ಆರೋಪ ಮುಕ್ತನಾಗಿದ್ದರೂ ಸಚಿವ ಸ್ಥಾನ ಸಿಗದ್ದಕ್ಕೆ ಬೇಸರವಿದೆ: ಈಶ್ವರಪ್ಪ

By Kannadaprabha NewsFirst Published Oct 9, 2022, 12:33 PM IST
Highlights

ನನ್ನ ಮೇಲಿದ್ದ ಆರೋಪದಿಂದ ಮುಕ್ತನಾಗಿರುವಾಗ ಸಹಜವಾಗಿಯೇ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಇನ್ನೂ ಸಿಕ್ಕಿಲ್ಲ ಎಂಬ ಬಗ್ಗೆ ಸಹಜವಾಗಿಯೇ ಬೇಸರ ಇದೆ. ಆದರೂ ಈ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಶಿವಮೊಗ್ಗ (ಅ.09): ನನ್ನ ಮೇಲಿದ್ದ ಆರೋಪದಿಂದ ಮುಕ್ತನಾಗಿರುವಾಗ ಸಹಜವಾಗಿಯೇ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಇನ್ನೂ ಸಿಕ್ಕಿಲ್ಲ ಎಂಬ ಬಗ್ಗೆ ಸಹಜವಾಗಿಯೇ ಬೇಸರ ಇದೆ. ಆದರೂ ಈ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಮಾಜಿ ಸಚಿವ ಕೆ. ಎಸ್‌. ಈಶ್ವರಪ್ಪ ಹೇಳಿದರು. ಸುದ್ದಿಗಾರರ ಜತೆಗೆ ಮಾತನಾಡಿ, ಪೊಲೀಸ್‌ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆಗಿನ ಗೃಹ ಸಚಿವ ಜಾರ್ಜ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಆಗ ಅವರು ರಾಜೀನಾಮೆ ನೀಡಬೇಕೆಂದು ನಾನೇ ಆಗ್ರಹಿಸಿದ್ದೆ. ಅವರು ರಾಜೀನಾಮೆಯನ್ನೂ ನೀಡಿದ್ದರು. 

ನಂತರ ಪ್ರಕರಣದಲ್ಲಿ ಅವರು ನಿರ್ದೋಷಿಯಾದಾಗ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಲಾಯಿತು. ನಾನು ಸಚಿವನಾಗಿದ್ದಾಗ ಆರೋಪ ಕೇಳಿ ಬಂದಾಗ ತಕ್ಷಣ ರಾಜೀನಾಮೆ ನೀಡಿದೆ. ಈಗ ನನಗೂ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಕ್ಲೀನ್‌ಚೀಟ್‌ ಸಿಕ್ಕಿದೆ. ನನಗೆ ಮತ್ತೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದರು. ಆದರೆ, ನನಗೆ ಸಚಿವ ಸ್ಥಾನ ನೀಡೋದು, ಬಿಡೋದು ಪಕ್ಷದ ಹಿರಿಯರಿಗೆ ಬಿಟ್ಟಿದ್ದು. ನಾನು ಪಕ್ಷದ ಶಿಸ್ತಿನ ಸಿಪಾಯಿ.ಯಾವುದೇ ಖಾತೆ ನೀಡಿದರೂ ನಿಭಾಯಿಸಲು ಸಿದ್ಧ. ಚುನಾವಣೆ ಹತ್ತಿರದಲ್ಲಿರುವಾಗ ಸಚಿವ ಸಂಪುಟ ಖಾಲಿಬಿಡುವುದು ಸರಿಯಲ್ಲ ಎಂದರು.

Latest Videos

ರಾಜಕೀಯವಾಗಿ ಬಲಿ ಕೊಡಲು ಖರ್ಗೆಗೆ ಎಐಸಿಸಿ ಪಟ್ಟ: ಈಶ್ವರಪ್ಪ

ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರ ಕೊರತೆ: ಹಿಂದೆಲ್ಲ ಕಾಂಗೆಸ್‌ ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ನಾಯಕರು ಕರೆ ನೀಡಿದರೆ ಸಾಕಿತ್ತು, ಲಕ್ಷಾಂತರ ಜನ ಸೇರುತ್ತಿದ್ದರು. ಆದರೆ, ಇವತ್ತು ಕೇವಲ ಐದು ಸಾವಿರ ಜನ ಸೇರಿಸಲು ಮಾಜಿ ಸಚಿವರಿಗೆ ನೋಟಿಸ್‌ ನೀಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು.

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್‌ಟ್ರಸ್ಟ್‌ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆಲ್ಲ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ ಪಕ್ಷದಿಂದ ‘ಬಿ’ ಫಾರಂ ಸಿಕ್ಕರೇ ಮುಗಿಯಿತು, ಅವರು ಚುನಾವಣೆಯಲ್ಲಿ ಗೆದ್ದಂತೆ ಎಂಬಂತಿತ್ತು. ಇನ್ನು ಕಾಂಗ್ರೆಸ್‌ ಎಂದರೇ ಸಾಕು ಲಕ್ಷಾಂತರ ಜನ ಸೇರುತ್ತಿದ್ದ ಜಾಗದಲ್ಲಿ ಈಗ ಜನರನ್ನು ಸೇರಿಸಲು ಬಿರಿಯಾನಿ, ಹಣ, ಮದ್ಯವನ್ನು ಹಂಚಿ ಒಟ್ಟಿನಲ್ಲಿ ಜನ ಸೇರಿಸಿ ಎಂದು ಆಜ್ಞೆ ಮಾಡುತ್ತಿರುವುದು ನೋಡಿದರೆ ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರ ಕೊರತೆ ಎದ್ದು ಕಾಣುತ್ತಿದೆ ಎಂದು ಟೀಕಿಸಿದರು.

ಇಡೀ ದೇಶದಲ್ಲಿ ಕಾಂಗ್ರೆಸ್‌ ನೆಲ ಕಚ್ಚುತ್ತಿದೆ. ಆದರೂ, ಈ ಕಾಂಗ್ರೆಸಿಗರು ತಮ್ಮನ್ನು ತಿದ್ದಿಕೊಳ್ಳುತ್ತಿಲ್ಲ. ಇಡಿ ವಿಚಾರಣೆಗೆ ಕರೆದರೆ ಡಿ.ಕೆ.ಶಿವಕುಮಾರ್‌ ಸಮಯವಿಲ್ಲ ಎನ್ನುತ್ತಾರೆ. ಈ ನೆಲದ ಕಾನೂನಿಗೆ ಇಂತಹವರು ಹೇಗೆ ಗೌರವ ಕೊಡುತ್ತಾರೆ? ನ್ಯಾಯಾಲಯಗಳು ಇವರ ಸಮಯವನ್ನು ನೋಡಿ ವಿಚಾರಣೆಗೆ ದಿನಾಂಕ ನಿಗದಿಪಡಿಸಬೇಕೇ ಎಂದು ಕುಟುಕಿದರು.

ಡಿಕೆಶಿ ತಿಹಾರ್‌ ಜೈಲಿಗೆ ಹೋಗಿ ಬಂದಿದ್ದಾರೆ. ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷರು ಪರಪ್ಪನ ಅಗ್ರಹಾರದಲ್ಲಿ ಇದ್ದು ಬಂದಿದ್ದಾರೆ. ಇಂತಹವರು ಇಂದು ಕಾಂಗ್ರೆಸ್‌ ನಾಯಕರು. ಡಿಕೆಶಿ ಮನೆಗೆ ದಾಳಿ ಮಾಡಿದಾಗ ನೋಟಿನ ಕಂತೆ ಸಿಕ್ಕಿದೆ. ದಾಖಲೆಗಳು ಸಿಕ್ಕಿವೆ. ಕಳ್ಳನನ್ನು ಕಳ್ಳ ಎನ್ನದೆ ಇನ್ನೇನು ಅನ್ನಬೇಕು? ದಾಖಲೆ ಸಿಕ್ಕ ಬಳಿಕವೂ ರೇಡ್‌ ಮಾಡದೆ ಇನ್ನೇನು ಮಾಡಬೇಕು? ಅಕ್ರಮ ಚಟುವಟಿಕೆಗಳನ್ನು ನೋಡಿಕೊಂಡು ಸುಮ್ಮನೆ ಇರಬೇಕಾ? ಸುಮ್ಮನಿದ್ದರೆ ತಪ್ಪು ಸಂದೇಶ ರವಾನೆ ಆಗುವುದಿಲ್ಲವೇ ಎಂದರು.

ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರೋದಿಲ್ಲ: ಈಶ್ವರಪ್ಪ

ಸ್ಮಾರ್ಟ್‌ಸಿಟಿ ಕಾಮಗಾರಿ ಲೋಪ ವಿರುದ್ಧ ಕ್ರಮ: ನಗರದಲ್ಲಿ ಉತ್ತಮ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಂಡ ಪ್ರದೇಶದಲ್ಲಿ ಯಾವುದಾದರೂ ಸಮಸ್ಯೆ ಇಲ್ಲ. ಒಂದು ಪಕ್ಷ ಇದ್ದರೆ ಗಮನಕ್ಕೆ ತನ್ನಿ, ಗುತ್ತಿಗೆದಾರರಿಂದ ಸರಿಪಡಿಸಲಾಗುವುದು. ಯಾರಿಗೂ ಇನ್ನು ಪೂರ್ಣ ಹಣ ನೀಡಿಲ್ಲ. ಆದರೆ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಕೆಲ ಸಮಸ್ಯೆ ಇದೆ. ಇದರ ಬಗ್ಗೆ ಗಮನ ಹರಿಸಲಾಗಿದೆ ಎಂದು ಹೇಳಿದರು.

click me!