ಸಂವಿಧಾನದ ಪ್ರಕಾರ ಕೆಲಸ ಮಾಡದಿದ್ದರೆ ಬಾರುಕೋಲಿನಿಂದ ಬಾರಿಸುತ್ತೇನೆ: ಸಚಿವ ಮಹದೇವಪ್ಪ

By Kannadaprabha NewsFirst Published Jun 5, 2023, 11:02 PM IST
Highlights

ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿರೋದು ಹಾಸ್ಟೆಲ್‌ಗಳಲ್ಲಿ ಊಟ ಹಾಕೋದು, ವಾರ್ಡನ್‌ಗಳನ್ನ ವ್ಯವಸ್ಥೆ ಮಾಡುವುದಕ್ಕಲ್ಲ. ಯಾರು ಯಾರು ಸಂವಿಧಾನದ ಪ್ರಕಾರ ಕೆಲಸ ಮಾಡೋದಿಲ್ಲವೋ ಅಂತಹವರಿಗೆ ಬಾರುಕೋಲು ತಗೊಂಡು ಬಾರಿಸೋದೆ ಎಂದು ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು. 

ಟಿ.ನರಸೀಪುರ (ಜೂ.05): ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿರೋದು ಹಾಸ್ಟೆಲ್‌ಗಳಲ್ಲಿ ಊಟ ಹಾಕೋದು, ವಾರ್ಡನ್‌ಗಳನ್ನ ವ್ಯವಸ್ಥೆ ಮಾಡುವುದಕ್ಕಲ್ಲ. ಯಾರು ಯಾರು ಸಂವಿಧಾನದ ಪ್ರಕಾರ ಕೆಲಸ ಮಾಡೋದಿಲ್ಲವೋ ಅಂತಹವರಿಗೆ ಬಾರುಕೋಲು ತಗೊಂಡು ಬಾರಿಸೋದೆ ಎಂದು ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು. ಪಟ್ಟಣದ ಹೊರ ವಲಯ ಹೇಳವರಹುಂಡಿ ಬಳಿ  ಹಮ್ಮಿಕೊಂಡಿದ್ದ ಮತದಾರರಿಗೆ ಕೃತಜ್ಞತಾ ಸಮಾರಂಭ ಉದ್ಘಾಟಿಸಿ, ಸಂವಿಧಾನ ಪೀಠಿಕೆಯನ್ನು ಬೋಧಿಸಿ ಮಾತನಾಡಿದ ಅವರು, ಆಡಳಿತದಲ್ಲಿ ಸಂವಿಧಾನ ಗೊತ್ತಿಲ್ಲದವರಿಗೆ, ಗೊತ್ತಿದ್ದರೂ ಗೊತ್ತಿಲ್ಲದವರಂತೆ ಕಳ್ಳಾಟ ಅಡೋರಿಗೆ ಇನ್ಮುಂದೆ ಸಮಾಜ ಕಲ್ಯಾಣ ಇಲಾಖೆಯ ಬಾರುಕೋಲು ಏಟು ತಪ್ಪಿದ್ದಲ್ಲ ಎಂಬ ಎಚ್ಚರಿಕೆ ನೀಡಿದರು.

ದೇಶದ ಇತಿಹಾಸದಲ್ಲಿ ಯಾವ ಪಕ್ಷ, ಮತ್ಯಾವ ಸರ್ಕಾರವೂ ಮಾಡದಿರುವುದನ್ನು ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಐದು ವರ್ಷಗಳ ಕಾಲ ಆಡಳಿತ ನಡೆಸಲು ಅಧಿಕಾರ ನೀಡಿದ ಜನತೆಗೆ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸಗಳನ್ನು ಜಾತಿ, ಧರ್ಮವನ್ನು ಮೀರಿ ಜಗತ್ತೇ ನೋಡುವಂತೆ ಈಡೇರಿಸಿದ್ದಾರೆ. ಭರವಸೆಗಳ ಈಡೇರಿಕೆ ಪಕ್ಷದ ಸಂಘಟನೆಗೆ ದುಡಿಯುವ ಕಾರ್ಯಕರ್ತರಿಗೆ ಮುಂದಿನ ಚುನಾವಣೆಯಲ್ಲಿ ಗೆಲುವಿಗೆ ದುಡಿಯಲು ಚಿನ್ನದಂತಹ ಅವಕಾಶ ಕಲ್ಪಿಸಿಕೊಟ್ಟಿದೆ. ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಆಡಳಿತವನ್ನು ನೋಡಿದ ರಾಜ್ಯದ ಜನರು 2018ರಲ್ಲಿ ಅಭಿವೃದ್ಧಿ ಪರವಿದ್ದ ಸಿದ್ದರಾಮಯ್ಯ ಸರ್ಕಾರವನ್ನು ಸೋಲಿಸಿ ಬಿಟ್ಟೇವೆಲ್ಲ ಎಂಬ ಅರಿವಾಗಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಆಡಳಿತಕ್ಕೆ ಬೇಸತ್ತು ಮತ್ತೆ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ ಎಂದರು.

ಇಂದಿನಿಂದಲೇ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದ್ದೇವೆ: ಮಾಜಿ ಸಿಎಂ ಬೊಮ್ಮಾಯಿ

ಚುನಾವಣೆಯಲ್ಲಿ ಪ್ರತಿ ಸ್ಪರ್ಧಿಗಳಾಗಿದ್ದವರೂ ಪರಾಭವದ ಬಳಿಕ ನನಗೆ ಶುಭ ಕೋರಿ, ಅಭಿವೃದ್ಧಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅದರಲ್ಲೋಬ್ಬರು ಅವರ ಅಭಿವೃದ್ಧಿಯನ್ನು ಮೊಟಕುಗೊಳಿಸಿದರೆ ಪ್ರತಿಭಟನೆ ಮಾಡುತ್ತೇನೆ ಎಂಬ ಎಚ್ಚರಿಕೆ ನೀಡಿದ್ದಾರೆ. ಬಿಟ್ಟೋದ ಕಾಲೇಜನ್ನು ಅವರಿಗೆ ವಾಪಸ್ಸು ತಂದು ಕೊಡೋಕೆ ಆಗುತ್ತಾ. ನರಸೀಪುರದಿಂದ ಕಿತ್ಕೊಂಡ್‌ ಹೊಗಿರೋ ಡಿಪ್ಲೋಮಾ ಕಾಲೇಜನ್ನು ಮತ್ತೆ ನೀಡುವಂತೆ ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿಗೆ ನಾನೇ ಖಡಕ್‌ ಆಗಿ ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು. ಕಾರ್ಯಕರ್ತರು ಹಾಗೂ ಮುಖಂಡರು ಹಗಲಿರುಳು ಹೋರಾಟ ಮಾಡಿದ್ದಕ್ಕೆ ಜನರು ಬೆಂಬಲ ನೀಡಿದ್ದರಿಂದ ಗೆದ್ದಿದ್ದೇವೆ. 

ವೋಟ್‌ ಕೊಟ್ಟವರು ಮೊದಲು ನಮ್ಮ ಬಳಿಗೆ ಬರಬೇಕು. ವಾರದಲ್ಲಿ 5 ದಿನ ಸಚಿವಾಲಯದ ಕೆಲಸವಾದರೆ ಎರಡು ದಿನ ಕ್ಷೇತ್ರದ ಕೆಲಸವನ್ನು ಮಾಡುತ್ತೇನೆ. ವಾರದ ಒಂದು ದಿನ ಕ್ಷೇತ್ರದ ಭೇಟಿ ಇರುತ್ತದೆ. ಮೂರು ತಿಂಗಳಿಗೊಮ್ಮೆ ಕಾರ್ಯಕರ್ತರ ಜೊತೆಯಾಗುವೆ. ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳು ಇಲ್ಲದೆ ಸಾಮಾನ್ಯ ಜನರ ಕೆಲಸವನ್ನು ಅಧಿಕಾರಿಗಳು ಮಾಡಿಕೊಡಬೇಕು. ನಮ್ಮ ಕಾರ್ಯಕರ್ತರನ್ನು ಗೌರವದಿಂದಲೇ ನೋಡಬೇಕು. ಇಲ್ಲದಿದ್ದಲ್ಲಿ ಜಿಲ್ಲೆಯಿಂದಲೇ ಅವರನ್ನು ಗಡಿಪಾರು ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕಳೆದ ಚುನಾವಣೆ ಕಾಂಗ್ರೆಸ್‌ನ ಧರ್ಮ ಹಾಗೂ ಆಡಳಿತರೂಢ ಬಿಜೆಪಿ ಅಧರ್ಮ ವಿರುದ್ಧ ನಡೆಯಿತು. ಬಿಜೆಪಿಯ ಕೋಮುವಾದ, ಬೆಲೆ ಏರಿಕೆ, ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯತೆ ತಿರಸ್ಕರಿಸಿ ಜನಪರವಿದ್ದ ಕಾಂಗ್ರೆಸ್‌ಗೆ ಅಧಿಕಾರ ನೀಡಿದರು ಎಂದರು.

ಕಾಂಗ್ರೆಸ್‌ ಮುಖಂಡ ಸುನಿಲ್‌ ಬೋಸ್‌ ಮಾತನಾಡಿ, ಸಚಿವರ ಜೊತೆಗಿರುವ ಸಿಬ್ಬಂದಿ ಮಹದೇವಪ್ಪ ಅವರನ್ನು ಭೇಟಿಮಾಡಲು ಬರುವ ಕ್ಷೇತ್ರದ ಜನರಿಗೆ ಮೊದಲ ಆದ್ಯತೆ ನೀಡಬೇಕು. ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವಿಗೆ ಹಗಲಿರುಳು ದುಡಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಇದೇ ಉತ್ಸಾಹ ಮುಂದಿನ ಜಿಪಂ, ತಾಪಂ ಹಾಗೂ ಲೋಕಸಭಾ ಚುನಾವಣೆಯವರೆಗೂ ಇರಲಿ. ನಾನೂ ಕೂಡ ನಿಮ್ಮೊಡನೆ ಸಹೋದರ, ಹಿರಿಯರಿಗೆ ಮಗನಂತೆ ಇರುತ್ತೇನೆ. ಪಕ್ಷದ ಗೆಲುವು ಹಾಗೂ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ದುಡಿಯೋಣ ಎಂದು ಕರೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ನಿಷ್ಠಾವಂತರಾದ ಡಾ.ಎಚ್‌.ಸಿ. ಮಹದೇವಪ್ಪ ಅವರು ಈ ಹಿಂದೆ ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಲೋಕೋಪಯೋಗಿ ಇಲಾಖೆಗಳನ್ನು ಸಮರ್ಥವಾಗಿ ಬದ್ಧತೆಯಿಂದ ನಿರ್ವಹಿಸುವುದರಿಂದ ಸೇವಾ ವಲಯವೇ ಆಗಿರುವ ಸಮಾಜ ಕಲ್ಯಾಣ ಇಲಾಖೆಯನ್ನೂ ಜನರ ಬಳಿಗೆ ಕೊಂಡೊಯ್ದು ಉತ್ತಮ ಕೆಲಸ ಮಾಡಲಿದ್ದಾರೆ ಎಂದರು. ಹೊಸ ತಿರುಮಕೂಡಲು ವೃತ್ತದಿಂದ ಡಾ.ಎಚ್‌.ಸಿ. ಮಹದೇವಪ್ಪ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವೇದಿಕೆ ಬಳಿಗೆ ಕರೆ ತರಲಾಯಿತು. ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಸೇರಿದಂತೆ ಮಾಜಿ ಶಾಸಕರಾದ ಎಸ್‌. ಕೃಷ್ಣಪ್ಪ, ಜೆ. ಸುನೀತಾ ವೀರಪ್ಪಗೌಡ, ಯಾಚೇನಹಳ್ಳಿ ಪಿಎಸಿಸಿಎಸ್‌ ಅಧ್ಯಕ್ಷ ವೈ.ಎನ್‌. ಶಂಕರೇಗೌಡ, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಾ.ಕೆ. ಮಹದೇವ್‌ ಮೊದಲಾದವರು ಮಾತನಾಡಿದರು.

ಪಂಚಾಯಿತಿ ಕೆಲಸಗಳು ವಿಳಂಬವಾಗದಿರಲಿ: ಶಾಸಕ ಶರತ್‌ ಬಚ್ಚೇಗೌಡ

ಸಚಿವರ ಪುತ್ರ ಅನಿಲ್‌ ಬೋಸ್‌, ಜಿಪಂ ಮಾಜಿ ಸದಸ್ಯೆ ಎಂ. ಸುಧಾ ಮಹದೇವಯ್ಯ, ಗ್ರಾಪಂ ಸದಸ್ಯರ ಒಕ್ಕೂಟದ ಉಪಾಧ್ಯಕ್ಷೆ ಬೃಂದಾ ಕೃಷ್ಣೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಡಿ. ಪದ್ಮನಾಭ, ಮುನಾವರ್‌ ಪಾಷ, ಪಿಎಸಿಸಿಎಸ್‌ ಅಧ್ಯಕ್ಷ ಎಂ. ಪರಶಿವಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಎಚ್‌.ಎನ್‌. ಉಮೇಶ್‌, ಎಂ. ಮಲ್ಲಿಕಾರ್ಜುನಸ್ವಾಮಿ, ನಂಜುಂಡಸ್ವಾಮಿ, ಎಪಿಎಂಸಿ ಮಾಜಿ ನಿರ್ದೇಶಕ ಉಕ್ಕಲಗೆರೆ ಬಸವಣ್ಣ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಡಿ. ಬಸವರಾಜು, ಚನ್ನಕೇಶವ, ಮಹಿಳಾ ಅಧ್ಯಕ್ಷೆ ವೀಣಾ ಶಿವಕುಮಾರ್‌, ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಎಂ.ಜೆ. ಶಿವಸ್ವಾಮಿ, ತಾಪಂ ಮಾಜಿ ಸದಸ್ಯರಾದ ಕುಕ್ಕೂರು ಗಣೇಶ್‌, ರಾಮಲಿಂಗಯ್ಯ, ಎಂ. ರಮೇಶ್‌, ಕೆಬ್ಬೆ ಶಿವಸ್ವಾಮಿ, ರಂಗಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಂ. ನಂಜುಂಡಸ್ವಾಮಿ, ಪಪಂ ಮಾಜಿ ಅಧ್ಯಕ್ಷ ಬಸವಣ್ಣ, ಸಹಾಯಕ ಪ್ರಾಧ್ಯಾಪಕ ಡಾ.ಬಿ.ಕೆ. ಜ್ಞಾನಪ್ರಕಾಶ್‌, ಡಿಸಿಸಿ ವಕ್ತಾರ ಹುಣಸೂರು ಬಸವಣ್ಣ, ಹಿಂದುಳಿದ ವರ್ಗಗಳ ಅಧ್ಯಕ್ಷ ಎ.ಎನ್‌. ಸ್ವಾಮಿ, ಕಾರ್ಗಳ್ಳಿ ಶಿವಸ್ವಾಮಿ, ಗ್ರಾಪಂ ಅಧ್ಯಕ್ಷ ಕೆ.ಎಂ. ರಮೇಶ್‌, ಮಾಜಿ ಅಧ್ಯಕ್ಷರಾದ ಚಂದ್ರಶೇಖರ್‌, ನಾಗೇಶ್‌, ಮುಖಂಡರಾದ ಪಿ. ಸ್ವಾಮಿನಾಥಗೌಡ, ಲಕ್ಷ್ಮೀನಾರಾಯಣ ಇದ್ದರು.

click me!