ಸಿದ್ದರಾಮಯ್ಯಗೆ ಬಿಜೆಪಿ ಬಿಟ್ಟು ಬೇರೆ ಮಾತಾಡಲು ಏನಿದೆ?: ಕೆ.ಎಸ್‌.ಈಶ್ವರಪ್ಪ

Published : Nov 01, 2022, 12:57 AM IST
ಸಿದ್ದರಾಮಯ್ಯಗೆ ಬಿಜೆಪಿ ಬಿಟ್ಟು ಬೇರೆ ಮಾತಾಡಲು ಏನಿದೆ?: ಕೆ.ಎಸ್‌.ಈಶ್ವರಪ್ಪ

ಸಾರಾಂಶ

ಸಿದ್ದರಾಮಯ್ಯ ಬಿಜೆಪಿ ಬಿಟ್ಟು ಬೇರೆ ಏನಾದರೂ ಬಾಯಿ ಬಿಡ್ತಿದ್ದಾರೋ? ಬೆಳಗ್ಗೆಯಿಂದ ಬಾಯಿಬಿಟ್ಟರೆ ಬಿಜೆಪಿ, ರಾತ್ರಿ ಕನಸಿನಲ್ಲೂ ಬಿಜೆಪಿ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದರು.

ಶಿವಮೊಗ್ಗ (ನ.01): ಸಿದ್ದರಾಮಯ್ಯ ಬಿಜೆಪಿ ಬಿಟ್ಟು ಬೇರೆ ಏನಾದರೂ ಬಾಯಿ ಬಿಡ್ತಿದ್ದಾರೋ? ಬೆಳಗ್ಗೆಯಿಂದ ಬಾಯಿಬಿಟ್ಟರೆ ಬಿಜೆಪಿ, ರಾತ್ರಿ ಕನಸಿನಲ್ಲೂ ಬಿಜೆಪಿ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕನಸಿನಲ್ಲಿಯೂ ನರೇಂದ್ರ ಮೋದಿ ಎನ್ನುತ್ತಾರೆ. ಹೀಗೆ ಅವರು ಬಿಜೆಪಿ ವಿರುದ್ಧ ಮಾತನಾಡುತ್ತಲೇ ಇದ್ದರೆ ನಾವೆಲ್ಲ ಬಾಯಲ್ಲಿ ಬಾಯಲ್ಲಿ ಬೆಣ್ಣೆ ಇಟ್ಟುಕೊಳ್ಳಬೇಕಾ? ಅವರು ಹೇಳಿದಕ್ಕೆ ಉತ್ತರ ಕೊಡಬಾರದಾ? ಅವರ ಟೀಕೆಗೆ ಉತ್ತರ ಕೊಡಬೇಕಲ್ಲ ನಾವು. ಹೀಗೆ ಉತ್ತರ ಕೊಟ್ಟರೆ ಅವರು ಭಯ ಅಂದುಕೊಂಡರೆ ನಾನೇನು ಹೇಳಲಿ ಎಂದು ಕುಟುಕಿದರು.

ಬಿಜೆಪಿ ಕಂಡರೆ ಅಷ್ಟೊಂದು ಭಯ ಅವರಿಗೆ. ಆದರೆ, ನಮಗೆ ಯಾರ ಭಯವೂ ಇಲ್ಲ. ಆನೆ ಹೋಗಬೇಕಾದರೆ ಪಕ್ಕದಲ್ಲಿ ಯಾವುದೋ ನಾಯಿ ಬೊಗಳಿದರೆ ನಮಗೇನು ಲೆಕ್ಕಕ್ಕಿಲ್ಲ. ಬಿಜೆಪಿ ಇಡೀ ಪ್ರಪಂಚದಲ್ಲೇ 10 ಕೋಟಿಗೂ ಹೆಚ್ಚು ಸದಸ್ಯತ್ವ ಹೊಂದಿರುವ ಪಕ್ಷ. ನರೇಂದ್ರ ಮೋದಿ ವಿಶ್ವನಾಯಕ. ಇಷ್ಟೊಂದು ಶಕ್ತಿ ಬಿಜೆಪಿಗೆ ಇದೆ. ಹೀಗಿರುವಾಗ ಯಾರೋ ಟೀಕೆ ಮಾಡಿದ ತಕ್ಷಣ ಬಾಯಿ ಮುಚ್ಚಿಕೊಂಡು ಇರಬೇಕಾ ಎಂದು ಪ್ರಶ್ನಿಸಿದರು. ಆ ಪೈಲ್ವಾನ್‌ ನನಗೆ ಹೆದರಿಕೊಂಡು ಹೋಗ್ತಿದ್ದಾನೆ ಅಂತಾ ಮೂಲೆಯಲ್ಲಿ ಬಿದ್ದಿರೋನು ಯಾವನೋ ಹೇಳಿದರೆ ನಾನೇನು ಹೇಳಲಿ. ಪೈಲ್ವಾನ್‌, ಪೈಲ್ವಾನನೇ. ಮೂಲೆಯಲ್ಲಿ ಬಿದ್ದಿರೋನು ಮೂಲೆಯಲ್ಲಿ ಬಿದ್ದಿರೋನೆ. ಬಿಜೆಪಿ ಶಕ್ತಿಶಾಲಿಯಾಗಿ ಇಡೀ ದೇಶದಲ್ಲಿದೆ. ಕಾಂಗ್ರೆಸ್‌ ಎಲ್ಲಿದೆ? ಎಲ್ಲಾ ರಾಜ್ಯದಲ್ಲೂ ಕಾಂಗ್ರೆಸ್‌ ಸೋತು ಸೋತು ಸುಣ್ಣವಾಗಿದೆ ಎಂದು ಲೇವಡಿ ಮಾಡಿದರು.

ಈಶ್ವರಪ್ಪ ಬಾಯ್‌ಬಿಟ್ರೆ ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಯಾಗುತ್ತೆ: ಸಿ.ಎಂ.ಇಬ್ರಾಹಿಂ ಆರೋಪ

ಜೆಡಿಎಸ್‌ ಬಗ್ಗೆ ಮಾತಿಲ್ಲ: ಜೆಡಿಎಸ್‌ ಪಂಚರಥ ಯಾತ್ರೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು ಅವರದೊಂದು ರಾಜಕೀಯ ಪಕ್ಷ ಇದೆ. ಅವರ ಬಗ್ಗೆ ಮಾತನಾಡಲು ನಾನು ಯಾರು? ಮುಂದಿನ ಸಿಎಂ ನಾನೇ ಅಂತಾ ಹೇಳಿಕೊಳ್ಳಲಿ, ಮುಂದಿನ ಪ್ರಧಾನಿ ನಾನೇ ಅಂತಾ ಹೇಳಿಕೊಳ್ಳಲಿ ನಮ್ಮ ಅಭ್ಯಂತರ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಯಾರು ಬೇಕಾದರೂ ಸಿಎಂ ಆಗಬಹುದು. ಜನಬೆಂಬಲ ಕೊಡಬೇಕು ಅಷ್ಟೇ ಎಂದು ವ್ಯಂಗ್ಯವಾಡಿದರು.

ತಾಕತ್‌ ಇದ್ದರೆ 40 ಪರ್ಸೆಂಟ್‌ ಬಗ್ಗೆ ದಾಖಲೆ ಕೊಡಿ: 40 ಪರ್ಸೆಂಟ್‌, 40 ಪರ್ಸೆಂಟ್‌ ಅಂತಾ ಹೇಳುವ ಇವರಿಗೆ ಇದೊಂದು ಚಟ ಆಗಿದೆ. ಒಂದು ಇಲಾಖೆ, ಒಬ್ಬ ಮಂತ್ರಿ ಇಷ್ಟುಕೇಳಿದ್ದಾನೆ ಅಂತಾ ತಾಕತ್‌ ಇದ್ದವನು ದಾಖಲಾತಿ ಕೊಡಲಿ. ಲೋಕಾಯುಕ್ತ ಅಥವಾ ಮಾಧ್ಯಮದವರಿಗೆ ದಾಖಲೆ ಕೊಡಲಿ. ಶಕ್ತಿಹೀನರು, ದುರ್ಬಲರು ಈ ರೀತಿ 40 ಪರ್ಸೆಂಟ್‌ ಅಂತಾ ಹೇಳ್ತಿದ್ದಾರೆ ಎಂದು ಗುತ್ತಿಗೆದಾರರೊಬ್ಬರ ಭ್ರಷ್ಟಾಚಾರ ಕುರಿತು ಪತ್ರ ಬರೆದ ವಿಚಾರ ಕುರಿತು ಪ್ರತಿಕ್ರಿಯಿಸಿದರು.

ಮುಸ್ಲಿಂ ಗೂಂಡಾಗಳಿಗೆ ತಾಕತ್ತು ಕೊಟ್ಟಿದ್ದೆ ಕಾಂಗ್ರೆಸ್‌: ಶಿವಮೊಗ್ಗದಲ್ಲಿ ಗಲಾಟೆಗೆ ಈಶ್ವರಪ್ಪ ಕಾರಣ, ಉದ್ಯಮಿಗಳು ಹೂಡಿಕೆ ಹೂಡಲು ಬರುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಗಲಾಟೆ ಮಾಡಿಸ್ತಿರೋದೇ ಕಾಂಗ್ರೆಸ್‌ನವರು. ಮುಸಲ್ಮಾನ್‌ ಗೂಂಡಾಗಳಿಗೆ ತಾಕತ್‌ ಇರಲಿಲ್ಲ. ಅವರಿಗೆ ತಾಕತ್‌ ಕೊಟ್ಟವರೇ ಕಾಂಗ್ರೆಸ್‌ನವರು. ಜೈಲಿನಲ್ಲಿ ಇದ್ದವರನ್ನೆಲ್ಲಾ ಕೇಸ್‌ ವಾಪಸ್‌ ತೆಗೆಸಿ, ಎಲ್ಲ ಮುಸಲ್ಮಾನ ಗೂಂಡಾಗಳು ರಸ್ತೆಗೆ ಬರಲು ಇದೇ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಕಾರಣ. ಜೈಲಿನಲ್ಲಿದ್ದ ಮುಸ್ಲಿಂ ಗೂಂಡಾಗಳು ಹೊರಗೆ ಬರುತ್ತಿದ್ದ ಹಾಗೆ ಹರ್ಷನಂತಹ ವ್ಯಕ್ತಿಯನ್ನು ಕಳ್ಳತನದಿಂದ ರಾತ್ರೋ ರಾತ್ರಿ ಕೊಲೆ ಮಾಡಿದರು. ಈ ರೀತಿ ಗೂಂಡಾಗಳು ಬೆಳೆಯಲು ಕಾರಣ ಕಾಂಗ್ರೆಸ್‌. ಅವರು ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆದ ನಂತರ ಹೂಡಿಕೆಗಳು ಹೇಗೆ ಬರುತ್ತದೆ ನೋಡಿ. ಯಾರಾದ್ರೂ ಹೂಡಿಕೆ ಮಾಡಬೇಕಾದರೆ ಸೌಲಭ್ಯ ಇದೆಯಾ? ಏರ್‌ಪೋರ್ಚ್‌ ಇದೆಯಾ, ಮೂಲಸೌಕರ್ಯ ಇದೆಯಾ ನೋಡಿ ಹೂಡಿಕೆ ಮಾಡ್ತಾರೆ. ಇದ್ದಕ್ಕಿದ್ದ ಹಾಗೆ ಬಂದು ಐದೋ ಹತ್ತೋ ಸಾವಿರ ಹೂಡಿಕೆ ಮಾಡುತ್ತಾರಾ? ರಾಷ್ಟ್ರೀಯ ನಾಯಕ ಡಿ.ಕೆ.ಶಿವಕುಮಾರ್‌ ಕನಕಪುರಕ್ಕೆ ಎಷ್ಟುಸಾವಿರ ಕೋಟಿ ತಂದಿದ್ದಾರೆ ಎಂದು ಪ್ರಶ್ನಿಸಿದರು.

ಕನಕಪುರದಲ್ಲಿ ಎಷ್ಟು ಹೂಡಿಕೆಯಾಗಿದೆ?: ಡಿ.ಕೆ.ಶಿವಕುಮಾರ್‌ ಏಕೆ ಕನಕಪುರದಲ್ಲಿ ಹೂಡಿಕೆ ಮಾಡಿಲ್ಲ. ಮೊದಲು ಹೂಡಿಕೆ ಮಾಡಲಿ. ಸುಮ್ಮನೆ ಬಾಯಿಗೆ ಬಂದಹಾಗೆ ಹೇಳೋದಲ್ಲ. ನಮ್ಮಲ್ಲಿ ಏರ್‌ಪೋರ್ಚ್‌ ಇಲ್ಲ, ಆದರೆ, ಕನಕಪುರಕ್ಕೆ ಬೆಂಗಳೂರಿಗೆ ಹತ್ತಿರ ಇದೆ. ಐದು ಸಾವಿರ ಕೋಟಿ ಬೇಡ, ಒಂದು ಸಾವಿರ ಕೋಟಿ ಆದರೂ ತರಲಿ ಎಂದು ಸವಾಲು ಎಸೆದರು. ಕಲಬುರಗಿಯಲ್ಲಿ ನಡೆದಿದ್ದು ಹಿಂದುಳಿದ ವರ್ಗದ ಸಮಾಜ ಎಲ್ಲರೂ ಒಟ್ಟಿಗೆ ಬಿಜೆಪಿ ಜೊತೆ ಇದ್ದೇವೆ ಎನ್ನುವ ಪ್ರತಿಜ್ಞೆ ಮಾಡುವ ಕಾರ್ಯಕ್ರಮ. ನಮ್ಮ ನಿರೀಕ್ಷೆ ಮೀರಿ ಜನಸಾಗರವೇ ಸೇರಿತ್ತು. ಎಲ್ಲ ಹಿಂದುಳಿದ ವರ್ಗದ ಸಮಾಜ ಅಲ್ಲಿ ಸೇರಿದ್ದು ಬಹಳ ಸಂತೋಷ. ತಳವಾರ, ಪರಿವಾರವನ್ನು 2ಎ ಯಿಂದ ತೆಗೆದು, ಎಸ್‌ಟಿಗೆ ಸೇರಿಸಲಾಗಿದೆ. ಬೆಟ್ಟದ ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಲಾಗಿದೆ ಎಂದರು.

ಏಕರೂಪ ನಾಗರಿಕ ಸಂಹಿತೆ ಜಾರಿ ಪಕ್ಷವೇ ತೀರ್ಮಾನ: ಏಕರೂಪ ನಾಗರೀಕ ಸಂಹಿತೆ ಜಾರಿ ವಿಚಾರವನ್ನು ನಾನೊಬ್ಬನೇ ತೀರ್ಮಾನ ಮಾಡುವಂತಹ ವಿಷಯ ಅಲ್ಲ. ಏಕರೂಪ ನಾಗರೀಕ ಸಂಹಿತೆ ಜಾರಿಯಾಗಬೇಕು ಎಂಬುದು ಎಲ್ಲರ ಅಪೇಕ್ಷೆ. ಕೆಲವು ರಾಜಕಾರಣಿಗಳು ಇದಕ್ಕೆ ಅಡ್ಡಗಾಲು ಹಾಕ್ತಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ದೇಶದಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿ ಇರುತ್ತದೆ. ಕೆಲವು ಮನೆಗಳಲ್ಲಿ 25 ಮಕ್ಕಳು, ಕೆಲವು ಮನೆಗಳಲ್ಲಿ ಒಂದು ಮಗುವು ಇರಲ್ಲ, ಇಂತಹ ಪರಿಸ್ಥಿತಿ ಇದೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ದ ಎಂದರು.

ರಾಮಲಿಂಗಾ ರೆಡ್ಡಿ ಬಿಜೆಪಿ ಸೇರಲು ಏರ್‌ಪೋರ್ಟ್‌ವರೆಗೆ ಬಂದಿದ್ದರು: ಕೆ.ಎಸ್‌.ಈಶ್ವರಪ್ಪ

ಒಬಿಸಿ, ದಲಿತ ವೋಟರೈಸೇಷನ್‌ ನಾವು ಮಾಡ್ತಿಲ್ಲ. ನಾವು ಮಾಡ್ತಿರೋದು ಹಿಂದು ಸಮಾಜದ ವೋಟರೈಸೇಷನ್‌. ಇದರಲ್ಲಿ ಯಾವುದೇ ಜಾತಿ ಇಲ್ಲ. ಎಲ್ಲರೂ ಒಂದೇ ಎಂಬ ಭಾವನೆಯಿಂದ ಅವರವರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಅಂಬೇಡ್ಕರ್‌ ಅಪೇಕ್ಷೆ ಈಡೇರಿಸುತ್ತಿದ್ದೇವೆ. ಸದಾಶಿವ ಆಯೋಗದ ಬಗ್ಗೆ ಗಮನಹರಿಸುತ್ತೇವೆ ಅಂತಾ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಇಬ್ಬರು ತಿಳಿಸಿದ್ದಾರೆ ಎಂದು ತಿಳಿಸಿದರು. ಉಪ್ಪಾರ ಸಮಾಜ ಅಷ್ಟೇ ಅಲ್ಲ, ಅನೇಕ ಹಿಂದುಳಿದ ಸಮಾಜಗಳು ಎಸ್‌ಟಿಗೆ ಸೇರಿಸಬೇಕು ಅಂತಾ ಅಭಿಪ್ರಾಯ ಇದೆ. ಪಂಚಮಸಾಲಿ ಅವರು ‘2ಎ’ಗೆ ಸೇರಿಸಬೇಕು ಅಂತಿದೆ. ಮೀಸಲಾತಿ ದೃಷ್ಟಿಯಿಂದ ಈಗಾಗಲೇ ಕುಲಶಾಸ್ತ್ರ ಅಧ್ಯಯನಕ್ಕೆ ಎಲ್ಲ ಕೊಟ್ಟಿದೆ ಎಂದು ಪ್ರತಿಕ್ರಿಯೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರಧಾನಿ ಮೋದಿ ಅಪಹಾಸ್ಯ ಮಾಡಿದ್ದ ಕೈ ಕಾರ್ಯಕರ್ತೆ ವಿರುದ್ಧ ದೂರು!
''ಮತ್ತೆ ಮೊಳಗಲಿದೆ ಜೆಡಿಎಸ್ ಕಹಳೆ: ಎಚ್ಡಿಕೆ 2028ಕ್ಕೆ ಸಿಎಂ''