Channapatna: ಮುನಿದ ಮುಖಂಡರ ಮನೆಯ ಕದ ತಟ್ಟಿದ ಎಚ್‌.ಡಿ.ಕುಮಾರಸ್ವಾಮಿ

Published : Nov 13, 2022, 03:01 PM IST
Channapatna: ಮುನಿದ ಮುಖಂಡರ ಮನೆಯ ಕದ ತಟ್ಟಿದ ಎಚ್‌.ಡಿ.ಕುಮಾರಸ್ವಾಮಿ

ಸಾರಾಂಶ

ಮುಂದಿನ ಚುನಾವಣೆಗೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಚುರುಕುಗೊಳಿಸಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಆ ನಿಟ್ಟಿನಲ್ಲಿ ತಮ್ಮ ವಿರುದ್ಧ ಮುನಿದು ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ಮುಖಂಡರ ಮನವೊಲಿಕೆಗೆ ಖುದ್ದು ತಾವೇ ಕಣಕ್ಕಿಳಿದ್ದಾರೆ.

ವಿಜಯ್‌ ಕೇಸರಿ

ಚನ್ನಪಟ್ಟಣ (ನ.13): ಮುಂದಿನ ಚುನಾವಣೆಗೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಚುರುಕುಗೊಳಿಸಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಆ ನಿಟ್ಟಿನಲ್ಲಿ ತಮ್ಮ ವಿರುದ್ಧ ಮುನಿದು ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ಮುಖಂಡರ ಮನವೊಲಿಕೆಗೆ ಖುದ್ದು ತಾವೇ ಕಣಕ್ಕಿಳಿದ್ದಾರೆ. ಮುನಿದವರ ಮನೆಯ ಕದ ತಟ್ಟಿದ ಅವರು ತಕ್ಕಮಟ್ಟಿಗೆ ಮುನಿಸು ಶಮನಗೊಳಿಸುವಲ್ಲಿ ಸಫಲರಾಗಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಪ್ರತಿನಿಧಿಯಾಗಿ ಕ್ಷೇತ್ರದಲ್ಲಿ ಪಕ್ಷ ಸಂಘಟಿಸುವ ಕೆಲಸವನ್ನು ಅವರು ನಿಖಿಲ್‌ ಕುಮಾರಸ್ವಾಮಿ ನೀಡಿದ್ದರು.  ಒಂದು ವಾರದ ಅವಧಿಯಲ್ಲಿ ಎರಡು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ನಿಖಿಲ್‌ ಕಾರ‍್ಯಕರ್ತರ ಮನೆಗಳಿಗೆ ಭೇಟಿ ನೀಡಿ ಅಹವಾಲುಗಳನ್ನು ಆಲಿಸಿದ್ದರು. 

ಆದರೂ ಸಹ ಶನಿವಾರ ದಿಢೀರ್‌ ಎಂದು ಕ್ಷೇತ್ರ ಪ್ರವಾಸ ಕೈಗೊಂಡ ಕುಮಾರಸ್ವಾಮಿ ಇದೇ ವೇಳೆ ಮುನಿದಿದ್ದ ಹಲವು ಮುಖಂಡರ ಮನೆಗಳಿಗೆ ಭೇಟಿ ನೀಡಿದ್ದಾರೆ. ಆಪರೇಷನ್‌ ಕಮಲಕ್ಕೆ ಒಳಗಾಗಿದ್ದ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್‌ ಈ ಹಿಂದೆಯೇ ಪಕ್ಷಕ್ಕೆ ಮರುಳಿದ್ದರಾದರೂ ಪಕ್ಷದ ಚುಟುವಟಿಕೆಗಳಿಂದ ದೂರವುಳಿದಿದ್ದರು. ಅವರ ಮನೆಗೆ ಭೇಟಿ ನೀಡಿದ ಕುಮಾರಸ್ವಾಮಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಮಾತುಕತೆ ನಡೆಸಿದ್ದು, ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದಾರೆ.  ಅದೇ ರೀತಿ ಪಕ್ಷದ ಚಟುವಟಿಕೆಗಳಿಂದ ದೂರವಿದ್ದ ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ, ವಕೀಲ ಹನುಮಂತೇಗೌಡ, ನಾಗವಾರ ರಂಗಸ್ವಾಮಿ, ಬೈಶ್ರೀನಿವಾಸ್‌, ಸತ್ಯನಾರಾಯಣ ಸೇರಿದಂತೆ ಹಲವು ಮುಖಂಡರ ಜತೆ ಮಾತುಕತೆ ನಡೆಸಿದ ಎಚ್‌ಡಿಕೆ ಅವರ ಮನವೊಲಿಸುವ ಕೆಲಸ ಮಾಡಿದ್ದಾರೆ. 

Tumakuru: ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ: ಎಚ್ಡಿಕೆ ವಿಶ್ವಾಸ

ಡ್ಯಾಮೇಜ್‌ ಕಂಟ್ರೋಲ್‌ಗೆ ಇಳಿದ ಎಚ್‌ಡಿಕೆ: ಕ್ಷೇತ್ರದಿಂದ ಈ ಬಾರಿ ಶತಾಯಗತಾಯ ಗೆಲ್ಲಲ್ಲೇಬೇಕು ಎಂದು ಪಣ ತೊಟ್ಟಿರುವ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಕಳೆದ ಆರು ತಿಂಗಳಿನಿಂದ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದಾರೆ. ಪ್ರತಿದಿನ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ಅವರು ಒಂದು ಕಡೆ ಪಕ್ಷದ ಸಂಘಟನೆಯನ್ನು ಚುರುಕುಗೊಳಿಸಿದ್ದರೆ, ಇನ್ನೊಂದು ಕಡೆ ಆಪರೇಷನ್‌ ಕಮಲದ ಮೂಲಕ ಜೆಡಿಎಸ್‌ ಅಸಮಾಧಾನಿತ ನಾಯಕರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಜೆಡಿಎಸ್‌ ಜತೆ ದಶಕಗಳಿಂದ ಗುರುತಿಸಿಕೊಂಡಿದ್ದ ಬಮೂಲ್‌ ಮಾಜಿ ನಿರ್ದೇಶಕ ಎಸ್‌.ಲಿಂಗೇಶ್‌ಕುಮಾರ್‌, ಮುದುಗೆರೆ ಜಯಕುಮಾರ್‌, ಜಯಪ್ರಕಾಶ್‌, ಕೂರಣಗೆರೆ ರವಿ ಮುಂತಾದ ಮುಖಂಡರನ್ನು ಈಗಾಗಲೇ ಸಿಪಿವೈ ಬಿಜೆಪಿಗೆ ಸೆಳೆದಿದ್ದಾರೆ. ಇದರ ಜತೆಗೆ ಇನ್ನಷ್ಟುಮುಖಂಡರನ್ನು ಪಕ್ಷಕ್ಕೆ ಸೆಳೆಯುವ ನಿಟ್ಟಿನಲ್ಲಿ ಅವರು ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದಾರೆ. ಮೊದಲಿಗೆ ಹೋಗುವವರೆಲ್ಲ ಹೋಗಲಿ ಎಂದು ಮುಗಮ್ಮಾಗಿದ್ದ ಎಚ್‌ಡಿಕೆ ಇದೀಗ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದ್ದಾರೆ.

ಮುಖಂಡರ ಒತ್ತಾಯ: ಜೆಡಿಎಸ್‌ ಸಂಘಟನೆಯ ಕುರಿತಂತೆ ಕೆಲ ದಿನಗಳ ಹಿಂದೆ ಬಿಡದಿಯ ಈಗಲ್‌ಟನ್‌ ರೆಸಾರ್ಚ್‌ನಲ್ಲಿ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆದಿತ್ತು. ಈ ಸಭೆಯಲ್ಲಿ ಪಕ್ಷ ಸಂಘಟನೆಯ ಕುರಿತು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ವೇಳೆ ಪಕ್ಷ ಸಂಘಟನೆಗೆ ಚುರುಕು ನೀಡುವ ನಿಟ್ಟಿನಲ್ಲಿ ನಿಖಿಲ್‌ಗೆ ಜವಬ್ದಾರಿ ವಹಿಸುವಂತೆ ಸಲಹೆ ವ್ಯಕ್ತವಾಗಿತ್ತು. ಇದನ್ನು ಸಕಾರಾತ್ಮವಾಗಿ ಸ್ವೀಕರಿಸಿದ ಎಚ್‌ಡಿಕೆ ರಾಮನಗರ ಮತ್ತು ಚನ್ನಪಟ್ಟಣದ ಹೊಣೆಯನ್ನು ನಿಖಿಲ್‌ಗೆ ವಹಿಸಿದ್ದರು. ಅದರಂತೆ ಕಳೆದ ಕೆಲ ದಿನಗಳಲ್ಲಿ ಎರಡು ಬಾರಿ ಕ್ಷೇತ್ರಕ್ಕೆ ಆಗಮಿಸಿದ್ದ ನಿಖಿಲ್‌ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿದ್ದರು. 

ಆದರೆ ಶನಿವಾರ ಖುದ್ದು ಕುಮಾರಸ್ವಾಮಿಯೇ ಅಸಮಾಧಾನಿತ ಮುಖಂಡರ ಮನೆಯ ಕದ ತಾಕುವ ಮೂಲಕ ಮುನಿಸಿ ಶಮನ ಮಾಡುವ ಪ್ರಯತ್ನ ನಡೆಸಿರುವುದು ಕ್ಷೇತ್ರದ ರಾಜಕೀಯದಲ್ಲಿ ಸಾಕಷ್ಟುಸಂಚಲನ ಮೂಡಿಸಿದೆ. ಮುಂದಿನ ದಿನಗಳಲ್ಲಿ ಇನ್ನೊಂದು ಸುತ್ತಿನ ಪ್ರವಾಸ ಕೈಗೊಳ್ಳಲಿರುವ ಅವರು ಮತ್ತಷ್ಟುನಾಯಕರ ಮನೆಗಳಿಗೆ ಭೇಟಿ ನೀಡಿ ಮನವೊಲಿಸುವ ಕಾರ್ಯ ಮಾಡಲಿದ್ದಾರೆ ಎಂಬ ಮಾತುಗಳು ಜೆಡಿಎಸ್‌ ವಲಯದಲ್ಲಿ ಕೇಳಿಬರುತ್ತಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ರಾಜಕಾರಣ ಮತ್ತಷ್ಟುರಂಗೇರಲಿದೆ.

ಶಿಶು, ಬಾಣಂತಿ ಸಾವು: ಸಚಿವ ಸುಧಾಕರ್‌ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ

ಪಂಚರತ್ನ ಯೋಜನೆ ಹಾಗೂ ಮುಂದಿನ ಚುನಾವಣೆಗೆ ಪಕ್ಷ ಸಂಘಟನೆಗೆಗೊಳಿಸಬೇಕಿರುವ ಹಿನ್ನೆಲೆಯಲ್ಲಿ ನಾನು ರಾಜ್ಯಾದ್ಯಂತ ಪ್ರವಾಸ ಮಾಡಬೇಕಿರುವುದರಿಂದ ಇನ್ನು ಮುಂದೆ ಕ್ಷೇತ್ರಕ್ಕೆ ಹೆಚ್ಚಿನ ಬಾರಿ ಬರಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರಿಗೆ ಸಂಘಟನೆಯ ಜವಬ್ದಾರಿ ವಹಿಸುವ ನಿಟ್ಟಿನಲ್ಲಿ ಪ್ರವಾಸ ಕೈಗೊಂಡಿದ್ದೇನೆ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್