
ಹುಬ್ಬಳ್ಳಿ (ಮಾ.3) : ಒಳ್ಳೆಯ ಸೇವೆ ನೀಡುವುದು ನಮ್ಮ ಕರ್ತವ್ಯ. ಅದು ಬಿಜೆಪಿಯವರ ಡಿಎನ್ಎದಲ್ಲಿದೆ ಎಂದು ಬಿಜೆಪಿ ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ, ಪ್ರಣಾಳಿಕೆ ಸಲಹಾ ಸಮಿತಿ ಸಹ ಸಂಚಾಲಕ ಸಮೀರ್ ಕಾಗಲಕರ(Sameer kagalkar) ಹೇಳಿದರು. ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಧಾರವಾಡ ವಿಭಾಗದ ಪ್ರಣಾಳಿಕೆ ಸಲಹಾ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಸರ್ಕಾರ ಜಾತಿ, ಧರ್ಮ ನೋಡದೇ ಎಲ್ಲ ಜನರಿಗೆ ವಿವಿಧ ಸೌಲಭ್ಯ ನೀಡಿದೆ. ಈಗ ಚುನಾವಣೆ ಸಮೀಪಿಸಿರುವುದರಿಂದ ಸರ್ಕಾರದ ಸಾಧನೆ ಜನರಿಗೆ ತಲುಪಿಸಬೇಕಾಗಿದೆ ಎಂದರು.
ಕುಟುಂಬದಂತಿರುವುದು ಬಿಜೆಪಿಯ ವೈಶಿಷ್ಟ್ಯ. ನಮಗೆ ನಮ್ಮದೇ ಆದ ತತ್ವ, ಸಿದ್ಧಾಂತವಿದೆ. ಸಮಾಜದ ಉದ್ಧಾರಕ್ಕೆ ಶ್ರಮಿಸುವುದು, ಜನರಿಗೆ ಒಳ್ಳೆಯದನ್ನು ಮಾಡಬೇಕೆನ್ನುವ ಗುರಿಯಿದೆ. ಹಾಗಾಗಿ ದೇಶದಲ್ಲಿ ಪಕ್ಷ ಬೆಳೆಯುತ್ತಿದೆ. ಸುಳ್ಳು-ಪೊಳ್ಳು ಭರವಸೆ ನೀಡುತ್ತಿರುವ ಕಾಂಗ್ರೆಸ್ ನೆಲಕಚ್ಚುತ್ತಿದೆ ಎಂದರು.
ಪ್ರಣಾಳಿಕೆ ರಚನೆಗೆ ಸಂವಾದ:
ವಿಧಾನಸಭಾ ಚುನಾವಣೆ(Assembly election) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರ(assembly constituency)ದಲ್ಲಿ ಪ್ರಣಾಳಿಕೆ ರಚನೆ ಕುರಿತು ಸಂವಾದ ನಡೆಸಬೇಕು. ಎಲ್ಲ ವರ್ಗಗಳ ಜನರ ಸಲಹೆ ಪಡೆಯಬೇಕು. ಪಕ್ಷದ ಕಾನೂನು ಪ್ರಕೋಷ್ಠ, ವೈದ್ಯಕೀಯ ಪ್ರಕೋಷ್ಠ, ವಿದ್ಯಾರ್ಥಿ ಪ್ರಕೋಷ್ಠಗಳ ಸಲಹೆ ಪಡೆದು ಮಾ.25ರೊಳಗೆ ಜಿಲ್ಲಾ ಉಸ್ತುವಾರಿಗಳ ನೇತೃತ್ವದಲ್ಲಿ ಸಭೆ ನಡೆಸಬೇಕು. ರಾಜ್ಯಾದ್ಯಂತ ಒಟ್ಟು 5 ಲಕ್ಷ ಗುಂಪು ಸಭೆ ಮಾಡಬೇಕು. 50 ಸೆಕ್ಟರ್ಗಳ ಸಭೆಯಲ್ಲಿ ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಾಮಮಂದಿರ ನಿರ್ಮಿಸುತ್ತಿರುವುದು, ಆರ್ಟಿಕಲ್ 370 ರದ್ದು ಮಾಡಿರುವುದೇ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಲಕ್ಷಾಂತರ ಕುಟುಂಬಕ್ಕೆ ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ. ಶೌಚಾಲಯ ನಿರ್ಮಿಸಿಕೊಡಲಾಗಿದೆ. ಕಾರ್ಯಕರ್ತರು ಸರ್ಕಾರದ ಸಾಧನೆಯನ್ನು ಜನರ ಮನೆಬಾಗಿಲಿಗೆ ತಲುಪಿಸಬೇಕು. ಜನರ ಮನಸು ಅರಿತು ಅವರ ಬಳಿಹೋಗಬೇಕಾಗಿದೆ ಎಂದರು.
ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಬೂತ್ ಮಟ್ಟದಲ್ಲಿ ಜನರನ್ನು ತಲುಪುವಲ್ಲಿ ಬಿಜೆಪಿ ಕಾರ್ಯಕರ್ತರು ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಮುಂಬರುವ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡಬೇಕಾಗಿದೆ. ಮತ್ತೆ ಬಿಜೆಪಿ ಸರ್ಕಾರ ಬರಲಿದೆ. ಜನರಿಗೆ ಮುಂದೆ ಮಾಡಬೇಕಾದ ಕೆಲಸಗಳನ್ನು ಈಗಲೇ ನಾವು ತಿಳಿಸಬೇಕು. ಜನರ ಅಭಿಪ್ರಾಯ ಸಂಗ್ರಹಿಸುವ ಮೂಲಕ ಪ್ರಣಾಳಿಕೆ ರಚಿಸಬೇಕಾಗಿದೆ ಎಂದರು.
ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಬಸವರಾಜ ಕುಂದಗೋಳಮಠ, ಶಾಸಕರಾದ ಅರುಣಕುಮಾರ ಜಿ., ವಿರೂಪಾಕ್ಷಪ್ಪ ಬಳ್ಳಾರಿ, ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಮಾಜಿ ಶಾಸಕಿ ಸೀಮಾ ಮಸೂತಿ, ಸುರೇಂದ್ರಗೌಡ, ವಿಪ ಮಾಜಿ ಸದಸ್ಯ ಶಿವರಾಜ ಸಜ್ಜನ, ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ಚಂದ್ರಶೇಖರ ಗೋಕಾಕ, ಮಹೇಶ ನಾಲವಾಡ, ರವಿ ನಾಯಕ ಇತರರಿದ್ದರು. ಹಾವೇರಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಸ್ವಾಗತಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.