
ಬೆಂಗಳೂರು (ನ.13): ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ. ವಿಜಯೇಂದ್ರ ಅವರು ಆಯ್ಕೆಯಾದ ಬೆನ್ನಲ್ಲಿಯೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮನೆಗೆ ತೆರಳಿ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ನಿಮ್ಮ ಆಶೀರ್ವಾದ ಸಲಹೆ ಬೇಕೆಂದ ವಿಜಯೇಂದ್ರ ಅವರಿಗೆ, ಮೂರು ದಿನದ ಹಿಂದಿನ ಮಾತು ಬೇರೆ. ನನ್ನ ಮಾರ್ಗದರ್ಶನ ನಿಮಗೆ ಇನ್ನುಮುಂದೆ ಸದಾ ಇರುತ್ತದೆ. ಈ ಬಗ್ಗೆ ಎಳ್ಳಷ್ಟೂ ಸಂಶಯ ಬೇಡವೆಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಅಭಯವನ್ನು ನೀಡಿದ್ದಾರೆ.
ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯುವನಾಯಕ ಬಿ.ವೈ. ವಿಜಯೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ವಿವಿಧ ಮಠ ಮಾನ್ಯಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ವಿಜಯೇಂದ್ರ ಅವರು ಸೋಮವಾರ ಬೆಳಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆಯಲು ತೆರಳಿದ್ದರು. ಈ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಅವರು ವಿಜಯೇಂದ್ರ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ನಂತರ ದೇವೇಗೌಡ ಆಶೀರ್ವಾದ ಪಡೆದ ವಿಜಯೇಂದ್ರ ಅವರು, ನನಗೆ ಮಾರ್ಗದರ್ಶನ ಬೇಕು ಎಂದು ವಿಜಯೇಂದ್ರ ಅವರು ಮನವಿ ಮಾಡಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ದೇವೇಗೌಡರು, ನನ್ನ ಮಾರ್ಗದರ್ಶನ ನಿಮಗೆ ಇನ್ನುಮುಂದೆ ಸದಾ ಇರುತ್ತದೆ. ಈ ಬಗ್ಗೆ ಎಳ್ಳಷ್ಟೂ ಸಂಶಯ ಬೇಡ. ನಾನು ನಡ್ಡಾ ಅವರ ಮನೆಗೆ ಹೋಗಿ ಮಾತನಾಡಿದಾಗ ಶೀಘ್ರ ಅಧ್ಯಕ್ಷರ ಆಯ್ಕೆ ಮಾಡಿ ಎಂದು ತಿಳಿಸಿದ್ದೆನು. ಈಗ ನಿಮ್ಮ ಆಯ್ಕೆಯಾಗಿರುವುದು ಉತ್ತಮವಾಗಿದೆ. ಒಂದು ರಾಷ್ಟ್ರೀಯ ಪಕ್ಷದಲ್ಲಿ ದೊಡ್ಡ ಹುದ್ದೆಯನ್ನು ಚಿಕ್ಕ ವಯಸ್ಸಿನ ನಿಮಗೆ ನೀಡಿದ್ದಾರೆ. ರಾಜ್ಯದಲ್ಲಿ ಪಕ್ಷ ಸಂಘಟನೆಯ ಬಗ್ಗೆ ನಿಮ್ಮ ತಂದೆಯ ರೀತಿ ಕೆಲಸ ಮಾಡು ಎಂದು ಹೆಚ್.ಡಿ. ದೇವೇಗೌಡ ಅವರು ಅಭಯವನ್ನು ನೀಡಿದ್ದಾರೆ.
ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡಿರುವುದು ಒಳ್ಳೆಯ ಬೆಳವಣಿಗೆ: ಜಿ.ಟಿ.ದೇವೇಗೌಡ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ಮಾಜಿ ಪ್ರಧಾನಿ ಸನ್ಮಾನ್ಯ ದೇವೇಗೌಡರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯ ಕೋರಿದ್ದೇನೆ. ಬಹಳ ಹೆಮ್ಮೆ ಪಟ್ಟಿದ್ದಾರೆ. ರಾಷ್ಟ್ರೀಯ ಪಕ್ಷದಲ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ದೊಡ್ಡ ಜವಾಬ್ದಾರಿ ಕೊಟ್ಟಿದಾರೆ. ಯಡಿಯೂರಪ್ಪ ಅವರ ರೀತಿ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡು ತಂದೆಯ ರೀತಿ ಕೆಲಸ ಮಾಡು ಎಂದಿದ್ದಾರೆ. ಮುಂದೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಯಲ್ಲಿ ಕೆಲಸ ಮಾಡೋಣ. ಒಟ್ಟಾಗಿ ಕೆಲಸ ಮಾಡಬೇಕಿದೆ. ಏನೇ ಸಣ್ಣ ಪುಟ್ಟ ವ್ಯತ್ಯಾಸ ಗಳು ಆದರೂ ಸರಿ ಮಾಡಿಕೊಂಡು ಹೋಗೋಣ ಎಂದಿದ್ದಾರೆ ಎಂದಿದ್ದಾರೆ.
ನಮ್ಮ ರಾಜ್ಯದಲ್ಲಿ ರಾಜಕೀಯ ಹೋರಾಟ ಅಂದಾಗ ನೆನಪಾಗೋದು ಎರಡೇ ಹೆಸರುಗಳು. ಒಂದು ದೇವೇಗೌಡರು, ಮತ್ತೊಂದು ಯಡಿಯೂರಪ್ಪ ಅವರದ್ದಾಗಿದೆ. ಈ ವಯಸ್ಸಿನಲ್ಲಿ ದೇವೇಗೌಡರ ಹೋರಾಟ ನಮಗೆಲ್ಲಾ ಸ್ಪೂರ್ತಿಯಾಗಿದ್ದಾರೆ.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ನನ್ನಿಂದಾಗಿ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದರು ಎಂಬುದು ಸುಳ್ಳು: ರೇಣುಕಾಚಾರ್ಯ
ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಯುವಕರಿಗೆ ಹೊಸ ಹುರುಪು ಮೂಡಿದೆ. ದೇವೇಗೌಡರ ಭೇಟಿ ಮಾಡಿ ಶುಭಾಶಯ ಕೋರಿದ್ದಾರೆ. ಮೈತ್ರಿಯಲ್ಲಿ ಏನೇ ವ್ಯತ್ಯಾಸಗಳು ಆದರೂ ಒಂದಾಗಿ ಹೊಂದಿಕೊಂಡು ಹೋಗಬೇಕಿದೆ. ಮತ್ತೆ ಮೋದಿಯವರನ್ನು ಪ್ರಧಾನಿ ಮಾಡಲು ಕೆಲಸ ಮಾಡಬೇಕಿದೆ.
- ಪ್ರಜ್ವಲ್ ರೇವಣ್ಣ, ಸಂಸದ
ಇದರ ನಂತರ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಮನೆಗೆ ತೆರಳಿಗೆ ಬಿ.ವೈ. ವಿಜಯೇಂದ್ರ ಅವರು ಆಶೀರ್ವಾದ ಪಡೆದುಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.