ಕಾಂಗ್ರೆಸ್‌ ಮತ ಸೆಳೆಯಲು ಜನಾರ್ದನ ರೆಡ್ಡಿ ನೂತನ ಪಕ್ಷ: ಸತೀಶ ಜಾರಕಿಹೊಳಿ

By Kannadaprabha NewsFirst Published Feb 1, 2023, 9:00 PM IST
Highlights

ಬಿಜೆಪಿಯಲ್ಲಿಯೂ ಕಿತ್ತಾಟ ಇದೆ. ಬಿಜೆಪಿ ಯಡಿಯೂರಪ್ಪನವರನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿಯಲ್ಲಿಯೂ ಸಮಸ್ಯೆ ಇದೆ. ಎಲ್ಲ ಪಕ್ಷಗಳಲ್ಲಿ ಸಮಸ್ಯೆ ಇರುವುದು ಸ್ವಾಭಾವಿಕವಾಗಿದೆ ಎಂದು ತಿಳಿಸಿದ ಸತೀಶ ಜಾರಕಿಹೊಳಿ

ವಿಜಯಪುರ(ಫೆ.01):  ಜನಾರ್ದನ ರೆಡ್ಡಿ ಹೊಸ ಪಕ್ಷದಿಂದ ಬಿಜೆಪಿಗೆ ಏನೂ ಹೊಡೆತ ಬೀಳಲ್ಲ. ಕಾಂಗ್ರೆಸ್‌ ಮತ ಕಡಿತಗೊಳಿಸಲು ಈ ಹೊಸ ಪಕ್ಷ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಹೊಸ ಪಕ್ಷದಿಂದ ಯಾರಿಗೆ ಲಾಭ, ಹಾನಿಯಾಗುತ್ತದೆ ಎಂಬುವುದನ್ನು ಕಾದು ನೋಡಬೇಕು. ಕಾಂಗ್ರೆಸ್‌ ತೊರೆದು ಹೋದವರು ಮತ್ತೆ ಕಾಂಗ್ರೆಸ್ಸಿಗೆ ಮರಳುವ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ನಾವು ವೈಯಕ್ತಿಕವಾಗಿ ಬೇಕು, ಬೇಡ ಎಂಬುವುದನ್ನು ಹೇಳಬಹುದು. ಆದರೆ ಅಂತಿಮವಾಗಿ ವರಿಷ್ಠರು ಈ ಬಗ್ಗೆ ತೀರ್ಮಾನಿಸುತ್ತಾರೆ ಎಂದರು.

ಉಮೇಶ ಕತ್ತಿ ಅವರ ಕುಟುಂಬ ಕಾಂಗ್ರೆಸ್ಸಿಗೆ ಬರುತ್ತದೆ ಎನ್ನುವ ವದಂತಿ ನನ್ನ ಗಮನಕ್ಕೆ ಬಂದಿಲ್ಲ. ಸಿದ್ಧಾಂತಗಳನ್ನು ಒಪ್ಪಿ ಕಾಂಗ್ರೆಸ್ಸಿಗೆ ಬಂದರೆ ಸ್ವಾಗತ ಮಾಡುತ್ತೇನೆ ಎಂದ ಅವರು, ನಾನು ಯಮಕನಮರಡಿ ಕ್ಷೇತ್ರ ಬದಲಾವಣೆ ಮಾಡುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Union Budget 2023 ಕೊಟ್ಟ ಮಾತಿನಂತೆ ನಡೆದುಕೊಂಡ ಮೋದಿ, ಉತ್ತಮ ಬಜೆಟ್ ಎಂದ ಯಡಿಯೂರಪ್ಪ!

ಕಾಂಗ್ರೆಸ್ಸಿನಲ್ಲಿ ಡಿಕೆಶಿ-ಸಿದ್ದರಾಮಯ್ಯ ಮಧ್ಯೆ ಕಿತ್ತಾಟ ಇದೆ ಎಂಬ ವಿಜಯೇಂದ್ರ ಅವರ ಪ್ರಸ್ತಾವ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿಯೂ ಕಿತ್ತಾಟ ಇದೆ. ಬಿಜೆಪಿ ಯಡಿಯೂರಪ್ಪನವರನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿಯಲ್ಲಿಯೂ ಸಮಸ್ಯೆ ಇದೆ. ಎಲ್ಲ ಪಕ್ಷಗಳಲ್ಲಿ ಸಮಸ್ಯೆ ಇರುವುದು ಸ್ವಾಭಾವಿಕವಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಪಕ್ಷ ಸಿದ್ದರಾಮಯ್ಯನವರ ಅಭಿವೃದ್ಧಿ ಹಾಗೂ ಕೇಂದ್ರದಲ್ಲಿ ಯುಪಿಎ ಸರ್ಕಾರ ಮಾಡಿದ ಅಭಿವೃದ್ಧಿ ಅಜೆಂಡಾ ಮುಂದಿಟ್ಟುಕೊಂಡು ಬರುವ ವಿಧಾನಸಭೆ ಚುನಾವಣೆ ಎದುರಿಸಲಾಗುತ್ತದೆ ಎಂದು ಜಾರಕಿಹೊಳಿ ಹೇಳಿದರು.

ಮೋದಿಯ ಸುಳ್ಳುಗಳ ಸರಮಾಲೆಗೆ 9 ವರ್ಷಗಳಾಗಿವೆ: ಸಂಸದ ಡಿ.ಕೆ ಸುರೇಶ್

ಇಬ್ಬರ ನಡುವಿನ ಜಗಳಕ್ಕೆ ಪ್ರತಿಕ್ರಿಯಿಸಲ್ಲ

ರಮೇಶ ಜಾರಕಿಹೊಳಿ ಡಿಕೆಶಿ ಮೇಲೆ ಸಿಡಿ ಆರೋಪ ವಿಚಾರ ನನಗೇನೂ ಗೊತ್ತಿಲ್ಲ. ಇದು ಇಬ್ಬರ ವ್ಯಕ್ತಿಗಳ ಮಧ್ಯೆ ನಡೆಯುತ್ತಿದೆ. ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ಅದು ಅವರ ವೈಯಕ್ತಿಕ ವಿಚಾರವಾಗಿದೆ ಎಂದು ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ಸಿಡಿ ವಿಚಾರವಾಗಿ ಯಾರ ಮಾತನಾಡಿದ್ದಾರೋ ಅವರನ್ನೇ ಕೇಳಿ. ಯಾರ ಕಡೆಗೆ ಸಿಡಿ ಇದೆಯೋ ಅಲ್ಲಿಯೇ ಕೇಳಬೇಕು. ಯಾರ ಕಡೆಗೆ ಏನಿದೆ ಎಂಬುವುದು ನನಗಂತೂ ಗೊತ್ತಿಲ್ಲ. ರಮೇಶ ಜಾರಕಿಹೊಳಿ ಅವರು ಡಿಕೆಶಿ ವಿರುದ್ಧ ಸಿಡಿ ಆರೋಪ ಮಾಡಿದ್ದು, ಅದಕ್ಕೆ ಡಿಕೆಶಿ ಅವರೇ ಉತ್ತರಿಸಬೇಕು ಎಂದರು.

click me!