
ಚಿಕ್ಕಮಗಳೂರು(ಫೆ.08): ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ಪಕ್ಷವನ್ನು ಮಾಜಿ ಸಚಿವ ಸಿ.ಟಿ. ರವಿ ತರಾಟೆ ತೆಗೆದು ಕೊಂಡಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ವೈಫಲ್ಯ ಮುಚ್ಚಿ ಹಾಕುವ ನೀತಿಯನ್ನು ಕೈಬಿಡಿ, ವೈಫಲ್ಯ ಒಪ್ಪಿ, ಯಾವುದು ಸಾಧ್ಯವೋ ಆ ಯೋಜನೆ ಅನುಷ್ಠಾನ ಮಾಡಿ. ಬೇಕಾಬಿಟ್ಟಿ ಯೋಜನೆ ಜಾರಿಗೆ ತಂದು, ಇದೀಗ ಹಣಕಾಸಿನ ತೊಂದರೆಯಾಗಿದ್ದರಿಂದ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಕೈಬಿಡಿ ಎಂದು ಗುಡುಗಿದರು.
ದೇಶದಲ್ಲಿ ಶೇ. 9ರಷ್ಟು ಜನರ ತೆರಿಗೆ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಅವರಲ್ಲಿ 10 ಸಾವಿರಕ್ಕಿಂತ ಹೆಚ್ಚು ತೆರಿಗೆ ಕಟ್ಟುವವರು ಶೇ. 2.5 ಜನ ಮಾತ್ರ. ಅವರು ಆ ತೆರಿಗೆ ನನ್ನ ಹಕ್ಕು ಅಂದ್ರೆ, ನೀವೆನೂ ಮಾಡ್ತಿರಿ? ಏನ್ ಮಾಡೋಕಾಗುತ್ತೆ ಎಂದು ಪ್ರಶ್ನಿಸಿದರು.
ಮನಮೋಹನ್ ಸಿಂಗ್ ಕಾಲದಲ್ಲಿ ಎಷ್ಟು ತೆರಿಗೆ ಹಣ ಬಂದಿದೆ: ಸಿಎಂ ಸಿದ್ದುಗೆ ಪ್ರಶ್ನೆ ಮಾಡಿದ ಸಿ.ಟಿ.ರವಿ!
ಬೆಂಗಳೂರಿನಲ್ಲಿಯೇ ಶೇ. 70ರಷ್ಟು ಆದಾಯ ಕ್ರೋಢಿಕರಣವಾಗುತ್ತಿದೆ. ಅಲ್ಲಿನವರೆಲ್ಲ ಸೇರಿ ನನ್ನ ತೆರಿಗೆ ನನ್ನ ಹಕ್ಕು ಅಂದ್ರೆ ಏನ್ ಮಾಡ್ತೀರಾ? ಅದನ್ನ ವರುಣಕ್ಕೆ, ಕಲ್ಬುರ್ಗಿಗೆ, ಚಿಕ್ಕಮಗಳೂರಿಗೆ ತೆಗೆದುಕೊಂಡು ಹೋಗಂಗಿಲ್ಲ ಅಂದ್ರೆ ಏನೂ ಮಣ್ಣು ತಿಂತಿರಾ? ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿಯಲ್ಲಿ ಸಂಗ್ರಹವಾಗುವ ತೆರಿಗೆಯನ್ನ ವರುಣಕ್ಕೂ ತೆಗೆದುಕೊಂಡು ಹೋಗ್ತೀರಿ, ಬೇರೆ ಕಡೆಗೂ ತೆಗೆದುಕೊಂಡು ಹೋಗ್ತೀರಾ. ನಾಳೆ ಅವ್ರೆಲ್ಲ ವಿಧಾನಸೌಧದ ಮುಂದೆ ನನ್ನ ತೆರಿಗೆ ನನ್ನ ಹಕ್ಕು ಅಂತಾ ಪ್ರತಿಭಟನೆ ಮಾಡಿದ್ರೆ, ನೀವೇನು ಮಣ್ಣು ತಿಂತಿರಾ? ರಾಜ್ಯದ ಜನರಿಗೆ ಮಣ್ಣು ತಿನ್ನಿಸುತ್ತೀರಾ ಎಂದು ಪ್ರಶ್ನಿಸಿದರು.
ತೆರಿಗೆ ಹಣವನ್ನು ಪ್ರಧಾನಿಯವರು ತಮ್ಮ ಮನೆಗೆ ತೆಗೆದುಕೊಂಡು ಹೋಗ್ತಿದ್ದಾರಾ, ಜನಸಂಖ್ಯೆ ಆಧಾರದ ಮೇಲೆ ತೆರಿಗೆ ಹಣ ಹಂಚಿಕೆ ಮಾಡಲಾಗುತ್ತಿದೆ. ಈ ವಿಷಯದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಆರೋಪ ದುರುದ್ದೇಶ ಪೂರಕವಾದುದು ಎಂದು ದೂರಿದರು. ಗ್ಯಾರಂಟಿ ಅನುಷ್ಟಾನ ಮಾಡುವ ಜತೆಗೆ ಬೆಲೆ ಏರಿಕೆ ಮಾಡಿದರು. ಇಷ್ಟೆಲ್ಲ ದರ ಏರಿಕೆ ಮಾಡಿದ್ರು ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸಲು ಆಗ್ತಿಲ್ಲ ಎಂದು ಕುಟುಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.