Gujarat Assembly Election: ಇಸುದನ್‌ ಗಡ್ವಿ ಆಪ್‌ ಸಿಎಂ ಅಭ್ಯರ್ಥಿ!

By Santosh NaikFirst Published Nov 4, 2022, 2:35 PM IST
Highlights

ಗುಜರಾತ್‌ ವಿಧಾನಸಭೆ ಚುನಾವಣೆಗೆ ಆಮ್‌ ಆದ್ಮಿ ಪಾರ್ಟಿಯ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಯಾಗಿದೆ. ಗೋಪಾಲ್‌ ಇಟಾಲಿಯಾರನ್ನು ಸೋಲಿಸಿರುವ ಇಸುದನ್‌ ಗಡ್ವಿ ಗುಜರಾತ್‌ನಲ್ಲಿ ಆಪ್‌ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎನಿಸಿಕೊಂಡಿದ್ದಾರೆ.

ಅಹಮದಾಬಾದ್‌ (ನ.4): ಮುಂಬರುವ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಆಮ್‌ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಇಸುದನ್‌ ಗಡ್ವಿ ಆಯ್ಕೆಯಾಗಿದ್ದಾರೆ. ಜನರ ಅಭಿಪ್ರಾಯ ಸಂಗ್ರಹಣೆಯ ಮೂಲಕ ಇಸುದನ್‌ ಗಡ್ವಿ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದಾಗಿ ಆಮ್‌ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. ಇಸುದನ್‌ ಗಡ್ವಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಪ್ರಬಲ ಪ್ರತಿರೋಧ ಒಟ್ಟಿದ್ದ ರಾಜ್ಯಾಧ್ಯಕ್ಷ ಗೋಪಾಲ್‌ ಇಟಾಲಿಯಾ ಅವರಿಗೆ ದೊಡ್ಡ ಮಟ್ಟದ ನಿರಾಸೆಯಾಗಿದೆ. ರಾಜ್ಯದ ಜನತೆ ಪಕ್ಷಕ್ಕೆ ಸಲ್ಲಿಸಿದ ಅಭಿಪ್ರಾಯದ ಮೇರೆಗೆ ಅಭ್ಯರ್ಥಿಯನ್ನು ಹೆಸರಿಸಲಾಗಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗಡ್ವಿ ಅವರಲ್ಲದೆ, ಎಎಪಿಯ ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಮನೋಜ್ ಸೊರತಿಹ್ಯ ಕೂಡ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ರೇಸ್‌ನಲ್ಲಿದ್ದರು.  ಕೇಜ್ರಿವಾಲ್ ಅಹಮದಾಬಾದ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೆಸರನ್ನು ಘೋಷಿಸಿದರು. ಪ್ರಸ್ತುತ ಭಾರತೀಯ ಜನತಾ ಪಕ್ಷವು ಆಡಳಿತ ನಡೆಸುತ್ತಿರುವ ರಾಜ್ಯದಲ್ಲಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡಲು ಎಸ್‌ಎಂಎಸ್, ವಾಟ್ಸಾಪ್, ವಾಯ್ಸ್‌ ಮೇಲ್ ಮತ್ತು ಇ-ಮೇಲ್ ಮೂಲಕ ಪಕ್ಷವನ್ನು ಸಂಪರ್ಕಿಸುವಂತೆ ಕಳೆದ ವಾರ ಕೇಜ್ರಿವಾಲ್ ಜನರನ್ನು ಒತ್ತಾಯಿಸಿದ್ದರು.

ನವೆಂಬರ್ 3 ರ ಸಂಜೆಯವರೆಗೆ ಜನರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದು ಮತ್ತು ಅವರ ಅಭಿಪ್ರಾಯಗಳ ಆಧಾರದ ಮೇಲೆ ಪಕ್ಷದ ಮುಖ್ಯಮಂತ್ರಿ ಮುಖದ ಹೆಸರನ್ನು ಮರುದಿನ ಪ್ರಕಟಿಸಲಾಗುವುದು ಎಂದು ಕೇಜ್ರಿವಾಲ್ ಈ ಹಿಂದೆ ಹೇಳಿದ್ದರು. ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವುದನ್ನು ನವೆಂಬರ್‌ 4 ರಂದು ಪ್ರಕಟ ಮಾಡುವುದಾಗಿ ಕಳೆದ ಶನಿವಾರ ಕೇಜ್ರಿವಾಲ್‌ ಘೋಷಣೆ ಮಾಡಿದ್ದರು.

Gujarat Election 2022 Asianet Survey: ಗುಜರಾತ್‌ನಲ್ಲಿ ಮತ್ತೆ ಬಿಜೆಪಿ: ಕುಗ್ಗಿದ ಕಾಂಗ್ರೆಸ್‌ ಬಲ

ಯಾರಿವರು ಇಸುದನ್‌ ಗಡ್ವಿ: ಇಸುದನ್‌ ಗಡ್ವಿ ಅವರು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಮತ್ತು ಅದರ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ. ಗುಜರಾತ್‌ನಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಎಎಪಿ ನಡೆಸಿದ ಸಮೀಕ್ಷೆಯಲ್ಲಿ ಅವರು 73% ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಗಡ್ವಿ, ಅವರು ಜನಪ್ರಿಯ ಗುಜರಾತಿ ಪತ್ರಕರ್ತ ಮತ್ತು ನಿರೂಪಕರಾಗಿದ್ದರು. ಟಿವಿಯಲ್ಲಿ ಅವರು 8-9ರ ಪ್ರೈಮ್‌ ಟೈಮ್‌ ಕಾರ್ಯಕ್ರಮ ಎಷ್ಟು ಜನಪ್ರಿಯವಾಗಿತ್ತೆಂದರೆ ಜನರ ಆಗ್ರಹದ ಮೇಲೆ ಇನ್ನೂ ಅರ್ಧಗಂಟೆಗಳ ಕಾಲ ವಿಸ್ತರಣೆ ಮಾಡಲಾಗಿತ್ತು. ಗಡ್ವಿ ಗುಜರಾತ್‌ನಲ್ಲಿ ಭಾರಿ ಜನಪ್ರಿಯತೆ ಹೊಂದಿರುವ ವ್ಯಕ್ತಿ ಎನಿಸಿದ್ದಾರೆ. 40 ವರ್ಷ ವಯಸ್ಸಿನ ಗಡ್ವಿ, ತಮ್ಮನ್ನು "ನಾಯಕ್ ಅಥವಾ ವಿಜಯಿ" ಎಂದು ಕರೆದುಕೊಳ್ಳುತ್ತಾರೆ ಮತ್ತು ಸಾಮಾಜಿಕ ಚಳುವಳಿಗಳಲ್ಲಿ ಭಾಗವಹಿಸಲು ಮತ್ತು ಗುಜರಾತ್‌ನ ಜನಸಾಮಾನ್ಯರು ಮತ್ತು ಸಮಸ್ಯೆಗಳಿಗೆ ಧ್ವನಿ ಎತ್ತಲು ಹೆಸರುವಾಸಿಯಾಗಿದ್ದಾರೆ. ಹಿರಿಯ ಎಎಪಿ ನಾಯಕ ದ್ವಾರಕಾ ಜಿಲ್ಲೆಯ ಪಿಪ್ಲಿಯಾ ಗ್ರಾಮದ ರೈತ ಕುಟುಂಬದಿಂದ ಬಂದವರಾಗಿದ್ದಾರೆ.

Asianet News Gujarat Pre Poll Survey: ಬಿಜೆಪಿಗೆ ಪಟೇಲರೇ ಶಕ್ತಿ, ಕಾಂಗ್ರೆಸ್‌ಗೆ ಮುಸ್ಲಿಮರ ಬಲ!

ಪತ್ರಕರ್ತರಾಗಿ ಪ್ರಸಿದ್ಧಿ ಪಡೆದುಕೊಂಡ ಬಳಿಕ ಸಾರ್ವಜನಿಕ ಜೀವನಕ್ಕೆ ಏರಿದ ಗಡ್ವಿ ಅವರು ದೂರದರ್ಶನದ 'ಯೋಜನಾ' ಎಂಬ ಜನಪ್ರಿಯ ಕಾರ್ಯಕ್ರಮಕ್ಕೆ ಹೆಸರುವಾಸಿಯಾಗಿದ್ದರು. ಈಟಿವಿಗಾಗಿ ಪೋರಬಂದರ್‌ನಲ್ಲಿ ಗ್ರೌಂಡ್ ರಿಪೋರ್ಟಿಂಗ್ ಮಾಡುವಾಗ ಅವರು ಗುಜರಾತ್‌ನಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿದರು. ಅವರ ಪತ್ರಿಕೋದ್ಯಮ ವೃತ್ತಿಜೀವನದ ಪ್ರಮುಖ ಹೈಲೈಟ್‌ ವಿಚಾರವೆಂದರೆ, ತಮ್ಮ ಸುದ್ದಿ ಕಾರ್ಯಕ್ರಮದಲ್ಲಿ ಗುಜರಾತ್‌ನ ಡ್ಯಾಂಗ್ ಮತ್ತು ಕಪರಡಾ ತಾಲೂಕುಗಳಲ್ಲಿ ಅಕ್ರಮ ಅರಣ್ಯನಾಶದ ವಿಚಾರವಾಗಿ ನಡೆದ 150 ಕೋಟಿಯ ಹಗರಣವನ್ನು ಬಯಲಿಗೆ ಎಳೆದಿದ್ದು. ಕೊನೆಗೆ ಗುಜರಾತ್‌ ಸರ್ಕಾರ ಕ್ರಮ ಕೈಗೊಂಡು ಈ ಕುರಿತಾಗಿ ತನಿಖೆಯನ್ನೂ ಆರಂಭಿಸಿತ್ತು.

click me!