'ಇಂಡಿಯಾ' ಒಕ್ಕೂಟದಿಂದ ಮೋದಿಗೆ ನಡುಕ: ಜಗದೀಶ್‌ ಶೆಟ್ಟರ್‌

By Kannadaprabha NewsFirst Published Jul 27, 2023, 5:24 AM IST
Highlights

ಕಾಂಗ್ರೆಸ್‌ ಸೇರಿದಂತೆ ಮಿತ್ರ ಪಕ್ಷಗಳೆಲ್ಲಾ ಸೇರಿಕೊಂಡು ‘ಇಂಡಿಯಾ’ ಒಕ್ಕೂಟವನ್ನು ರಚಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಮಿತ್ರ ಪಕ್ಷಗಳಿಗೆ ನಡುಕ ಉಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಟೀಕಿಸಿದರು.

ಸಿಂಧನೂರು (ಜು.27) :  ಕಾಂಗ್ರೆಸ್‌ ಸೇರಿದಂತೆ ಮಿತ್ರ ಪಕ್ಷಗಳೆಲ್ಲಾ ಸೇರಿಕೊಂಡು ‘ಇಂಡಿಯಾ’ ಒಕ್ಕೂಟವನ್ನು ರಚಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಮಿತ್ರ ಪಕ್ಷಗಳಿಗೆ ನಡುಕ ಉಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಟೀಕಿಸಿದರು.

ಸಿಂಧನೂರಿನ ಆದರ್ಶ ಕಾಲೋನಿಯ ಉದ್ಯಮಿ ಅಮರೇಶ ಮಾಡಶಿರ ನಿವಾಸದಲ್ಲಿ ಬುಧವಾರ ಅವರು ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್‌ 136 ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಭಾರಿ ಬಹುಮತದೊಂದಿಗೆ ಅಧಿಕಾರ ಪಡೆದ ನಂತರ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರಲ್ಲಿ ಭಯ ಉಂಟಾಗಿದೆ. ತಮ್ಮ ಅವಧಿಯಲ್ಲಿ ನಡೆದಿರುವ ಭ್ರಷ್ಟಚಾರದ ಪ್ರಕರಣಗಳು ಬಲಿಗೆ ಬರುತ್ತವೆಂಬ ಭೀತಿಯಲ್ಲಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕರ್ನಾಟಕದಲ್ಲಿ ಕನಿಷ್ಠ 15-20 ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದರು.

ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಬರಲಿ: ಜಗದೀಶ್‌ ಶೆಟ್ಟರ್‌

ಬಿಜೆಪಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲು ಒಂದು ಬಣ ಪ್ರಯತ್ನಿಸುತ್ತಾ ಪ್ರತಿ ಹಂತದಲ್ಲೂ ಕಡೆಗಣಿಸುತ್ತಾ ಬಂತು. ಕಡೆಗೆ ತಮಗೆ ಪಕ್ಷದಿಂದ ಟಿಕೆಟ್‌ ದೊರೆಯದಿರುವಂತೆ ನೋಡಿಕೊಂಡಿತು. ಒಬ್ಬ ಮಾಜಿ ಮುಖ್ಯ ಮಂತ್ರಿಯ ಪರಿಸ್ಥಿತಿ ಹೀಗಾದರೆ, ಇನ್ನೂ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಊಹಿಸಲು ಕಷ್ಟಸಾಧ್ಯ. ಆದ್ದರಿಂದ ಇಂತಹ ಉಸಿರುಗಟ್ಟುವ ವಾತಾವರಣದಲ್ಲಿ ಬದುಕುವುದಕ್ಕಿಂತ ಕಾಂಗ್ರೆಸ್‌ಗೆ ಸೇರಿಕೊಂಡೆ. ಅವರು ಪಕ್ಷದ ಟಿಕೆಟ್‌ ನೀಡಿದರು. ಆದರೆ ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರು ತಮ್ಮನ್ನು ಸೋಲಿಸಲೇಬೇಕೆಂದು ತೀರ್ಮಾನಿಸಿ ಇಡೀ ಆಡಳಿತ ಯಂತ್ರವನ್ನು ಧಾರಾವಾಡದ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದಲ್ಲಿ ಬೀಡು ಬಿಟ್ಟು ಸೋಲಿಸಿದರು ಎಂದರು.

ಕಾಂಗ್ರೆಸ್‌ನ ಕೇಂದ್ರ ನಾಯಕರು ಹಾಗೂ ರಾಜ್ಯ ನಾಯಕರು ತಮಗೆ ವಿಧಾನಪರಿಷತ್‌ನಲ್ಲಿ ಅವಕಾಶ ನೀಡಿದ್ದಾರೆ. ಪಕ್ಷ ಸಂಘಟನೆಗೆ ಆದ್ಯತೆ ನೀಡಿ ಲೋಕಸಭಾ ಚುನಾವಣೆಯಲ್ಲಿ 15-20 ಸ್ಥಾನಗಳನ್ನು ಗೆಲ್ಲಿಸಿಕೊಡಲು ಸಂಘಟನಾತ್ಮಕವಾಗಿ ಎಲ್ಲ ಮುಖಂಡರು ಸಿದ್ಧರಾಗಿದ್ದೇವೆ ಎಂದರು.

ಕಾಂಗ್ರೆಸ್‌ನಲ್ಲಿ ಕೆಲ ಅತೃಪ್ತರು, ಶಾಸಕರು ಕೆಲ ಮಂತ್ರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದಿರುವುದು ಪಕ್ಷದ ಆಂತರಿಕ ಸಾಮಾನ್ಯ ಪ್ರಕ್ರಿಯೆಗಳು. ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್‌ ಸಿಂಗಾಪುರದಲ್ಲಿ ರಾಜ್ಯದ ಕಾಂಗ್ರೆಸ್‌ನ್ನು ಅತಂತ್ರಗೊಳಿಸಲು ಪ್ರಯತ್ನಿಸುತ್ತಿರುವ ಕುರಿತು ನೀಡಿರುವ ಹೇಳಿಕೆ ಬಗ್ಗೆ ಈಗಾಗಲೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾವೇರಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್‌ ಐದು ಗ್ಯಾರಂಟಿಗಳ ನಿರಂತರ ಯಶಸ್ಸನ್ನು ಕಾಣುತ್ತಿರುವ ಬಿಜೆಪಿಗರಿಗೆ ಹೊಟ್ಟೆಉರಿ ಉಂಟಾಗಿದೆ. ಅದಕ್ಕಾಗಿ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ ಎಂದು ಶೆಟ್ಟರ್‌ ಆರೋಪಿಸಿದರು.

ಚೀಟಿ ಎತ್ತಿ ತಾತ್ಕಾಲಿಕ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಿ: ಶೆಟ್ಟರ್‌

ಸಿಎಂ ಸಿದ್ದರಾಮಯ್ಯ ಜು.27ರಂದು ಸಚಿವ ಸಂಪುಟದ ಸಭೆ ಕರೆದಿದ್ದಾರೆ. ಅಲ್ಲಿ ಎಲ್ಲ ಶಾಸಕರ ಅಹವಾಲುಗಳನ್ನು ಆಲಿಸಿ ಸೂಕ್ತ ಪರಿಹಾರಗಳನ್ನು ಒದಗಿಸಲಿದ್ದಾರೆ. ಶಾಸಕರ ಕೋರಿಕೆಯಂತೆ ಅನುದಾನವನ್ನು ಸರ್ಕಾರದ ಬಜೆಟ್‌ನಲ್ಲಿ ನಿಗದಿಪಡಿಸಿದ ಆಧಾರದ ಮೇಲೆ ನೀಡಲಿದ್ದಾರೆ. ಇನ್ನಷ್ಟುಜನಸ್ನೇಹಿ ಆಡಳಿತವನ್ನು ಸರ್ಕಾರ ನೀಡಲಿದೆ. ಬಿಜೆಪಿಯವರ ಸುಳ್ಳು ಆರೋಪಗಳನ್ನು ಜನ ನಂಬುವುದಿಲ್ಲ. ಈಗಾಗಲೇ ನಂಬಿ ಅವರನ್ನು ವಿರೋಧ ಪಕ್ಷದಲ್ಲಿ ಕೂಡಿಸಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

click me!