ವಿಷಯಾಂತರಕ್ಕಾಗಿ ಸಿಎಂರಿಂದ ಹಿಟ್‌ ಆ್ಯಂಡ್‌ ರನ್‌ ರಾಜಕೀಯ: ವಿಜಯೇಂದ್ರ

Published : Dec 17, 2024, 08:33 AM IST
ವಿಷಯಾಂತರಕ್ಕಾಗಿ ಸಿಎಂರಿಂದ ಹಿಟ್‌ ಆ್ಯಂಡ್‌ ರನ್‌ ರಾಜಕೀಯ: ವಿಜಯೇಂದ್ರ

ಸಾರಾಂಶ

ಕೆಐಎಡಿಬಿ ನಿವೇಶನ ಟ್ರಸ್ಟ್‌ಗೆ ಪಡೆದು ನಂತರ ವಾಪಸು ಮಾಡಿದ ಪ್ರಿಯಾಂಕ್‌ ಖರ್ಗೆ ಶ್ರೀರಾಮಚಂದ್ರರಂತೆ, ಮುಡಾ ಹಗರಣದ ಆರೋಪಿ ಸಿದ್ದರಾಮಯ್ಯ ಸತ್ಯಹರಿಶ್ಚಂದ್ರರಂತೆ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದ ಬಿ.ವೈ.ವಿಜಯೇಂದ್ರ   

ಸುವರ್ಣಸೌಧ(ಡಿ.17):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಮುಡಾ ಪ್ರಕರಣದಲ್ಲಿ ಸಿಲುಕಿದ್ದು, ವಾಲ್ಮೀಕಿ ಪ್ರಕರಣದಲ್ಲೂ ಮುಖ್ಯಮಂತ್ರಿಗಳ ಸೂಚನೆಯಂತೆ ಹಣ ವರ್ಗಾವಣೆ ಸಾಬೀತಾಗಿದೆ. ಇದರಿಂದ ವಿಷಯಾಂತರ ಮಾಡಲು ನನ್ನ ವಿರುದ್ಧ 150 ಕೋಟಿ ರು. ಆಮಿಷ ಹೆಸರಲ್ಲಿ ಹಿಟ್‌ ಅಂಡ್‌ ರನ್‌ ಆರೋಪ ಮಾಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ ಸರ್ಕಾರ ತನ್ನ ಹಗರಣ, ಬಾಣಂತಿಯರ ಹಾಗೂ ಶಿಶುಗಳ ಸಾವು ಚರ್ಚೆಯಾಗದೆ ತಡೆಯಲು ಸುಳ್ಳು ಆರೋಪ ಮಾಡಿದೆ. ಯಡಿಯೂರಪ್ಪ ವಿರುದ್ಧ ರಾಜಕೀಯ ದ್ವೇಷಕ್ಕಾಗಿ ರಾಜಕೀಯವಾಗಿ ಮುಗಿಸಲು ಕೋವಿಡ್‌ ಪ್ರಕರಣದ ಅರೆಬೆಂದ ಕುನ್ಹಾ ವರದಿ ಸೇರಿ ಇತರೆ ಪ್ರಕರಣ ದುರ್ಬಳಕೆಗೆ ಮುಂದಾಗಿದ್ದಾರೆ. ಕೆಐಎಡಿಬಿ ನಿವೇಶನ ಟ್ರಸ್ಟ್‌ಗೆ ಪಡೆದು ನಂತರ ವಾಪಸು ಮಾಡಿದ ಪ್ರಿಯಾಂಕ್‌ ಖರ್ಗೆ ಶ್ರೀರಾಮಚಂದ್ರರಂತೆ, ಮುಡಾ ಹಗರಣದ ಆರೋಪಿ ಸಿದ್ದರಾಮಯ್ಯ ಸತ್ಯಹರಿಶ್ಚಂದ್ರರಂತೆ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.

ವಿಜಯೇಂದ್ರ 150 ಕೋಟಿ ಆಫರ್‌ ಮಾಡಿಲ್ಲ: ಸಿಟ್ಟಿನಿಂದ ನಾನಂದು ಆ ರೀತಿ ಹೇಳಿಕೆ ಕೊಟ್ಟಿದ್ದೆ: ಮಾಣಿಪ್ಪಾಡಿ ಯೂಟರ್ನ್‌

ಈ ಹಿಂದೆ ಯಡಿಯೂರಪ್ಪ ವಿರುದ್ಧ ಸಿಎಜಿ ವರದಿಯನ್ನಿಟ್ಟುಕೊಂಡು 25 ಪ್ರಕರಣಗಳನ್ನು ಸಿದ್ದರಾಮಯ್ಯ ಸರ್ಕಾರ ದಾಖಲಿಸಿ, ಬಿಜೆಪಿಯನ್ನು ಮುಗಿಸಲು ಪಿತೂರಿ ಮಾಡಿತ್ತು. ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದರೆ ತಾವು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಯೋಚಿಸಿ ಈ ಕೆಲಸ ಮಾಡಿದ್ದರು. ಸಚಿವ ಪ್ರಿಯಾಂಕ್ ಖರ್ಗೆಯವರು ನನ್ನ ವಿರುದ್ಧ ಆರೋಪ ಮಾಡಿದ್ದು, ಇತ್ತೀಚೆಗೆ ಅವರ ಬಂಡವಾಳವೂ ಬಯಲಾಗಿದೆ ಎಂದು ಹೇಳಿದರು.

ಸದನದ ಒಳಗೆ- ಹೊರಗೆ ಕಾಂಗ್ರೆಸ್‌- ಬಿಜೆಪಿ ವಾಗ್ಯುದ್ಧ: 150 ಕೋಟಿ ಜಟಾಪಟಿ

ವಿಧಾನಸಭೆ:  ವಕ್ಫ್‌ ಆಸ್ತಿ ಅಕ್ರಮದ ವರದಿಯನ್ನು ಮುಚ್ಚಿಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 150 ಕೋಟಿ ರು. ಆಮಿಷವೊಡ್ಡಿದ್ದಾಗಿ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಹೇಳಿದ್ದಾರೆಂಬ ಕಾಂಗ್ರೆಸ್‌ ಆರೋಪ, ಈ ವಿಚಾರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ ಮತ್ತು ತಾವು ಆ ರೀತಿ ಹೇಳಿಯೇ ಇಲ್ಲ ಎಂಬ ಮಾಣಿಪ್ಪಾಡಿ ಹೇಳಿಕೆ ವಿಚಾರ ಸೋಮವಾರ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ತೀವ್ರ ಜಟಾಪಟಿಗೆ ಕಾರಣವಾಯಿತು. ಸದನದ ಹೊರಗೂ ಆರೋಪ- ಪ್ರತ್ಯಾರೋಪ ನಡೆಯಿತು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ: ಬಿ.ವೈ.ವಿಜಯೇಂದ್ರ

ಈ ವೇಳೆ ಸಿದ್ದರಾಮಯ್ಯ ಅವರಿಗೆ ಧೈರ್ಯವಿದ್ದರೆ ನನ್ನ ಮೇಲಿನ 150 ಕೋಟಿ ರು. ಆಮಿಷ ಆರೋಪ, ಅನ್ವರ್‌ ಮಾಣಿಪ್ಪಾಡಿ ಶಿಫಾರಸು ಆಧರಿಸಿ ಮಾಡಿರುವ ಉಪ ಲೋಕಾಯುಕ್ತ ತನಿಖಾ ವರದಿ ಹಾಗೂ ಮುಡಾ ಹಗರಣ ಸೇರಿ ಮೂರೂ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಲಿ ಎಂದು ವಿಜಯೇಂದ್ರ ಸವಾಲು ಎಸೆದರು. ಸದನದ ಹೊರಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಮುಡಾ ಪ್ರಕರಣದಲ್ಲಿ ಸಿಲುಕಿದೆ. ವಾಲ್ಮೀಕಿ ಪ್ರಕರಣದಲ್ಲೂ ಮುಖ್ಯಮಂತ್ರಿಗಳ ಸೂಚನೆಯಂತೆ ಹಣ ವರ್ಗಾವಣೆ ಸಾಬೀತಾಗಿದೆ. ಇದರಿಂದ ವಿಷಯಾಂತರ ಮಾಡಲು ನನ್ನ ವಿರುದ್ಧ ಹಿಟ್‌ ಅಂಡ್‌ ರನ್‌ ಆರೋಪ ಮಾಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ಸ್ಪೀಕರ್‌ ಅನುಮತಿ ಬಳಿಕ ಮಾತು ಆರಂಭಿಸಿದ ವಿಜಯೇಂದ್ರ, ನನ್ನ ಅನುಪಸ್ಥಿತಿಯಲ್ಲಿ ಪ್ರಿಯಾಂಕ್‌ ಖರ್ಗೆ ಗುರುತರ ಆರೋಪ ಮಾಡಿದ್ದಾರೆ. ನಾನು ಅನ್ವರ್‌ ಮಾಣಿಪ್ಪಾಡಿ ಅವರಿಗೆ 150 ಕೋಟಿ ರು. ಆಮಿಷ ಒಡ್ಡಿರುವುದಾಗಿ ಆರೋಪ ಮಾಡಿದ್ದು, ಮುಖ್ಯಮಂತ್ರಿಗಳು ಇದನ್ನು ಪುನರುಚ್ಚರಿಸಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್‌ ಮಾಣಿಪ್ಪಾಡಿ ಅವರು ಕಾಂಗ್ರೆಸ್ ನಾಯಕರು ವಕ್ಫ್‌ ಆಸ್ತಿ ಗುಳುಂ ಮಾಡಿರುವ ಬಗ್ಗೆ ವರದಿ ನೀಡಿದ್ದರು. ಈ ಬಗ್ಗೆ ಉಪ ಲೋಕಾಯುಕ್ತರು ತನಿಖೆ ನಡೆಸಿ 2016ರಲ್ಲಿ ತನಿಖಾ ವರದಿಯನ್ನೂ ಮಂಡಿಸಿದ್ದರು. 2016 ಮಾರ್ಚ್‌ನಲ್ಲಿ ಇದೇ ಸಿದ್ದರಾಮಯ್ಯ ಸಂಪುಟ ತನಿಖಾ ವರದಿ ತಿರಸ್ಕರಿಸಿತ್ತು. ತಡವಾಗಿ ಮುಖ್ಯಮಂತ್ರಿಗಳಿಗೆ ಸಿಬಿಐ ಮೇಲೆ ವಿಶ್ವಾಸ ಬಂದಿದ್ದು, ಅವರಿಗೆ ಧೈರ್ಯವಿದ್ದರೆ ಮಾಣಿಪ್ಪಾಡಿ ಅವರ ವರದಿ ಆಧಾರ ಮೇಲೆ ಉಪ ಲೋಕಾಯುಕ್ತ ನಡೆಸಿರುವ ತನಿಖಾ ವರದಿಯನ್ನು ಸದನದಲ್ಲಿ ಮಂಡಿಸಿ ಚರ್ಚಿಸಿ ಸಿಬಿಐ ತನಿಖೆಗೆ ನೀಡಲಿ. ಜತೆಗೆ ಅವರ ಕುಟುಂಬವೇ ಮುಡಾ ಹಗರಣದಲ್ಲಿ ಸಿಲುಕಿಕೊಂಡಿದ್ದು, ಆ ಪ್ರಕರಣವನ್ನೂ ಸಿಬಿಐ ತನಿಖೆಗೆ ನೀಡಲಿ, ಜತೆಗೆ ನನ್ನ ಮೇಲಿನ ಆರೋಪವನ್ನೂ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ