ಮತ್ತೊಂದೆಜ್ಜೆ ಮುಂದಿಟ್ಟ ದೇವೇಗೌಡ: ಅಚ್ಚರಿ ಮೂಡಿಸಿದ ಜಿಟಿಡಿ ನಡೆ

By Suvarna NewsFirst Published Feb 17, 2020, 4:55 PM IST
Highlights

ಈಗಾಗಲೇ  ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರ ಉಳಿದುರುವ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ರಾಜ್ಯ ರಾಜಕಾರಣದಲ್ಲಿ ಜಿಟಿಡಿ ನಡೆ ತೀವ್ರ ಕುತೂಹಲ ಕೆರಳಿಸಿದೆ.

ಬೆಂಗಳೂರು, (ಫೆ.17): ಪಕ್ಷದ ಶಾಸಕಾಂಗ ಸಭೆಗೆ ಹಾಜರಾಗದೇ ನೇರವಾಗಿ ವಿಧಾನಸಭೆಗೆ ಹೋಗಿ ಜಿಟಿ ದೇವೇಗೌಡ್ರು ಮತ ಚಲಾಯಿಸಿ, ಜೆಡಿಎಸ್ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 ಇಂದು (ಸೋಮವಾರ) ಒಂದು  ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಬಿಜೆಪಿ ಅಭ್ಯರ್ಥಿ ಪರ ಮತದಾನ ಮಾಡಿದರು. ಈ ಮೂಲಕ ಪಕ್ಷ ಹೊರಡಿಸಿದ್ದ ಸೂಚೆನಗಳಿಗೆ ಡೋಂಟ್ ಕೇರ್ ಎಂದರು.

'ಜಿಟಿಡಿ ಈಗ ನಮ್ಮ ಪಕ್ಷದಲ್ಲಿದ್ದಾರಾ'? ಎಚ್‌ಡಿಕೆ

ವಿಧಾನ ಪರಿಷತ್ ಚುನಾವಣೆಯಲ್ಲಿ ಭಾಗವಹಿಸಬಾರದು ಎಂದು ಭಾನುವಾರ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಜೆಡಿಎಸ್ ಪಕ್ಷ ನಿರ್ಧಾರ ಮಾಡಿತ್ತು. 

ಆದರೆ ಸೋಮವಾರ ಜಿ.ಟಿ.ದೇವೇಗೌಡ ಮತದಾನ ಮಾಡಿ, ಪಕ್ಷದ ಸೂಚನೆ ಉಲ್ಲಂಘಿಸಿದ್ದಾರೆ. ಈ ಮೂಲಕ ಪಕ್ಷದಿಂದ ಅಮಾನತು ಮಾಡಿದರೂ ಪರವಾಗಿಲ್ಲ ಎಂದು ಎಲ್ಲದಕ್ಕೂ ಸಜ್ಜಾಗಿದ್ದಾರೆ.

ಒಂದು ಕಾಲು ಹೊರಗಿಟ್ಟಿರುವ GTD


ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಗೊಂಡ ಬಳಿಕ ಜಿಟಿ ದೇವೇಗೌಡ್ರು, ಜೆಡಿಎಸ್‌ ಪಕ್ಷದ ಯಾವುದೇ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸದೆ ಅಂತ ಕಾಯ್ದುಕೊಂಡಿದ್ದಾರೆ. ಅಲ್ಲದೇ ಈಗಾಗಲೇ ಒಂದು ಹೆಜ್ಜೆ ಮುಂದೆ ಹೋಗಿರುವ ಜಿಟಿಡಿ, ಬಿಜೆಪಿ ಗುಂಪಿನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. 

ಜೆಡಿಎಸ್‌ಗೆ ಶಾಕ್ ಕೊಟ್ಟ ಜಿಟಿಡಿ; ಕುತೂಹಲ ಮೂಡಿಸಿದೆ ಸಿ ಟಿ ರವಿ ಜೊತೆಗಿನ ಚರ್ಚೆ

ಈಗಾಗಲೇ ಚುನಾವಣೆ ಸ್ಪರ್ಧೆಗೆ ಗುಡ್‌ ಬೈ ಹೇಳಿರುವ ಜಿಟಿಡಿ ಮುಂದಿನ ದಿನಗಳಲ್ಲಿ ತಮ್ಮ ಪುತ್ರನನ್ನು ಬಿಜೆಪಿಯಿಂದ ಕಣಕ್ಕಿಳಿಸುವ ಎಲ್ಲಾ ಸಾಧ್ಯತೆಗಳು ಇವೆ. ಈ ಬಗ್ಗೆ ಚರ್ಚೆಗಳು ಸಹ ನಡೆದಿವೆ ಎನ್ನಲಾಗುತ್ತಿದೆ.

ಜಿಟಿಡಿ ಹೇಳಿದ್ದೇನು?


ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಟಿಡಿ,  ಚುನಾವಣೆ ಇದ್ದಿದ್ದರಿಂದ ನಾನು ಸೀದಾ ವಿಧಾನಸೌಧಕ್ಕೆ ಬಂದೆ. ಒಬ್ಬ ಅಭ್ಯರ್ಥಿ ನಾಮಪತ್ರ ವಾಪಾಸ್ ತೆಗೆದುಕೊಂಡಿದ್ದಾರೆ ಶಾಸಕರಾಗಿ ನಮ್ಮ ಮತ ವ್ಯರ್ಥ ಆಗಬಾರದು. ಲಕ್ಷ್ಮಣ ಸವದಿ ಈ ರಾಜ್ಯದ ಉಪಮುಖ್ಯಮಂತ್ರಿ ಅವರಿಗೆ ಓಟ್ ಹಾಕೋದು ನಮ್ಮ ಕರ್ತವ್ಯ. ಅದನ್ನು ಮಾಡಿದ್ದೀನಿ ಎಂದರು.

ನಾನು ಜೆಡಿಎಸ್ ಪಕ್ಷದ ಶಾಸಕ, ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸಿದ್ದಾರೆ ಅವರು ಓಟ್ ಹಾಕಿ ಅಥವಾ ಹಾಕಬೇಡಿ ಅಂತ ಯಾವ ನಿರ್ದೇಶನವನ್ನೂ ನನಗೆ ಕೊಟ್ಟಿಲ್ಲ ನನ್ನ ಬಳಿ ಯಾರೂನೂ ಮಾತಾಡಿಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ವರಿಷ್ಠರಿಗೆ ಟಾಂಗ್ ಕೊಟ್ಟರು.

ಹೋದ್ರೆ ಹೋಗ್ಲಿ ಎಂದ ಕುಮಾರಸ್ವಾಮಿ


ಜಿಟಿಡಿ ಬಗ್ಗೆ ಕುಮಾರಸ್ವಾಮಿ ಮಾತನಾಡಿ, ಜಿ. ಟಿ. ದೇವೇಗೌಡ್ರು ನಮ್ಮ‌ಪಕ್ಷದಲ್ಲಿ ಇದ್ದಾರಾ?. ಅವರು ಬೇಕಾದಂತೆ ಈಗಾಗಲೇ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅವರು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ. ಬಾಗಿಲು ಓಪನ್ ಇದೆ ಎಂದು ಕಡ್ಡಿ ಮುರಿದಂತೆ ಹೇಳಿದರು.

ಒಟ್ಟಿನಲ್ಲಿ ಜಿಟಿಡಿ ಜೆಡಿಎಸ್‌ನಿಂದ ಒಂದು ಕಾಲು ಹೊರಗೆ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಗುಡ್‌ ಬೈ ಹೇಳುವುದು ಪಕ್ಕಾ.

click me!