ಲೋಕಸಭೆ ಚುನಾವಣೆ 2024: ನಿಮ್ಮ ಉತ್ಸಾಹದಲ್ಲಿ ನನ್ನ ಗೆಲವು ಕಾಣ್ತಿದೆ, ಬಿಜೆಪಿ ಅಭ್ಯರ್ಥಿ ಮಂಜುನಾಥ್‌

Published : Mar 24, 2024, 11:58 AM IST
ಲೋಕಸಭೆ ಚುನಾವಣೆ 2024: ನಿಮ್ಮ ಉತ್ಸಾಹದಲ್ಲಿ ನನ್ನ ಗೆಲವು ಕಾಣ್ತಿದೆ, ಬಿಜೆಪಿ ಅಭ್ಯರ್ಥಿ ಮಂಜುನಾಥ್‌

ಸಾರಾಂಶ

ನಾನು ರಾಜಕೀಯಕ್ಕೆ ಬರುತ್ತೇನೆಂದು ಕನಸಲ್ಲು ಅಂದುಕೊಂಡಿರಲಿಲ್ಲ. ರಾಜಕೀಯದ ನಡುವೆ ಇದ್ದರೂ ನಾವು ಯಾರ ಜೊತೆ ಒಡನಾಟ ಇಟ್ಟುಕೊಳ್ಳುತ್ತೇವೆಯೊ ಅದರ ನೇರ ಪರಿಣಾಮ ನಮ್ಮ ಮೇಲೆ ಬೀರುತ್ತದೆ. ಅದು ನನ್ನ ವಿಚಾರದಲ್ಲಿಯೂ ಆಗಿದೆ ಎಂದು ರಾಜಕೀಯ ಪ್ರವೇಶದ ಅನಿವಾರ್ಯತೆಯನ್ನು ತಿಳಿಸಿದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ 

ರಾಮನಗರ(ಮಾ.24):  ನಾನು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವಾಗ ಚಿಕಿತ್ಸೆ ಮೊದಲು ಹಣ ಪಾವತಿ ನಂತರ, ಕಡತಕ್ಕಿಂತ ಪ್ರಾಣವೇ ಮುಖ್ಯ, ಮಾನವೀಯತೆಗೆ ಮೊದಲ ಆದ್ಯತೆ ಎಂಬ ಸಿದ್ಧಾಂತದಡಿ ಸೇವೆ ಸಲ್ಲಿಸಿದೆ. ಈಗ ರಾಜಕಾರಣಕ್ಕೆ ಬಂದ ಮೇಲೆ ಮತದಾನ ಮೊದಲು, ಸೇವೆ ನಿರಂತರ ಎಂಬ ತತ್ವದಡಿ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಹೇಳಿದರು.

ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ನಡೆದ ಕೂಟಗಲ್ ಹೋಬಳಿಯ ಜೆಡಿಎಸ್ ಬಿಜೆಪಿ ಮುಖಂಡರು ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಅಂಗಾಂಗ ದಾನ, ನೇತ್ರದಾನವನ್ನು ನೆನೆಯುತ್ತೇವೆ. ಅದೇ ರೀತಿ ಮತದಾನವೂ ತುಂಬಾ ಪವಿತ್ರವಾದದ್ದು. ಮತಗಳು ಮಾರಾಟದ ವಸ್ತು ಆಗಬಾರದು. ಮತಗಳು ಮಾರಾಟವಾದರೆ ಪ್ರಜಾಪ್ರಭುತ್ವ ಕಗ್ಗೋಲೆ ಆದಂತೆ. ತಮ್ಮ ಅಮೂಲ್ಯವಾದ ಮತದಾನವನ್ನು ನನಗೆ ನೀಡಿದರೆ ದೇಶದ ಸುಭದ್ರತೆ, ಸಮಗ್ರತೆಗೆ ನಂದಾದೀಪ ಆಗುತ್ತದೆ ಎಂದರು.

ಕರ್ನಾಟಕದಿಂದ ಹೆಚ್ಚು ಸ್ಥಾನ ಗೆದ್ದು ಮೋದಿಗೆ ಗಿಫ್ಟ್ ಕೊಡುತ್ತೇವೆ: ನಿಖಿಲ್ ಕುಮಾರಸ್ವಾಮಿ

ನಾನು ರಾಜಕೀಯಕ್ಕೆ ಬರುತ್ತೇನೆಂದು ಕನಸಲ್ಲು ಅಂದುಕೊಂಡಿರಲಿಲ್ಲ. ರಾಜಕೀಯದ ನಡುವೆ ಇದ್ದರೂ ನಾವು ಯಾರ ಜೊತೆ ಒಡನಾಟ ಇಟ್ಟುಕೊಳ್ಳುತ್ತೇವೆಯೊ ಅದರ ನೇರ ಪರಿಣಾಮ ನಮ್ಮ ಮೇಲೆ ಬೀರುತ್ತದೆ. ಅದು ನನ್ನ ವಿಚಾರದಲ್ಲಿಯೂ ಆಗಿದೆ ಎಂದು ರಾಜಕೀಯ ಪ್ರವೇಶದ ಅನಿವಾರ್ಯತೆಯನ್ನು ತಿಳಿಸಿದರು.

ನಾವು ಕಲಿತ ಶಿಕ್ಷಣ ಎಷ್ಟು ಸಂಸ್ಕಾರ ಕಲಿಸಿದೆ, ಎಷ್ಟು ಜನರ ಮುಖದಲ್ಲಿ ನಗು ತರಿಸಿದೆ, ಎಷ್ಟು ಜನರ ಮನೆಯಲ್ಲಿ ಬೆಳಕು ಚೆಲ್ಲಿದೆ ಎಂಬುದು ಮುಖ್ಯವಾಗುತ್ತದೆ. ಯಾವ ಪ್ರತಿಫಲವನ್ನು ಬಯಸದೆ ನಾವು ಮಾಡುವ ಸಹಾಯವೇ ನಿಜವಾದ ಸಮಾಜ ಸೇವೆ ಆಗಿದೆ. ದ್ವೇಷ ಮತ್ಸರ ಕಳೆದು ಪ್ರೀತಿ ಹಂಚಬೇಕು. ಆರೋಗ್ಯಕರ ಚುನಾವಣೆ ನಡೆಯಬೇಕು ಎಂದು ಮಂಜುನಾಥ್ ಹೇಳಿದರು.

ಬಡವರ ಕಣ್ಣೀರು, ರೈತರ ಬೆವರಿಗೆ ಬಹಳ ಬೆಲೆ ಇದೆ. ನಾವು ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಕಣ್ಣೀರು ಬರೆಸುವ ಕೆಲಸ ಮಾಡಬಾರದು. ಬಡತನ ಮನಸ್ಸಿಗೆ ಇರಬಾರದು, ದೇಹಕ್ಕೆ ಇರಬೇಕು. ಮನಸ್ಸು ನಿರ್ಮಲವಾಗಿದ್ದರೆ ಅದು ಸಾಕ್ಷತ್ಕಾರ, ಮಾತು ಮಧುರವಾಗಿದ್ದರೆ ಅದು ಚಮತ್ಕಾರ, ನಡೆನುಡಿ ಚೆನ್ನಾಗಿದ್ದರೆ ಪುರಸ್ಕಾರ, ನಿಮ್ಮ ಅಭಿಮಾನ, ಸರಳತೆಗೆ ಅದಕ್ಕೊಂದು ನನ್ನ ನಮಸ್ಕಾರ ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದರು.
ನಿಮ್ಮೆಲ್ಲರ ಉತ್ಸವ ನೋಡಿದರೆ ನನ್ನ ಗೆಲುವು ನಿಶ್ಚಿತವಾಗಿದೆ. ಮೊದಲು ಇದು ಜೆಡಿಎಸ್ ಭದ್ರಕೋಟೆಯಾಗಿತ್ತು, ಈಗ ಬಿಜೆಪಿ ಕೈ ಜೋಡಿಸಿರುವುದರಿಂದ ಸುಭದ್ರ ಕೋಟೆಯಾಗಿದೆ. ಪ್ರಮುಖ ಮುಖಂಡರ ಸಭೆಯಲ್ಲಿನ ವಿಚಾರಗಳನ್ನು ಮತದಾರರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ಮಂಜುನಾಥ್ ತಿಳಿಸಿದರು.

ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಡಿಕೆ ಸಹೋದರರು ಜೆಡಿಎಸ್ - ಬಿಜೆಪಿ ಕಾರ್ಯಕರ್ತರಿಗೆ ಆಮಿಷವೊಡ್ಡಿ ವಿಫರಾಗುತ್ತಿರುವ ದೊಡ್ಡ ಪಟ್ಟಿಯೇ ಇದೆ. ಮೂರು ಬಾರಿ ಸಂಸದರಾಗಿರುವ ನೀವು ಕನಕಪುರ ಹೊರತು ಪಡಿಸಿ ಉಳಿದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಕೆಲಸ ಮಾಡಿದ್ದರೆ ಏಕೆ ಆಮಿಷ ಒಡ್ಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು.

ಈ ಕ್ಷೇತ್ರಕ್ಕೆ ಇಎಸ್ ಐ ಆಸ್ಪತ್ರೆ, ಹೊಸ ರೈಲು, ರೈಲು ಅಂಡರ್ ಪಾಸ್, ಮೇಲ್ಸೋತುವೆ ಯಾವುದಾದರು ಮಾಡಿದ್ದೀರಾ. ದೆಹಲಿ ಬಿಟ್ಟು ಗ್ರಾಮ ಪಂಚಾಯಿತಿಯಲ್ಲಿ ಕುಳಿತರೆ ಯಾವ ಕೆಲಸವೂ ಆಗುವುದಿಲ್ಲ. ದೆಹಲಿಯಲ್ಲಿ ಕುಳಿತು ಆರೋಗ್ಯ, ಶಿಕ್ಷಣ ಕ್ಕಾಗಿ ಹೋರಾಟ ಮಾಡಬೇಕಿತ್ತು. ಆದರೆ, ನೀವು ಹಗಲು ದರೋಡೆ ಮಾಡುತ್ತೀದಿರಿ. ನಿಮ್ಮ ಸ್ವಾರ್ಥ ಕ್ಕಾಗಿ ಜಿಲ್ಲೆ ಜನರು ಬಲಿ ಆಗುತ್ತಿದ್ದಾರೆ. ಈ ಜನರನ್ನು ಕಾಪಾಡಲು ಸಾಕ್ಷಾತ್ ಮಂಜುನಾಥ ಸ್ವಾಮಿ ಧರೆಗೆ ಇಳಿದು ಬಂದಿದ್ದಾರೆ. ವೈದ್ಯರು ಸೋತರೆ ಅವರಿಗೇನು ನಷ್ಟವಾಗಲ್ಲ. ನಮಗೆ ನಷ್ಟವಾಗುತ್ತದೆ. ಅವರ ಗೆಲುವಿನ ಲಾಭ ದೇಶಕ್ಕೆ ಸಿಗುತ್ತದೆ. ಮೂರು ಬಾರಿ ಸಂಸದರಾಗಿ ಏನು ಮಾಡದವರು ನಾಲ್ಕನೇ ಬಾರಿ ಗೆದ್ದು ಏನು ಮಾಡುತ್ತಾರೆ ಎಂದು ಡಿ.ಕೆ.ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್ , ಮುಖಂಡರಾದ ಸುಬ್ಬಾಶಾಸ್ತ್ರಿ, ಗೌತಮ್ ಗೌಡ, ಪ್ರಸಾದ್ ಗೌಡ, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ-ಜೆಡಿಎಸ್‌ ಸಹೋದರರಿದ್ದಂತೆ: ಸಿಪಿವೈ

ದೇಶದ ಹಿತದೃಷ್ಟಿಯಿಂದ ಮೋದಿರವರು ಮತ್ತೊಮ್ಮೆ ಪ್ರಧಾನಿ ಅಗಬೇಕೆಂಬ ಉದ್ದೇಶದಿಂದ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಕನಿಷ್ಠ 25 ಸ್ಥಾನಗಳಲ್ಲಿ ಎನ್ ಡಿಎ ಮೈತ್ರಿಕೂಟ ಗೆಲವು ಸಾಧಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್‌ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ದೇವೇಗೌಡರು ರಾಮಕೃಷ್ಣಹೆಗಡೆ, ಬೊಮ್ಮಾಯಿ, ಜೆ.ಎಚ್.ಪಟೇಲ್ ಅವರೊಂದಿಗೆ ಸೇರಿ ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾಗಿ ಜನತಾ ಪರಿವಾರ ಕಟ್ಟಿದರು. ಕಾಲ ಕ್ರಮೇಣ ಜನತಾದಳ ಇಬ್ಬಾಗವಾಗಿ ಜೆಡಿಎಸ್ ಅಸ್ತಿತ್ವಕ್ಕೆ ಬಂದಿತು. ಮೊದಲಿನಿಂದಲೂ ಜೆಡಿಎಸ್ - ಬಿಜೆಪಿ ಪಕ್ಷಗಳು ಕಾಂಗ್ರೆಸ್ ವಿಚಾರಧಾರೆ ವಿರೋಧಿಸಿಕೊಂಡು ರಾಜಕಾರಣ ಮಾಡುತ್ತಾ ಬಂದಿದ್ದೇವೆ. ಎರಡೂ ಪಕ್ಷಗಳು ಸಹೋದರರು ಇದ್ದಂತೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಕೆದಾಟು ನಿರ್ಮಾಣ ಮಾಡುತ್ತೇವೆಂದು ಪಾದಯಾತ್ರೆ ಮಾಡಿ ಜನರನ್ನು ನಂಬಿಸಿದರು. ಈಗ ಕಾಂಗ್ರೆಸ್ ನ ಪಾಟ್ನರ್ಸ್ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಯಾವ ಕಾರಣಕ್ಕೂ ಮೇಕೆದಾಟು ನಿರ್ಮಾಣವಾಗಲು ಬಿಡುವುದಿಲ್ಲ ಎಂದಿದ್ದಾರೆ. ಇದು ಕಾಂಗ್ರೆಸ್ ನ ದ್ವಿಮುಖ ನೀತಿ ತೋರಿಸುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ನಿಂದ ಮನೆಮನೆಗೆ ಕುಕ್ಕರ್ ಹಂಚಿಕೆ ಆರೋಪ; ತಹಸೀಲ್ದಾರ್‌ಗೆ ದೂರು ನೀಡಿದರೂ ಸ್ಥಳಕ್ಕೆ ಬಾರದ್ದಕ್ಕೆ ಜೆಡಿಎಸ್ ಕಿಡಿ

ಡಿ.ಕೆ.ಸುರೇಶ್ ಪಟಾಲಂ ಕೆಲಸ ಕಾರ್ಯ ಬಿಟ್ಟು ಕುಕ್ಕರ್, ಸೀರೆಗಳಂತಹ ಆಸೆ ಆಮಿಷದ ಮೇಲೆ ವೋಟು ಕೇಳುತ್ತಿದ್ದಾರೆ. ಡಿಕೆ ಸಹೋದರರು ದೌರ್ಜನ್ಯ ಮಾಡಿಯಾದರು ಪಾರದರ್ಶಕವಾಗಿ ಚುನಾವಣೆ ಮಾಡಲು ಬಿಡುವುದಿಲ್ಲ. ಜೆಡಿಎಸ್ - ಬಿಜೆಪಿ ಮೈತ್ರಿ ಸಹೋದರರಲ್ಲಿ ನಡುಕ ಸೃಷ್ಟಿಸಿದೆ ಎಂದರು.

ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಡಾ.ಸಿ.ಎನ್ .ಮಂಜುನಾಥ್ ಮೈತ್ರಿ ಅಭ್ಯರ್ಥಿಯಾಗಿರುವ ಕಾರಣ 8 ಕ್ಷೇತ್ರದಲ್ಲು ಪಕ್ಷತೀತ ವಾತಾವರಣ ಇದೆ. ಕೇಂದ್ರದಲ್ಲಿ ಮಂತ್ರಿಯಾದರೆ ದೇಶದ ಆರೋಗ್ಯ ಸುಧಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಯೋಗೇಶ್ವರ್ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ