Lok Sabha Election 2024: ಬೆಂಗಳೂರಿನ ಮೊದಲ ಸಂಸದೆ ಆಗುವೆ: ಸೌಮ್ಯಾರೆಡ್ಡಿ ವಿಶ್ವಾಸ

By Kannadaprabha NewsFirst Published Apr 13, 2024, 10:56 AM IST
Highlights

ಸ್ವಾತಂತ್ರ್ಯ ಬಂದ ನಂತರದಿಂದ ನಡೆದ ಲೋಕಸಭಾ ಚುನಾವಣೆಗಳಲ್ಲಿ ಬೆಂಗಳೂರಿನಲ್ಲಿ ಮಹಿಳೆಯನ್ನು ಗೆಲ್ಲಿಸಿಲ್ಲ. ಈ ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಹಿಳಾ ಮತದಾರರು ಇತಿಹಾ ಸೃಷ್ಟಿಸಲಿದ್ದು, ಬೆಂಗಳೂರಿನ ಮಹಿಳಾ ಪ್ರತಿನಿಧಿಯಾಗಿ ನನ್ನನ್ನು ಲೋಕಸಭೆಗೆ ಆಯ್ಕೆ ಮಾಡುವ ವಿಶ್ವಾಸವಿದೆ: ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ 

ಬೆಂಗಳೂರು(ಏ.13):  ಸ್ವಾತಂತ್ರ್ಯ ಬಂದಾಗಿನಿಂದಲೂ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿ ಗೆಲುವು ಸಾಧಿಸಿಲ್ಲ. ಆದರೆ, ಈ ಬಾರಿ ಬೆಂಗಳೂರಿನ ಮಹಿಳಾ ಪ್ರತಿನಿಧಿಯಾಗಿ ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಶೋಕ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಸೌಮ್ಯಾ ರೆಡ್ಡಿ, ಮಹಿಳಾ ಸಂಘಟನೆ ಸದಸ್ಯರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ನಂತರದಿಂದ ನಡೆದ ಲೋಕಸಭಾ ಚುನಾವಣೆಗಳಲ್ಲಿ ಬೆಂಗಳೂರಿನಲ್ಲಿ ಮಹಿಳೆಯನ್ನು ಗೆಲ್ಲಿಸಿಲ್ಲ. ಈ ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಹಿಳಾ ಮತದಾರರು ಇತಿಹಾ ಸೃಷ್ಟಿಸಲಿದ್ದು, ಬೆಂಗಳೂರಿನ ಮಹಿಳಾ ಪ್ರತಿನಿಧಿಯಾಗಿ ನನ್ನನ್ನು ಲೋಕಸಭೆಗೆ ಆಯ್ಕೆ ಮಾಡುವ ವಿಶ್ವಾಸವಿದೆ. ಬೆಂಗಳೂರಿನ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದ್ದು, ಆ ಎಲ್ಲ ಮಹಿಳೆಯರ ಪರವಾಗಿ ಕೆಲಸ ಮಾಡಲು ಈ ಬಾರಿ ನನಗೆ ಅವಕಾಶ ಕಲ್ಪಿಸಲಿದ್ದಾರೆ ಎಂದರು.

ಮೋದಿ ಅಲೆ ಎಂಬುದೆಲ್ಲ ಸುಳ್ಳು, ಬಿಜೆಪಿ ಸೃಷ್ಟಿ: ಸೌಮ್ಯಾರೆಡ್ಡಿ

ಹಾಲಿ ಸಂಸದರು ಕೆಲಸ ಮಾಡದೇ ಬರೀ ಮಾತನಾಡುತ್ತಿರುವುದನ್ನು ಗಮನಿಸಿ, ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಪ್ರಚಾರಕ್ಕೆ ತೆರಳಿದಲ್ಲೆಲ್ಲ ಜನರು ಬದಲಾವಣೆ ಬಯಸಿದ್ದಾರೆ. ಅಲ್ಲದೆ, ನಾನು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದು, ಮಹಾನಗರದ ಕುರಿತಂತೆ ಎಲ್ಲ ಅಂಶಗಳೂ ತಿಳಿದಿದೆ. ಅದರ ಜತೆಗೆ ನನ್ನ ತಂದೆ ರಾಮಲಿಂಗಾರೆಡ್ಡಿ ಅವರು ಸಚಿವರಾಗಿ ಬೆಂಗಳೂರಿನ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದು, ಜನರ ಗಮನದಲ್ಲಿದೆ. ಈ ಎಲ್ಲ ಕಾರಣಗಳಿಂದಾಗಿ ಮೊದಲ ಬಾರಿಗೆ ಮಹಿಳೆಯನ್ನು ಸಂಸದೆಯನ್ನಾಗಿ ಆಯ್ಕೆ ಮಾಡಲು ಮತದಾರರು ತೀರ್ಮಾನಿಸಿದ್ದಾರೆ ಎಂದು ತಿಳಿಸಿದರು.

ನಗರದಲ್ಲಿ ಹೆಚ್ಚಿನ ಉದ್ಯಾನಗಳ ನಿರ್ಮಾಣ, ಮನೆ ಬಳಿಗೆ ತೆರಳಿ ತ್ಯಾಜ್ಯ ಸಂಗ್ರಹ, ಕಸ ವಿಂಗಡಣೆ ಸೇರಿದಂತೆ ಹಲವು ಯೋಜನೆಗಳು ರಾಮಲಿಂಗಾರೆಡ್ಡಿ ಅವರು ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದಾಗ ಪರಿಣಾಮಕಾರಿಯಾಗಿ ಜಾರಿಗೆ ತಂದರು. ಅದರಿಂದ ನಗರದ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆತಿದೆ. ಅಲ್ಲದೆ, ನಾನು ಜಯನಗರ ಕ್ಷೇತ್ರದ ಶಾಸಕಿಯಾಗಿದ್ದಾಗ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಲು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದೇನೆ. ಅದನ್ನೂ ದಕ್ಷಿಣ ಲೋಕಸಭಾ ಕ್ಷೇತ್ರದ ಜನರು ಗಮನಿಸಿದ್ದು, ಈ ಬಾರಿ ನನಗೆ ಮತಚಲಾಯಿಸುವ ವಿಶ್ವಾಸವಿದೆ ಎಂದರು.

ಮೋದಿ, ಅಮಿತ್ ಶಾ ಮಾತಿಗೆ ತಲೆ ಅಲ್ಲಾಡಿಸುವ ಸಂಸದರು ಬೇಡ; ಸೌಮ್ಯರೆಡ್ಡಿಗೆ ವೋಟ್ ಮಾಡಿ: ಸಿಎಂ ಮನವಿ

ಮಾಜಿ ಮೇಯರ್‌ಗಳಾದ ಮಂಜುನಾಥ ರೆಡ್ಡಿ, ಪದ್ಮಾವತಿ, ಮಾಜಿ ಉಪಮೇಯರ್‌ ಎಲ್‌. ಶ್ರೀನಿವಾಸ್‌ ಇದ್ದರು.

ಕ್ಷೇತ್ರದ ಮುಖಂಡರ ಭೇಟಿ

ಮನೆಮನೆ ಭೇಟಿ, ಮಹಿಳಾ ಸಂಘಟನೆಗಳ ಸದಸ್ಯರೊಂದಿಗೆ ಸಂವಾದದ ಜತೆಗೆ ಸೌಮ್ಯಾರೆಡ್ಡಿ ಅವರು ಬಸವನಗುಡಿ ಕ್ಷೇತ್ರ ವ್ಯಾಪ್ತಿಯಲ್ಲಿನ ಕಾಂಗ್ರೆಸ್‌ ಮುಖಂಡರ ಮನೆಗೆ ಭೇಟಿ ನೀಡಿ ಚರ್ಚಿಸಿದರು. ಮಾಜಿ ಶಾಸಕ ಬಿ.ಕೆ.ಚಂದ್ರಶೇಖರ್‌ ಸೇರಿದಂತೆ ಹಲವರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಜತೆಗೆ ಚುನಾವಣೆ ಕುರಿತಂತೆ ಚರ್ಚಿಸಿದರು.

click me!