Karnataka Politics ಜೆಡಿಎಸ್‌ನ ಮತ್ತೊಂದು ಪ್ರಮುಖ ವಿಕೆಟ್ ಪತನ, ಕಾಂಗ್ರೆಸ್‌ಗೆ ಬಂತು ಬಲ

By Suvarna NewsFirst Published Jan 21, 2022, 4:35 PM IST
Highlights

* ಕಾಂಗ್ರೆಸ್ ಕಡೆ ಜೆಡಿಎಸ್ ನಾಯಕ ವಲಸೆ ಮುಂದುವರಿಕೆ
* ಜೆಡಿಎಸ್‌ನ ಮತ್ತೊಂದು ಪ್ರಮುಖ ವಿಕೆಟ್ ಪತನ
* ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ವಿಧಾನಪರಿಷತ್ ಸದಸ್ಯ

ಬೆಂಗಳೂರು, (ಜ.21): ಜೆಡಿಎಸ್‌ನ(JDS) ಮತ್ತೊಂದು ಪ್ರಮುಖ ವಿಕೆಟ್ ಪತನವಾಗಿದೆ. ಜೆಡಿಎಸ್ ನಾಯಕ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಬೆಮಲ್ ಕಾಂತರಾಜು(Beml Kantharaju) ಕಾಂಗ್ರೆಸ್(congress) ಸೇರ್ಪಡೆಯಾದರು.  

ಕೆಪಿಸಿಸಿ ಕಚೇರಿಯಲ್ಲಿ ಇಂದು(ಶುಕ್ರವಾರ ) ಡಿ.ಕೆ.ಶಿವಕುಮಾರ್​, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್​, ಟಿ.ಬಿ.ಜಯಚಂದ್ರ ಸೇರಿದಂತೆ ಮತ್ತಿತರರ ಸಮ್ಮುಖದಲ್ಲಿ ಬೆಮೆಲ್​ ಕಾಂತರಾಜು ಪಕ್ಷ ಸೇರ್ಪಡೆಯಾದರು.

ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಕಾಂತರಾಜು, ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಪಕ್ಷ ಸೇರ್ಪಡೆಗೊಂಡಿದ್ದೇನೆ. ದೇಶಕ್ಕಾಗಿ ಏನಾದರೂ ಮಾಡಬೇಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ತುಮಕೂರು, ಬೆಂಗಳೂರು ಗ್ರಾಮಾಂತರದಲ್ಲೂ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು. 

Karnataka Politics ಗುತ್ತಿಗೆದಾರರಿಂದ 1 ರೂ ಪಡೆದಿಲ್ಲ, ಸಾಬೀತು ಪಡಿಸಿದ್ರೆ ರಾಜಕೀಯದಿಂದ ನಿವೃತ್ತಿ, ಸಿದ್ದು ಸವಾಲ್

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ದೇವರು ಮತ್ತು ಶಾಸ್ತ್ರದಲ್ಲಿ ನಂಬಿಕೆ ಇರವುದರಿಂದ ಕಾಂತರಾಜ್ ಪಕ್ಷ ಸೇರ್ಪಡೆ ತಡವಾಗಿದೆ. ಪ್ರತಿ ರಾಜಕೀಯ ಪಕ್ಷಕ್ಕೆ ಒಂದೊಂದು ಸಿದ್ಧಾಂತ ಇರುತ್ತದೆ. ಸಿದ್ಧಾಂತ ಇಲ್ಲ ಅಂದರೆ ಅದು ರಾಜಕೀಯ ಪಕ್ಷವೇ ಇಲ್ಲ. ಜೆಡಿಎಸ್‌ಗೆ ಸಿದ್ಧಾಂತ ಇಲ್ಲ. ಅವಕಾಶವಾದಿ ರಾಜಕಾರಣ ಮಾಡುವ ಪಕ್ಷ. ದೇಶದಲ್ಲಿ ಸಿದ್ಧಾಂತ, ಕಾರ್ಯಕ್ರಮದ ಆಧಾರದ ಮೇಲೆ ರಾಜಕೀಯ ಮಾಡುತ್ತಿದ್ದರೆ ಅದುವೆ ಕಾಂಗ್ರೆಸ್ ಮಾತ್ರ. ಬಿಜೆಪಿ ಪಕ್ಷವು ಆರ್​ಎಸ್‌ಎಸ್ ಮುಖವಾಡ. ಬಿಜೆಪಿಗೆ ರಾಜಕೀಯ ಸಿದ್ಧಾಂತ ಇಲ್ಲ. ದೇವರು, ಧರ್ಮ, ಭಾವನಾತ್ಮಕ ವಿಚಾರ ಇಟ್ಟು ಜನರನ್ನು ಮತಾಂಧರನ್ನಾಗಿ ಮಾಡಿ ಅವರ ಹಿಡನ್ ಅಜೆಂಡಾವನ್ನು ಜಾರಿ ಮಾಡಲು ಪ್ರಯತ್ನಿಸುವ ಪಕ್ಷ ಎಂದು ಟೀಕಿಸಿದರು.

ಹಿಂದೂ ರಾಷ್ಟ್ರ ಮಾಡಬೇಕೆಂಬುದು ಬಿಜೆಪಿ ಅಜೆಂಡಾ. ಬಹುತ್ವ ಇರುವ ಭಾರತವನ್ನು ಒಂದು ಧರ್ಮದ ರಾಷ್ಟ್ರ ಮಾಡಲು ಸಾಧ್ಯವಿಲ್ಲ‌. ಸಂವಿಧಾನದಲ್ಲೂ ಹೇಳಿಲ್ಲ. ಸಂವಿಧಾನದಲ್ಲಿ ಸಹಿಷ್ಣುತೆ ಪದ ಬಳಕೆ ಮಾಡಿದೆ. ಅದಕ್ಕೆ ಹೆಚ್ಚು ಪ್ರಾಧಾನ್ಯತೆ ಇರಬೇಕು. ಇದಕ್ಕೆ ವಿರುದ್ಧವಾಗಿದ್ದು ಬಿಜೆಪಿಯವರು. ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.

ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಜೆಡಿಎಸ್ ನನಗೆ ಎಲ್ಲವನ್ನೂ ಕೊಟ್ಟಿದೆ. ನನಗೇನೂ ದ್ರೋಹ ಮಾಡಿಲ್ಲ. ರಾಜಕೀಯ ಅಸ್ತಿತ್ವಕ್ಕಾಗಿ ತುರುವೇಕೆರೆ ಕ್ಷೇತ್ರದಲ್ಲಿ ಸಂಘಟನೆ ಮಾಡುತ್ತಿದ್ದೇನೆ. ಕಾಂಗ್ರೆಸ್ ವರಿಷ್ಠರು ಇದನ್ನು ಗುರುತಿಸಿ ಪಕ್ಷ ಸೇರುವಂತೆ ಆಹ್ವಾನಿಸಿದ್ದಾರೆ ಎಂದು ಕಳೆದ ನಾಲ್ಕೂವರೆ ತಿಂಗಳ ಹಿಂದೆಯೇ ಕಾಂತರಾಜು ಹೇಳಿದ್ದರು. ಆ ಮೂಲಕ ಅವರು ತಮ್ಮ ರಾಜಕೀಯ ಭವಿಷ್ಯದ ಹಿನ್ನೆಲೆ ಕಾಂಗ್ರೆಸ್​ ಸೇರುವ ಸುಳಿವು ಕೊಟ್ಟಿದ್ದರು.

ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಬೆಮಲ್ ಕಾಂತರಾಜು ಜೆಡಿಎಸ್ ಪಕ್ಷ ತೊರೆಯುವುದಾಗಿ ಹಲವು ದಿನಗಳ ಹಿಂದೆಯೇ ಘೋಷಣೆ ಮಾಡಿದ್ದರು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ನಡೆಯುವ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಬೆಮಲ್ ಕಾಂತರಾಜು ಆಯ್ಕೆಯಾಗಿದ್ದರು. ಈ ವರ್ಷದ ಜನವರಿ 5ರಂದು ಅವರ ಸದಸ್ಯತ್ವದ ಅವಧಿ ಪೂರ್ಣಗೊಂಡಿದೆ. ಡಿಸೆಂಬರ್‌ನಲ್ಲಿ ವಿಧಾನ ಪರಿಷತ್ ಚುನಾವಣೆ ನಡೆದಾಗ ಕಣಕ್ಕಿಳಿಯಲು ಅವರು ನಿರಾಕರಿಸಿದ್ದರು.

click me!