
ಶಿವಮೊಗ್ಗ(ಡಿ.01): ನರೇಂದ್ರ ಮೋದಿ ಅವರಿಗೆ 100 ತಲೆಗಳಿವೆ ಎಂದಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಂದು ತಲೆಯೂ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದರು. ಶಿವಮೊಗ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಮಾತನ್ನು ಖರ್ಗೆ ಬಿಟ್ಟು ಬೇರೆಯವರು ಮಾತನಾಡಿದ್ದರೆ ಬೇರೆ ರೀತಿ ಉತ್ತರ ಕೊಡ್ತಾ ಇದ್ದೆ. ಖರ್ಗೆ ಅವರೇ ರಬ್ಬರ್ ಸ್ಟ್ಯಾಂಪ್ ಆಗಬೇಡಿ, ಬೇರೆಯವರ ಮಾತು ಕೇಳಬೇಡಿ, ತಿದ್ದುಕೊಳ್ಳಿ. ತಿದ್ದುಕೊಳ್ಳದಿದ್ದರೆ ಬೇರೆ ಭಾಷೆ ಬಳಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನರೇಂದ್ರ ಮೋದಿ ಆದರ್ಶ ರಾಜಕಾರಣಿ. ಗ್ರಾಪಂ, ಜಿಪಂ, ವಿಧಾನಸಭೆ ಚುನಾವಣೆಗೂ ಅವರ ಫೋಟೊ ಮತ್ತು ಹೆಸರು ಬಳಸಿಕೊಳ್ತೇವೆ. ನಿಮಗೆ ಯೋಗ್ಯತೆ ಇದ್ದರೆ ರಾಹುಲ್, ಸೋನಿಯಾ ಮುಖ ಇಟ್ಟುಕೊಂಡು ಮತ ಪಡೆಯಿರಿ ನೋಡೊಣ ಎಂದು ಸವಾಲು ಎಸೆದರು.
Karnataka Assembly Election: ಕೈ ಅಭ್ಯರ್ಥಿ ಘೋಷಿಸಿದ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ!
ಮಹಾರಾಷ್ಟ್ರದ ಗಡಿಯಲ್ಲಿರುವ ಕನ್ನಡಿಗರು ಕುಡಿಯಲು ನೀರಿಲ್ಲವೆಂದು ಕರ್ನಾಟಕ ರಾಜ್ಯಕ್ಕೆ ಸೇರಲು ಬಯಸುತ್ತಿದ್ದಾರೆ. ಎಂಇಎಸ್ ಪುಂಡಾಟಿಕೆ ಮಿತಿಮೀರಿದೆ. ಪುಂಡರ ಮೇಲೆ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾಯಿನೂ ಜೆಡಿಎಸ್ಗೆ ಹೋಗಲ್ಲ:
ರಮೇಶ್ ಜಾರಕಿಹೊಳಿ ಜೆಡಿಎಸ್ಗೆ ಬರುವುದಾಗಿ ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ ಅವರು, ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಜೆಡಿಎಸ್ಗೆ ಹೋಗ್ತಾರಾ ಎಂದು ಪ್ರಶ್ನಿಸಿದರು. ಬೀದಿಯಲ್ಲಿರುವ ನಾಯಿಯೂ ಜೆಡಿಎಸ್ಗೆ ಹೋಗಲ್ಲ. ಇಬ್ರಾಹಿಂಗೆ ಮಾತ್ರ ಹೇಳ್ತಾ ಇದ್ದೇನೆ. ದೇವೇಗೌಡರಿಗೆ ಮತ್ತು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುತ್ತಿಲ್ಲ. ಇಬ್ರಾಹಿಂ ಜೆಡಿಎಸ್ಗೆ ಹೋಗಿದ್ದಾರೆ. ಮಾಡಲಿಕ್ಕೆ ಕೆಲಸವಿಲ್ಲ. ಹಾಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
‘ಸಿದ್ದು, ಡಿಕೆಶಿಗೆ ಅವರ ಸಮಾಜದವರು ಮತ ಹಾಕಿದರೆ ಸಿಎಂ ಆಗಿ ಬಿಡುತ್ತಾರೆಯೇ?’
ಶಿವಮೊಗ್ಗ: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಪ್ರತ್ಯೇಕ ಸಭೆಗಳಲ್ಲಿ ತಾವೇ ಮುಂದಿನ ಸಿಎಂ, ನನಗೆ ಶಕ್ತಿ ನೀಡಿ ಎಂದು ಹೇಳಿಕೊಳ್ಳುತ್ತಾರೆ. ಇವರ ಸಮಾಜದ ಮತಗಳನ್ನು ಇವರಿಗೆ ಹಾಕಿದರೆ ಈ ಇಬ್ಬರು ಸಿಎಂ ಆಗಲು ಸಾಧ್ಯವೇ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.
'ಹಿಂದು ಅಶ್ಲೀಲ ಪದ' ಸತೀಶ್ ಜಾರಕಿಹೊಳಿ ಹೇಳಿಕೆಗೆ ಈಶ್ವರಪ್ಪ ಆಕ್ರೋಶ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇವರಿಬ್ಬರಿಗೂ ಪರಸ್ಪರ ಒಬ್ಬರನ್ನು ನೋಡಿದರೆ ಇನ್ನೊಬ್ಬರಿಗೆ ಆಗೋದಿಲ್ಲ. ಮೇಲೆ ಪರಸ್ಪರ ಹೊಗಳಿಕೆಯ ಮಾತನಾಡುತ್ತಾರಾದರೂ ಒಳಗೊಳಗೇ ಪರಸ್ಪರ ದ್ವೇಷಿಸುತ್ತಾರೆ. ಇಬ್ಬರೂ ಒಬ್ಬರಿಗೊಬ್ಬರು ಚಾಕು ಹಾಕಿಕೊಳ್ಳುತ್ತಾರೆ. ಇದು ಕಾಂಗ್ರೆಸ್ ಪಕ್ಷದ ಈಗಿನ ಸ್ಥಿತಿ ಎಂದು ವ್ಯಂಗ್ಯವಾಡಿದರು.
ಬಿಜೆಪಿಯದು ಸುಸಂಸ್ಕೃತ ಪಕ್ಷ. ಆದರೆ ಕಾಂಗ್ರೆಸ್ನದು ರೌಡಿಗಳ ಪಕ್ಷವಾಗಿದೆ. ಬಿಜೆಪಿ ಸುಸಂಸ್ಕೃತ ಪಕ್ಷವಾಗಿದ್ದರಿಂದಲೇ ಇಂದು ಕೇಂದ್ರ ಮತ್ತು ಅನೇಕ ರಾಜ್ಯಗಳಲ್ಲಿ ಬಿಜೆಪಿಯನ್ನು ಜನರು ಅಧಿಕಾರಕ್ಕೆ ತಂದಿದ್ದಾರೆ. ಆದರೆ ಕಾಂಗ್ರೆಸ್ ಏನೆಂಬುದನ್ನು ಜನ ಮತಗಳಿಂದಲೇ ತೀರ್ಮಾನಿಸಿದ್ದಾರೆ ಎಂದರು. ಜೈಲಿನಲ್ಲಿ ಇದ್ದು ಬಂದ ಕಾಂಗ್ರೆಸ್ಸಿಗರು ಮಾಡುವ ಟೀಕೆಗೆ ನಾನು ಉತ್ತರಿಸುವ ಅಗತ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.