* ಪಕ್ಷ ತೊರೆಯುವಂಥ ಕೆಲಸಕ್ಕೆ ಮುಂದಾಗದಂತೆ ಸಲಹೆ ನೀಡಿದ ಗೌಡರು
* ಪಕ್ಷದ ಚಟುವಟಿಕೆಗಳಿಂದ ತುಸು ಅಂತರ ಕಾಪಾಡಿಕೊಳ್ಳುತ್ತಿರುವ ಪುಟ್ಟರಾಜು
* ಪುಟ್ಟರಾಜು ಜೆಡಿಎಸ್ ತೊರೆಯುವ ಸಾಧ್ಯತೆಯಿದೆ ಎಂಬ ವದಂತಿ
ಬೆಂಗಳೂರು(ಜೂ.23): ವಿವಿಧ ಕಾರಣಗಳಿಗಾಗಿ ಮುನಿಸಿಕೊಂಡಿರುವ ಪಕ್ಷದ ಮುಖಂಡರನ್ನು ಮನವೊಲಿಸಲು ಖುದ್ದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರೇ ಮುಂದಾಗಿದ್ದಾರೆ.
ಮಂಗಳವಾರ ತಮ್ಮ ನಿವಾಸಕ್ಕೆ ಆಗಮಿಸಿದ್ದ ಮಂಡ್ಯ ಜಿಲ್ಲೆ ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ಅವರೊಂದಿಗೆ ಸಮಾಲೋಚನೆ ನಡೆಸಿದ ಗೌಡರು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವಂಥ ಕೆಲಸಕ್ಕೆ ಮುಂದಾಗದಂತೆ ಸಲಹೆ ನೀಡಿದರು ಎನ್ನಲಾಗಿದೆ.
'ಕೊರೋನಾ ಪರೀಕ್ಷೆ ಮಾಡುವುದು ನಿಲ್ಲಿಸಿದರೆ ಜನ ಸಾಯುತ್ತಾರೆ'
ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಪುಟ್ಟರಾಜು ದಂಪತಿಗಳು ದೇವೇಗೌಡರ ಆಶೀರ್ವಾದ ಪಡೆಯಲು ಆಗಮಿಸಿದ್ದರು. ಕಳೆದ ಹಲವು ತಿಂಗಳುಗಳಿಂದ ಪಕ್ಷದ ಚಟುವಟಿಕೆಗಳಿಂದ ತುಸು ಅಂತರ ಕಾಪಾಡಿಕೊಳ್ಳುತ್ತಿರುವ ಪುಟ್ಟರಾಜು ಅವರು ಪಕ್ಷ ತೊರೆಯುವ ಸಾಧ್ಯತೆಯಿದೆ ಎಂಬ ವದಂತಿಯೂ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಗೌಡರು ಆಶೀರ್ವಾದ ಮಾಡುವುದರ ಜತೆಗೆ ಪಕ್ಷದಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದರು. ಇದಕ್ಕೆ ಪುಟ್ಟರಾಜು ಅವರು ಸಕಾರಾತ್ಮಕವಾಗಿ ಸ್ಪಂದಿಸಿ ನಿರ್ಗಮಿಸಿದರು ಎಂದು ತಿಳಿದು ಬಂದಿದೆ.