
ಹೂವಿನಹಡಗಲಿ (ಏ.2) : ಸದಾಶಿವ ಆಯೋಗದ ವರದಿ ಜಾರಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಳ ಮೀಸಲಾತಿ ಕುರಿತು ಕೇಂದ್ರಕ್ಕೆ ಶಿಫಾರಸು ನಿರ್ಧಾರ ಖಂಡಿಸಿ ತಾಲೂಕಿನ ವಿವಿಧ ತಾಂಡಾಗಳಲ್ಲಿ ಚುನಾವಣೆ ಬಹಿಷ್ಕಾರದ ಬ್ಯಾನರ್ ಹಾಕುತ್ತಿದ್ದರೆ, ಕೆಲವು ತಾಂಡಾದಲ್ಲಿ ರಾಜಕಾರಣಿಗಳಿಗೆ ಪ್ರವೇಶ ನೀಡಿ ಪ್ರಚಾರಕ್ಕೆ ಅವಕಾಶ ನೀಡಲಾಗುತ್ತಿದೆ.
ತಾಲೂಕಿನ ಕೆಲವು ತಾಂಡಾದಲ್ಲಿ ವಿಧಾನಸಭಾ ಚುನಾವಣೆ ಬಹಿಷ್ಕಾರದ ಬ್ಯಾನರ್, ಇನ್ನು ಕೆಲವಡೆಗಳಲ್ಲಿ ರಾಜಕೀಯ ನಾಯಕರಿಗೆ ಅದ್ಧೂರಿ ಸ್ವಾಗತ ನೀಡಿ ಸಭೆಯಲ್ಲಿ ಭಾಗವಹಿಸುವ ಪ್ರಸಂಗಗಳು ನಡೆಯುತ್ತಿವೆ.
ಶಾಸಕ ಗೋಪಾಲಕೃಷ್ಣ ರಾಜೀನಾಮೆ ನೋವು ತಂದಿದೆ: ಸಚಿವ ಶ್ರೀರಾಮುಲು
ಒಳ ಮೀಸಲಾತಿ ಜಾರಿಯಿಂದ ಬಂಜಾರ ಸಮಾಜಕ್ಕೆ ಅನ್ಯಾಯವಾಗಿದ್ದು, ಈ ಕುರಿತು ಸಮಾಜದ ಶಾಸಕರು ಹೋರಾಟ ಮಾಡಿಲ್ಲ. ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವ ಒಳ ಮೀಸಲಾತಿ ಹಿಂಪಡೆಯಬೇಕೆಂದು ಸರ್ಕಾರಕ್ಕೆ ಆಗ್ರಹಿಸಿ ಪಕ್ಷಭೇದ ಮರೆತು ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ. ತಾಲೂಕಿನ 32 ತಾಂಡಾಗಳಲ್ಲಿನ ನಾಯಕ್, ಕಾರಭಾರಿ, ಡಾವ್, ಊರಿನ ಗುರು ಹಿರಿಯರು ಮತ್ತು ಯುವಕರು ಸೇರಿದಂತೆ ಎಲ್ಲರ ಅನುಮತಿಯಿಂದ ಬ್ಯಾನರ್ ಅಳವಡಿಸಿದ್ದೇವೆ ಎಂದು ಸಮಾಜದ ಮುಖಂಡರು ಹೇಳುತ್ತಾರೆ.
ಯಾವುದೇ ಪಕ್ಷದ ರಾಜಕೀಯ ಮುಖಂಡರು ಊರಿನಲ್ಲಿ ಪ್ರವೇಶ ಮಾಡಬಾರದು. ಮಾಡಿದರೆ ಬಂಜಾರ ಸಮಾಜದ ಪರವಾಗಿ ಕ್ರಮವನ್ನು ಕೈಗೊಳ್ಳುತ್ತೇವೆ. ಈಗಾಗಲೇ ತುಂಬಿನಕೆರೆ ದೊಡ್ಡ ತಾಂಡಾ, ಬಾನ್ಯಾನ ತಾಂಡಾದಲ್ಲಿ ಈ ಕುರಿತು ಬ್ಯಾನರ್ಗಳನ್ನು ಹಾಕಿದ್ದಾರೆ.
ಬಂಜಾರ ಸಮಾಜಕ್ಕೆ ಸಿಗಬೇಕಿದ್ದ ನ್ಯಾಯಸಮ್ಮತ ಮೀಸಲಾತಿಯನ್ನು ಕಿತ್ತುಕೊಂಡ ರಾಜಕಾರಣಿಗಳಿಗೆ ಈ ಬಾರಿ ತಕ್ಕ ಪಾಠ ಕಲಿಸುತ್ತೇವೆ. ಎಲ್ಲ ತಾಂಡಾದಲ್ಲಿಯೂ ಬ್ಯಾನರ್ಗಳನ್ನು ಹಾಕುವ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆಂದು ಬಂಜಾರ ಸಮಾಜದ ಮುಖಂಡರು ಹೇಳಿದ್ದಾರೆ.
ತಾಂಡಾಗಳಲ್ಲಿ ವಿಧಾನಸಭಾ ಚುನಾವಣೆ ಬಹಿಷ್ಕರಿಸುತ್ತೇವೆಂಬ ಹೇಳಿಕೆ ನೀಡಿರುವ ಬೆನ್ನಲ್ಲೇ ಇತ್ತ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಹಾಗೂ ಅವರ ಬೆಂಬಲಿಗರು ಲಿಂಗನಾಯಕನಹಳ್ಳಿ ತಾಂಡದಲ್ಲೇ ಸಭೆ ಮಾಡಿದ್ದಾರೆ.
Karnataka BJP: ವಾರದೊಳಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಅಂತಿಮ ಆಗುತ್ತೆ: ಕಟೀಲ್
ಈಗಾಗಲೇ ಎಲ್ಲ ತಾಂಡಾದಲ್ಲಿರುವ ಜನರಿಗೆ ಒಳ ಮೀಸಲಾತಿ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ವಿಧಾನಸಭಾ ಚುನಾವಣೆ ಬಹಿಷ್ಕಾರ ಕುರಿತು ಹಂತ ಹಂತವಾಗಿ ಎಲ್ಲ ಕಡೆಗೂ ಬ್ಯಾನರ್ ಹಾಕುತ್ತೇವೆ. ಕೆಲವು ತಾಂಡಾದಲ್ಲಿ ರಾಜಕೀಯ ನಾಯಕರು ಪ್ರವೇಶ ಮಾಡಿ ಸಭೆ ಮಾಡಿರಬಹುದು. ಆಯಾ ತಾಂಡದಲ್ಲಿರುವ ಜನರ ಮನ ಪರಿವರ್ತನೆ ಮಾಡುತ್ತೇವೆ. ನಮ್ಮ ಸಮಾಜದ ಪರವಾಗಿ ನಿಂತು ಹೋರಾಟ ಮಾಡದವರಿಗೆ ತಕ್ಕ ಪಾಠ ಕಲಿಸುತ್ತೇವೆ. ಜತೆಗೆ ಅವರನ್ನು ಶಾಶ್ವತವಾಗಿ ಮನೆಗೆ ಕಳುಹಿಸುವ ಕೆಲಸ ಮಾಡುತ್ತೇವೆ.
ಶ್ರೀಧರ್ ನಾಯ್ಕ, ಅಧ್ಯಕ್ಷರು ಬಂಜಾರ ತಾಲೂಕು ಘಟಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.