Latest Videos

ಈ ತಿಂಗಳಲ್ಲೇ ಜೆಡಿಎಸ್‌ 2ನೇ ಪಟ್ಟಿ ಬಿಡುಗಡೆ: ಎಚ್‌.ಡಿ.ಕುಮಾರಸ್ವಾಮಿ

By Kannadaprabha NewsFirst Published Feb 11, 2023, 11:43 PM IST
Highlights

ಈ ತಿಂಗಳಲ್ಲೇ ಎರಡನೇ ಹಂತದ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಳಗಾವಿ (ಫೆ.11): ಈ ತಿಂಗಳಲ್ಲೇ ಎರಡನೇ ಹಂತದ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2ನೇ ಹಂತದಲ್ಲಿ 60 ಅಭ್ಯರ್ಥಿಗಳ ಪಟ್ಟಿಬಿಡುಗಡೆಯಾಗಲಿದೆ. ನಾಳೆ ಅರಸೀಕೆರೆಗೆ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಲು ತಾವು ತೆರಳುತ್ತಿದ್ದು, ಅಲ್ಲಿ ನಡೆಯಲಿರುವ ಬಹಿರಂಗ ಸಮಾವೇಶದಲ್ಲಿ ಅರಸೀಕೆರೆ ಜೆಡಿಎಸ್‌ ಅಭ್ಯರ್ಥಿ ಘೋಷಣೆ ಮಾಡುವುದಾಗಿ ತಿಳಿಸಿದರು.

ಪಂಚರತ್ನ ಯಾತ್ರೆ ಮೂಲಕ ಎಲ್ಲ ಗ್ರಾಮಗಳಿಗೆ ತೆರಳಿ, ನಾನೇ ಜನರ ಬಳಿ ಹೋಗುವ ಪ್ರಯತ್ನ ಮಾಡುತ್ತಿದ್ದೇನೆ. ಕಳೆದ ಎರಡೂವರೆ ತಿಂಗಳಿಂದ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಿದ್ದೇನೆ. ಪಂಚರತ್ನ ಯಾತ್ರೆ ಯಶಸ್ಸಿನಿಂದ ಬಿಜೆಪಿ, ಕಾಂಗ್ರೆಸ್‌ಗೆ ಭಯ ಶುರುವಾಗಿದೆ. ಇಂದಿನಿಂದ ಬೆಳಗಾವಿ ಜಿಲ್ಲೆಯ ಕುಡಚಿ, ರಾಯಬಾಗ, ಖಾನಾಪುರ, ಬೈಲಹೊಂಗಲ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ ಎಂದರು.

ತಾಕತ್ತಿದ್ದರೆ ಮುಸ್ಲಿಂ ಸಿಎಂ ಅಭ್ಯರ್ಥಿಯನ್ನು ಎಚ್‌ಡಿಕೆ ಘೋಷಿಸಲಿ: ಸಚಿವ ಸುಧಾಕರ್‌

ಕಳಸಾ-ಬಂಡೂರಿ ಯೋಜನೆ ವಿಚಾರದಲ್ಲಿ ಬಿಜೆಪಿಯವರು ತಾವೇನೋ ದೊಡ್ಡ ಸಾಧನೆ ಮಾಡಿದವರಂತೆ ಸಿಹಿ ಹಂಚಿ ಸಂಭ್ರಮಿಸಿದರು. ಆದರೆ ಇದಕ್ಕೆ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ .100 ಕೋಟಿ ಅನುದಾನ ಬಿಡುಗಡೆ ಮಾಡಿದ್ದೆ. ಕರ್ನಾಟಕ, ಗೋವಾ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಇದು ಡಬಲ್ ಎಂಜಿನ್‌ ಅಲ್ಲ, ತಿಬ್ರಲ್ ಎಂಜಿನ್‌ ಸರ್ಕಾರ. ಆದಾಗ್ಯೂ ಇನ್ನೂ ಕೆಲಸ ಏಕೆ ಆರಂಭವಾಗಿಲ್ಲ ಎಂದು ಪ್ರಶ್ನಿಸಿದರು.

ಜೆಡಿಎಸ್‌ ಮೂಲಕ ಐದು (ಪಂಚರತ್ನ ) ಕಾರ್ಯಕ್ರಮ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಯೋಜನೆಗೆ .2.5 ಲಕ್ಷ ಕೋಟಿ ವೆಚ್ಚ ತಗುಲಲಿದೆ. ಇದಕ್ಕೆ ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ಅಧಿಕಾರಕ್ಕೆ ಬರಬೇಕು. ಹೀಗಾಗಿ ಒಂದು ಬಾರಿ ಜೆಡಿಎಸ್‌ಗೆ ಜನ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಹಾಸನದಲ್ಲಿ ರೇವಣ್ಣ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಕುಳಿತು ಈ ಬಗ್ಗೆ ಸಮನ್ವಯದ ನಿರ್ಣಯ ಕೈಗೊಳ್ಳಲಾಗುವುದು ಎಂದರು. ಈಗ ಸಿಡಿ ಬಗ್ಗೆ ಚರ್ಚೆ ಮಾಡಿ ಯಾರಿಗೂ ಪ್ರಯೋಜನವಿಲ್ಲ. ಎರಡ್ಮೂರು ದಿನ ಮನರಂಜನೆ ಸಿಗುತ್ತದೆ. ಅದರ ಬದಲಾಗಿ ಜನರ ಕಷ್ಟಗಳ ಬಗ್ಗೆ ಚರ್ಚೆ ಮಾಡಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಯಾವ ಕ್ಷೇತ್ರದಿಂದಲೂ ಭವಾನಿ ಸ್ಪರ್ಧಿಸಲ್ಲ: ಹಾಸನದಲ್ಲಿ ಗೆಲ್ಲುವುದಕ್ಕೋಸ್ಕರವೇ ಫೈಟ್‌ ನಡೆಯುತ್ತಿದೆ. ಚುನಾವಣೆಯಲ್ಲಿ ಎದುರಾಳಿಗಳನ್ನು ಸೋಲಿಸಲು ಸಮರ್ಥವಾದ ಅಭ್ಯರ್ಥಿಗಳಿದ್ದೇವೆ ಎಂದು ಟಿಕೆಟ್‌ಗೆ ಪೈಪೋಟಿ ನಡೆಯುತ್ತಿದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನನಗೆ ಹಾಸನದಲ್ಲಿ ಭವಾನಿ ರೇವಣ್ಣ ಗೆಲ್ಲತಕ್ಕಂದರಲ್ಲಿ ಸಮಸ್ಯೆ ಇಲ್ಲ. ನನಗಿರುವ ಸಮಸ್ಯೆ ನಾಡಿನಲ್ಲಿ ನಾವು ಸುಭದ್ರ ಸರ್ಕಾರ ತರಲು ಹೊರಟಿದ್ದೇವೆ. ಜನರ ಮನಸಿನಲ್ಲಿ ಅಪಪ್ರಚಾರ ಮಾಡಲಿಕ್ಕೆ ಆ ಘಟನೆ ಉಪಯೋಗ ಮಾಡುವುದನ್ನು ನಾನಿಲ್ಲಿ ಕಾಣುತ್ತಿದ್ದೇನೆ. 

ಬಿಜೆಪಿ, ಕಾಂಗ್ರೆಸ್‌ ಆಡಳಿತದಲ್ಲಿ ಜನರ ಬದುಕಿನ ಜೊತೆ ಚೆಲ್ಲಾಟ: ಎಚ್‌ಡಿಕೆ

ಅದರ ಹಿನ್ನೆಲೆ ನಾವು ಈ ಚುನಾವಣೆಯಲ್ಲಿ ಆ ರೀತಿಯ ತೀರ್ಮಾನ ಆಗುವುದು ಬೇಡ ಎಂದು ಹೇಳುತ್ತಿದ್ದೇನೆ. ಇದರ ಹೊರತು ಅವರು ಸಮರ್ಥ ಅಭ್ಯರ್ಥಿ ಅಲ್ಲ ಅನ್ನುವಂತದ್ದು ಅಲ್ಲ ಎಂದರು. ಹಾಸನದಲ್ಲಿ ಎಚ್‌.ಡಿ.ರೇವಣ್ಣ ಸ್ಪರ್ಧಿಸಿ, ಹೊಳೆನರಸೀಪುರದಲ್ಲಿ ಭವಾನಿ ರೇವಣ್ಣ ಸ್ಪರ್ಧೆಗೆ ಅವಕಾಶ ಕೊಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಾರಿ ಪ್ರಶ್ನೆಯೇ ಇಲ್ಲ. ಭವಾನಿ ರೇವಣ್ಣ ಎಲ್ಲಿಂದಲೂ ಸ್ಪರ್ಧೆ ಮಾಡುವುದಿಲ್ಲ. ಈ ಬಾರಿ ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ತರಬೇಕೆಂದು ಇದ್ದೇವೆ. ಆ ಒಂದು ಹಿನ್ನೆಲೆಯಲ್ಲಿ ಪಕ್ಷದಲ್ಲಿ ಸೂಕ್ತವಾದ ನಿರ್ಣಯ ಮಾಡುತ್ತಿದ್ದೇವೆ ಎಂದರು.

click me!