ಬಿಜೆಪಿ, ಕಾಂಗ್ರೆಸ್‌ ಜತೆ ಕೈಜೋಡಿಸಿದರೆ ಪ್ರಗತಿ ಅಸಾಧ್ಯ: ಎಚ್‌.ಡಿ.ಕುಮಾರಸ್ವಾಮಿ

By Kannadaprabha NewsFirst Published Jan 31, 2023, 3:00 AM IST
Highlights

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರಾಜ್ಯದ ರೈತರನ್ನು ಸಾಲಮುಕ್ತಗೊಳಿಸುವುದು, ಹಳ್ಳಿಗಳ ಅಭಿವೃದ್ಧಿ, ಸ್ವಸಹಾಯ ಸಂಘಗಳ ಸಾಲ ಮನ್ನಾ ಸೇರಿದಂತೆ ಪಂಚರತ್ನ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇನೆ.

ಕೊಪ್ಪಳ (ಜ.31): ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರಾಜ್ಯದ ರೈತರನ್ನು ಸಾಲಮುಕ್ತಗೊಳಿಸುವುದು, ಹಳ್ಳಿಗಳ ಅಭಿವೃದ್ಧಿ, ಸ್ವಸಹಾಯ ಸಂಘಗಳ ಸಾಲ ಮನ್ನಾ ಸೇರಿದಂತೆ ಪಂಚರತ್ನ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇನೆ. ಕಾಂಗ್ರೆಸ್‌ ಮತ್ತು ಬಿಜೆಪಿಯೊಂದಿಗೆ ಕೈಜೋಡಿಸಿದರೆ ಯೋಜನೆಗಳ ಅನುಷ್ಠಾನ ಅಸಾಧ್ಯ. ಆದ್ದರಿಂದ ಜೆಡಿಎಸ್‌ಗೆ ಸಂಪೂರ್ಣ ಆಧಿಕಾರ ನೀಡುವಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮನವಿ ಮಾಡಿದರು. ಸೋಮವಾರ ಕುಷ್ಟಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಾವರಗೇರಾ ಗ್ರಾಮದಲ್ಲಿ ಪಂಚರತ್ನ ಯಾತ್ರೆಗೆ ದೊರೆತ ಅಭೂತಪೂರ್ವ ಸ್ವಾಗತ ಹಾಗೂ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ನೋಡಿ ಉಲ್ಲಸಿತರಾಗಿ ಮಾತನಾಡಿದರು.

ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಕೆ. ಶರಣಪ್ಪ ಅವರು ಜತೆಗಿದ್ದಾಗ ಇಲ್ಲಿ ಜೆಡಿಎಸ್‌ ಪ್ರಬಲವಾಗಿತ್ತು. ಅದಾದ ನಂತರ ಇಲ್ಲಿ ಪಕ್ಷಕ್ಕೆ ಅಷ್ಟಾಗಿ ಬಲ ಇರಲಿಲ್ಲ. ಆದರೆ ಇದೀಗ ಜನ ಸೇರಿರುವುದನ್ನು ನೋಡಿದ ಮೇಲೆ ಈ ಭಾಗದಲ್ಲಿ ನಮ್ಮ ಶಕ್ತಿ ಇದೆ ಎನ್ನುವ ಆಶಾಭಾವ ಮೂಡಿದೆ ಎಂದರು. ರೈತರ ಎಕರೆ ಜಮೀನಿಗೆ ಹತ್ತು ಸಾವಿರ ರುಪಾಯಿ ಪ್ರತಿವರ್ಷ ನೀಡಲಾಗುವುದು. ವೃದ್ಧಾಪ್ಯ ವೇತನ ಐದು ಸಾವಿರ ರುಪಾಯಿಗೆ ಹೆಚ್ಚಿಸಲಾಗುತ್ತದೆ. ವಿಧವಾ ವೇತನ ವನ್ನು ಎರಡೂವರೆ ಸಾವಿರ ರುಪಾಯಿಗೆ ಏರಿಸಲಾಗುವುದು. 

ಸಂಪುಟ ವಿಸ್ತರಣೆ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಣಯ: ಸಿಎಂ ಬೊಮ್ಮಾಯಿ

ಯುವಕರಿಗೆ, ಯುವತಿಯರಿಗೆ ಸ್ವಯಂ ಉದ್ಯೋಗ, ಮಹಿಳಾ ಸ್ವಸಹಾಯ ಸಂಘಗಳು ಸಂಪೂರ್ಣ ಸಾಲಮನ್ನಾ ಯೋಜನೆಯಗಳನ್ನು ಜಾರಿ ಮಾಡಿಯೇ ತೀರುತ್ತೇನೆ. ಇದಕ್ಕೆ ಸುಮಾರು .2.5 ಲಕ್ಷ ಕೋಟಿ ಬಜೆಟ್‌ ಅಗತ್ಯವಿದೆ. ಅದನ್ನೂ ಕ್ರೋಡೀಕರಿಸುವುದು ಗೊತ್ತಿದೆ ಎಂದರು.ಈ ಎಲ್ಲ ಯೋಜನೆಗಳನ್ನು ಜಾರಿ ಮಾಡಲು ಜೆಡಿಎಸ್‌ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕಾಗುತ್ತದೆ. ಆದರೆ ಇದೆಲ್ಲವನ್ನು ಬಿಜೆಪಿ, ಕಾಂಗ್ರೆಸ್‌ ಸರ್ಕಾರದ ಜತೆ ಮಾಡುವುದು ಅಸಾಧ್ಯ. ಅದಕ್ಕಾಗಿ ಇದೊಂದು ಬಾರಿ ನನಗೆ ಸಂಪೂರ್ಣ ಅಧಿಕಾರ ನೀಡಿ ಎಂದು ಮನವಿ ಮಾಡಿದರು. 

ಹಾಗೊಂದು ವೇಳೆ ಸಂಪೂರ್ಣ ಅಧಿಕಾರಕ್ಕೆ ಬಂದರೂ ಭರವಸೆ ಈಡೇರಿಸದಿದ್ದರೆ ಜೆಡಿಎಸ್‌ಅನ್ನೇ ವಿಸರ್ಜನೆ ಮಾಡುತ್ತೇನೆ ಎಂದು ಘೋಷಿಸಿದರು. ನಾನು ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನನ್ನನ್ನು ಮಾಜಿ ಮುಖ್ಯಮಂತ್ರಿ ಎನ್ನುತ್ತಾರೆ. ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಮುಗಿದ ಮೇಲೂ ಸಹ ನನ್ನನ್ನು ಮಾಜಿ ಸಿಎಂ ಎಂದು ಕರೆಯುತ್ತಾರೆ. ಆದರೆ ಈ ಬಾರಿ ನಾನು ಮುಖ್ಯಮಂತ್ರಿಯಾದರೆ ನಿಮ್ಮ ಸೇವೆ ಮಾಡುವುದು, ರಾಜ್ಯದ ಅಭಿವೃದ್ಧಿ, ರೈತರ ಕಷ್ಟತೀರಿಸುವುದು, ಬಡವರಿಗೆ ಉಚಿತ ಶಿಕ್ಷಣ ಆರೋಗ್ಯ, ರೈತರ ಪಂಪಸೆಟ್‌ಗೆ ದಿನದ 24 ಗಂಟೆ ಉಚಿತ ವಿದ್ಯುತ್‌ ನೀಡುವುದೇ ಪ್ರಮುಖ ಗುರಿ ಎಂದರು.

ಜೆಡಿಎಸ್‌ಗೆ ಬಲ ತುಂಬಿ: ಈ ಹಿಂದೆ ಸಂಸದ ಸಂಗಣ್ಣ ಕರಡಿ ಮತ್ತು ಮಾಜಿ ಶಾಸಕ ಕೆ. ಶರಣಪ್ಪ ಅವರು ನಮ್ಮ ಪಕ್ಷದಲ್ಲಿದ್ದರು. ಈಗ ಅವರು ಕೈ ಕೊಟ್ಟು ಬೇರೆ ಪಕ್ಷದಲ್ಲಿದ್ದಾರೆ. ಅವರಿದ್ದಾಗ ಇಲ್ಲಿ ಪಕ್ಷ ಬಲಯುತವಾಗಿತ್ತು. ಈಗಲೂ ನಮ್ಮ ಪಕ್ಷಕ್ಕೆ ಶಕ್ತಿ ತುಂಬಬೇಕಾಗಿದೆ. ದೊಡ್ಡವರು ಹೋದರೆ ಹೋಗಲಿ, ಆದರೆ ಬಡವರ ಸೇವೆ ಮಾಡುವರು ನಮ್ಮ ಜತೆಗಿದ್ದಾರೆ. ಹೀಗಾಗಿ ಇವರಿಗೆ ಸೇವೆ ಮಾಡಲು ಅವಕಾಶ ನೀಡಿ ಎಂದರು.

ಜೆಡಿಎಸ್‌ಗೇ ಮತ ಹಾಕ್ತೇವೆ ಅಂದ್ರು...: ತಾವರಗೇರಾಕ್ಕೆ ಬರುವಾಗ ದಾರಿಯಲ್ಲಿ ಜನ ಅಡ್ಡಗಟ್ಟಿಬಂದು ಕೈಮುಗಿದು ಹೇಳಿದ್ದಾರೆ. ನಿಮ್ಮಿಂದ ನನ್ನ ಎರಡು ಲಕ್ಷ ರುಪಾಯಿ ಸಾಲ ಮನ್ನಾ ಆಗಿದೆ. ನಾವು ನಿಮ್ಮ ಪಕ್ಷಕ್ಕೆ ಮತ ನೀಡುತ್ತೇವೆ ಎಂದಿದ್ದಾರೆ. ಹೀಗೆ ದಾರಿಯುದ್ದಕ್ಕೂ ಅನೇಕರು ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಜೆಸಿಬಿ ಮೂಲಕ ಹೂಮಳೆ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಕುಷ್ಟಗಿ ವಿಧಾನಸಭಾ ಕ್ಷೇತ್ರದ ತಾವರಗೇರಾ ಗ್ರಾಮದಲ್ಲಿ ಅಭಿಮಾನಿಗಳು ಜೆಸಿಬಿಯಲ್ಲಿ ನಿಂತು ಹೂವು ಮಳೆ ಸುರಿಸಿದರು.

ರಮೇಶ್‌ ಜಾರಕಿಹೊಳಿಗೆ ಸುಳ್ಳು ಹೇಳುವ ಚಟವಿದೆ: ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ

ಕುಮಾರಸ್ವಾಮಿಗೆ 5000, ಎಳನೀರು ನೀಡಿದ ಮಹಿಳೆ: ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಮಹಿಳೆಯೊಬ್ಬರು .5 ಸಾವಿರ ಹಣ ಮತ್ತು ಎಳನೀರನ್ನು ನೀಡಿ ಅಭಿಮಾನ ಮೆರೆದ ಘಟನೆ ತಾಲೂಕಿನ ಗುಮಗೇರಿ ಗ್ರಾಮದಲ್ಲಿ ಸೋಮವಾರ ನಡೆಯಿತು. ಪಂಚರತ್ನ ಯಾತ್ರೆಯ ಮೂಲಕ ತಾವರಗೇರಾದಿಂದ ಕುಷ್ಟಗಿಗೆ ತೆರಳುವಾಗ ಎಚ್‌ಡಿಕೆ ಕುಮಾರಸ್ವಾಮಿ ಅವರಿಗೆ ಗುಮಗೇರಿ ಗ್ರಾಮದ ಸುಜಾತಾ ಎಂಬವರು .5 ಸಾವಿರ ನಗದು ಹಾಗೂ ಎಳೆನೀರನ್ನು ನೀಡಿದರು. ಸುಜಾತಾ ಬಿಎಸ್ಪಿ ಮುಖಂಡ ಶಿವಪುತ್ರ ಗುಮಗೇರಿ ಅವರ ಪುತ್ರಿ. ಕುಮಾರಸ್ಬಾಮಿ ಬಡವರ ಪರ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಮಾನದಿಂದ ನೀಡಿರುವುದಾಗಿ ಸುಜಾತಾ ಅವರು ತಿಳಿಸಿದ್ದಾರೆ.

click me!