
ಕಲಬುರಗಿ (ಫೆ.09): ‘ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅಮವಾಸ್ಯೆ, ಅದಕ್ಕೆ ನಾನು ಅವರನ್ನು ಅಮವಾಸ್ಯೆ ಅಂತ ಕರೆಯುತ್ತೇನೆ’ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಸದ ತೇಜಸ್ವಿ ಸೂರ್ಯ ಅವರನ್ನು ಅಮವಾಸ್ಯೆಗೆ ಹೋಲಿಸಿದ್ದಾರೆ. ಕಲಬುರಗಿ ಜಿಲ್ಲೆಯ ಚಿತಾಪುರ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ತೇಜಸ್ವಿ ಸೂರ್ಯ ಅವರು ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ನಷ್ಟಆಗುತ್ತದೆ ಎಂಬ ಹೇಳಿಕೆ ನೀಡಿದ್ದು, ಈ ಮಾತನ್ನು ಪಕ್ಷದ ಯಾವ ಮುಖಂಡರೂ ಖಂಡಿಸಿಲ್ಲ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೋರೇಟ್ ವಲಯದ 14 ಲಕ್ಷ ಕೋಟಿ ರುಪಾಯಿ ಸಾಲ ಮನ್ನಾ ಮಾಡಿದೆ. ಆದರೆ, ರೈತರ ಸಾಲ ಮನ್ನಾ ಮಾಡಲು ಬಿಜೆಪಿಯವರಿಗೆ ಆಗುತ್ತಿಲ್ಲ. ಓರ್ವ ಸಂಸದನಾಗಿ ಇಂತಹ ಹೇಳಿಕೆ ನೀಡುತ್ತಾನೆ ಎಂದರೆ ಇದು ಬಿಜೆಪಿಯ ಆಂತರಿಕ ಚಿಂತನೆ ಎಂದರು.
ಪ್ರಿಯಾಂಕ್ಗೆ ಒಳ್ಳೆ ರಾಜಕೀಯ ಭವಿಷ್ಯವಿದೆ: ಜನಪರವಾದ ಕಾಳಜಿ, ಸ್ಪಂಧಿಸುವ ಗುಣಗಳು ಇಲ್ಲದವರು ಒಬ್ಬ ಉತ್ತಮ ಸಂಸದೀಯ ಪಟುವಾಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲೆಯ ಚಿತಾಪುರ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅತ್ಯಂತ ಕ್ರಿಯಾಶೀಲ, ವಿಚಾರಶೀಲ ರಾಜಕಾರಣಿಯಾಗಿದ್ದು, ಪ್ರಾಮಾಣಿಕ ಹಾಗೂ ನಿಷ್ಠುರತೆಯಿಂದ ಕೆಲವೇ ಸಚಿವರಲ್ಲಿ ಇವರು ಒಬ್ಬರಾಗಿದ್ದಾರೆ ಎಂದರು. ರಾಜಕೀಯದಲ್ಲಿ ನಿಷ್ಠುರತೆ, ಪ್ರಾಮಾಣಿಕತೆಯಿಂದ ಬಹಳ ತೊಂದರೆಯಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರ ಸ್ವಭಾವವನ್ನು ಪುತ್ರ ಪ್ರಿಯಾಂಕ್ ಖರ್ಗೆ ಬೆಳೆಸಿಕೊಂಡಿದ್ದಾರೆ. ಇಂತಹ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸಭೆಗೆ ಬಂದರೆ, ರಾಜ್ಯದ ಅಭಿವೃದ್ಧಿ ವೇಗವಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರಿಯಾಂಕ್ ಖರ್ಗೆಗೆ ಒಳ್ಳೆಯ ರಾಜಕೀಯ ಭವಿಷ್ಯವಿದೆ ಎಂದು ಹೇಳಿದರು.
ಕಟೀಲ್ ಅನ್ನುವ ಹೆಸರು ಬದಲು ಪಿಟೀಲು ಅಂತಾ ಇಟ್ಟುಕೊಳ್ಳಲಿ: ಎಚ್.ಡಿ.ಕುಮಾರಸ್ವಾಮಿ
ಕೇಂದ್ರ ಬಿಜೆಪಿ ಸರ್ಕಾರದಿಂದ ರೈತರಿಗೆ ಮೋಸ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೊದಿ ಸರ್ಕಾರವು ಕಳೆದ ಚುನಾವಣೆ ಸಮಯದಲ್ಲಿ ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದು ಈಗ ರೈತರು ಸಂಕಷ್ಟದಲ್ಲಿರುವ ಸಮಯದಲ್ಲಿ ರೈತರ ಸಾಲವನ್ನು ಮನ್ನಾ ಮಾಡಿ ಎಂದರೆ ಇದರಿಂದ ಆರ್ಥಿಕತೆಗೆ ಮಾರಕವಾಗುತ್ತದೆ ಎಂದು ಹೇಳಿ ಕೈಗಾರಿಕೋದ್ಯಮಿಗಳು ಹಾಗೂ ಕಾಪೋರೇಟ್ ಕಂಪನಿಗಳ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿ ನಮ್ಮ ಸರ್ಕಾರ ಕಾಪೊರ್ರೇಟ್ ಪರ ಎಂದು ಸಾಬೀತುಪಡಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದ್ದಾರೆ.
ಪಟ್ಟಣದ ಹಳೆ ಸೇಂದಿ ಡಿಪೋ ಅವರಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಜಾಧ್ವನಿಯಾತ್ರೆ ಉದ್ಘಾಟಿಸಿ, ಮನಮೊಹನ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ 70 ಸಾವಿರ ಕೊಟಿ ರೈತರ ಸಾಲ ಮನ್ನಾ ಮಾಡಿಲಾಗಿತ್ತು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ 50 ಸಾವಿರವರೆಗಿನ ಸೊಸೈಟಿ ಸಾಲ 8165 ಕೊಟಿ ಸಾಲ ಮನ್ನಾ ಮಾಡಿದ್ದೇನೆ. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದರೆ ನಮ್ಮಲ್ಲಿ ದುಡ್ಡಿಲ್ಲ. ನಮ್ಮಲ್ಲಿ ಹಣ ಪ್ರಿಂಟ್ ಮಾಡುವ ಮಶೀನ್ ಇಲ್ಲ ಎಂದು ಹೇಳಿದರು. ಇದನ್ನು ನೊಡಿದರೆ ಬಿಜೆಪಿ ಪಕ್ಷವು ರೈತರಿಗೆ ಮೊಸ ಮಾಡಿದ ಪಕ್ಷವಾಗಿದೆ ಎಂದರು.
ನನ್ನ ಮೇಲೆ ದಾಳಿಗಷ್ಟೆ ಇಡಿ ಇರೋದು: ಡಿ.ಕೆ.ಶಿವಕುಮಾರ್
ಕೊಟಿಗಟ್ಟಲೇ ಹಣ ಖರ್ಚು ಮಾಡಿ ಶಾಸಕರನ್ನು ಖರೀದಿಸಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ರಾಜ್ಯದ ಬಿಜೆಪಿ ಸರ್ಕಾರವು ನೈತಿಕತೆ ಇಲ್ಲದ ಸರ್ಕಾರ. ಇವರ ಸಾಧನೆ 40 ಪರ್ಸೆಂಟ್ ಹಾಗೂ ಬರೀ ಲೂಟಿ, ಲೂಟಿ ಸಾಧನೆಯಗಿದೆ. ಇವರದೇನಿದ್ದರೂ ಅಲಿಬಾಬಾ ಚಾಳಿಸ್ ಚೋರ್ ನಂತಿದೆ ಎಂದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಾಣಿಜ್ಯ ಬೆಳೆಯಾಗಿರುವ ತೊಗರಿ ಬೆಳೆ ಶೇ.70ರಷ್ಟು ನೆಟೆರೋಗದಿಂದ ಹಾನಿಯಾಗಿದೆ. ಇದರ ಕುರಿತು ನಾನು ವಿಧಾನ ಸಭೆ ಅಧಿವೇಶನದಲ್ಲಿ ಕೃಷಿ ಸಚಿವರಿಗೆ ಜಿಲ್ಲೆಗಳಿಗೆ ಭೆಟ್ಟಿನೀಡಿ ಪರಿಶೀಲನೆ ನಡೆಸಿದ್ದಿರಾ ಎಂದರೆ ಅವರು ನನಗೆ ಆರೊಗ್ಯ ಸರಿ ಇಲ್ಲ ಎಂದು ಬೇಜವಬ್ದಾರಿ ಹೇಳಿಕೆ ನೀಡಿದ್ದಾರೆ. ಇಂತಹ ಸಚಿವರು ನಮಗೆ ಬೇಕೇ? ಎಂದು ಪ್ರಶ್ನಿಸಿದರು. ಸರ್ಕಾರವು ಹೆಕ್ಟೇರ್ಗೆ 10 ಸಾವಿರ ಘೋಷಣೆ ಮಾಡಿದ್ದರೂ ಇಲ್ಲಿಯವರೆಗೆ ಯಾವುದೇ ಪರಿಹಾರ ಒದಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.