ಅಧಿವೇಶನದಲ್ಲಿ ಯಾವ ಶಾಸಕರು ಏನು ಮಾತನಾಡಿದ್ದಾರೆ?: ದಳಪತಿಗಳ ವಿರುದ್ಧ ಹರಿಹಾಯ್ದ ಸುಮಲತಾ

By Govindaraj SFirst Published Sep 17, 2022, 10:47 PM IST
Highlights

ಅಧಿವೇಶನದಲ್ಲಿ ಜಿಲ್ಲೆಯ ಸಮಸ್ಯೆ ಬಗ್ಗೆ ಯಾವ ಶಾಸಕರು ಮಾತನಾಡಿದ್ದಾರೆ. ನಾನು ಸಂಸತ್‌ನಲ್ಲಿ ಸಮಸ್ಯೆಗಳ ಬಗ್ಗೆ ಮಾತನಾಡಿದ್ದೇನೆ, ಶಾಸಕರು ಮಾತನಾಡಿರುವ ಬಗ್ಗೆ ರೆಕಾರ್ಡ್‌ ತೆಗೆದು ನೋಡಿ ಗೊತ್ತಾಗುತ್ತೆ ಎಂದು ದಳಪತಿಗಳ ವಿರುದ್ಧ ಸಂಸದೆ ಸುಮಲತಾ ಮತ್ತೆ ಹರಿಹಾಯ್ದರು. 

ಮಂಡ್ಯ (ಸೆ.17): ಅಧಿವೇಶನದಲ್ಲಿ ಜಿಲ್ಲೆಯ ಸಮಸ್ಯೆ ಬಗ್ಗೆ ಯಾವ ಶಾಸಕರು ಮಾತನಾಡಿದ್ದಾರೆ. ನಾನು ಸಂಸತ್‌ನಲ್ಲಿ ಸಮಸ್ಯೆಗಳ ಬಗ್ಗೆ ಮಾತನಾಡಿದ್ದೇನೆ, ಶಾಸಕರು ಮಾತನಾಡಿರುವ ಬಗ್ಗೆ ರೆಕಾರ್ಡ್‌ ತೆಗೆದು ನೋಡಿ ಗೊತ್ತಾಗುತ್ತೆ ಎಂದು ದಳಪತಿಗಳ ವಿರುದ್ಧ ಸಂಸದೆ ಸುಮಲತಾ ಮತ್ತೆ ಹರಿಹಾಯ್ದರು. ಅಧಿವೇಶನದ ಸಮಯದಲ್ಲಿ ದಿಶಾ ಸಮಿತಿ ನಡೆಸುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವೊಮ್ಮೆ ಅಧಿವೇಶನ ಸಂದರ್ಭದಲ್ಲೂ ಸಭೆ ನಡೆಸಬೇಕಾಗುತ್ತದೆ. ಈಗ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿ ರಸ್ತೆ, ಮನೆ, ಬೆಳೆ ಹಾನಿಯಾಗಿದೆ. ಹಾಗಾಗಿ ತುರ್ತು ಸಭೆ ನಡೆಸಿ ಜನರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ನಾನೂ ಸರ್ಕಾರದ ಆದೇಶವನ್ನು ನೋಡಿದ್ದೇನೆ. ದಿಶಾ ಸಭೆಯನ್ನು ಕರೆಯಲೇಬಾರದು ಎಂದು ಎಲ್ಲೂ ಹೇಳಿಲ್ಲ. ಹಾಗೇ ಆದೇಶವಿದ್ದರೆ ನಾನು ಕರೆದ ಸಭೆಗೆ ಅಧಿಕಾರಿಗಳು ಬರುತ್ತಿದ್ದರೇ. ನಮಗೂ ಅಧಿವೇಶನ ಇದ್ದಾಗ ನೋಟಿಸ್‌ ನೀಡದೆ ಶಾಸಕರು ಕೆಡಿಪಿ ಸಭೆ ಮಾಡುತ್ತಾರಲ್ಲ ಎಂದು ಪ್ರತ್ಯುತ್ತರ ನೀಡಿದರು. ದಿಶಾ ಸಮಿತಿ ಸಭೆ ಕರೆಯುವ ವಿಚಾರದಲ್ಲಿ ನಾನೇಕೆ ರಾಜಕಾರಣ ಮಾಡಲಿ. ಜೆಡಿಎಸ್‌ ಶಾಸಕರಿಗೆ ಕಾಳಜಿ ಇಲ್ಲ, ಅವರದ್ದು ಬರೀ ರಾಜಕಾರಣ. 3 ವರ್ಷಗಳಲ್ಲಿ ನಡೆದ ದಿಶಾ ಸಭೆಗೆ ಎಷ್ಟುಬಾರಿ ಶಾಸಕರು ಹಾಜರಾಗಿದ್ದಾರೆ?. 2 ವರ್ಷಗಳಲ್ಲಿ ಒಂದೇ ಒಂದು ಸಭೆಗೆ ಜೆಡಿಎಸ್‌ ಶಾಸಕರು ಬಂದಿಲ್ಲ. 

Mandya: ರಾಜಧನ ವಸೂಲಿ ಪರಿಣಾಮಕಾರಿಯಾಗಿಲ್ಲ: ಸಂಸದೆ ಸುಮಲತಾ

ಅಕ್ರಮ ಗಣಿಗಾರಿಕೆ ವಿರುದ್ಧ ನಾನು ನಿಂತಾಗ ಅವರಿಗೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ಎಲ್ಲರೂ ಸಭೆಗೆ ಹಾಜರಾಗಿದ್ದರು. ಆಗಲೂ ನನ್ನನ್ನು ಟಾರ್ಗೆಟ್‌ ಮಾಡಿಕೊಂಡೇ ಮಾತನಾಡುತ್ತಿದ್ದರು. ಅಭಿವೃದ್ಧಿ ವಿಷಯದ ಬಗ್ಗೆ ಚರ್ಚೆ ಮಾಡುವುದಕ್ಕೂ ಅವಕಾಶ ನೀಡುತ್ತಿರಲಿಲ್ಲ. ಕೂಗಾಡಿ, ಕಿರುಚಾಡಿ ಸಭೆಯಲ್ಲಿ ಡ್ರಾಮಾ ಮಾಡೋದಷ್ಟೇ ಅವರಿಗೆ ಗೊತ್ತಿದೆ ಎಂದು ಕಿಡಿಕಾರಿದರು. ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡುವುದು ಬಿಟ್ಟರೆ ಇವರ ಸಾಧನೆ ಏನು. ದಬ್ಬಾಳಿಕೆ, ಗೂಂಡಾಗಿರಿ, ದುರಹಂಕಾರ ಬಿಟ್ಟರೆ ಇವರು ಜನಸಾಮಾನ್ಯರ ಪರ ಮಾತನಾಡುವುದಿಲ್ಲ. 

ಅವರನ್ನು ಜನ ಆಯ್ಕೆ ಮಾಡಿರುವುದು ಕೇವಲ ನನ್ನನ್ನು ಟಾರ್ಗೆಟ್‌ ಮಾಡೋಕಾ ಎಂದು ಪ್ರಶ್ನಿಸಿದ ಸುಮಲತಾ, ನಿಯಮಾನುಸಾರವೇ ನಾನು ಸಭೆ ಕರದಿದ್ದೇನೆ. ಜೆಡಿಎಸ್‌ ಶಾಸಕರಿಗೆ ಸಭೆಗೆ ಬರಲು ಆಸಕ್ತಿ ಇಲ್ಲ. ಅದಕ್ಕೆ ನಾನೇನು ಮಾಡಲಿ ಎಂದು ಉತ್ತರಿಸಿದರು. ಮುಖಂಡರಾದ ಎಸ್‌.ಸಚ್ಚಿದಾನಂದ, ಹನಕೆರೆ ಶಶಿಕುಮಾರ್‌, ಬೇಲೂರು ಸೋಮಶೇಖರ್‌, ಅರವಿಂದ್‌ಕುಮಾರ್‌ ಇದ್ದರು.

ನಿಡಘಟ್ಟಕಾಲೇಜಿನಲ್ಲಿ ಶೌಚಾಲಯವೇ ಇಲ್ಲ: ನಿಡಘಟ್ಟಕಾಲೇಜಿನಲ್ಲಿ ಶೌಚಾಲಯವೇ ಇಲ್ಲ, ಕೆ.ಎಂ.ದೊಡ್ಡಿ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ, ಕೆರಗೋಡು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿಲ್ಲ ಎಂಬ ಇಲ್ಲಗಳ ಮಾತುಗಳು ಶುಕ್ರವಾರ ದಿಶಾ ಸಮಿತಿ ಸಭೆಯಲ್ಲಿ ಕೇಳಿಬಂದವು. ನಿಡಘಟ್ಟ ಕಾಲೇಜಿನಲ್ಲಿ ಶೌಚಾಲಯವಿಲ್ಲದೆ ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ತೊಂದರೆಯಾಗಿದೆ ಎಂದು ಸದಸ್ಯರೊಬ್ಬರು ಸಭೆಯಲ್ಲಿ ಗಮನಸೆಳೆದಾಗ, ಹೊಸದಾಗಿ ಕಾಲೇಜು ನಿರ್ಮಾಣವಾಗಿದೆ. ಆ ಹಣವನ್ನು ಕಾಲೇಜು ಕಟ್ಟಡ, ಕೊಠಡಿಗಳಿಗೆ ಬಿಟ್ಟು ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದರು.

ಆಗ ಸುಮಲತಾ ಅವರು ಜಿಲ್ಲೆಯಲ್ಲಿರುವ ಶಾಲಾ-ಕಾಲೇಜುಗಳಲ್ಲಿ ಶೌಚಾಲಯ ಸಮಸ್ಯೆ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ನರೇಗಾ ಯೋಜನೆಯಡಿ ಇಂತಹ ಕಾಮಗಾರಿಗಳನ್ನು ನಡೆಸುವಂತೆ ಸಿಇಒ ಅವರಿಗೆ ಸೂಚಿಸಿದರು. ಕೆ.ಎಂ.ದೊಡ್ಡಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಸಿಗದಂತಾಗಿದೆ. ಇದಕ್ಕಾಗಿ 20 ಕಿ.ಮೀ. ದೂರದ ಮಂಡ್ಯಕ್ಕೆ ಬರಬೇಕಿದೆ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಡಿಎಚ್‌ಒ ಡಾ.ಟಿ.ಎನ್‌.ಧನಂಜಯ ಉತ್ತರಿಸಿ, ಆಸ್ಪತ್ರೆಯ ಇಬ್ಬರು ವೈದ್ಯರನ್ನು ವರ್ಗಾವಣೆ ಮಾಡಲಾಗಿದೆ. ಒಬ್ಬ ವೈದ್ಯರು 1 ವರ್ಷದ ಮೇಲೆ ರಜೆ ಹೋಗಿದ್ದಾರೆ. ಇಬ್ಬರು ವೈದ್ಯರು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾತ್ರಿ ವೇಳೆ ವೈದ್ಯರು ಸಿಗುವಂತೆ ವ್ಯವಸ್ಥೆ ಮಾಡುವುದಾಗಿ ಹೇಳಿದರು.

ಸಮಾಜ ಸುಧಾರಣೆಗೆ ಮಹಿಳೆಯರ ಪಾತ್ರ ಅಪಾರ: ಸಂಸದೆ ಸುಮಲತಾ

ಕೆರಗೋಡು ಆಸ್ಪತ್ರೆ 24*7 ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದೆ. ಅದನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿವರ್ತಿಸಲು ಆ ವ್ಯಾಪ್ತಿಯಲ್ಲಿ 50 ಸಾವಿರ ಜನಸಂಖ್ಯೆ ಇರಬೇಕು. ಈಗಾಗಲೇ ಕೆಆರ್‌ಎಸ್‌, ಮೇಲುಕೋಟೆ, ಬಸರಾಳು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಮಗೆ ಮೇಲ್ದರ್ಜೆಗೇರಿಸುವ ಅಧಿಕಾರವಿಲ್ಲ. ಸರ್ಕಾರವೇ ಅದನ್ನು ಮಾಡಬೇಕು ಎಂದರು.

click me!