
ಹೊಳೆನರಸೀಪುರ (ಡಿ.03): ರೇವಣ್ಣ ಹಾಗೂ ಭವಾನಿ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಭವಾನಿ ಅವರು ಕಾಲೇಜಿನ ಅಭಿವೃದ್ಧಿಗಾಗಿ ಲಕ್ಷಾಂತರ ರು.ಗಳನ್ನು ತಮ್ಮ ಸ್ವಂತ ಹಣ ಖರ್ಚು ಮಾಡಿದ್ದಾರೆ ಮತ್ತು ವಿದ್ಯಾರ್ಥಿಗಳ ಅಭ್ಯುದಯಕ್ಕೆ ತೋರಿದ ಕಾಳಜಿಯಿಂದಾಗಿ ನಿಮ್ಮ ಉನ್ನತ ವ್ಯಾಸಂಗದ ಕನಸು ಸಾಕಾರಗೊಳ್ಳಲು ಸಾಧ್ಯವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೊಸೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.
ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಮಾತನಾಡಿದರು. ನಿಮ್ಮ ಶಾಸಕರು ಕಾಲೇಜಿಗೆ ಅಗತ್ಯ ಸೌಲಭ್ಯ ಒದಗಿಸಿಕೊಟಿದ್ದಾರೆ. ಕಾಲೇಜಿಗೆ ಇನ್ನೂ ಏನಾದರೂ ಅನುಕೂಲ ಅಗತ್ಯವಿದ್ದರೆ ಪ್ರಾಂಶುಪಾಲರು ತಿಳಿಸಲಿ, ನಾನು, ನನ್ನ ರಾಜ್ಯಸಭಾ ಸದಸ್ಯರ ನಿಧಿಯಿಂದ ಕೊಡಿಸುತ್ತೇನೆ, ವಿದ್ಯಾರ್ಥಿಗಳು ದೊರೆತಿರುವ ಸೌಲಭ್ಯ ಹಾಗೂ ಅವಕಾಶವನ್ನು ಸಬ್ದಳಕೆ ಮಾಡಿಕೊಂಡು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವಂತೆ ಶುಭ ಕೋರಿದರು.
ಕಾಂಗ್ರೆಸ್ ಅಭ್ಯರ್ಥಿಗಳ ಖರೀದಿಗೆ ಸಿಎಂ ಕೆಸಿಆರ್ ಯತ್ನ: ಡಿಕೆಶಿ ಆರೋಪ
ಪ್ರಾಂಶುಪಾಲ ಮಾದಯ್ಯ ಅವರು ಕಾಲೇಜಿನ ಅಭಿವೃದ್ಧಿಗೆ ಶಾಸಕರು ಹಾಗೂ ಭವಾನಿ ರೇವಣ್ಣನವರು ದೊರಕಿಸಿಕೊಟ್ಟಿರುವ ಸೌಲಭ್ಯಗಳು, ಕಾಲೇಜಿನಲ್ಲಿ ಇರುವ ಇಚ್ಛಿತ ವಿಷಯಗಳು ಹಾಗೂ ಸೌಲಭ್ಯಗಳು ಜತೆಗೆ ಫಲಿತಾಂಶದ ಬಗ್ಗೆ ವಿವರಿಸಿದರು. ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಪ್ರಥಮ ದರ್ಜೆ ಕಾಲೇಜು ಹಾಗೂ ಗೃಹವಿಜ್ಞಾನ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಸನ್ಮಾನಿಸಿ, ಆಶೀರ್ವಾದ ಪಡೆದರು. ಶಾಸಕ ಎಚ್.ಡಿ.ರೇವಣ್ಣ ಅವರಿಗೆ ನಿಗದಿಪಡಿಸಿದ್ದ ಆಸನದಲ್ಲಿ ಪ್ರಾಧ್ಯಾಪಕರೊಬ್ಬರು ಕುಳಿತು ಶಾಸಕರಿಗೆ ಅಗೌರವ ತೋರಿದರು.
ಈ ಸರ್ಕಾರ ಇಲಾಖೆಗಳಿಗೆ ನಯಾಪೈಸೆ ಅನುದಾನ ಕೊಟ್ಟಿಲ್ಲ: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಇಕ್ಕಟಿಗೆ ಬಿದ್ದ ಸರ್ಕಾರದಿಂದ ಕಳೆದ ೭ ತಿಂಗಳಲ್ಲಿ ಯಾವೊಂದು ಇಲಾಖೆಗೂ ಒಂದು ರುಪಾಯಿ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ತಾಲೂಕಿನ ದಂಡಿಗನಹಳ್ಳಿ ಹೋಬಳಿ ಆನೇಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಂಗಳವಾರ ಹಳ್ಳಿಗಳಲ್ಲಿನ ಕುಂದುಕೊರತೆ ಆಲಿಸಿ ಮಾತನಾಡಿದ ಅವರು, ನಾವು ಗ್ಯಾರಂಟಿಗಳ ವಿರೋಧಿಗಳಲ್ಲ, ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಬೆಂಬಲವೂ ಇದೆ. ಆದರೆ ಆದನ್ನೆ ನೆಪ ಮಾಡಿ, ಅಭಿವೃದ್ಧಿಗೆ ಹಣವಿಲ್ಲವೆಂದರೇ ಹೇಗೆ, ಜಿಪಂಯಿಂದ ಜನಪ್ರತಿನಿಧಿಗಳಿಗೆ ೫೦, ೬೦ ಲಕ್ಷ ಕೊಟ್ಟಿದ್ದು ಬಿಟ್ಟರೇ, ಯಾವೊಂದು ಇಲಾಖೆಗೂ ೭ ತಿಂಗಳಿಂದ ಹಣ ನೀಡಿಲ್ಲ ಎಂದರು.
ರೈತರಿಗೆ ೩ ಗಂಟೆ ವಿದ್ಯುತ್ ನೀಡುತ್ತಿಲ್ಲ, ಇನ್ನೂ ಟಿಸಿ ಅಳವಡಿಕೆಗೆ ರೈತರು ೨೦ಸಾವಿರ ಹಣ ಕಟ್ಟಿ ವರ್ಷ ಆಗಿದ್ದರೂ ಟಿಸಿ ನೀಡಿಲ್ಲ. ಹೊಳೆನರಸೀಪುರ ತಾಲ್ಲೂಕಿನಲ್ಲಿ ೫೮೦೦, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ೧೭೮೦ ಟಿಸಿ ಅಳವಡಿಸಬೇಕಾಗಿದೆ. ಜಿಲ್ಲೆಯ ೧೧೩೫೦ ಟಿಸಿ ಅಳವಡಿಸಬೇಕಾಗಿದೆ. ಎಸ್ಇಪಿ, ಟಿಎಸ್ಪಿ ಅನದಾನ ನೀಡಿಲ್ಲ, ಸರ್ಕಾರ ಎತ್ತ ಸಾಗುತ್ತಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಲ್ಲದೇ ಸರ್ಕಾರದ ಎಲ್ಲ ಮಂತ್ರಿಗಳು ಪಕ್ಕದ ರಾಜ್ಯದ ಚುನಾವಣೆಯಲ್ಲಿ ತಲ್ಲೀನರಾಗಿದ್ದಾರೆ. ರೇವಣ್ಣ ಅವರು ೧೩ ತಿಂಗಳು ಸಚಿವರಾಗಿದ್ದಾಗ, ೧೬ ಸಾವಿರ ಕೋಟಿ ರು. ಹಣ ತಂದು ಜಿಲ್ಲೆಯ ಅಭಿವೃದ್ಧಿ ಮಾಡಿದ್ದಾರೆ. ೫ ಸಾವಿರ ರು. ಕಟ್ಟಿಸಿಕೊಂಡು ರೈತರಿಗೆ ವಿದ್ಯುತ್ ಪರಿವರ್ತಕ ನೀಡಿದ್ದಾರೆ ಎಂದರು.
ಕೊಬ್ಬರಿಗೆ ಬೆಂಬಲ ಬೆಲೆ ಕೊಡುವ ಅಧಿಕಾರ ಡಿಕೆಶಿಗೆ ಇಲ್ಲ: ಶಾಸಕ ಶಿವಲಿಂಗೇಗೌಡ
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಡಿ.೪ರಂದು ನಡೆಯಲಿರುವ ಆಧಿವೇಶನದಲ್ಲಿ ಹೋರಾಟ ನಡೆಸಲಾಗುವುದು. ಘೋಷಣೆ ಮಾಡದ ಹೊರತು ಅಧಿವೇಶನ ನಡೆಸಲು ಬಿಡುವುದಿಲ್ಲ, ೨೫೦೦ ಕೋಟಿ ರು. ಜಿಲ್ಲೆಯಲ್ಲಿ ಬೆಳೆ ಹಾನಿಯಾಗಿದ್ದು, ಎನ್ಡಿಆರ್ಎಫ್ ನಿಯಮಾವಳಿ ಪರಿಹಾರದೊಂದಿಗೆ ರಾಜ್ಯದಿಂದಲೂ ಪರಿಹಾರ ನೀಡಬೇಕು. ಇನ್ನೂ ಕೊಳವೆ ಬಾವಿ ಹೊಂದಿರುವ ರೈತರಿಗೆ ೧೦ ಸಾವಿರ ಮೇವಿನ ಕಿಟ್ ತರಿಸಿ ನೀಡುವಂತೆ ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ಮುಂದಿನ ಶನಿವಾರ ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕೊಬ್ಬರಿ ಸುರಿದು ಪ್ರತಿಭಟನೆ ನಡೆಸಲಾಗುವುದು. ಅಂದೇ ದೇವೇಗೌಡರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆಯನ್ನು ಏರ್ಪಡಿಸಲಾಗಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆಕೊಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.