ಮೈಸೂರು ಅಳಿಯ ಎಲ್ಲವನ್ನೂ ಸರಿಪಡಿಸಬೇಕು: ಡಿಕೆಶಿ ಆಡಳಿತಕ್ಕೆ ಎಚ್‌.ವಿಶ್ವನಾಥ್‌ ಸಲಹೆಯೇನು?

Published : Jun 05, 2026, 12:28 AM IST
H Vishwanath

ಸಾರಾಂಶ

ಮೈಸೂರಿನ ಮಗನ ಅಧಿಕಾರ ಅವಧಿಯಲ್ಲಿ ಮಗ ಮತ್ತು ಪಟಾಲಂ ಜತೆ ಸೇರಿ ಆಡಳಿತ ದಾರಿ ತಪ್ಪಿತ್ತು. ಈಗ ಮೈಸೂರಿನ ಅಳಿಯ ಅದೆಲ್ಲವನ್ನೂ ಸರಿಪಡಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದರು.

ಮೈಸೂರು (ಜೂ.05): ಮೈಸೂರಿನ ಮಗನ ಅಧಿಕಾರ ಅವಧಿಯಲ್ಲಿ ಮಗ ಮತ್ತು ಪಟಾಲಂ ಜತೆ ಸೇರಿ ಆಡಳಿತ ದಾರಿ ತಪ್ಪಿತ್ತು. ಈಗ ಮೈಸೂರಿನ ಅಳಿಯ ಅದೆಲ್ಲವನ್ನೂ ಸರಿಪಡಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಕಿವಿಮಾತು ಹೇಳಿದರು. ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಮೈಸೂರು ಮಗನ ಆಡಳಿತ ಇತ್ತು. ಈಗ ಅಳಿಯನ ಆಡಳಿತ ಆರಂಭವಾಗಿದೆ. ಸಾಮಾನ್ಯ ಕಾರ್ಯಕರ್ತನಿಂದ ಮುಖ್ಯಮಂತ್ರಿ ಆಗಿ ಬೆಳೆದಿದ್ದಾರೆ. ಅವರಿಗೆ ಶುಭವಾಗಲಿ ಎಂದರು.

ಆಡಳಿತದಲ್ಲಿನ ಹಲವು ಅಂತರಗಳಿವೆ. ಅವುಗಳನ್ನು ಡಿ.ಕೆ. ಶಿವಕುಮಾರ್‌ ಅವರು ಸರಿಪಡಿಸಬೇಕು. ಡಿ.ಕೆ. ಶಿವಕುಮಾರ್‌ ಮತ್ತು ಹರಿಪ್ರಸಾದ್‌ ಒಳ್ಳೆಯ ಜೋಡಿ. ಅವರು ಕಾರ್ಯಕರ್ತರ ದುಃಖ ದುಮ್ಮಾನಗಳಿಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಕಾರಣ. ಪಕ್ಷ ಕಟ್ಟುವವರು ಕಾರ್ಯಕರ್ತರಾದರೆ ಹಾಳು ಮಾಡುವುದು ನಾಯಕರು ಎಂದು ಜರಿದರು.

ಮೈಸೂರು ಅಳಿಯನಿಂದ ಮೈಸೂರು ಸಾಕಷ್ಟು ನಿರೀಕ್ಷೆ ಮಾಡುತ್ತಿದೆ. ನಾನೂ ಕೂಡ ಮೈಸೂರಿನ ಅಳಿಯ ಎಂಬ ಅಭಿಮಾನದಿಂದಲೇ ಮಾತನಾಡುತ್ತಿದ್ದೇನೆ. ಈ ಹಿಂದೆ ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ‘ಮೈಸೂರು ಅಜೆಂಡಾ ಟಾಸ್ಕ್ ಫೋರ್ಸ್’ ರಚಿಸಿದ್ದರು. ಈಗ ಡಿ.ಕೆ. ಶಿವಕುಮಾರ್‌ ಅವರು 2050ರ ದೂರದೃಷ್ಟಿಯೊಂದಿಗೆ ಯೋಜನೆ ರೂಪಿಸಬೇಕು. ಈ ಸಂಬಂಧ ಅನುಭವಿಗಳ ತಂಡ ರಚಿಸಿ ಅವರ ಅನುಭವದ ಆಧಾರದ ಮೇಲೆ ಮುನ್ನಡೆಯಬೇಕು ಎಂದರು.

ಮೈಸೂರಿನಲ್ಲಿ ಈಗ ಲ್ಯಾಂಡ್‌ ಮಾಫಿಯಾ ಹೆಚ್ಚಾಗಿದೆ. ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಮಾಫಿಯಾಗೆ ಬೆಂಬಲ ನೀಡುತ್ತಿದ್ದಾರೆ. ಮೈಸೂರು ವೀಳ್ಯೆದೆಲೆ, ಅರಮನೆ, ಮೈಸೂರು ಪಾಕ್, ಮೈಸೂರು ಮಲ್ಲಿಗೆ ಹೀಗೆ ಅನೇಕ ವಿಷಯಗಳಿಗೆ ಪ್ರಪಂಚ ಮೈಸೂರಿನ ಕಡೆ ನೋಡುತ್ತಿದೆ. ಆದರೆ ಇಲ್ಲಿ ಲ್ಯಾಂಡ್‌ ಮಾಫಿಯಾ ಮಿತಿ ಮೀರುತ್ತಿದೆ ಎಂದರು.

ಅದೆಲ್ಲವನ್ನೂ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸರಿಪಡಿಸಬೇಕು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರಂತಹ ಧರ್ಮಾಧಿಕಾರಿಗಳನ್ನು ಭೇಟಿ ಮಾಡುವ ಸತ್ಸಂಪ್ರದಾಯವನ್ನು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ಸಿದ್ದರಾಮಯ್ಯ ಅವರ ಹೇಳಿಕೆಗಳು ಮತ್ತು ನಡೆಯಿಂದ ಕಾಂಗ್ರೆಸ್‌ ಎಂದರೆ ಹಿಂದೂ ವಿರೋಧಿ ಎಂಬ ಭಾವನೆ ಇತ್ತು. ನಿಮ್ಮ ನಡವಳಿಕೆ ಅದನ್ನು ಹೋಗಲಾಡಿಸಿದೆ. ನಿಮ್ಮ ನಡವಳಿಕೆ ಅದು ಹೋಗಲಾಡಿಸಿತು. ನಿಮ್ಮ ಹಿಂದು ಪರ ನಿಲುವು ಬಿಜೆಪಿಯನ್ನು ಅಣಕಿಸುವಂತೆ ಇದೆ ಎಂದರು.

ಯುವಕರ ಸ್ವರ್ಗವಾಗಬೇಕು

ನೀವು ಒಬ್ಬ ಉತ್ತಮ ಸಂಘಟಕ ಮತ್ತು ಆಡಳಿತಗಾರ ಎಂಬುದನ್ನು ಸಾಬೀತುಪಡಿಸಬೇಕು. ನಿಮ್ಮನ್ನು ಮೈಸೂರಿಗೆ ಕರೆದು ಜನತೆಯ ಪರವಾಗಿ ಗೌರವಿಸಬೇಕು ಎಂಬ ಉದ್ದೇಶವಿದೆ. ನಿವೃತ್ತರ ಸ್ವರ್ಗ ಎಂದು ಕರೆಯುತ್ತಿರುವ ಮೈಸೂರು ಯುವಕರ ಸ್ವರ್ಗವಾಗಬೇಕು. ಅಕ್ಷರ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಹಿಂದಿನ ಸರ್ಕಾರ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿತ್ತು. ಅದರ ಬಗ್ಗೆ ವಿಶೇಷ ಗಮನ ನೀಡಬೇಕು ಎಂದರು. ಗುಂಡೂರಾವ್‌ ಕಾಲದಿಂದಲೂ ರೈತರನ್ನು ಎದುರು ಹಾಕಿಕೊಂಡು ಯಾವ ಸರ್ಕಾರವೂ ಉಳಿದಿಲ್ಲ. ಆದ್ದರಿಂದ ಬಿಡದಿ ಟೌನ್‌ಶಿಪ್‌ ವಿಷಯದಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಎದುರು ಹಾಕಿಕೊಳ್ಳಬಾರದು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯಸಭೆಗೆ ಕಾಂಗ್ರೆಸ್‌ನ 5 ಅಭ್ಯರ್ಥಿಗಳು, ಖಾತೆ ಹಂಚಿಕೆ ಪೂರ್ಣ: ಡಿ.ಕೆ.ಶಿವಕುಮಾರ್ ಮಹತ್ವದ ಹೇಳಿಕೆ!
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಫೈನಲ್; ಯಾರಿಗೆ ಯಾವ ಖಾತೆ? ಇಲ್ಲಿದೆ ಪಟ್ಟಿ!