
ಅರಸೀಕೆರೆ(ಮಾ.24): 50 ಕೋಟಿ ರು.ಗೆ ನಮ್ಮ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಸಿದ್ದರಾಮಯ್ಯ ಚುನಾವಣೆಗೆ ಮುನ್ನ ನಮ್ಮ ಪಕ್ಷದಿಂದ ಅನೇಕ ಶಾಸಕರನ್ನು ಸೇಳದರು. ತಮ್ಮ ಬಳಿಗೆ ಬರುವ ವಿರೋಧ ಪಕ್ಷದ ಶಾಸಕರು ಹಾಗೂ ಮಾಜಿ ಶಾಸಕರುಗಳನ್ನು ಅಮಿಷ ಒಡ್ಡಿ ಪಕ್ಷಕ್ಕೆ ಆಹ್ವಾನಿಸುತ್ತಿಲ್ಲವೇ? ಒಂದೇ ಸುಳ್ಳನ್ನು 10 ಬಾರಿ ಹೇಳುವ ಮೂಲಕ ಸುಳ್ಳನ್ನೇ ನಿಜ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಕಿಡಿಕಾರಿದರು
ನಗರದಲ್ಲಿನ ಹೊಸೂರ್ ಗಂಗಾಧರ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿಗೆ ವಸತಿ ಶಾಲೆಗಳು, ಪ್ರಥಮ ದರ್ಜೆ ಕಾಲೇಜು, ಚೆಸ್ಕಾಂ ವಿಭಾಗ ಕಚೇರಿ, ವಿದ್ಯುತ್ ವಿತರಣಾ ಕೇಂದ್ರಗಳು ಮೊದಲಾದ ಅಭಿವೃದ್ಧಿ ಕಾರ್ಯ ಆಗಿದೆ. ಆಡಳಿತದಲ್ಲಿಯೂ ಸಾಮಾಜಿಕ ನ್ಯಾಯವನ್ನು ಒದಗಿಸಿ ಕೊಟ್ಟಿದ್ದೇವೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರನ್ನು ಮಾಡಿದ್ದೇವೆ. ಇಲ್ಲಿನ ಬಿಳಿ ಚೌಡಯ್ಯ ಅವರಿಗೆ ಜಿಲ್ಲಾ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನ ಒದಗಿಸಿ ಗುರುತಿಸಿದ್ದೆವು. ಶಾಸಕರು ತಮ್ಮದೇ ಪಕ್ಷ ಆಡಳಿತವಿದ್ದು ಬಿಳಿ ಚೌಡಯ್ಯ ಅವರಿಗೆ ಯಾವ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಕೊಡಿಸಿದ್ದಾರೆ? ಎಂದು ಪ್ರಶ್ನಿಸಿದರು.
ಬಿಜೆಪಿ ಸಂಸದರನ್ನು 'ನಪುಂಸಕರು' ಎಂದ ಸಚಿವ ಕೆಎನ್ ರಾಜಣ್ಣ!
‘ಗಂಗಾ ಕಲ್ಯಾಣ ಯೋಜನೆಯಡಿ ನನ್ನ ಕ್ಷೇತ್ರವೊಂದರಲ್ಲೇ ಪರಿಶಿಷ್ಟ ಜಾತಿ-ಪಂಗಡದವರಿಗೆ ೧ ಸಾವಿರ ಬೋರ್ವೆಲ್ ಕೊರೆಸಿದ್ದೇನೆ. ಜಿಲ್ಲೆಯಲ್ಲಿ ೪ ಸಾವಿರ ಇವೆ. ಇವರು ಅಧಿಕಾರಕ್ಕೆ ಬಂದು ೯ ತಿಂಗಳು ಕಳೆದಿದ್ದರೂ ಕೊಳವೆ ಬಾವಿಗಳಿಗೆ ಕರೆಂಟ್ ಸಂಪರ್ಕ ಕೊಡಲಾಗಿಲ್ಲ. ಎಸ್ಸಿ-ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ’ ಎಂದು ಕಿಡಿಕಾರಿದರು.
‘ನಾವು ಕೇವಲ ರಾಜಕೀಯ ಮಾಡುವುದಕ್ಕಾಗಿ ಬಿಜೆಪಿ ಜತೆ ಕೈಜೋಡಿಸಿರುವುದಿಲ್ಲ. ರಾಜ್ಯದ ಜನತೆಯ ಒಳಿತಾಗಿ ಹಾಗೂ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೆಗೆಯುವ ಉದ್ದೇಶ ಹೊಂದಲಾಗಿದೆ , ಪ್ರಧಾನಿ ಆಗಿದ್ದ ವೇಳೆ ದೇವೇಗೌಡ ಅವರನ್ನು ಕೆಳಗಿಳಿಸಲು ಕುತಂತ್ರ ಮಾಡಿದ ಕಾಂಗ್ರೆಸ್ ಸರ್ಕಾರ ಅಂದಿನಿಂದಲೂ ವಿರೋಧಿ ಪಕ್ಷಗಳನ್ನು ಮುಗಿಸಲು ಹುನ್ನಾರ ಮಾಡಿದೆ’ ಎಂದು ಆರೋಪಿಸಿದರು.
ಜೆಡಿಎಸ್ ವತಿಯಿಂದಲೂ ಈಗಾಗಲೇ ಲೋಕಸಭಾ ಚುನಾವಣೆಗೆ ಎಲ್ಲಾ ರೀತಿಯ ತಯಾರಿ ನಡೆಸಲಾಗುತ್ತಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಮಾತುಕತೆ ಮಾಡಲಾಗಿದೆ. ಮೈತ್ರಿ ಅಭ್ಯರ್ಥಿಯ ಅಧಿಕೃತ ಘೋಷಣೆಯಾದ ನಂತರ ಎರಡು ಪಕ್ಷದ ಮುಖಂಡರು ಸೇರಿ ಪ್ರಚಾರಕ್ಕೆ ಆಗಮಿಸಿ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಪ್ರಜ್ವಲ್, ನಾನು ತಪ್ಪು ಮಾಡಿದ್ರೆ ಕ್ಷಮಿಸಿ: ಎಚ್.ಡಿ.ರೇವಣ್ಣ ಕಣ್ಣೀರು
‘ದೇಶದಲ್ಲಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ಬಿಜೆಪಿ, ಎಲ್ಲರು ಹಾಗೂ ದೇವೇಗೌಡರ ಉದ್ದೇಶವಾಗಿದೆ. ಇವತ್ತು ದೇಶದಲ್ಲಿ ನಿಜವಾದ ಕಾಂಗ್ರೆಸ್ ಇಲ್ಲ, ಅವರದು ವಿಪಕ್ಷ ತುಳಿಯುವ ಉದ್ದೇಶ. ಭ್ರಷ್ಟ ಸರ್ಕಾರ ಕಿತ್ತೊಗೆಯುವುದು ನಮ್ಮೆಲ್ಲರ ಉದ್ದೇಶ’ ಎಂದರು
ಚುನಾವಣೆಯತ್ತ ಗಮನ ಸೆಳೆದು ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಯಾವಾಗ ಪ್ರಚಾರ ಪ್ರಾರಂಭಿಸುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿ ‘ನಮಗೆ ಮೇಲಿನಿಂದ ಸಂದೇಶ ಬರಲಿ ಎಂದಿದ್ದಾರೆ, ಸಂದೇಶ ಬಂದ ತಕ್ಷಣ ಪ್ರಚಾರ ಪ್ರಾರಂಭಿಸಲಾಗುವುದು. ಮುಖಂಡರು ಸಂಪರ್ಕದಲ್ಲಿ ಇದ್ದಾರೆ. ಈಗಾಗಲೇ ನಾವು ಪ್ರವಾಸ ಮಾಡುತ್ತಿದ್ದೇವೆ, ಪ್ರಜ್ವಲ್ ಸಹ ಅರಸೀಕೆರೆ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುತ್ತಿದ್ದಾರೆ’ ಎಂದರು
ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ , ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಜೆಡಿಎಸ್ ಮುಖಂಡ ಬಾಣಾವರ ಅಶೋಕ್, ಹೊಸೂರ್ ಗಂಗಾಧರ್ ಇದ್ದರು. ಅರಸೀಕೆರೆ ನಗರದಲ್ಲಿನ ಹೊಸೂರ್ ಗಂಗಾಧರ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಶಾಸಕ ಎಚ್.ಡಿ.ರೇವಣ್ಣ ಮಾತನಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.