Karnataka Politics: 'ಕಾಂಗ್ರೆಸ್ಸಿಗೆ ಪಂಜಾಬಲ್ಲಿ ಸಿಧು ರೀತಿ ಸಿದ್ದು ಮುಳುವು'

Published : Mar 13, 2022, 04:11 AM ISTUpdated : Mar 13, 2022, 04:15 AM IST
Karnataka Politics: 'ಕಾಂಗ್ರೆಸ್ಸಿಗೆ ಪಂಜಾಬಲ್ಲಿ ಸಿಧು ರೀತಿ ಸಿದ್ದು ಮುಳುವು'

ಸಾರಾಂಶ

*   ಪಂಜಾಬ್‌ನಲ್ಲಿ ಸಿಧುರಂತೆ ಕರ್ನಾಟಕದಲ್ಲಿ ಸಿದ್ದು ಕಾಂಗ್ರೆಸ್‌ ಅವನತಿಗೆ ಒಯ್ಯಲಿದ್ದಾರೆ *  ಮಾಜಿ ಸಿಎಂ ಜಗದೀಶ ಶೆಟ್ಟರ್‌ ಲೇವಡಿ *  ಮಹದಾಯಿ ಬಗ್ಗೆ ಪಾದಯಾತ್ರೆ ಮಾಡಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ  

ಹುಬ್ಬಳ್ಳಿ(ಮಾ.13):  ಪಂಜಾಬ್‌ನಲ್ಲಿ ನವಜೋತಸಿಂಗ್‌ ಸಿಧು ಕಾಂಗ್ರೆಸ್‌ ಹಾಳು ಮಾಡಿದಂತೆ ರಾಜ್ಯದಲ್ಲಿ ಸಿದ್ದು (Siddaramaiah) ಪಕ್ಷವನ್ನು ಅವನತಿಯತ್ತ ಕೊಂಡೊಯ್ಯಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌(Jagadish Shettar) ಲೇವಡಿ ಮಾಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್‌(Congress) ಮುಕ್ತವಾಗುತ್ತದೆ ಎಂದು ಮೋದಿಯವರು ಹೇಳುತ್ತಿದ್ದುದು ನಿಜವಾಗುತ್ತಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ಮಾನ್ಯತೆ ಕಳೆದುಕೊಂಡಿರುವ ಕಾಂಗ್ರೆಸ್‌ ರಾಜ್ಯಸಭೆಯಲ್ಲೂ ಶೀಘ್ರ ಅಧಿಕೃತ ವಿರೋಧ ಪಕ್ಷವೆಂಬ ಸ್ಥಾನ ಕಳೆದುಕೊಳ್ಳಲಿದೆ.

ವೇದಿಕೆ ಮೇಲೆಯೇ ಜಗದೀಶ್‌ ಶೆಟ್ಟರ್‌ ಅಸಮಾಧಾನ: ಸ್ಥಳದಲ್ಲೇ ಬಗೆಹರಿಸಿದ ಬೊಮ್ಮಾಯಿ

ದೇಶದಲ್ಲಿ ಇಬ್ಬರು ಸಿದ್ದು ಇದ್ದಾರೆ. ಇವರಿಬ್ಬರಿಂದ ಕಾಂಗ್ರೆಸ್‌ ಮುಳುಗುವುದು ನಿಶ್ಚಿತ. ಈಗಾಗಲೆ ಒಬ್ಬ ಸಿಧು ಪಂಜಾಬಿನಲ್ಲಿ ಕಾಂಗ್ರೆಸ್‌ ಹಾಳು ಮಾಡಿದ. ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅವನತಿ ತರುತ್ತಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಬಣ ಬೇರೇ ಬೇರೆ ಇದೆ. ಈಗಾಗಲೇ ಅವರಲ್ಲೇ ಗುಂಪುಗಾರಿಕೆ ಆರಂಭವಾಗಿದೆ. ಬಿಜೆಪಿ ಏನು ಮಾಡದಿದ್ದರೂ ಕಾಂಗ್ರೆಸ್‌ ತನ್ನ ಒಳಜಗಳದಿಂದಲೆ ನಾಶವಾಗಲಿದೆ ಎಂದರು.

ಮಹದಾಯಿಗಾಗಿ(Mahadayi) ಕಾಂಗ್ರೆಸ್‌ ಪಾದಯಾತ್ರೆ ಸಂಬಂಧ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಶೆಟ್ಟರ್‌, ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ ನಿಲುವು ಸ್ಪಷ್ಟವಾಗಿಲ್ಲ. ಗೋವಾ ಚುನಾವಣೆ ಪ್ರಣಾಳಿಕೆಯಲ್ಲಿ ಕರ್ನಾಟಕಕ್ಕೆ ನೀರು ಕೊಡಲ್ಲ ಎನ್ನುತ್ತಾರೆ. ಆದರೆ ರಾಜ್ಯದಲ್ಲಿ ಮಹದಾಯಿ ನೀರಿಗಾಗಿ ಪಾದಯಾತ್ರೆ ಮಾಡುತ್ತೇವೆ ಎನ್ನಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಬಜೆಟ್‌ನಲ್ಲಿ ಘೋಷಿಸಿದ ಹಣದಲ್ಲಿ ಸಾಕಷ್ಟುಹಣ ಬಾಕಿ ಉಳಿಯುವುದು ಹೊಸ ವಿಚಾರವಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಲೂ ಹಣ ಬಾಕಿ ಇತ್ತು. ಅವರ ಇಂದಿರಾ ಕ್ಯಾಂಟೀನ್‌ ಹಣ ಸಾಕಷ್ಟುಬಾಕಿ ಉಳಿದಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಬಜೆಟ್‌ ಹಣ ಬಾಕಿ ಇತ್ತು. ಅದರ ಬಗ್ಗೆ ಕಾಂಗ್ರೆಸ್‌ ನಾಯಕರು ಮಾತನಾಡಲಿ ಎಂದರು.

ಸಂಪುಟ ಸೇರಲ್ಲ-ಶೆಟ್ಟರ್‌

ಸಚಿವ ಸಂಪುಟ ವಿಸ್ತರಣೆ(Cabinet Expansion) ಸಂಬಂಧ ತಮ್ಮ ನಿಲುವು ಸ್ಪಷ್ಟಪಡಿಸಿದ ಜಗದೀಶ ಶೆಟ್ಟರ್‌, ಈಗ ಬಜೆಟ್‌ ಅಧಿವೇಶನ ನಡೆಯುತ್ತಿದೆ. ಸಂಪುಟದ ಬಗ್ಗೆ ವರಿಷ್ಠರು ಹಾಗೂ ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ. ಇದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ನಾನು ಸಚಿವ ಸಂಪುಟ ಸೇರುವ ವಿಚಾರದ ಬಗ್ಗೆ ಪದೇ ಪದೇ ಹೇಳಲ್ಲ. ನನ್ನ ನಿಲುವು ಸ್ಪಷ್ಟವಿದೆ, ನಾನು ಸಂಪುಟ ಸೇರಲ್ಲ. ಇನ್ನು, ನನ್ನ ರಾಜಕೀಯ(Politics) ಅನುಭವದ ಪ್ರಕಾರ ರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆ ನಡೆಯಲ್ಲ ಎಂದರು.

ಬಿಜೆಪಿ ಜನಪರ ಆಡಳಿತಕ್ಕೆ ಸಿಕ್ಕ ಮನ್ನಣೆ:

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ನೇತೃತ್ವದ ಬಿಜಿಪಿ ಸರ್ಕಾರದ ಅಭಿವೃದ್ಧಿ ಪರ ಆಡಳಿತಕ್ಕೆ ಸಿಕ್ಕ ಜನಮನ್ನಣೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ತಿಳಿಸಿದ್ದಾರೆ.

ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ಸಿಎಂ ರಾಜ್ಯಕ್ಕೆ ವಾಪಸ್‌ ಬೆನ್ನಲ್ಲೇ ಶೆಟ್ಟರ್‌ಗೆ ಹೈಕಮಾಂಡ್ ಬುಲಾವ್

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉತ್ತರ ಪ್ರದೇಶದಲ್ಲಿ ಬಿಜೆಪಿ ಸತತ ಎರಡನೇ ಬಾರಿ ಅಧಿಕಾರ ಹಿಡಿದು ಇತಿಹಾಸ ಸೃಷ್ಟಿಸಿದೆ. ಸಾಂಸ್ಕೃತಿಕವಾಗಿ ವಿಶೇಷ ಸ್ಥಾನ ಮಾನ ಪಡೆದಿರುವ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ತನ್ನ ಆಡಳಿತ ವೈಖರಿಯಿಂದ ಜನರ ಮನ ಗೆದ್ದಿದೆ. ಈಶಾನ್ಯ ರಾಜ್ಯಗಳ ಹಳ್ಳಿ ಹಳ್ಳಿಗಳಿಗೂ ಕೇಂದ್ರ ಸರ್ಕಾರದ ಯೋಜನೆಗಳು ತಲುಪಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಗಮನ ಸೆಳೆದು ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದು ಪರಿಗಣಿಸಲಾಗಿದ್ದ ಉತ್ತರ ಪ್ರದೇಶ, ಉತ್ತರಾಖಂಡ್‌, ಮಣಿಪುರ, ಗೋವಾ ಹಾಗೂ ಪಂಜಾಬ್‌ ವಿಧಾನ ಸಭಾ ಚುನಾವಣೆಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಸ್ಪಷ್ಟಬಹುಮತದೊಂದಿಗೆ ಅಭೂತಪೂರ್ವ ಜಯಗಳಿಸಿದೆ. ರಾಷ್ಟ್ರದಲ್ಲಿ ಮೋದಿ ಅವರ ನಾಯಕತ್ವಕ್ಕೆ ಪರ್ಯಾಯ ನಾಯಕತ್ವ ಇಲ್ಲ. ಬಿಜೆಪಿಗೆ ಪರ್ಯಾಯವಾದ ಪಕ್ಷವಿಲ್ಲ ಎಂದು ಫಲಿತಾಂಶ ಸಾಬೀತುಪಡಿಸಿದೆ ಎಂದು ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ