JDS Pancharatna Rathayatra: ಬಿಜೆಪಿ ಬಿ ಟೀಮ್‌ ಜೆಡಿಎಸ್‌ ಅಲ್ಲ ಕಾಂಗ್ರೆಸ್‌: ಎಚ್‌.ಡಿ.ಕುಮಾರಸ್ವಾಮಿ

By Govindaraj SFirst Published Nov 25, 2022, 12:40 AM IST
Highlights

ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕರು ಜೆಡಿಎಸ್‌ ಪಕ್ಷವನ್ನು ಬಿ ಟೀಮ್‌ ಎಂದು ಟೀಕಿಸಿದರು. ಆದರೆ ಜೆಡಿಎಸ್‌ ಬಿಜೆಪಿ ಬಿ ಟೀಮ್‌ ಅಲ್ಲ. ಕಾಂಗ್ರೆಸ್‌ ಪಕ್ಷವೇ ಬಿಜೆಪಿ ಬಿ ಟೀಮ್‌ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್‌ ನಾಯಕರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. 

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ (ನ.25): ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕರು ಜೆಡಿಎಸ್‌ ಪಕ್ಷವನ್ನು ಬಿ ಟೀಮ್‌ ಎಂದು ಟೀಕಿಸಿದರು. ಆದರೆ ಜೆಡಿಎಸ್‌ ಬಿಜೆಪಿ ಬಿ ಟೀಮ್‌ ಅಲ್ಲ. ಕಾಂಗ್ರೆಸ್‌ ಪಕ್ಷವೇ ಬಿಜೆಪಿ ಬಿ ಟೀಮ್‌ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್‌ ನಾಯಕರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಕೋಲಾರದ ಮುಳಬಾಗಿಲಿನಿಂದ ಆರಂಭಿಸಿರುವ ಪಂಚರತ್ನ ರಥಯಾತ್ರೆಯ 7ನೇ ದಿನವಾದ ಗುರುವಾರ ಜಿಲ್ಲೆಯ ಚಿಂತಾಮಣಿ ತಾಲೂಕು ಪ್ರವಾಸ ಮುಗಿಸಿ ಶಿಡ್ಲಘಟ್ಟನಗರದ ಮೃತ್ತದ ಬಳಿ ಆಗಮಿಸಿದ ವೇಳೆ ನೆರದಿದ್ದ ಅಪಾರ ಸಂಖ್ಯೆಯ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮುಸಲ್ಮಾನರು ಅರ್ಥಮಾಡಕೊಳ್ಳಲಿ: ಬಿಜೆಪಿ ಬಿ ಟೀಮ್‌ ಆಗಿ ಕಾಂಗ್ರೆಸ್‌ ಕಾರ್ಯನಿರ್ವಹಿಸುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಹೇಳದೇ ಟೀಕಾ ಪ್ರಹಾರ ನಡೆಸಿದ ಹೆಚ್ಡಿಕೆ, ಇದನ್ನ ರಾಜ್ಯದ ಮುಸ್ಲಿಂ ಬಾಂಧವರು ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಎಲ್ಲಾ ಸಮಸ್ಯೆ ಬಗೆಹರಿಸಬೇಕು ಅನ್ನುವುದೇ ನಮ್ಮ ಪಕ್ಷದ ಉದ್ದೇಶ. 2018ರಲ್ಲಿ ಸಾಲ ಮನ್ನ ಮಾಡುವ ಕೆಲಸ ಮಾಡಿದೆ. ಅಧಿಕಾರದಲ್ಲಿದ್ದ ಕೇವಲ 14 ತಿಂಗಳಲ್ಲಿ ರೈತರ ಸಾಲ ಮನ್ನ ಮಾಡಿದ್ದೇವೆ ಎಂದರು.

JDS Pancharatna Rathayatra: ಕೊಳೆಚೆ ನೀರು ತಂದವರಿಗೆ ತಕ್ಕಪಾಠ ಕಲಿಸಿ: ಎಚ್‌ಡಿಕೆ

ಆದರೆ ಕೋಮುದಳ್ಳುರಿ ಮೂಲಕ ಸಮುದಾಯಗಳನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆಯೆಂದು ಬಿಜೆಪಿ ವಿರುದ್ದ ಕಿಡಿಕಾರಿದರು. ನಿಮ್ಮ ಜೀವನದ ಉತ್ತಮ ಭವಿಷ್ಯ ಬೆಳಗಬೇಕು. ರೈತ, ಮುಸ್ಲಿಂ, ಹಿಂದೂಗಳ ಕುಟುಂಬದ ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿ ಉತ್ತಮ ಆಗಬೇಕು. ಆದ್ದರಿಂದ್ದ ಜೆಡಿಎಸ್‌ಗೆ ಮತ ನೀಡುವ ಮೂಲಕ ಕಾರ್ಯಗತಗೊಳಿಸಲು ಸಹಕಾರ ನೀಡಬೇಕು. ರಾಜ್ಯದಲ್ಲಿ ಜೆಡಿಎಸ್‌ ಸ್ವತಂತ್ರ ಸರ್ಕಾರ ಬರಲು 123 ಕ್ಷೇತ್ರದಲ್ಲಿ ಗೆಲ್ಲಬೇಕಿದೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಮ್ಮ ಅಭ್ಯರ್ಥಿಗಳನ್ನ ಜನ ಗೆಲ್ಲಿಸಬೇಕು, ನಾಡಿನಾದ್ಯಂತ ಜೆಡಿಎಸ್‌ ಪರ ಅಲೆ ಆರಂಭವಾಗಿದೆಂದು ಕುಮಾರಸ್ವಾಮಿ ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಸಂಸದ ಪ್ರಜ್ವಲ್‌ ರೇವಣ್ಣ, ಶಿಡ್ಲಘಟ್ಟದ ಜೆಡಿಎಸ್‌ ಅಭ್ಯರ್ಥಿ ಮೇಲೂರು ರವಿಕುಮಾರ್‌, ಚಿಂತಾಮಣಿ ಶಾಸಕ ಜೆಕೆ ಕೃಷ್ಣಾರೆಡ್ಡಿ, ಮಾಜಿ ಎಂಎಲ್‌ಸಿ ತೂಪಲ್ಲಿ ಚೌಡರೆಡ್ಡಿ, ಮುಖಂಡರಾದ ಬಂಕ್‌ ಮುನಿಯಪ್ಪ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ನನ್ನಿಂದ ತಪ್ಪಾಗಿದೆ, ಕ್ಷಮಿಸಿ: ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದು ನೆರದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದರು. ಕಳೆದ ಬಾರಿ ಮೇಲೂರು ರವಿಗೆ ಪಕ್ಷದ ಬಿ.ಫಾರಂ ಕೊಡದೇ ಮಾಜಿ ಶಾಸಕ ಎಂ.ರಾಜಣ್ಣಗೆ ನೀಡಿ ತಪ್ಪು ಮಾಡಿದೆ ಎಂದು ಕುಮಾರಸ್ವಾಮಿ ಶಿಡ್ಲಘಟ್ಟಜೆಡಿಎಸ್‌ ಕಾರ್ಯಕರ್ತರ ಎದುರು ತಪ್ಪೊಪ್ಪಿಕೊಂಡರು. ರವಿ ಇಂದು ನೊಂದಿದ್ದಾರೆ. ಈ ಕ್ಷೇತ್ರದಲ್ಲಿ ರವಿ ನಮ್ಮ ಪಕ್ಷದಿಂದ ಕಣಕ್ಕಿಳಿಯುತ್ತಿದ್ದಾರೆ. ರವಿ ಒಬ್ಬ ನಿಮ್ಮ ಮನೆಯ ಅಣ್ಣ, ತಮ್ಮನಾಗಿ ನೋಡಿ ಅವರಿಗೆ ಮತ ನೀಡಿ ಎಂದರು.

Pancharatna Rathayatra: ಎರಡೂ ರಾಷ್ಟ್ರೀಯ ಪಕ್ಷಗಳನ್ನು ಕಿತ್ತೊಗೆಯಿರಿ: ಎಚ್ಡಿಕೆ ವಾಗ್ದಾಳಿ

ರಾಜ್ಯಾದ್ಯಂತ ಪಂಚರತ್ನ ಯೋಜನೆ ನಾಡಿನ ಜನತೆಗೆ ತಲುಪಿಸಬೇಕು. ಅದಕ್ಕಾಗಿ ನನ್ನ ಆರೋಗ್ಯವನ್ನೂ ಲೆಕ್ಕಿಸದೆ ಹೋರಾಟ ಮಾಡುತ್ತಿದ್ದೇನೆ. ಈ ಭಾಗದ ಜನತೆಗೆ ಶುದ್ಧ ನೀರು ತರುವ ಸಂಕಲ್ಪ ಮಾಡಿದ್ದೇನೆ. ಎತ್ತಿನಹೊಳೆ ಯೋಜನೆ ಲೂಟಿ ಹೊಡೆಯು ಯೋಜನೆಯಾಗಿದೆ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

click me!