
ಬೆಳಗಾವಿ/ಹುಮನಾಬಾದ್ (ಏ.30): ಈ ಹಿಂದಿನ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕರ್ನಾಟಕಕ್ಕೆ 30 ಸಾವಿರ ಕೋಟಿ ರು. ವಿದೇಶಿ ಹೂಡಿಕೆ ಬರುತ್ತಿತ್ತು. ಇದೀಗ ಬಿಜೆಪಿಯ ಅವಧಿಯಲ್ಲಿ 90 ಸಾವಿರ ಕೋಟಿ ರು. ವಿದೇಶಿ ಹೂಡಿಕೆ ಬರುತ್ತಿದೆ. ಈ ಬಾರಿ ಬಿಜೆಪಿಗೆ ಮತ್ತೊಮ್ಮೆ ಬಹುಮತ ಕೊಡಿ. ಕರ್ನಾಟಕವನ್ನು ದೇಶದಲ್ಲಿಯೇ ನಂಬರ್ ಒನ್ ರಾಜ್ಯ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ಕೈಗೊಂಡಿರುವ ಮೋದಿ, ಬೀದರ್ ಜಿಲ್ಲೆ ಹುಮ್ನಾಬಾದ್ ಹಾಗೂ ಬೆಳಗಾವಿಯ ಕೋಳಿಗುಡ್ಡದಲ್ಲಿ ಶನಿವಾರ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಕರ್ನಾಟಕದ ಈ ಚುನಾವಣೆ ಕೇವಲ 5 ವರ್ಷದ ಸರ್ಕಾರ ರಚಿಸಲು ಅಲ್ಲ. ಇದು ಕರ್ನಾಟಕವನ್ನು ದೇಶದ ನಂ.1 ರಾಜ್ಯವನ್ನಾಗಿಸುವ ಚುನಾವಣೆಯಾಗಿದೆ. ಭಾರತದ ಅಭಿವೃದ್ಧಿಯಲ್ಲಿ ಕರ್ನಾಟಕದ ಬಹುದೊಡ್ಡ ಭೂಮಿಕೆಯನ್ನು ನಿರ್ಧರಿಸುವ ಚುನಾವಣೆಯಾಗಿದೆ ಎಂದರು. ರೈತರಿಗಾಗಿ ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಿಸಾನ್ ಸಮ್ಮಾನ್ ಯೋಜನೆಯಡಿ ಫಲಾನುಭವಿಗಳ ಪಟ್ಟಿಕಳಿಸದೆ ಈ ಹಿಂದಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ಮೋಸ ಮಾಡಲಾಗಿತ್ತು. ಆದರೆ, ಈಗ ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ರು. ಪರಿಹಾರವನ್ನು ಪ್ರತಿ ರೈತ ಕುಟುಂಬಕ್ಕೆ ನೀಡುತ್ತಿದ್ದರೆ, ರಾಜ್ಯ ಸರ್ಕಾರ ಅದಕ್ಕೆ 4 ಸಾವಿರ ರು. ಸೇರಿಸಿ ಒಟ್ಟು 10 ಸಾವಿರ ರು. ನೀಡುತ್ತಿದೆ.
ಮತದಾನದ ಜಾಗೃತಿಗಾಗಿ ನಗೆ ಹಬ್ಬ: ಮತದಾನದ ಮಹತ್ವ ತಿಳಿಸಿದ ಹಾಸ್ಯ ಕಲಾವಿದೆ ಇಂದುಮತಿ
ಈ ಯೋಜನೆಯಡಿ ರಾಜ್ಯಕ್ಕೆ 18 ಸಾವಿರ ಕೋಟಿ ರು.ಬಿಡುಗಡೆಯಾಗಿದೆ. ಇದರಲ್ಲಿ 400ಕೋಟಿ ರು.ಬೀದರ್ ಜಿಲ್ಲೆಯ ರೈತರಿಗೆ ಸಿಕ್ಕಿದೆ ಎಂದರು. ನಾವು ಕಬ್ಬಿನಿಂದ ಸಕ್ಕರೆ ಮಾತ್ರ ಮಾಡಲಿಲ್ಲ. ಅದರಿಂದ ಎಥೆನಾಲ್ ಉತ್ಪಾದಿಸಿದೆವು. ಇದರಿಂದ ವಾಹನಗಳಿಗೂ ಬಳಕೆಯಾಯಿತು. ಜತೆಗೆ ಕಬ್ಬು ಬೆಳೆಗಾರರಿಗೂ ಲಾಭವಾಯಿತು. ಈಗ ಪೆಟ್ರೋಲ್ನಲ್ಲಿ ಶೇ. 20 ರಷ್ಟುಎಥೆನಾಲ್ ಬಳಸಲಾಗುತ್ತಿದೆ. ವಿದೇಶಕ್ಕೆ ಹೋಗುತ್ತಿದ್ದ ಹಣ ಉಳಿಯಿತು ಎಂದು ಕೇಂದ್ರದ ಸಾಧನೆ ಬಿಚ್ಚಿಟ್ಟರು.
ಕಾಂಗ್ರೆಸ್ ಬಡವರನ್ನು ಓಟ್ ಬ್ಯಾಂಕ್ ಆಗಿಸಿತ್ತು. ಬಿದ್ರಿ ಕರಕುಶಲಕರ್ಮಿ ಶಾಹ್ ರಶೀದ್ ಖಾದ್ರಿ ಅವರನ್ನು, ಅವರ ಕಲೆಯನ್ನು ಕಡೆಗಣಿಸಿತ್ತು. ನಮ್ಮ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದು ಸಮಾನತೆಯನ್ನು ಪ್ರತಿಪಾದಿಸುತ್ತದೆ ಎಂದು ಹೇಳಿದರು. ನಾವು ಮೂರು ಲಕ್ಷ ಮನೆ ಕಟ್ಟಿಕೊಟ್ಟಿದ್ದೇವೆ. ಅವರ ಮಾಲೀಕರು ಮಹಿಳೆಯರು. ಹೀಗಾಗಿ ಅವರು ಲಕ್ಷಾಧಿಪತಿಗಳಾಗಿರುವುದು ನಮಗೆ ಹೆಮ್ಮೆ ವಿಚಾರ. ಮನೆ, ಮನೆಗೂ ನೀರು, ಮನೆ, ಮನೆಗೂ ಟಾಯ್ಲೆಟ್ಗಳ ಮೂಲಕ ನಾವು ಮಹಿಳೆಯರ ಬದುಕನ್ನು ಹಸನುಗೊಳಿಸಿದ್ದೇವೆ.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 22,18,055 ಮತದಾರರು: ಡಿಸಿ ಯಶವಂತ ಗುರುಕರ್
ಹೀಗಾಗಿ ಹೆಣ್ಣು ಮಕ್ಕಳ ಆಶೀರ್ವಾದ ನಮಗೆ ಸಿಗಲಿದೆ. ಮೇ 10 ರಂದು ನೀವು ರಾಜ್ಯವನ್ನು ದೇಶದ ನಂಬರ್ ಒನ್ ರಾಜ್ಯವಾಗಿಸಲು ಮತ ಹಾಕುತ್ತಿದ್ದೀರಿ. ನಾನು ಕರ್ನಾಟಕದ ಒಬ್ಬ ಸೇವಕನ ರೂಪದಲ್ಲಿ ಸಹಾಯ ಮಾಡಲು ಬಯಸಿದ್ದೇನೆ. ನೀವು ನನಗೆ ಜತೆ ನೀಡುತ್ತೀರಲ್ಲಾ, ಆಶೀರ್ವಾದ ಮಾಡುತ್ತೀರಲ್ಲಾ? ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.