ಆಡಿಯೋ ಕೇಳಿದರೆ ಮುನಿರತ್ನ ತಪ್ಪು ಗೊತ್ತಾಗುತ್ತೆ: ಸಚಿವ ಶಿವರಾಜ ತಂಗಡಗಿ

By Kannadaprabha NewsFirst Published Sep 16, 2024, 7:16 PM IST
Highlights

ಮುನಿರತ್ನ ಎಂಥ ತಪ್ಪು ಮಾಡಿದ್ದಾರೆ ಎನ್ನುವುದು ಅವರ ಆಡಿಯೋ ಕೇಳಿದರೆ ಗೊತ್ತಾಗುತ್ತದೆ. ಆದ್ದರಿಂದಲೇ ಅವರನ್ನು ಅರೆಸ್ಟ್ ಮಾಡಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. 

ಕೊಪ್ಪಳ (ಸೆ.16): ಮುನಿರತ್ನ ಎಂಥ ತಪ್ಪು ಮಾಡಿದ್ದಾರೆ ಎನ್ನುವುದು ಅವರ ಆಡಿಯೋ ಕೇಳಿದರೆ ಗೊತ್ತಾಗುತ್ತದೆ. ಆದ್ದರಿಂದಲೇ ಅವರನ್ನು ಅರೆಸ್ಟ್ ಮಾಡಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ವಿರುದ್ಧ ಈಗ ಸರ್ಕಾರ ಕ್ರಮಕೈಗೊಂಡಿದೆ. ಅವರ ಪಕ್ಷದವರು ಏನು ಕ್ರಮಕೈಗೊಳ್ಳುತ್ತಾರೆ ಎಂದು ಅವರನ್ನೇ ಕೇಳಿ. ಯಾವ ರೀತಿ ಮಾತನಾಡಿದ್ದಾರೆ ಎಂದು ಆಡಿಯೋವನ್ನು ಕೇಳುವುದಕ್ಕೂ ಆಗುವುದಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಈ ರೀತಿ ಹೇಳುವುದು ಸರಿಯಲ್ಲ, ಪ್ರಧಾನಿ ಹುದ್ದೆಗೆ ಶೋಭೆ ತರುವುದಿಲ್ಲ. ಗಣೇಶನನ್ನು ಬಂಧಿಸಿಲ್ಲ, ಗಲಾಟೆಯಾಗಿದ್ದರಿಂದ ಪೊಲೀಸರು ವಾಹನದಲ್ಲಿ ಗಣೇಶನನ್ನು ತೆಗೆದುಕೊಂಡು ಹೋಗಿದ್ದು ತಪ್ಪೇ? ಅದನ್ನೇ ಈ ರೀತಿ ಹೇಳಿದರೆ ಏನರ್ಥ ಎಂದು ಪ್ರಶ್ನೆ ಮಾಡಿದರು. ರಾಹುಲ್ ಗಾಂಧಿ ಅವರು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ, ಇದನ್ನು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಾನು ಹೇಳುತ್ತೇನೆ, ಸಮಾನ ವ್ಯವಸ್ಥೆ ಬಂದ ಮೇಲೆ ಮೀಸಲಾತಿ ತೆಗೆಯಲಾಗುತ್ತದೆ ಎಂದರೆ ಏನು ತಪ್ಪು? ಸಮಾನ ವ್ಯವಸ್ಥೆ ಈಗ ಇಲ್ಲ ಎಂದಿದ್ದಾರೆ. ಅದನ್ನು ತಪ್ಪಾಗಿ ಅರ್ಥೈಸುವುದು ಸರಿಯಲ್ಲ. 

Latest Videos

ಶಾಸಕ ಮುನಿರತ್ನ ಮಾತನಾಡಿರುವ ಆಡಿಯೋ ಫೇಕ್ ಬಗ್ಗೆ ಚರ್ಚೆ: ಸಂಸದ ರಾಘವೇಂದ್ರ

ಬಿಜೆಪಿಯವರಿಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಮೀಸಲಾತಿ ಪ್ರಮಾಣವನ್ನು ಶೇ. 50ರಿಂದ ಶೇ. 75ರಷ್ಟು ಹೆಚ್ಚಳ ಮಾಡಲಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು. ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ ಅವರು ಸಿಎಂ ಆಗಿರುವುದನ್ನು ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಹೀಗಾಗಿ, ಅವರ ಮೇಲೆ ಸುಳ್ಳು ಆರೋಪ ಮಾಡುತ್ತಲೇ ಇದ್ದಾರೆ ಎಂದರು. ಸಿಎಂ ಹುದ್ದೆ ಖಾಲಿ ಇಲ್ಲದಿರುವುದರಿಂದ ಆ ಕುರಿತು ನಾನು ಮಾತನಾಡುವುದಿಲ್ಲ ಎಂದರು. ಕೊಪ್ಪಳ ಜಿಲ್ಲೆಯಲ್ಲಿ ಪದೇ ಪದೇ ದಲಿತರ ಮೇಲೆ ಹಲ್ಲೆಯಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ಸಂಘಟನೆಗಳೊಂದಿಗೆ ಶೀಘ್ರದಲ್ಲಿಯೇ ಸಭೆ ನಡೆಸಲಾಗುವುದು ಎಂದರು.

ಕ್ಷೇತ್ರದ ಹಳ್ಳಿಗಳ ಅಭಿವೃದ್ಧಿಗೆ ಬದ್ಧ: ಕನಕಗಿರಿ ಕ್ಷೇತ್ರದ ಪ್ರತಿಯೊಂದು ಹಳ್ಳಿಯ ಅಭಿವೃದ್ಧಿಗೆ ಬದ್ಧನಾಗಿದ್ದು, ರಾಜ್ಯ ಸರ್ಕಾರ ಅಗತ್ಯ ಅನುದಾನ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು. ತಾಲೂಕಿನ ಸೋಮನಾಳ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ₹೩೦ ಲಕ್ಷ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಶಾಸಕ ಮುನಿರತ್ನ ದಲಿತರ ಬಗ್ಗೆ ಮಾತಾಡಿರುವುದು ಅಕ್ಷಮ್ಯ: ಸಚಿವ ಡಾ.ಎಂ.ಸಿ.ಸುಧಾಕರ್

ರಾಜ್ಯದ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಗ್ರಾಮದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಸುಸಜ್ಜಿತ ಸಮುದಾಯ ಭವನಗಳ ನಿರ್ಮಾಣದಿಂದ ಗ್ರಾಮದಲ್ಲಿನ ಸರ್ವ ಸಮುದಾಯಗಳಿಂದ ನಡೆಯುವ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತದೆ. ಸರ್ವ ಸಮಾಜ ಸೌಹಾರ್ದತೆಯಿಂದ ಜೀವನ ನಡೆಸಬೇಕು. ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ರಾಜಕಾರಣ ಮಾಡದೇ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು. ಗ್ರಾಪಂ ಅಧ್ಯಕ್ಷ ವೀರೇಶಪ್ಪ, ಚಂದ್ರಯ್ಯಸ್ವಾಮಿ, ಶಿವರೆಡ್ಡಿ ನಾಯಕ, ಕೆ. ಸಿದ್ದನಗೌಡ, ಟಿಪಿಎಂಸಿ ನಿರ್ದೇಶಕ ದುರಗೇಶ ಪ್ಯಾಟಿಹಾಳ್, ಶರಣಪ್ಪ, ಬಸವರಾಜ, ಜಗದೀಶಪ್ಪ, ಶರಣಪ್ಪ ಸಾಹುಕಾರ, ಸಣ್ಣೆಪ್ಪ ಸೋಮನಾಳ ಇದ್ದರು.

click me!