
ಚನ್ನಪಟ್ಟಣ (ಏ.11): ಹನುಮಾನ್ ದೇವಾಲಯದ (Hanuman Temple) ಮುಂದೆ 15 ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದ ಮುಸ್ಲಿಂ (Muslim) ವ್ಯಕ್ತಿಯ ಅಂಗಡಿಯ ಮೇಲೆ ದಾಳಿ ಮಾಡಿ 70 ಸಾವಿರ ರು. ಮೌಲ್ಯದ ಕಲ್ಲಂಗಡಿ ಹಣ್ಣುಗಳನ್ನು ಹಾಳು ಮಾಡಿರುವ ದುಷ್ಕರ್ಮಿಗಳ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಒತ್ತಾಯಿಸಿದರು. ತಾಲೂಕಿನ ಅಂಗರಹಳ್ಳಿ ಗ್ರಾಮದ ಶ್ರೀ ಬೆಟ್ಟದ ತಿಮ್ಮಪ್ಪಸ್ವಾಮಿ ದೇವಾಲಯದ ನೂತನ ದ್ವಾರ ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಧಾರವಾಡ ಜಿಲ್ಲೆಯ ನುಗ್ಗೆಕೇರಿ ಗ್ರಾಮದಲ್ಲಿ ನಡೆದಿರುವ ಘಟನೆ ಅತ್ಯಂತ ಹೇಯಕೃತ್ಯವಾಗಿದ್ದು, ಇಂತಹ ಘಟನೆಗಳು ಮರುಕಳಿಸಲು ಬಿಟ್ಟರೆ ಸಮಾಜದಲ್ಲಿ ಮುಂದೆ ಹಾಗುವ ಹಾನಿ ಮತ್ತು ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದವರು ಎಚ್ಚರಿಸಿದರು. ಒಂದು ಸಮಾಜದ ಹೊಟ್ಟೆಯ ಮೇಲೆ ಈ ರೀತಿ ಹೊಡೆಯುವ ಕೆಲಸವಾಗಬಾರದು. ಈ ಕೆಲಸವನ್ನು ಮುಂದುವರೆಸಿದರೆ ಅವರು ಎಲ್ಲಿಯ ವರೆಗೆ ಸಹಿಸಲು ಸಾಧ್ಯ, ಅವರು ತಿರುಗಿಬಿದ್ದರೆ ಯಾವ ಸರ್ಕಾರಗಳು ಉಳಿಯಲು ಸಾಧ್ಯವಿಲ್ಲ.ಸರ್ಕಾರ ಎಚ್ಚರಿಕೆಯಿಂದ ವರ್ತಿಸಬೆಕು.
ಎಲ್ಲಾ ಜನರು ನೆಮ್ಮದಿಯಿಂದ ಬಾಳುವ ವಾತಾವರಣ ನಿರ್ಮಿಸಬೇಕು ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದರು. ಈ ವಿಚಾರಗಳಲ್ಲಿ ಸರ್ಕಾರ ನಿಷ್ಕಿ್ರಯವಾದ್ರೆ ದೊಡ್ಡ ಬೆಲೆ ತೆರಬೇಕಾಗುತ್ತದೆ, ಇದಕ್ಕೆ ಆಸ್ಪದ ನೀಡಬೇಡಿ ಎಂಬುದು ನಮ್ಮ ಆಗ್ರಹ. ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ಹಣ್ಣುಗಳನ್ನು ರಸ್ತೆಗಹಾಕಿ ತುಳಿದು ಹಾನಿಮಾಡಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಸರ್ಕಾರ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.
ಬೆಂಕಿ ನಂದಿಸುವ ಕೆಲಸ ಮಾಡುತ್ತೇನೆ: ಎಚ್.ಡಿ. ಕುಮಾರಸ್ವಾಮಿ
ಶೋಭಾಯಾತ್ರೆಗೆ ಅಭ್ಯಂತರವಿಲ್ಲ: ಶೋಭಾಯಾತ್ರೆ ನಡೆಸುವುದಕ್ಕೆ ನನ್ನ ವಿರೋಧವಾಗಿಲ್ಲ. ಆದರೆ, ಶೋಭಾಯಾತ್ರೆಯ ಹೆಸರಿನಲ್ಲಿ ಸಾಮರಸ್ಯ ಕೆಡಿಸುವುದು ಬೇಡ, ರಾಮನಿಗೆ ಭಕ್ತಿತೋರೋಣ, ರಾಮನ ಸಂದೇಶಗಳನ್ನು ನಾವು ಅಳವಡಿಸಿಕೊಳ್ಳೋಣ. ಆದರೆ ರಾಮನ ಹೆಸರಿನಲ್ಲಿ ಇನ್ನೊಂದು ಸಮಾಜವನ್ನು ಉದ್ರೇಕಿಸುವ ಕೆಲಸ ಬೇಡ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಅಂಗರಹಳ್ಳಿ ಗ್ರಾಮದ ತಿಮ್ಮಪ್ಪ ದೇವಾಲಯದ ಪ್ರವೇಶದ್ವಾರವನ್ನು ಅನಾವರಣ ಗೊಳಿಸಿದ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ, 70 ಲಕ್ಷ ರು. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಬೀದಿದೀಪದ ಕಾಮಗಾರಿಗೆ ಚಾಲನೆ ನೀಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಮಾಜಿ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಮುಖಂಡ ನಿಸರ್ಗ ಲೋಕೇಶ್, ರಾಂಪುರ ಗ್ರಾಪಂ ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷ ಜಯರಾಜಯ್ಯ, ಸದಸ್ಯ ಕನ್ನಮಂಗಲ ಯೋಗಲಿಂಗು ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ನಬೀಸಾಬ್ ಕುಟುಂಬಕ್ಕೆ ಎಚ್ಡಿಕೆ ನೆರವು: ಹಿಂದೂಪರ ಸಂಘಟನೆ ಕಾರ್ಯರ್ತರಿಂದ ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ನಾಶ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಂಗಡಿ ಮಾಲೀಕ ನಬಿಸಾಬ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆರ್ಥಿಕ ನೆರವು ನೀಡಿದ್ದಾರೆ. ತಮ್ಮ ಆಪ್ತರ ಮೂಲಕ ಹತ್ತು ಸಾವಿರ ರೂ. ನೆರವು ನೀಡಿದ್ದಾರೆ.
Karnataka Politics: ಗೃಹ ಸಚಿವರು ಖಳನಟನ ಪಾತ್ರ ಮಾಡ್ತಿದ್ದಾರಾ?: ಕುಮಾರಸ್ವಾಮಿ
ಧಾರವಾಡ ತಾಲೂಕಿನ ನುಗ್ಗಿಕೇರಿ ಹನುಮಂತ ದೇವಸ್ಥಾನದ ಆವರಣದಲ್ಲಿದ್ದ ಹಿಂದೂಯೇತರ ಅಂಗಡಿ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಿನ್ನೆ ದಾಳಿ ನಡೆಸಿದ್ದರು. ನಿನ್ನೆ (ಶನಿವಾರ) ನಡೆದ ಗಲಾಟೆಯಲ್ಲಿ ವ್ಯಾಪಾರಿ ನಬೀಸಾಬ್ ಅವರ 5 ರಿಂದ 6 ಕ್ವಿಂಟಾಲ್ ಕಲ್ಲಂಗಡಿ ಹಣ್ಣು ಹಾನಿಯಾಗಿತ್ತು. ಇದರಿಂದ ವ್ಯಾಪಾರಿ ನಬೀಸಾಬ್ ನಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಡಿಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಇನ್ನು ಘಟನೆ ಬಗ್ಗೆ ಪ್ರಕ್ರಿಯಿಸಿದ್ದು, ತಿನ್ನುವ ಅನ್ನವನ್ನು ಕಿತ್ತುಕೊಂಡು ಏನ್ ಮಾಡ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.