ಜೆಡಿಎಸ್‌ನಿಂದ ಜಿಲ್ಲೆಗೂ ಒಳ್ಳೆಯದಲ್ಲ, ರಾಜ್ಯಕ್ಕೂ ಒಳ್ಳೆಯದಲ್ಲ: ಸಿ.ಪಿ.ಯೋಗೇಶ್ವರ್‌

By Govindaraj SFirst Published Dec 31, 2022, 10:59 PM IST
Highlights

ಜೆಡಿಎಸ್‌ ಪಕ್ಷವನ್ನು ಗೆಲ್ಲಿಸುವುದರಿಂದ ಜಿಲ್ಲೆಗೂ ಉಪಯೋಗವಿಲ್ಲ. ರಾಜ್ಯಕ್ಕೂ ಒಳ್ಳೆಯದಾಗುವುದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಹೇಳಿದರು.

ಮಂಡ್ಯ (ಡಿ.31): ಜೆಡಿಎಸ್‌ ಪಕ್ಷವನ್ನು ಗೆಲ್ಲಿಸುವುದರಿಂದ ಜಿಲ್ಲೆಗೂ ಉಪಯೋಗವಿಲ್ಲ. ರಾಜ್ಯಕ್ಕೂ ಒಳ್ಳೆಯದಾಗುವುದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಹೇಳಿದರು. ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬಿಜೆಪಿಯಿಂದ ನಡೆದ ಜನಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಕಳೆದ ಬಾರಿಯ ಚುನಾವಣೆಯಲ್ಲಿ ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಜೆಡಿಎಸ್‌ ಪಕ್ಷವನ್ನು ಗೆಲ್ಲಿಸಿದಿರಿ. ಅದರಿಂದ ಮಂಡ್ಯಕ್ಕೆ ಆದ ಪ್ರಯೋಜನವೇನು. ಎಷ್ಟರ ಮಟ್ಟಿಗೆ ಜಿಲ್ಲೆ ಅಭಿವೃದ್ಧಿ ಕಂಡಿದೆ ಎಂಬುದನ್ನು ಜನರು ಯೋಚಿಸಬೇಕು. ಜೆಡಿಎಸ್‌ ನಂಬಿ ಮಂಡ್ಯ ಜಿಲ್ಲೆ ಹಾಳಾಗಿದೆ ಎಂದು ದೂಷಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಯನ್ನು ಬೆಂಬಲಿಸಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಬಲವಿರಲಿಲ್ಲ. ರಾಷ್ಟ್ರ ನಾಯಕರು ಎಲ್ಲ ಭಾಗದಲ್ಲಿಯೂ ಪಕ್ಷದ ಬಲವರ್ಧನೆಗೆ ಮುಂದಾಗಿದ್ದಾರೆ ಎಂದರು. ಕಾಂಗ್ರೆಸ್‌-ಜೆಡಿಎಸ್‌ ನಂಬಿಕೊಂಡಿದ್ದರಿಂದ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಜೆಡಿಎಸ್‌ ಎಂದುಕೊಂಡೇ ಮಂಡ್ಯ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿಯಿತು. ಪ್ರಗತಿಯ ಪಥದಲ್ಲಿ ಒಂದು ಹೆಜ್ಜೆಯನ್ನೂ ಎರಡೂ ಪಕ್ಷಗಳು ಕೊಂಡೊಯ್ಯಲಿಲ್ಲ. ಅದಕ್ಕಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಆಶೀರ್ವಾದ ಮಾಡಬೇಕು. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿಯಲ್ಲಿ ಹೊಸ ಬದಲಾವಣೆಯನ್ನು ತರುವುದಕ್ಕೆ ಬೆಂಬಲ ನೀಡುವಂತೆ ಕೋರಿದರು.

ಕುಮಾರಸ್ವಾಮಿಯಿಂದ ಸುಳ್ಳು ಆಶ್ವಾಸನೆ: ಸಿ.ಪಿ.ಯೋಗೇಶ್ವರ್‌

ಎಚ್ಡಿಕೆ ಮೇಲೆ ಸುರಿಸುವುದು ಹೂವಲ್ಲ ಪಾಪದ ಹಣ: ಪಂಚರತ್ನ ರಥಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೇಲೆ ಹೆಲಿಕಾಪ್ಟರ್‌ನಿಂದ ಪುಷ್ಪಾರ್ಚನೆ ಮಾಡುತ್ತಿಲ್ಲ, ಪಾಪದ ಹಣ ಸುರಿಯಲಾಗುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ವಾಗ್ದಾಳಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಬೇನಾಮಿ ಹೆಸರಲ್ಲಿ ಕುಮಾರಸ್ವಾಮಿ ಗುತ್ತಿಗೆ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಆ ಹಣದಿಂದ ಪಂಚರತ್ನ ರಥಯಾತ್ರೆಗೆ ಬಸ್‌ಗಳಲ್ಲಿ ಜನರನ್ನು ಕರೆತರಲಾಗಿದೆ ಎಂದು ಆರೋಪಿಸಿದ ಯೋಗೇಶ್ವರ್‌, ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಹೋದಲ್ಲಿ ಬಂದಲ್ಲೆಲ್ಲಾ ಚನ್ನಪಟ್ಟಣಕ್ಕೆ 1500 ಕೋಟಿ ಅನುದಾನ ತರಲಾಗಿದೆ ಎಂದು ಹೇಳುತ್ತಾರೆ. ಹಾಗಿದ್ದರೆ ಆ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಯೋಗೇಶ್ವರ್‌, ಒಂದಿಬ್ಬರು ಗುತ್ತಿಗೆದಾರರ ಹೆಸರಲ್ಲಿ ಕುಮಾರಸ್ವಾಮಿಯವರೇ ಬೇನಾಮಿಯಾಗಿ ಕಾಮಗಾರಿಗಳನ್ನು ನಡೆಸಿದ್ದಾರೆ ಎಂದರು.

ದಬ್ಬಾಳಿಕೆ ಎಷ್ಟು ಸಹಿಸೋದು: ರಾಮನಗರ-ಚನ್ನಪಟ್ಟಣದಲ್ಲಿ ಫ್ಲೆಕ್ಸ್‌ ಹಾಕೋರು ರಿಯಲ್‌ ಎಸ್ಟೇಟ್‌ ಮಾಡೋರು ಅಂತ ಎಚ್‌ಡಿಕೆ ಹೇಳಿಕೆ ನೀಡಿದ್ದಾರೆ. ಆದರೆ, ಪಂಚರತ್ನ ಯಾತ್ರೆಗೆ ಎಲ್ಲೆಲ್ಲೂ ಫ್ಲೆಕ್ಸ್‌ಗಳನ್ನು ಹಾಕಿಸಿದ್ದಾರೆ. ನಾವು ಏನೇ ಮಾಡಿದರು ತಪ್ಪು, ಅದೇ ನೀವು ಮಾಡಿದರೆ ಏನು ತಪ್ಪಿಲ್ಲ ಅಲ್ಲವಾ ಎಂದು ಪಶ್ನಿಸಿದ ಅವರು, ನಿಮ್ಮ ಈ ದಬ್ಬಾಳಿಕೆ ದೌರ್ಜನ್ಯನಾ ಎಷ್ಟುಅಂತಾ ಸಹಿಸೋದು ಎಂದು ಕಿಡಿಕಾರಿದರು.

ಎಚ್‌ಡಿಕೆ ಮಾತು ನಂಬಬೇಡಿ: ಚುನಾವಣೆ ಸಮಯದಲ್ಲಿ ಕುಮಾರಸ್ವಾಮಿ ಜನರಿಗೆ ಮಂಕುಬೂದಿ ಎರಚುಲು ಹೊರಟಿದ್ದಾರೆ. ರಾಮನಗರ ಜಿಲ್ಲೆಯ ಜನರು ಕುಮಾರಸ್ವಾಮಿಯ ಮಾತುಗಳನ್ನು ನಂಬಬೇಡಿ. ಕುಮಾರಸ್ವಾಮಿ ಶಾಸಕರಾದ ಮೇಲೆ ಚನ್ನಪಟ್ಟಣದಲ್ಲಿ ಒಂದೇ ಒಂದು ನಿವೇಶನ, ಮನೆ ಹಂಚಿಲ್ಲ. ನನ್ನ ಶ್ರಮದ ಫಲವಾಗಿ ಕ್ಷೇತ್ರಕ್ಕೆ ಮೂರು ಸಾವಿರ ಮನೆಗಳು ಮಂಜೂರಾಗಿದೆ. ಈಗಾಗಲೇ ಪಂಚಾಯಿತಿಯಿಂದ ಅನುಮೋದನೆ ದೊರೆತಿದ್ದು, ಗ್ರಾಪಂಗಳಲ್ಲಿ ಮನೆ ಹಂಚಲಾಗುವುದು. ಚನ್ನಪಟ್ಟಣದ ಕೂಡ್ಲೂರು ಗ್ರಾಮದಲ್ಲಿ ನಿವೇಶನ ಮಂಜೂರು ಮಾಡಿದ್ದೇನೆ ಎಂದು ಎಚ್‌ಡಿಕೆ ಸುಳ್ಳು ಹೇಳಿದ್ದಾರೆ. 

ಕ್ಷೇತ್ರಕ್ಕೆ ಉತ್ಸವ ಮೂರ್ತಿಯಂತೆ ಬರುವ ಎಚ್ಡಿಕೆ: ಯೋಗೇಶ್ವರ್‌ ಆರೋಪ

ಆದರೆ, ನಿವೇಶನ ರಹಿತರಿಗಾಗಿ ಜಮೀನು ಖರೀದಿಸಿದ್ದು ನನ್ನ ಅವಧಿಯಲ್ಲಿ ಎಂದು ಸ್ಪಷ್ಟಪಡಿಸಿದರು. ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಜಿಲ್ಲೆಯ ಒಬ್ಬರೇ ಒಬ್ಬ ಮುಖಂಡ ಅಥವಾ ಕಾರ‍್ಯಕರ್ತರಿಗೆ ಯಾವುದೇ ಸ್ಥಾನಮಾನ ನೀಡಲಿಲ್ಲ. ಅವರ ಮನೆಯ ಒಳಗಡೆ ಬಿಟ್ಟುಕೊಳ್ಳುತ್ತಿರಲಿಲ್ಲ. ಎಚ್‌ಡಿಕೆಯಿಂದ ಒಬ್ಬೇ ಒಬ್ಬ ಕಾರ‍್ಯಕರ್ತನಿಗೂ ಅನುಕೂಲ ಆಗಿಲ್ಲ. ಜಿಲ್ಲೆಯ ಜನರನ್ನು ಇವರು ಗುಲಾಮರಂತೆ ನೋಡುತ್ತಾರೆ. ಕುಮಾರಸ್ವಾಮಿ ಉಡಾಫೆ ಮಾತುಗಳನ್ನು ಆಡೋದನ್ನು ಇನ್ನಾದರೂ ಬಿಡಬೇಕು ಎಂದರು.

click me!