾಯ ಮಾಡಿದ್ದಾರೆ. ಜೆಡಿಎಸ್‌ ನಾಯಕ ಕುಮಾರಸ್ವಾಮಿ ಅವರ ಹೆಸರು ಹೇಳದೆ ಮಾಜಿ ಸಿಎಂ ನಡೆಗೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಹಲವು ತಿಂಗಳಿನಿಂದ ಜೆಡಿಎಸ್‌ ಪಂಚರತ್ನ ಯಾತ್ರೆ ನಡೆಯುತ್ತಿದ್ದು, ಈ ವೇಳೆ ಮಾಜಿ ಸಿಎಂ ಬೃಹತ್‌ ಹಾರಗಳನ್ನು ಕ್ರೇನ್‌, ಜೆಸಿಬಿ ಮೂಲಕ ಹಾಕಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಹಲವರಿಂದಲೂ ಟೀಕೆ ವ್ಯಕ್ತವಾಗುತ್ತಿದ್ದು, ಈಗ ಸ್ವತ: ಜೆಡಿಎಸ್‌ ಸದಸ್ಯರೇ ಈ ಬಗ್ಗೆ ಟೀಕೆ ಮಾಡಿರುವುದು ಕುತೂಹಲಕಾರಿಯಾಗಿದೆ. 

ಇದನ್ನೂ ಓದಿ: Karnataka Election:ಬೆಳಗಾವಿಯಲ್ಲಿ ಜೆಡಿಎಸ್‌ ಪಂಚರತ್ನ ಯಾತ್ರೆ ಶುರು: ಖಾನಾಪುರ ಕ್ಷೇತ್ರದಲ್ಲಿ ಹೆಚ್‌ಡಿಕೆ ಮಿಂಚಿನ ಸಂಚಾರ

ವಿಭಿನ್ನ ಹಾರಗಳು:

ಕೋಲಾರದಲ್ಲಿ 3 ಟನ್‌ ತೂಕದ ಟೊಮೆಟೋ ಹಾರ, ದೇವನಹಳ್ಳಿ ಕ್ಷೇತ್ರ ವ್ಯಾಪ್ತಿಯ ಕಾರಹಳ್ಳಿಯಲ್ಲಿ ಚಕ್ಕೋತ ಹಾರ, ಹಾರೋಹಳ್ಳಿ, ವೆಂಕಟಗಿರಿಕೋಟೆಯಲ್ಲಿ ದ್ರಾಕ್ಷಿ ಹಾರ, ಕೊರಟಗೆರೆಯ ಗೊಂದಿಹಳ್ಳಿಯಲ್ಲಿ ಕಡಲೆಕಾಯಿ ಹಾರ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರದ ತಿಪ್ಪೇನಹಳ್ಳಿ, ಬಿಜ್ಜವಾರದಲ್ಲಿ ಬಜ್ಜಿ ಮೆಣಸಿನಕಾಯಿ ಹಾರ, ಮಂಡ್ಯ, ತುಮಕೂರಿನ ಶಿರಾಗೇಟ್‌ ಬಳಿ ರಾಗಿ ಹಾರ, ತುರುವೇಕೆರೆಯಲ್ಲಿ ಎಳನೀರು, ಸಿಹಿ ಕುಂಬಳಕಾಯಿ, ಹೊಂಬಾಳೆ ಹಾರ, ತುಮಕೂರಿನ ಬಾಣಸಂದ್ರದಲ್ಲಿ ಡ್ರ್ಯಾಗನ್‌ ಫä್ರಟ್ಸ್‌ ಹಾರ, ದೊಡ್ಡರಸಿನಕೆರೆಯಲ್ಲಿ ನವಿಲುಕೋಸು, ನುಗ್ಗೆಸೊಪ್ಪಿನ ಹಾರ, ಮಧುಗಿರಿ, ಕೊರಟಗೆರೆಯ ಗೊಂದಿಹಳ್ಳಿಯಲ್ಲಿ ಕಡಲೆಕಾಯಿ ಹಾರ, ಕೊರಟಗೆರೆಯಲ್ಲಿ ಉದ್ದಿನವಡೆ ಹಾರ, ಪಾವಗಡದಲ್ಲಿ ಅನಾನಸ್‌ ಹಾರ, ಶಿರಾದ ಕೆಂಚಗಾನಹಳ್ಳಿಯಲ್ಲಿ ಕೊತ್ತಂಬರಿ ಸೊಪ್ಪಿನ ಹಾರ, ರಾಮನಗರದ ಹಜರತ್‌ ಫಿರೆನ್‌ ಷಾ ವಾಲಿ ದರ್ಗಾದಲ್ಲಿ ಬೃಹತ್‌ ಬಾದಾಮಿ ಹಾರ, ಶಿಡ್ಲಘಟ್ಟ, ಕನಕಪುರದಲ್ಲಿ ರೇಷ್ಮೆಗೂಡಿನ ಹಾರ, ಕನಕಪುರದ ಹೆಬ್ಬಾಗಿಲಿನಲ್ಲಿ ಬಾಳೆಗೊನೆ ಹಾರ ಹಾಕಿ ಸ್ವಾಗತ ಕೋರಲಾಗಿದೆ.

ಮದ್ದೂರಿನ ತೂಬಿನಕೆರೆ ಗೇಟ್‌ನಲ್ಲಿ ಜೋಳದ ಹಾರ, ಮೇಲುಕೋಟೆ, ಶ್ರೀರಂಗಪಟ್ಟಣದ ಮರಳಗಾಲ, ಮಂಡ್ಯ, ಗುರುದೇವನಹಳ್ಳಿ, ಸಾತನೂರು ವೃತ್ತದಲ್ಲಿ ಕಬ್ಬಿನ ಜಲ್ಲೆ ಹಾರ, ಮೇಲುಕೋಟೆಯ ಸುಂಕಾ ತೊಣ್ಣೂರಿನಲ್ಲಿ ಚೆರ್ರಿ ಹಣ್ಣಿನ ಹಾರ, ಹುಲಿಕೆರೆಯಲ್ಲಿ ಬೃಹತ್‌ ರುದ್ರಾಕ್ಷಿ ಹಾರ, ಕೆ.ಆರ್‌.ಪೇಟೆಯ ಹೊಸಹೊಳಲು, ಚಿಂತಾಮಣಿ, ಶಿಡ್ಲಘಟ್ಟ, ಕೋಲಾರದ ಉಪ್ತುಕುಂಟೆಯಲ್ಲಿ ಕನಕಾಂಬರ, ಸೇಬಿನ ಹಾರ, ನಾಗಮಂಗಲದ ಹೊನ್ನಾವರ, ಬಿಂಡಿಗನವಿಲೆ, ಕೆ.ಆರ್‌.ಪೇಟೆಯಲ್ಲಿ ಕೊಬ್ಬರಿ ಹಾರ, ನಾಗಮಂಗಲದ ಬೆಳ್ಳೂರಿನಲ್ಲಿ ಎಲೆಕೋಸಿನ ಹಾರ, ಮೇಲುಕೋಟೆ, ಶ್ರೀರಂಗಪಟ್ಟಣದ ಅರಕೆರೆಯಲ್ಲಿ ಭತ್ತದ ಹಾರ, ಚನ್ನಪಟ್ಟಣದಲ್ಲಿ ಬೊಂಬೆಗಳ ಹಾರ, ಕೆ.ಆರ್‌.ಪೇಟೆ, ಮಳವಳ್ಳಿಯ ಹಲಗೂರು, ಕಿರುಗಾವಲಿನಲ್ಲಿ ಬೆಲ್ಲದ ಹಾರ, ಭಾರತಿನಗರದಲ್ಲಿ ಮೆಕ್ಕೆಜೋಳದ ಹಾರ, ದೊಡ್ಡರಸಿನಕೆರೆಯಲ್ಲಿ ಎಳನೀರು, ನವಿಲುಕೋಸು, ನುಗ್ಗೆಸೊಪ್ಪಿನ ಹಾರ ಹಾಕಿ ಅಭಿಮಾನ ತೋರಲಾಯಿತು.

ಇದನ್ನೂ ಓದಿ: ಬಿಸಿಲಿಗೆ ಪಂಚರತ್ನ ಯಾತ್ರೆ ಪಂಚರ್ ಆಗಿದೆ; ಪ್ರಜಾಧ್ವನಿಯಾತ್ರೆ ಬ್ರೇಕ್ ಫೇಲ್ ಆಗಿದೆ: ಕಟೀಲ್ ವ್ಯಂಗ್ಯ

click me!