ಕಾಂಗ್ರೆಸ್ ಸರ್ಕಾರಕ್ಕೆ ಕಾಂಗ್ರೆಸ್ಸಿಗರಿಂದಲೇ ಅಪಾಯ: ಮಾಜಿ ಸಚಿವ ಕಾರಜೋಳ

By Kannadaprabha NewsFirst Published Sep 22, 2023, 8:23 PM IST
Highlights

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 25 ಸಂಸದರು ಬಿಜೆಪಿಯಿಂದ ಆಯ್ಕೆಯಾಗಲಿದ್ದಾರೆ. ಬಾಗಲಕೋಟೆ ಹಾಗೂ ವಿಜಯಪುರದಿಂದ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ 

ಮುಧೋಳ(ಸೆ.22): ರಾಜ್ಯದಲ್ಲಿ ಮುಂಗಾರು ಮಳೆ ವಿಫಲವಾಗಿದೆ. ರಾಜ್ಯದಲ್ಲಿ ಮುನ್ನಚ್ಚರಿಕೆ ಕ್ರಮ ಅನುಸರಿಸದೇ ಇರುವುದರಿಂದ ರಾಜ್ಯದ ಒಂದು ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿ ರೈತರು ಸಂಕಷ್ಟದ ಪರಿಸ್ಥಿಯಲ್ಲಿ ಇದ್ದು, ರಾಜ್ಯ ಸರ್ಕಾರವನ್ನು ಶಪಿಸುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಗುರುವಾರ ತಮ್ಮ ನಿವಾಸದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಪೀಡಿತ ತಾಲೂಕುಗಳಿಗೆ ಕನಿಷ್ಠ ₹೧೦ ಕೋಟಿ ಹಣ ಬಿಡುಗಡೆ ಮಾಡಿ ಬರಗಾಲು ಕಾಮಗಾರಿ ಆರಂಭಿಸಿ ರೈತರಿಗೆ, ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಬೇಕು. ರೈತರ ಸಂಪತ್ತಾದ ದನಕರುಗಳನ್ನು ಉಳಿಸಲು ಮೇವು ಬ್ಯಾಂಕ್, ಗೋಶಾಲೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸತ್ಯ ಶೋಧನೆ, ಪರಾಮರ್ಶೆ ಏನಾಯ್ತು?: ಕಾರಜೋಳಗೆ ತಿಮ್ಮಾಪುರ ತಿರುಗೇಟು

ರಾಜ್ಯದಲ್ಲಿ ೩೧ ಸಾವಿರ ಮ್ಯಾ.ವ್ಯಾಟ್ ವಿದ್ಯುತ್ ಉತ್ಪದನಾ ಸಾಮರ್ಥ್ಯವಿದ್ದರೂ ೭ ರಿಂದ ೭.೫ ಸಾವಿರ ಮ್ಯಾ.ವ್ಯಾಟ್ ವಿದ್ಯುತ್ ಉತ್ಪದನೆಯಾಗುತ್ತಿದೆ. ರಾಜ್ಯದಲ್ಲಿ ಸರಾಸರಿ ೧೩ ಸಾವಿರ ಮ್ಯಾ.ವ್ಯಾಟ್ ವಿದ್ಯುತ್ ಅವಶ್ಯಕತೆ ಇದೆ, ಅವಶ್ಯಕತೆಯ ಅರ್ಧದಷ್ಟು ಉತ್ಪಾದನೆ ಇರುವುದರಿಂದ ವಿದ್ಯುತ್ ಆಹಾಕಾರ ಎದ್ದಿದೆ. ರೈತರಿಗೆ ದಿನಕ್ಕೆ ಕನಿಷ್ಠ ೭ ಗಂಟೆ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. ಇದು ಮುಂದಾಲೋಚನೆ ಇಲ್ಲದ ಸರ್ಕಾರವಾಗಿದೆ. ಕಲ್ಲಿದ್ದಲು ಖರೀದಸದೆ ಇರುವುದರಿಂದ ಥರ್ಮಲ್ ವಿದ್ಯತ್ ಉತ್ಪಾದನೆ ಶೇ.೨೦ ಇಳಿಕೆಯಾಗಿದೆ ಎಂದು ಆರೋಪಿಸಿ ಯಾವ ಯಾವ ಮೂಲದಿಂದ ಹಿಂದೆ ಎಷ್ಟು ಉತ್ಪತ್ತಿ ಆಗುತ್ತಿತ್ತು ಈಗ ಎಷ್ಟಾಗುತ್ತಿದೆ ಎಂಬುವುದನ್ನು ವಿವರಿಸಿದರು.

ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಯಿತು. ಒಂದೇ ಒಂದು ಅಭಿವೃದ್ಧಿ ಕಾಮಗಾರಿ ಆರಂಭವಾಗಿಲ್ಲ. ಎಸ್ಸಿ, ಎಸ್ಟಿ ಜನಾಂಗದವರಿಗೆ ಮೀಸಲಿಟ್ಟ ₹೧೧೧೪೪ ಕೋಟಿ ಹಣವನ್ನು ದುರ್ಬಳಿಕೆ ಮಾಡಲಾಗಿದೆ. ಈ ಜನಾಂಗದ ಶಿಕ್ಷಣ, ಉದ್ಯೋಗ, ಭೂವಡೆತನ, ನೀರಾವರಿ, ನೇರ ಸಾಲ ಮುಂತಾದವುಗಳಿಗೆ ಈ ಸರ್ಕಾರ ಒಂದೇ ಒಂದು ರುಪಾಯಿ ನೀಡಿಲ್ಲ. ನಮ್ಮ ಬಿಜೆಪಿ ಸರ್ಕಾರ ತಲಾ ₹೨೫ ಕೋಟಿ ವೆಚ್ಚದ ೨೦೦ ವಸತಿ ಶಾಲೆಗೆ ಮಂಜೂರಾತಿ ಹಾಗೂ ಹಣ ಬಿಡುಗಡೆ ಮಾಡಿತ್ತು. ಇದರಲ್ಲಿ ಶೇ.೬೦ ರಷ್ಟು ಪೂರ್ಣಗೊಂಡು ಉದ್ಘಾಟನೆಯಾಗಿ ಇನ್ನುಳಿದವುಗಳು ಹಾಗೆ ನಿಂತಿವೆ. ತಲಾ ₹೫ ಕೋಟಿ ವೆಚ್ಚದ ೧೮೦ ಹಾಸ್ಟೇಲ್ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿತ್ತು. ಬಹಳಷ್ಟು ಕಾಮಗಾರಿಗಳು ಸ್ಥಗಿತಗೊಂಡಿವೆ. ನಮ್ಮ ಹಿಜೆಪಿ ಸರ್ಕಾರ ಎಸ್ಸಿ ಜನಾಂಗದವರಿಗೆ ಭೂಒಡೆತನ ಯೋಜನೆಗೆ ಒಂದು ಸಾವಿರ ಕೋಟಿ ಹಣದಲ್ಲಿ ೧೦ ಸಾವಿರ ಎಕರೆ ಭೂಮಿಯನ್ನು ೮ ಸಾವಿರ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿತ್ತು. ಎಸ್ಟಿ ಜನಾಂಗಕ್ಕೆ ₹೪೦೦ ಕೋಟಿ ವೆಚ್ಚದಲ್ಲಿ ೫ ಸಾವಿರ ಎಕರೆ ಭೂಮಿಯನ್ನು ೪ ಸಾವಿರ ಫಲಾನಿಭವಿಗಳಿಗೆ ನೀಡಲಾಗಿದೆ. ಈ ಸರ್ಕಾರ ಒಂದು ಇಂಚು ಭೂಮಿಯನ್ನು ನೀಡಿಲ್ಲ. ಇದು ದಲಿತ ವಿರೋಧಿ ಸರ್ಕಾರವಿದೆ ಎಂದು ದೂರಿದರು.

೨೦೧೩ ರಿಂದ ೨೦೧೮ ವರೆಗೆ ಕಾಂಗ್ರೆಸ್ ಸರ್ಕಾರವಿತ್ತು. ಅವರು ಎಸ್ಸಿ, ಎಸ್ಟಿ ಜನಾಂಗಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುವುದನ್ನು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು. ದಲಿತರ ಬಗ್ಗೆ ಮೊಸಳೆ ಕಣ್ಣಿರು ಸುರಿಸಿ ಅಧಿಕಾರಕ್ಕೆ ಬಂದು ಅವರ ಕಣ್ಣೀರು ಒರೆಸಲು ಮುಂದೆ ಬರುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ಮುಂದುವರೆಯುತ್ತಿರುವ ಕಾಮಗಾರಿಗಳನ್ನು ಲಂಚಕ್ಕಾಗಿ ಸ್ಥಗಿತಗೊಳಿಸಲಾಗಿದೆ. ವರ್ಗಾವಣೆ ದಂಧೆಯಾಗಿದೆ ಎಂದು ಕಾಂಗ್ರೆಸ್ ಪಕ್ಷದ ೪೧ ಶಾಸಕರೇ ದೂರುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಉತ್ತರಿಸಲು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ಕಾಂಗ್ರೆಸ್ಸಿಗರಿಂದ ಅಪಾಯವಿದೆ ಎಂಬುವುದನ್ನು ಮುಖ್ಯಮಂತ್ರಿ ಮನವರಿಕೆ ಮಾಡಿಕೊಂಡು ಸರಿದಾರಿಗೆ ತರದಿದ್ದರೇ ಅಪಾಯ ತಪ್ಪಿದ್ದಲ್ಲ. ಮೂರು ಡಿಸಿಎಂ ಹುದ್ದೆ ತಲೆಯತ್ತಿ ನಿಂತಿದೆ. ಹಲವಾರು ಸಚಿವರು ಶಾಸಕರು ಸಹಮತ ವ್ಯಕ್ತವಾಗುತ್ತಿದೆ. ಇದೆಲ್ಲ ಡಿಸಿಂ ಡಿ.ಕೆ.ಶಿವಕುಮಾರ ಅವರನ್ನು ಕಟ್ಟಿ ಹಾಕುವ ತಂತ್ರ ಎಂದು ಸಿಎಂ ಸುತ್ತ ಇರುವ ಬುದ್ಧಿ ಜೀವಿಗಳು ಹೇಳುತ್ತಿದ್ದಾರೆ. ಸರ್ಕಾರಕ್ಕೆ ಕಾಂಗ್ರೆಸ್ ದಿಂದ ಅಪಾಯ. ಬಿಜೆಪಿ ಏನಾದರು ಸರ್ಕಾರ ಬೀಳಿಸುವ ಯೋಚನೆ ಇದೆಯಾ ಎಂಬ ಪ್ರಶ್ನೆಗೆ ಹಾಲು ಕುಡಿದು ಸಾಯುವುವರಿಗೆ ವಿಷ ಹಾಕುವ ಅಗತ್ಯ ಇಲ್ಲ ಎಂದರು.

ಮದ್ಯದ ದರ ಹೆಚ್ಚಳ: ಕುಡುಕರು ತಿರುಗಿಬಿದ್ರೆ ಕಾಂಗ್ರೆಸ್ ಸರ್ಕಾರ ಉರುಳುತ್ತೆ: ಕಾರಜೋಳ ವಾಗ್ದಾಳಿ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ ೨೫ ಸಂಸದರು ಬಿಜೆಪಿಯಿಂದ ಆಯ್ಕೆಯಾಗಲಿದ್ದಾರೆ. ಬಾಗಲಕೋಟೆ ಹಾಗೂ ವಿಜಯಪುರದಿಂದ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಹಣಮಂತ ತುಳಸಿಗೇರಿ, ಬಿಜೆಪಿ ಮುಖಂಡ ಕೆ.ಆರ್.ಮಾಚಪ್ಪನವರ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸವರಾಜ ಮಳಲಿ, ಸೋನಪ್ಪಿ ಕುಲಕರ್ಣಿ ಮುಂತಾದವರು ಇದ್ದರು. 

click me!