
ಬೆಂಗಳೂರು (ಏ.28): ಹಾಸನ ಸಂಸದ, ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ ಹಿನ್ನೆಲೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಇದರ ಜೊತೆಗೆ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಮಾತ್ರವಲ್ಲ ಹೆಚ್ ಡಿ ರೇವಣ್ಣ ಮೇಲೂ ಸಂತ್ರಸ್ಥೆ ದೂರು ನೀಡಿದ್ದಾರೆ. ಇನ್ನು ದೇಶದಾದ್ಯಂತ ಸುದ್ದಿಯಾಗಿರುವ ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರದಿಂದ ಐಪಿಎಸ್ ಅಧಿಕಾರಿ ಬಿಜಯ್ ಕುಮಾರ್ ಸಿಂಗ್ ನೇತೃತ್ವದ ಅಧಿಕಾರಿಗಳಾದ ಸುಮನ್ ಡಿ ಪೆನ್ನೆಕರ್ ಮತ್ತು ಸೀಮಾ ಲಾಠ್ಕರ್ ಸದಸ್ಯರುಳ್ಳ ಎಸ್ ಐಟಿ ತಂಡ ರಚನೆ ಮಾಡಲಾಗಿದೆ.
ಇನ್ನು ಪ್ರಕರಣ ಸಂಬಂಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿ, ನಾನಾಗಲಿ, ಹೆಚ್ ಡಿ ದೇವೇಗೌಡರಾಗಲಿ ಈ ರೀತಿಯ ಕೆಲಸ ಮಾಡಿಲ್ಲ. ಹೆಣ್ಣುಮಕ್ಕಳ ವಿಚಾರದಲ್ಲಿ ಗೌರವ ಕೊಟ್ಟು ಅವರ ಸಮಸ್ಯೆ ಬಗೆಹರಿಸಿ ಕಳಿಸಿದ್ದೇವೆ. ಈಗಾಗಲೇ ಮುಖ್ಯಮಂತ್ರಿಗಳು ಎಸ್ ಐಟಿ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಗಮನಿಸಿದ್ದೇನೆ.
ಹಾಸನ ಚುನಾವಣಾ ಪ್ರಚಾರ ವೇಳೆ ಪ್ರಕರಣ ಆರಂಭವಾಗಿದೆ. ವಾಸ್ತವಾಂಶ ಹೊರಬರಲಿ, ತನಿಖೆ ಆದ್ಮೇಲೆ ಸತ್ಯಾಸತ್ಯತೆ ಹೊರ ಬರಲಿದೆ. ನೆಲದ ಕಾನೂನಲ್ಲಿ, ತಪ್ಪು ಮಾಡಿದವನು ಉಪ್ಪು ತಿಂದವನು ನೀರು ಕುಡಿಯಲೇಬೇಕು. ನಾವು ತಪ್ಪು ಮಾಡಿದವರನ್ನು ಕ್ಷಮಿಸುವುದಿಲ್ಲ. ಹೀಗಾಗಿ ತನಿಖೆ ವರದಿ ಬರಲಿ, ಬಂದ್ಮೇಲೆ ಮಾತಾಡುತ್ತೇನೆ. ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡಿದ್ರೆ ನನಗೆ ಸಂಬಂಧವಿಲ್ಲ. ಎಸ್ ಐಟಿ ತನಿಖೆಗೆ ಆದೇಶಿಸಿದ್ದಾರೆ, ಎಸ್ ಐಟಿ ಅಧಿಕಾರಿಗಳನ್ನು ನೇಮಿಸಿದ್ದಾರೆ. ವಿದೇಶಕ್ಕೆ ಹೋಗಿದ್ರೆ ಕರ್ಕೊಂಡು ಬರೋ ಜವಾಬ್ದಾರಿ ಅವರದ್ದು, ನಾನು ಉತ್ತರಿಸಕ್ಕಾಗೋದಿಲ್ಲ, ಅವರೇ ಕರ್ಕೊಂಡು ಬರ್ತಾರೆ ಎಂದಿದ್ದಾರೆ.
ಅಪ್ಪ-ಮಗ ಇಬ್ಬರ ಮೆಲೂ ದೂರು ಕೊಟ್ಟ ಸಂತ್ರಸ್ಥೆ:
ಮಹಿಳಾ ಆಯೋಗಕ್ಕೆ ಸಂತ್ರಸ್ಥೆ ದೂರು ನೀಡಿದ್ದು, ಪ್ರಜ್ವಲ್ ರೇವಣ್ಣ ಮತ್ತು ಹೆಚ್ಡಿ ರೇವಣ್ಣ ಇಬ್ಬರ ಮೇಲೂ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿಕೆ ನೀಡಿದ್ದು, ಒಬ್ಬ ಸಂತ್ರಸ್ತೆ ಬಂದು ದೂರು ದಾಖಲು ಮಾಡಿದ್ದಾರೆ. ಲೈಂಗಿಕ ದೌರ್ಜನ್ಯ ಮತ್ತು ಬೆದರಿಕೆ ಹಾಕಿದ್ದಾರೆ ಅಂತ ದೂರು ಕೊಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಅವರ ಮೇಲೆ ದೂರು ದಾಖಲಿಸಿದ್ದಾರೆ. ಎಸ್ಐಟಿ ಗೆ ಎಲ್ಲ ದಾಖಲೆಗಳನ್ನ ನಾವು ನೀಡುತ್ತೇವೆ. ಯಾರೇ ಬಂದು ದೂರು ಕೊಟ್ಟರು ಅವರ ಬಗ್ಗೆ ಗೌಪ್ಯತೆ ಕಾಪಾಡುತ್ತೇವೆ. ಸರ್ಕಾರ ಈಗಾಗಲೇ ಅವರಿಗೆ ರಕ್ಷಣೆ ಕೊಡುವುದಾಗಿ ತಿಳಿಸಿದ್ದಾರೆ. ಅವರ ಕುಟುಂಬದವರು ಕೂಡ ಆ ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕು. ಯಾರು ಕೂಡ ಆ ವಿಡಿಯೋಗಳನ್ನ ವೈರಲ್ ಮಾಡುವ ಕೆಲಸ ಮಾಡಬಾರದು. ಸಂತ್ರಸ್ತ ಮಹಿಳೆಯರು ಧೈರ್ಯದಿಂದ ಬಂದು ದೂರು ದಾಖಲು ಮಾಡಬೇಕು. ಯಾರೇ ಬಂದು ದೂರು ದಾಖಲು ಮಾಡಿದ್ರು ನಾವು ನಿಮ್ಮ ಗೌಪ್ಯತೆ ಕಾಪಾಡುತ್ತೇವೆ ಎಂದಿದ್ದಾರೆ.
ಹಾಸನದಲ್ಲಿ ಮೊದಲ ಎಪ್ಐಆರ್ ದಾಖಲು:
ಹಾಸನ ಜಿಲ್ಲೆ ಹೊಳೆನರಸೀಪುರ ನಗರ ಹೊಳೆನರಸೀಪುರ ನಗರಠಾಣೆಯಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮೊದಲ ಎಫ್ ಐ ಆರ್ ದಾಖಲು ಮಾಡಲಾಗಿದೆ. ಸಂತ್ರಸ್ಥೆ ಮಹಿಳೆ ದೂರು ಆದರಿಸಿ ಕೇಸ್ ದಾಖಲು ಮಾಡಲಾಗಿದ್ದು, ಹಲವು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಬಗ್ಗೆ ಪೆನ್ ಡ್ರೈವ್ ಹರಿದಾಡಿತ್ತು. ಇದೀಗ ನೇರವಾಗಿ ಸಂಸದ ಪ್ರಜ್ವಲ್ ವಿರುದ್ದ ದೂರು ಸಂತ್ರಸ್ಥ ಮಹಿಳೆ ನೀಡಿದ್ದಾರೆ. ಲೈಂಗಿಕ ದೌರ್ಜನ್ಯ, ಪದೇ ಪದೆ ಹಿಂಬಾಲಿಸಿ ದೌರ್ಜನ್ಯ ಎಸಗಿದ ಬಗ್ಗೆ ಆರೋಪ. ಮಹಿಳೆಯ ಘನತೆಗೆ ಧಕ್ಕೆ ಆರೋಪಿ ಸೇರಿ ಹಲವು ಐಪಿಸಿ ಸೆಕ್ಷೆನ್ ಗಳಡಿ ಕೇಸ್ ದಾಖಲು. ಐಪಿಸಿ ಸೆಕ್ಷೆನ್ 354A , 354 D ಹಾಗು 509 ಅಡಿ ಕೇಸ್ ದಾಖಲು ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.