
ಹುಬ್ಬಳ್ಳಿ (ನ.9) : ಕಾಂಗ್ರೆಸ್ ನಾಯಕರಿಗೆ ಹಿಂದು ಪದವೇ ಅಲರ್ಜಿ. ಚರ್ಚೆಯಾಗದ ವಿಷಯವನ್ನು ಚುನಾವಣೆ ಸಮೀಪದಲ್ಲಿ ತೆಗೆದುಕೊಂಡು ಬರುವುದು ಅವರ ಅಜ್ಞಾನ ತೋರಿಸುತ್ತದೆ. ಹಿಂದು ಪದದ ಬಗ್ಗೆ ಚರ್ಚೆ ಮಾಡುವುದೇ ಅನಗತ್ಯ. ಇಂತಹ ಹೇಳಿಕೆಯಿಂದ ಹಿಂದುಗಳ ಭಾವನೆಗಳಿಗೆ ದಕ್ಕೆ ತರುವ ಕೆಲಸ ಆಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಿಡಿಕಾರಿದರು.
ಹಿಂದೂ ಪದದ ಅರ್ಥ ಅಶ್ಲೀಲ ಎಂದ ಜಾರಕಿಹೊಳಿಗೆ, ಮುತಾಲಿಕ್ ಕ್ಲಾಸ್, ಕಾಂಗ್ರೆಸ್ ಖಂಡನೆ
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಗೆ ಯಾವಾಗಲೂ ಹಿಂದು ಪರಂಪರೆ, ಸಂಸ್ಕೃತಿಯನ್ನು ಟೀಕಿಸಿದಾಗಲೇ ಸಮಾಧಾನವಾಗುತ್ತದೆ. ಕಾಂಗ್ರೆಸ್ ಹಿಂದು ವಿರೋಧಿ ಎಂದು ತೋರಿಸಿಕೊಂಡು, ಅಲ್ಪಸಂಖ್ಯಾತರನ್ನು ಓಲೈಸಿ ಅವರ ಮತಗಳನ್ನು ಸೆಳೆಯಲು ಇಂತಹ ಕಾರ್ಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಕೂಡಾ ತಾವು ಹಿಂದು ಎಂದು ಹೇಳಿಕೊಳ್ಳುತ್ತಾರೆ. ಜನಿವಾರ ತೋರಿಸುತ್ತಾರೆ. ಹಿಂದುಗಳ ಮತಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕೆಲವು ದಿನಗಳಿಂದ ಹಿಂದು ಎನ್ನುವುದನ್ನು ಪ್ರಾರಂಭಿಸಿದ್ದಾರೆ. ಇದು ಸರಿಯಲ್ಲ ಎಂದರು.
ಸತೀಶ ಜಾರಕಿಹೊಳಿ ಒಬ್ಬ ಕಾರ್ಯಕರ್ತರಲ್ಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾರೆ. ಹಿಂದು ಬಗ್ಗೆ ಹೇಳಿಕೆ ನೀಡಿರುವುದು ವೈಯಕ್ತಿಕ ಅಭಿಪ್ರಾಯವಾಗಿದ್ದರೆ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಹಿಂದು ಸಮಾಜದ ಬಗ್ಗೆ ಕೀಳಾಗಿ ಮಾತನಾಡಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಹುನ್ನಾರ ನಡೆದಿದೆ. ಆದರೆ ಅಲ್ಪಸಂಖ್ಯಾತರು ಜಾಗೃತರಾಗುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ದಿನೇದಿನೇ ಅಧೋಗತಿಗೆ ಹೋಗುತ್ತಿದೆ ಎಂದು ಟೀಕಿಸಿದರು.
ಹಿಂದು ಅನ್ನೋದು ಅಶ್ಲೀಲ ಪದ, ಇದು ಪರ್ಷಿಯಾದಿಂದ ಬಂದಿದ್ದು: ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ!
ಸಚಿವ ಬೈರತಿ ಬಸವರಾಜ ಲಂಚ ಪಡೆದಿರುವ ಆರೋಪದ ಕುರಿತು ಮಾತನಾಡಿದ ಶೆಟ್ಟರ್, ಯಾರೇ ಆಗಲಿ ತಪ್ಪು ಮಾಡಿದ್ದರೆ ಕ್ರಮ ಆಗಬೇಕು. ಲಂಚದ ಆರೋಪ ಮಾಡುವುದಷ್ಟೆಅಲ್ಲದೆ. ಲೋಕಾಯುಕ್ತಕ್ಕೆ ದೂರು ನೀಡಬೇಕು. ಸೂಕ್ತ ತನಿಖೆ ನಡೆಯಬೇಕು. ಕೇವಲ ಹಿಟ್ ಆ್ಯಂಡ್ ರನ್ನಂತೆ ಆಗಬಾರದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.