ಶ್ರೀಕಾಂತ್ ಪೂಜಾರಿ ಒಬ್ಬನೇನ ಹಿಂದೂ?: ಸಚಿವ ಪರಮೇಶ್ವರ್

By Kannadaprabha NewsFirst Published Jan 6, 2024, 1:19 PM IST
Highlights

ಶ್ರೀಕಾಂತ್ ಪೂಜಾರಿ ಮೇಲೆ 16 ಪ್ರಕರಣ ಇತ್ತು. ಆದರೆ, ಈಗಲೂ ಇದೆ ಅಂತ ಹೇಳಿಲ್ಲ. 16 ಪ್ರಕರಣದಲ್ಲಿ ಕೆಲವು ಖುಲಾಸೆಯಾಗಿದೆ. ಆತ 16 ಪ್ರಕರಣಗಳಲ್ಲಿ ಭಾಗಿಯಾಗಿದ್ದುದು ಸತ್ಯ, ಅದರ ಬಗ್ಗೆ ದಾಖಲಾತಿ ಇದೆ. 
 

ರಾಮನಗರ/ಮಾಗಡಿ (ಜ.06): ಶ್ರೀಕಾಂತ್ ಪೂಜಾರಿ ಮೇಲೆ 16 ಪ್ರಕರಣ ಇತ್ತು. ಆದರೆ, ಈಗಲೂ ಇದೆ ಅಂತ ಹೇಳಿಲ್ಲ. 16 ಪ್ರಕರಣದಲ್ಲಿ ಕೆಲವು ಖುಲಾಸೆಯಾಗಿದೆ. ಆತ 16 ಪ್ರಕರಣಗಳಲ್ಲಿ ಭಾಗಿಯಾಗಿದ್ದುದು ಸತ್ಯ, ಅದರ ಬಗ್ಗೆ ದಾಖಲಾತಿ ಇದೆ. ಇಂತಹ ವ್ಯಕ್ತಿಗಾಗಿ ನೀವು ಇಷ್ಟೊಂದು ಹೋರಾಟ ಮಾಡುತ್ತಿದ್ದೀರಿ. ಆದರೆ ಆತನೊಬ್ಬನೇನಾ ಹಿಂದೂ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಹಳೆಯ 21 ಪ್ರಕರಣಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ ಬೇರೆ ಹಿಂದೂಗಳು ಕೂಡಾ ಇದ್ದಾರೆ. ಅವರ ಬಗ್ಗೆ ಯಾಕೆ ಹೋರಾಟ ಮಾಡುತ್ತಿಲ್ಲ. ಇವನೊಬ್ಬ ಶ್ರೀಕಾಂತ್ ಪೂಜಾರಿ ಅನ್ನುವ ವ್ಯಕ್ತಿ ಬಗ್ಗೆ ಇಷ್ಟೊಂದು ಹೋರಾಟ ಯಾಕೆ? ಇದು ರಾಜಕೀಯ ಉದ್ದೇಶದಿಂದ ಮಾಡುತ್ತಿರೋ ಹೋರಾಟ ಎಂದು ಕಿಡಿಕಾರಿದರು.

ಶ್ರೀಕಾಂತ್‌ ಪೂಜಾರಿ ಬಂಧನದಿಂದ ರಾಜ್ಯ ಸರ್ಕಾರದ ಸುಳ್ಳು ಬಯಲು: ಈಶ್ವರಪ್ಪ

ನಾವು ರಾಮಭಕ್ತರು ನಮ್ಮನ್ನೂ ಬಂಧನ ಮಾಡಿ ಎಂದು ಬಿಜೆಪಿ ನಾಯಕರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಮೇಲೆ ಕೇಸ್ ಇದ್ದರೆ ಕ್ರಮ ತೆಗೆದುಕೊಳ್ಳುತ್ತಾರೆ. ಅವರನ್ನೇನು ಬಿಟ್ಟು ಬಿಡೋದಿಲ್ಲ. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಅಶೋಕ್‌ಗೂ ಒಂದೇ ಕಾನೂನು, ಪರಮೇಶ್ವರ್‌ಗೂ ಒಂದೇ ಕಾನೂನು. ತಪ್ಪಿತಸ್ಥರ ವಿರುದ್ಧ ಕ್ರಮ ಆಗೇ ಆಗುತ್ತೆ ಎಂದರು. ರಾಮಮಂದಿರ ಉದ್ಘಾಟನೆ ದಿನ ರಜೆ ಘೋಷಣೆಗೆ ಬಿಜೆಪಿ ಹೋರಾಟ ವಿಚಾರಕ್ಕೆ, ಅದನ್ನ ಸರ್ಕಾರ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡುತ್ತದೆ ಎಂದರು.

ಮೈಕ್‌ ಕಿತ್ತುಕೊಂಡ ಪರಮೇಶ್ವರ್‌: ಮಾಗಡಿಯಲ್ಲಿ ನಡೆದ ಅಂಬೇಡ್ಕರ್ ಹಬ್ಬದ ವೇಳೆ ಮುಂದಿನ ಮುಖ್ಯಮಂತ್ರಿ ಪರಮೇಶ್ವರ್ ಎಂಬ ಕೂಗು ಕೇಳಿ ಬಂತು. ಘೋಷಣೆ ಕೇಳುತ್ತಲೇ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮೈಕ್ ಕಿತ್ತುಕೊಂಡ ಪ್ರಸಂಗ ನಡೆಯಿತು. ಅಂಬೇಡ್ಕರ್ ಹಬ್ಬ ಹಾಗೂ ಅಂಬೇಡ್ಕರ್ ಪುತ್ಥಳಿ ಅನಾವರಣಕ್ಕೆ ಮಾಗಡಿಗೆ ಆಗಮಿಸಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರಿಗೆ ಜೆಸಿಬಿ ಮೂಲಕ ಬೃಹತ್ ಸೇಬಿನ ಹಾರ ಹಾಕಿ ಹೂ ಚೆಲ್ಲಿ ಸ್ವಾಗತಿಸಲಾಯಿತು. ಅಂಬೇಡ್ಕರ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಗೆಯ ವೇಳೆ ಮುಂದಿನ ಮುಖ್ಯಮಂತ್ರಿ ಪರಮೇಶ್ವರ್ ಎಂಬ ಘೋಷಣೆ ಹೊರಹೊಮ್ಮಿತ್ತು. 

ಈಶ್ವರಪ್ಪ ನಾಲಿಗೆಗೂ, ಮೆದುಳಿಗೂ ಲಿಂಕ್ ಇಲ್ಲ: ಆಯನೂರು ಮಂಜುನಾಥ್‌

ಇದನ್ನು ಕೇಳುತ್ತಲೇ ಮೆರವಣಿಗೆ ವಾಹನದಲ್ಲಿದ್ದ ಪರಮೇಶ್ವರ್ ಪಕ್ಕದಲ್ಲಿದ್ದ ವ್ಯಕ್ತಿಯಿಂದ ಮೈಕ್ ಕಿತ್ತುಕೊಂಡರು. ಆದರೂ ಪರಮೇಶ್ವರ್ ಮುಂದಿನ ಸಿಎಂ ಪರಮೇಶ್ವರ್ ಎಂಬ ಕೂಗು ಮತ್ತೆ ಮತ್ತೆ ಕೇಳಿ ಬರುತ್ತಲೆ ಇತ್ತು. ಅಂಬೇಡ್ಕರ್ ಹಬ್ಬದ ಪ್ರಯುಕ್ತ ತಾಲೂಕಿನ ಕಲ್ಯಾ ಗೇಟ್ ಬಳಿಯಿಂದ ಕೆಂಪೇಗೌಡ ಸರ್ಕಲ್, ಆರ್.ಆರ್. ಸರ್ಕಲ್ ಮೂಲಕ ಪುರಸಭೆ ಆವರಣಕ್ಕೆ ಮೆರವಣಿಗೆ ಸಾಗಿಬಂತು. ರಸ್ತೆಯುದ್ದಕ್ಕೂ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿ ಪ್ರದರ್ಶನ ನೀಡಿದವು.

click me!