ಸಿಂದಗಿ ಉಪಚುನಾವಣೆಯಲ್ಲಿ‌ ಸ್ಪರ್ಧೆ ಬಗ್ಗೆ ಸ್ಪಷ್ಟನೆ ಕೊಟ್ಟ ಸವದಿ

By Suvarna NewsFirst Published Feb 20, 2021, 3:09 PM IST
Highlights

ಲಿಂಗಾಯತ ಸಮುದಾಯದ ಭದ್ರಕೋಟೆ ಆಗಿರುವ ಸಿಂದಗಿ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೆಸರು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ವತಃ ಸವದಿ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

ಬೆಳಗಾವಿ, (ಫೆ.20): ಜೆಡಿಎಸ್‌ನ ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾಗಿರುವ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಶೀಘ್ರದಲ್ಲೇ ಚುನಾವಣೆ ದಿನಾಂಕ ಪ್ರಕಟಿಸುವ ಸಾಧ್ಯತೆಗಳಿವೆ.

ಈ ಹಿನ್ನೆಲೆಯಲ್ಲಿ ಮತ್ತೊಂದೆಡೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಹುಡುಕಾಟ ಶುರುಮಾಡಿವೆ. ಅದರಲ್ಲೂ ಸಿಂದಗಿ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೆಸರು ಕೇಳಿ ಬಂದಿದೆ.

ವಿಧಾನಪರಿಷತ್ ಸದಸ್ಯರಾಗಿ ಉಪಮುಖ್ಯಮಂತ್ರಿಯಾಗಿರುವ ಸವದಿ ಅವರು, ವಿಧಾನಸಭಾ ಶಾಸಕರಾಗಬೇಕೆಂಬ ಆಸೆ ಇರುವುದರಿಂದ ಸಿಮದಗಿ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಇದಕ್ಕೆ ಸ್ವತಃ ಸವದಿ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

ಸಿಂದಗಿ ಉಪ ಚುನಾವಣಾ ಅಖಾಡಕ್ಕೆ ಲಕ್ಷ್ಮಣ ಸವದಿ ಎಂಟ್ರಿ..?

ಗೊಂದಲಗಳಿಗೆ ಸವದಿ ತೆರೆ
ಸಿಂದಗಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಗಾಳಿ ಸುದ್ದಿಗಳಿಗೆ ಸ್ವತಃ ಲಕ್ಷ್ಮಣ ಸವದಿ ಅವರೇ ಸ್ಪಷ್ಟನೆ ಕೊಟ್ಟಿದ್ದು, ನಾನು ಸಿಂದಗಿಯಲ್ಲಿ ಸ್ಪರ್ಧಿಸಬೇಕೆಂಬ ಆಲೋಚನೆ ಇಲ್ಲ, ಅವಶ್ಯಕತೆಯೂ ಇಲ್ಲ. ಈಗಾಗಲೇ ನಾನು ಎಂಎಲ್‌ಸಿ ಇದೀನಿ, 2022ರ ಏಪ್ರಿಲ್‌ವರೆಗೂ ಅವದಿ ಇದೆ.  ಇದಾದ ಬಳಿಕ ಪಕ್ಷ ಏನೂ ಬಯಸುತ್ತೋ ಆ ಸಂದರ್ಭದಲ್ಲಿ ನೋಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇನ್ನು ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನವುದುಕ್ಕೆ ಪ್ರತಿಕ್ರಿಯಿಸಿದ ಸವದಿ, ಎಲ್ಲಾ ಊಹಾಪೋಹ. ಬೆಳಗಾವಿಯಲ್ಲಿ ಅಭ್ಯರ್ಥಿ ಯಾರು ಎಂಬುದು ಚರ್ಚೆಯೇ ಆಗಿಲ್ಲ. ನಾನು ಕೇಂದ್ರಕ್ಕೆ ಹೋಗಬೇಕೆಂಬ ಭ್ರಮೆಯಲ್ಲಿಲ್ಲ, ರಾಜ್ಯ ರಾಜಕಾರಣದಲ್ಲಿ ಇರುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷ ನೀಡಿದ ಜವಾಬ್ದಾರಿ ನಿಭಾಯಿಸುವೆ ಎಂದು ಹೇಳಿದರು.

click me!