ಪಂಚರತ್ನ ಯಾತ್ರೆ: 'ಜೆಡಿಎಸ್‌ ಬಲವರ್ಧನೆಗೆ ಸಂಘಟಿತ ಪ್ರಯತ್ನ ಅಗತ್ಯ'

By Kannadaprabha NewsFirst Published Nov 21, 2022, 3:00 AM IST
Highlights

ಪಂಚರತ್ನ ಯಾತ್ರೆ ಬಹುದೊಡ್ಡ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಯ ಸಂಕಲ್ಪದೊಂದಿಗೆ ರೂಪಗೊಂಡಿದೆ. ಇಡೀ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹೊಸ ಚೈತನ್ಯ ನೀಡಲಿದೆ: ಹರೀಶ್‌ಗೌಡ 

ದೊಡ್ಡಬಳ್ಳಾಪುರ(ನ.21): ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದ ಸಂಘಟನೆಗೆ ಒತ್ತು ನೀಡಲಾಗಿದ್ದು, ಎಲ್ಲ ಹಂತಗಳಲ್ಲಿ ಸಂಘಟಿತರಾಗುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಬೇಕಿದೆ ಎಂದು ಜೆಡಿಎಸ್‌ ಮುಖಂಡ ಹರೀಶ್‌ಗೌಡ ಹೇಳಿದರು.

ತಾಲೂಕಿನ ಆರೂಢಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್‌ ಜನತಾ ಯುವ ಮಿತ್ರ ಹಾಗೂ ಪಂಚರತ್ನ ಯಾತ್ರೆ ಪೂರ್ವಭಾವಿ ಸಭೆ ಹಾಗೂ ಕಾರ‍್ಯಕರ್ತರ ಪಕ್ಷ ಸೇರ್ಪಡೆ ಕಾರ‍್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಂಚರತ್ನ ಯಾತ್ರೆ ಬಹುದೊಡ್ಡ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಯ ಸಂಕಲ್ಪದೊಂದಿಗೆ ರೂಪಗೊಂಡಿದೆ. ಇಡೀ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹೊಸ ಚೈತನ್ಯ ನೀಡಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಯಾತ್ರೆಯನ್ನು ಸಂಭ್ರಮದಿಂದ ಸ್ವಾಗತಿಸಿ ಅರ್ಥಪೂರ್ಣವಾಗಿ ಕಾರ‍್ಯಕ್ರಮಗಳ ಆಯೋಜನೆಗೆ ಸಿದ್ದತೆ ನಡೆದಿದೆ ಎಂದರು.

ವಿಧಾನಸಭಾ ಸಮರಕ್ಕೆ ಜೆಡಿಎಸ್ ಸಜ್ಜು: 'ಪಂಚರತ್ನ'ವೇ ಗೆಲುವಿಗೆ ಪಂಚಾಮೃತ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಪಕ್ಷದ ಎಲ್ಲ ಕಾರ‍್ಯಕರ್ತರ ವಿಶ್ವಾಸ ಪಡೆದು ಜೆಡಿಎಸ್‌ ಪಕ್ಷದ ಅಭ್ಯರ್ಥಿ ಜಯಗಳಿಸುವುದು ಅಗತ್ಯ. ತಾಲೂಕಿನಲ್ಲಿ ಪಕ್ಷಕ್ಕೆ ಉತ್ತಮ ನೆಲೆ ಇದೆ. ಕಾರ‍್ಯಕರ್ತರ ದೊಡ್ಡ ಶಕ್ತಿ ಪಕ್ಷಕ್ಕೆ ವರದಾನವಾಗಿದ್ದು, ತಾವೂ ಸ್ಪರ್ಧಾಕಾಂಕ್ಷಿಯಾಗಿರುವುದಾಗಿ ತಿಳಿಸಿದರು. ಜಿಪಂ ಮಾಜಿ ಸದಸ್ಯ ಸಿ.ವೇಣುಗೋಪಾಲ್‌ ಮಾತನಾಡಿ, ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಪಕ್ಷಕ್ಕೆ ಉತ್ತಮ ಭವಿಷ್ಯವಿದ್ದು, ಮುಖಂಡರು ಒಗ್ಗೂಡಿ ಕಾರ‍್ಯಕರ್ತರ ಸಂಘಟನೆಗೆ ಮುಂದಾಗಬೇಕು. ಕುಮಾರಸ್ವಾಮಿ ಮತ್ತು ದೇವೇಗೌಡರ ಅಭಿವೃದ್ದಿಪರ ಇಚ್ಛಾಶಕ್ತಿಯನ್ನು ಜನತೆ ವಿಶ್ವಾಸದಿಂದ ನಿರೀಕ್ಷಿಸುತ್ತಿದ್ದಾರೆ ಎಂದರು.

ಬಮೂಲ್‌ ಮಾಜಿ ನಿರ್ದೇಶಕ ಎಚ್‌.ಅಪ್ಪಯ್ಯಣ್ಣ ಮಾತನಾಡಿ, ರಾಜ್ಯದಲ್ಲಿ ಸದೃಢ ಹಾಗೂ ಜನಸ್ನೇಹಿ ಸರ್ಕಾರ ಅಗತ್ಯವಿದ್ದು, ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಬೇಕಿದೆ. ರಾಜ್ಯ ಮಟ್ಟದಲ್ಲಿ ಪಕ್ಷದ ಸಮರ್ಥ ಸಂಘಟನೆಗೆ ಒತ್ತು ನೀಡಿ ಪಂಚರತ್ನ ಯಾತ್ರೆ ಆಯೋಜಿಸಲಾಗಿದೆ. ಇದರ ಯಶಸ್ಸಿಗೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸಿದ್ದತೆಗಳನ್ನು ಕೈಗೊಳ್ಳುವುದು ಅಗತ್ಯ ಎಂದರು.

ಕಾರ‍್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ನರಸಿಂಹಯ್ಯ, ಟಿಎಪಿಎಂಸಿಎಸ್‌ ಮಾಜಿ ಅಧ್ಯಕ್ಷರಾದ ಆನಂದ್‌, ಅಶ್ವತ್ಥನಾರಾಯಣ್‌, ಮುಖಂಡರಾದ ಜಗನ್ನಾಥಾಚಾರ್‌, ಪ್ರಕಾಶ್‌, ಕೆಂಪೇಗೌಡ, ವಿವಿಧ ಹೋಬಳಿಗಳ ಮುಖಂಡರು ಹಾಜರಿದ್ದರು.
 

click me!