
ಹುಬ್ಬಳ್ಳಿ(ಮೇ.31): ಸೋಲಿನಿಂದಾಗಿ ನಾನು ಡಿಪ್ರೆಷನ್ನಿಗೆ ಹೋಗುವವನಲ್ಲ. ನನ್ನ ವಿರೋಧಿಗಳನ್ನು ಡಿಪ್ರೆಷನ್ನಿಗೆ ಕಳುಹಿಸುವವನು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು. ಇಲ್ಲಿನ ರಾಯ್ಕರ್ ಗೆಸ್ಟ್ಹೌಸ್ನಲ್ಲಿ ಮಂಗಳವಾರ ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು. ಶೆಟ್ಟರ್ ಚುನಾವಣೆಯಲ್ಲಿ ಸೋತಿದ್ದಾರೆ. ಹಾಗಾಗಿ ಡಿಪ್ರೇಷನ್ನಿಗೆ ಹೋಗಿದ್ದಾರೆ ಎಂದು ಅಪಪ್ರಚಾರ ನಡೆಸಲಾಗುತ್ತಿದೆ. ಇದೆಲ್ಲ ಸುಳ್ಳು. ನಾನು ಡಿಪ್ರೆಷನ್ನಿಗೆ ಹೋಗುವವನಲ್ಲ. ನಾನು ಕ್ಷೇತ್ರದಲ್ಲಿ ಸೋತು ಗೆದ್ದಿದ್ದೇನೆ. ನನ್ನ ವಿರೋಧಿಗಳು ಗೆದ್ದು ಸೋತಿದ್ದಾರೆ. ನನ್ನೊಬ್ಬನನ್ನು ಸೋಲಿಸಲು ಹೋಗಿ ಇದ್ದ ತಮ್ಮ ಅಧಿಕಾರವನ್ನೇ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ಹಾಗೂ ಕೇಂದ್ರ ಸಚಿವ ಜೋಶಿ ಹೆಸರು ಪ್ರಸ್ತಾಪಿಸದೇ ಕಿಡಿಕಾರಿದರು.
ನನ್ನ 30 ವರ್ಷಗಳ ರಾಜಕಾರಣದಲ್ಲಿ ಎಂದಿಗೂ ಮತದಾರರಿಗೆ ಹಣ ಹಂಚಿದವನಲ್ಲ. ಆದರೆ, ನನ್ನ ವಿರೋಧಿಗಳು ಕ್ಷೇತ್ರದಲ್ಲಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಇದರಿಂದಾಗಿ ನಾನು ಸೋಲು ಅನುಭವಿಸುವಂತಾಯಿತು. ಸೋಲಿನಿಂದ ನಾನು ಎದೆಗುಂದುವ ಪ್ರಶ್ನೆಯೇ ಇಲ್ಲ. ರಾಜ್ಯದ ವಿಧಾನಸಭಾ ಚುನಾವಣೆ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 25 ಸ್ಥಾನ ಗೆದ್ದಿತ್ತು. ಅದು ಈ ಬಾರಿ ಉಲ್ಟಾಆಗಬೇಕು. ಈಗ ನಡೆದಿರುವುದು ಕೇವಲ ಸೆಮಿಫೈನಲ್, ಮುಂದೆ ಫೈನಲ್ ಬಾಕಿಯಿದೆ, ಕಾದು ನೋಡಿ ಎಂದರು.
ಶೆಟ್ಟರ್, ನಿರಾಣಿ ಕೈಗಾರಿಕೆ ಕನಸು ಎಂ.ಬಿ. ಪಾಟೀಲ್ ಹೆಗಲಿಗೆ..!
ನಮ್ಮ ತಂದೆಯವರು ಚುನಾವಣೆಯಲ್ಲಿ ಮೂರು ಬಾರಿ ಸೋಲು ಅನುಭವಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ ಎಲ್ಲರೂ ಸೋಲು ಅನುಭವಿಸಿದವರೇ. ಸಿದ್ದರಾಮಯ್ಯ ಸೋತ ಬಳಿಕ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಯಡಿಯೂರಪ್ಪ ಸೋತ ಮೇಲೆ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದಾರೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದೆ. ಇಷ್ಟೊಂದು ಸ್ಥಾನಗಳು ಕರ್ನಾಟಕದಲ್ಲಿ ಬರುತ್ತವೆ ಎಂಬುದು ನಮ್ಮ ದೆಹಲಿಯ ನಾಯಕರಿಗೂ ಗೊತ್ತಿರಲಿಲ್ಲ. ಜನ ಮನಸ್ಸು ಮಾಡಿದರೆ ಬದಲಾವಣೆ ತರಬಹುದು ಎನ್ನುವುದಕ್ಕೆ ಕರ್ನಾಟಕದ ಫಲಿತಾಂಶವೇ ಸಾಕ್ಷಿ. ನಾನು ಪ್ರಚಾರಕ್ಕೆ ಹೋದ ಕಡೆಗಳಲ್ಲೆಲ್ಲ ಪಕ್ಷ ಗೆಲುವು ಸಾಧಿಸಿದೆ. ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಬದ್ಧರಾಗಿದ್ದೇವೆ. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಯಾದಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.