ಜನಪರ ಯೋಜನೆ ಮೆಚ್ಚಿ ಬಿಜೆಪಿ ಸೇರಿದ 'ಕೈ' ನಾಯಕಿ: ಕಾಂಗ್ರೆಸ್‌ಗೆ ಮುಖಭಂಗ

By Girish GoudarFirst Published Aug 17, 2022, 12:24 PM IST
Highlights

ಮಂಚೇನಹಳ್ಳಿ ಗ್ರಾಪಂ ಮತ್ತೆ ಕೇಸರಿಮಯವಾಗಿದ್ದು, ಇದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಚಿಕ್ಕಬಳ್ಳಾಪುರ(ಆ.17):  ತೀವ್ರ ಕಸರತ್ತು ನಡೆಸಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ಪಾಲಿನ ಖುಷಿ ಕೆಲವು ದಿನಗಳಿಗೆ ಮಾತ್ರ ಸೀಮಿತವಾಗಿದ್ದು, ಕಾಂಗ್ರೆಸ್‌ನಿಂದ ಮಂಚೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದವರು ಇದೀಗ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಬಿಜೆಪಿ ಸೇರುವ ಮೂಲಕ ಕಾಂಗ್ರೆಸ್ ಪಾಲಿಗೆ ತೀವ್ರ ಹಿನ್ನೆಡೆಯಾಗಿದೆ.

ಮಂಚೇನಹಳ್ಳಿ ಗ್ರಾಪಂ ಅಧ್ಯಕ್ಷರಾಗಿದ್ದ ಖಮರುನ್ನಿಸ್ಸಾ ಕಲಂದರ್ ಪಾಷಾ ಅವರು ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದರಿಂದ ಮಂಚೇನಹಳ್ಳಿ ಗ್ರಾಪಂ ಮತ್ತೆ ಕೇಸರಿಮಯವಾಗಿದ್ದು, ಇದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸಿದ್ದು ಸಿಎಂ ಆಗಲಿ ಎಂದ ರಾಮುಲು ರಾಜಕೀಯ ಲೆಕ್ಕಾಚಾರವೇ ಬೇರೆ ಇದೆಯಾ?

ಮಂಚೇನಹಳ್ಳಿ ತಾಲೂಕು ಮಾಡಿದ್ದು ಸಚಿವರು

2019ರಲ್ಲಿ ಉಪಚುನಾವಣೆ ಎದುರಾದ ಸಂದರ್ಭದಲ್ಲಿಯೇ ಮಂಚೇನಹಳ್ಳಿಯನ್ನು ಪ್ರತ್ಯೇಕ ತಾಲೂಕಾಗಿ ಘೋಷಣೆ ಮಾಡಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಹಂತಹಂತವಾಗಿ ಕ್ರಮ ಕೈಗೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ನಡೆದ ಮಂಚೇನಹಳ್ಳಿ ಗ್ರಾಪಂ ಅಧ್ಯಕ್ಷೀಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಖಮರುನ್ನಿಸ್ಸಾ ಕಲಂದರ್ ಪಾಷಾ ಅವರು ಆಯ್ಕೆಯಾಗಿದ್ದರು.
ಆದರೆ ಇದೀಗ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಅಭಿವೃದ್ಧಿ ಕಾರ್ಯಗಳನ್ನು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನಪರ ಯೋಜನೆಗಳಿಗೆ ಆಕರ್ಷಿತರಾಗಿರುವ ಮಂಚೇನಹಳ್ಳಿ ಗ್ರಾಪಂ ಅಧ್ಯಕ್ಷೆ ಖಮರುನ್ನಿಸ್ಸಾ ಕಲಂದರ್ ಪಾಷಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಇತ್ತೀಚಿಗಷ್ಟೇ ಹಲವು ಪಕ್ಷಗಳನ್ನು ತೊರೆದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಸಮ್ಮುಖದಲ್ಲಿ ಜಿಲ್ಲೆಯ ಗಂಗರೇಕಾಲುವೆ ಗ್ರಾಮದ ಹತ್ತಾರು ಮಂದಿ ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಗ್ರಾಪಂ ಅಧ್ಯಕ್ಷರು ಅದರಲ್ಲೂ ಅಲ್ಪಸಂಖ್ಯಾತರಾಗಿರುವ ಖಮರುನ್ನಿಸ್ಸಾ ಕಲಂದರ್ ಪಾಷಾ ಅವರು ಬಿಜೆಪಿ ಸೇರುವ ಮೂಲಕ ತಮ್ಮ ನಿಯತ್ತನ್ನು ಅಭಿವೃದ್ಧಿಪರವಾಗಿ ತೋರಿರುವುದು ಜಿಲ್ಲೆಯಲ್ಲಿ ಬಿಜೆಪಿಗೆ ಜನರಲ್ಲಿರುವ ಗೌರವ ಭಾವನೆಯನ್ನು ಸೂಚಿಸಲಿದೆ ಎಂದು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
 

click me!