Belagavi: ಬಿಜೆಪಿ ಸಭೆಗೆ ರಮೇಶ್ ಜಾರಕಿಹೊಳಿ ಹಾಜರ್: 'ಅಧ್ಯಕ್ಷರಿದ್ದಾರೆ ಅಂತಾ ಬಂದೇ' ಅಂದ್ರು ಸಾಹುಕಾರ್!

By Govindaraj SFirst Published May 26, 2022, 10:56 PM IST
Highlights

• ನಳಿನ್‌ಕುಮಾರ್ ಕಟೀಲ್ ಮನವಿ ಮಾಡಿದರೂ ವೇದಿಕೆಗೆ ತೆರಳದ ರಮೇಶ್ ಜಾರಕಿಹೊಳಿ
• ಮೊದಲ ಸಾಲಿನಲ್ಲಿ ಶ್ರೀಮಂತ ಪಾಟೀಲ್ ಪಕ್ಕ ಕುಳಿತ ಸಾಹುಕಾರ್
• 'ಬರಲ್ಲ ಅಂದಿದ್ದರಲ್ರಿ?' ಎಂದು ರಮೇಶ್ ಜಾರಕಿಹೊಳಿ ಪ್ರಶ್ನಿಸಿದ ಶ್ರೀಮಂತ ಪಾಟೀಲ್

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಮೇ.26): ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಜೂನ್ 13ರಂದು ಚುನಾವಣೆ ನಡೆಯಲಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯನ್ನೊಳಗೊಂಡ ವಾಯುವ್ಯ ಕ್ಷೇತ್ರದಲ್ಲಿ ಬೆಳಗಾವಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತದಾರರು ಇದ್ದಾರೆ. ಚುನಾವಣೆ ಗೆಲ್ಲಲು ಬೆಳಗಾವಿ ಜಿಲ್ಲೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳ ಚಿತ್ತ ಬೆಳಗಾವಿಯ ಮೇಲೆ ನೆಟ್ಟಿದೆ. ಅದರಲ್ಲೂ ಬೆಳಗಾವಿ ಜಿಲ್ಲಾ ಬಿಜೆಪಿ ಭಿನ್ನಮತ ವಿಚಾರ ಬಿಜೆಪಿ ಅಭ್ಯರ್ಥಿಗಳಿಗೆ ತಲೆನೋವಾಗಿದೆ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಯುವ್ಯ ಕ್ಷೇತ್ರದಲ್ಲಿ ಒಗ್ಗೂಡಿ ಗೆಲ್ಲಲು ಸಭೆ ಕರೆದಿದ್ದರು.  

ಕಳೆದ ಬಾರಿ ನಡೆದ ಬೆಳಗಾವಿ ಜಿಲ್ಲೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠಗೆ ಸೋಲಾದ ರೀತಿ ಪುನರಾವರ್ತನೆ ಆಗಬಾರದು, ಎಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಮತ ತರಬೇಕು ಅಂತಾ ಹೇಳಿದ್ದರು. ಈ ಎರಡೂ ಸಭೆಗೆ ಗೈರಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಆಗಮಿಸಿ ಹಾಲಿ, ಮಾಜಿ ಶಾಸಕರು, ಸಂಸದರು, ಎಂಎಲ್‌ಸಿಗಳ ಸಭೆ ನಡೆಸಿದ್ರು‌. ಸಭೆಗೆ ಆಗಮಿಸಿದ ರಮೇಶ್ ಜಾರಕಿಹೊಳಿ ವೇದಿಕೆ ಮುಂಭಾಗದ ಎರಡನೇ ಸಾಲಿನಲ್ಲಿ ಪಕ್ಷದ ಪದಾಧಿಕಾರಿಗಳ ಜೊತೆ ಕುಳಿತಿದ್ದರು. 

ಬೆಳಗಾವಿ ಸಾಹುಕಾರ್ ಹೊಸ ಆಟ, ಬಿಜೆಪಿ ಹೈಕಮಾಂಡ್ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಪ್ಲಾನ್

ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಸಚಿವರಾದ ಗೋವಿಂದ ಕಾರಜೋಳ, ರಮೇಶ್ ಜಾರಕಿಹೊಳಿ ಸೇರಿ ಇತರರು ಕುಳಿತಿದ್ದರು. ರಮೇಶ್ ಜಾರಕಿಹೊಳಿ ಕಾಣುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ವೇದಿಕೆಗೆ ಬನ್ನಿ ಅಂತಾ ಕರೆದರು. ಈ ವೇಳೆ ವೇದಿಕೆಗೆ ತೆರಳದೇ ರಮೇಶ್ ಜಾರಕಿಹೊಳಿ ವೇದಿಕೆ ಮುಂಭಾಗದ ಮೊದಲ ಸಾಲಿನಲ್ಲಿ ಶ್ರೀಮಂತ ಪಾಟೀಲ್ ಪಕ್ಕ ಹೋಗಿ ಕುಳಿತರು. ಬಳಿಕ ಶ್ರೀಮಂತ ಪಾಟೀಲ್ 'ಬರಲ್ಲ ಅಂದಿದ್ರಲ್ರಿ?' ಎಂದು ರಮೇಶ್ ಜಾರಕಿಹೊಳಿಗೆ ಪ್ರಶ್ನಿಸಿದಾಗ, 'ಅಧ್ಯಕ್ಷರು ಬಂದಿದ್ದಾರೆ ಅದಕ್ಕೆ ಬಂದಿದೀನಿ' ಅಂತಾ ಹೇಳಿದ್ದು ಕಂಡು ಬಂತು. ಸಭೆ ಬಳಿಕ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ತೆರಳಿದ ರಮೇಶ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು ಬಳಿಕ ತೆರಳಿದರು. ನಾಮಪತ್ರ ಸಲ್ಲಿಕೆ ಬಳಿಕ ‌ನಡೆದ ಬಿಜೆಪಿ ಸಮಾವೇಶಕ್ಕೆ ರಮೇಶ್ ಜಾರಕಿಹೊಳಿ ಆಗಮಿಸಲಿಲ್ಲ.‌

ಸಾಲು ಸಾಲು ಆರೋಪ ಇದ್ದರೂ ರಮೇಶ್ ಜಾರಕಿಹೊಳಿ ಮೌನವೇಕೆ: ರಮೇಶ್ ಜಾರಕಿಹೊಳಿ- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯೆ ಶುಗರ್ ವಾರ್ ಶುರುವಾಗಿದ್ದು, ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದ ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ಶಾಕ್ ನೀಡಿದೆ‌. ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಪೆಕ್ಸ್ ಸೇರಿ ಇತರ ಕೋ-ಆಪರೇಟಿವ್ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ಸಾಲ ಪಡೆದು ಮರುಪಾವತಿ ಮಾಡಿಲ್ಲವೆಂಬ ಆರೋಪ ಕೇಳಿಬಂದಿತ್ತು. ಸದ್ಯ ರಮೇಶ್ ಜಾರಕಿಹೊಳಿಗೆ ತಮ್ಮ ಒಡೆತನದ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ ಸಾಲ ಬಾಕಿ ವಿಚಾರ ಮುಳುವಾಗುತ್ತಾ ಎಂಬ ಚರ್ಚೆ ರಾಜ್ಯ ರಾಜಕಾರಣದಲ್ಲಿ ಶುರುವಾಗಿದೆ. 

Karnataka Politics: ಚಿಕ್ಕಮಕ್ಕಳಲ್ಲಿ ಕೋಮು ವಿಷಬೀಜ ಬಿತ್ತುತ್ತಿದೆ ಬಿಜೆಪಿ: ಡಿಕೆಶಿ

ಸಂಪುಟ ವಿಸ್ತರಣೆ ಮುನ್ಸೂಚನೆ ಬೆನ್ನಲ್ಲೇ ರಾಜಕೀಯ ವಿರೋಧಿಗಳು ಸಾಲು ಸಾಲು ಆರೋಪ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, 'ಸಾಹುಕಾರ್ ಗಳೆಲ್ಲಾ ಪಾಪರ್ ಆಗುತ್ತಿದ್ದಾರೆ, ಭಿಕ್ಷುಕರಾಗುತ್ತಿದ್ದಾರೆ' ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಕುರಿತು ವ್ಯಂಗ್ಯವಾಡಿದ್ದರು. ಸೂಕ್ತ ಸಂದರ್ಭದಲ್ಲಿ ತಮ್ಮ ವಿರುದ್ಧದ ಆರೋಪಕ್ಕೆ ತಿರುಗೇಟು ನೀಡೋದಾಗಿ ಆಪ್ತರ ಬಳಿ ರಮೇಶ್ ಜಾರಕಿಹೊಳಿ ಹೇಳಿಕೊಂಡಿದ್ದಾರಂತೆ. ಸಂಪುಟ ವಿಸ್ತರಣೆ ವೇಳೆ ವಿವಾದ ಮೈಮೇಲೆ ಎಳೆದುಕೊಳ್ಳೋದು ಬೇಡ ಎಂದು ಈ ನಿರ್ಧಾರ ಕೈಗೊಂಡಿದ್ದಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತ ಮೂಲಗಳು ಮಾಹಿತಿ ನೀಡಿವೆ.

click me!