Kashmir| ಕಾಶ್ಮೀರ ಹಾಳು ಮಾಡ್ತಿದೆ ಆರೆಸ್ಸೆಸ್‌, ಬಿಜೆಪಿ: ಕುಮಾರಸ್ವಾಮಿ

By Kannadaprabha NewsFirst Published Oct 9, 2021, 9:16 AM IST
Highlights

* ಕಾಶ್ಮೀರಿ ಪಂಡಿತರು ಉಗ್ರರಿಗೆ ಬಲಿಯಾಗಿದ್ದಾರೆ, ಹೀಗಾ ಸರ್ಕಾರ ನಡೆಸೋದು?
* ಕೇಸರಿ ಪಾಳಯದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮಾಜಿ ಮುಖ್ಯಮಂತ್ರಿ
* ಆರೆಸ್ಸೆಸ್‌ ಕುರಿತ ಹಿಂದಿನ ಹೇಳಿಕೆಗೆ ಬದ್ಧ, ಚರ್ಚೆಗೆ ಬರಲಿ ಎಂದು ಸವಾಲು
 

ಚನ್ನಪಟ್ಟಣ(ಅ.09): ಆರೆಸ್ಸೆಸ್‌ ಮತ್ತು ಬಿಜೆಪಿ(BJP) ಸೇರಿಕೊಂಡು ಕಾಶ್ಮೀರವನ್ನು(Kashmir) ಹಾಳು ಮಾಡುತ್ತಿವೆ. 4 ದಿನಗಳಲ್ಲಿ ಕಾಶ್ಮೀರ ಪಂಡಿತರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಸರ್ಕಾರ ನಡೆಸೋದು ಹೇಗಂತ ಇದೇನಾ ಆರೆಸ್ಸೆಸ್‌ ಹೇಳಿಕೊಟ್ಟಿರೋದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಕೇಸರಿಪಾಳಯದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. 

ಆರೆಸ್ಸೆಸ್‌(RSS) ಬಗ್ಗೆ ಈ ಹಿಂದೆ ನೀಡಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಸಮರ್ಥಿಸಿಕೊಂಡಿರುವ ಅವರು ಅವರ ಅಜೆಂಡಾಗಳ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ಧನಿದ್ದು ಬಿಜೆಪಿ ಮತ್ತು ಆರೆಸ್ಸೆಸ್‌ ನಾಯಕರು ಚರ್ಚೆಗೆ ಬರಲಿ ಎಂದು ತಿಳಿಸಿದ್ದಾರೆ. ಜೆಡಿಎಸ್‌(JDS) ವರಿಷ್ಠರಾದ ದೇವೇಗೌಡರು(HD Devegowda) ದೇಶದ ಪ್ರಧಾನಿಯಾಗಿದ್ದ 20 ತಿಂಗಳ ಅವ​ಧಿಯಲ್ಲಿ ದೇಶದಲ್ಲಿ ನಾಗರಿಕರ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿತ್ತಾ? ಸರ್ಕಾರ ನಡೆಸುವುದು ಹೇಗೆ ಎಂದು ಇದೇನಾ ನಿಮಗೆ ಆರ್‌ಎಸ್‌ಎಸ್‌ ಹೇಳಿಕೊಟ್ಟಿರುವುದು ಎಂದು ಪ್ರಶ್ನಿಸಿದರು.

ದೇಶದ ಕಾರ್ಯಾಂಗದ ಮೇಲೆ ಆರೆಸ್ಸೆಸ್‌ ಹಿಡಿತವಿದೆ ಎಂದು ಅವರು ಈ ಹಿಂದೆ ನೀಡಿದ್ದ ಹೇಳಿಕೆಗೆ ಬಿಜೆಪಿಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ ಚನ್ನಪಟ್ಟಣದಲ್ಲಿ(Channapatna) ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಶ್ಮೀರದ ಇಂದಿನ ಸಮಸ್ಯೆಗೆ ಬಿಜೆಪಿ ಮತ್ತು ಆರೆಸ್ಸೆಸ್ಸೇ ಕಾರಣ ಎಂದು ಆರೋಪಿಸಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಕಾಶ್ಮೀರದಲ್ಲಿ ಪಂಡಿತರು, ಶಿಕ್ಷಕರು(Teachers) ಹಾಗೂ ನಾಗರಿಕರನ್ನು ಕಾಶ್ಮೀರದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಅಲ್ಲಿನ ಶಾಲೆಗೆ ನುಗ್ಗಿರುವ ಭಯೋತ್ಪಾದಕರು(Terrorists) ಶಿಕ್ಷಕರನ್ನು ಕೊಂದಿದ್ದಾರೆ.

ನಾನು RSS ಹೊಗಳಿಲ್ಲ: ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟ ದೇವೇಗೌಡ

ಸ್ವಾತಂತ್ರ್ಯ ಬಂದಾಗ ಈಶ್ವರಪ್ಪ ಇದ್ರಾ?: 

ಸ್ವಾತಂತ್ರ್ಯ ಬಂದಾಗ ಆರೆಸ್ಸೆಸ್‌ ಇಲ್ಲದಿದ್ದರೆ ಭಾರತ ಪಾಕಿಸ್ತಾನವಾಗುತ್ತಿತ್ತು ಎಂದು ಸಚಿವ ಈಶ್ವರಪ್ಪ ನೀಡಿರುವ ಹೇಳಿಕೆಗೆ ಪ್ರತ್ರಿಕ್ರಿಯಿಸಿದ ಕುಮಾರಸ್ವಾಮಿ, ಸ್ವಾತಂತ್ರ್ಯ ಬಂದಾಗ ಈಶ್ವರಪ್ಪ(KS Eshwarappa) ಹುಟ್ಟಿದ್ದರಾ? ಆ ಸಮಯದಲ್ಲಿ ಯಾರಾರ‍ಯರು ಏನು ಕೊಡುಗೆ ನೀಡಿದ್ದಾರೆ ಎಂದು ಈಶ್ವರಪ್ಪನವರಿಗೆ ಏನು ಗೊತ್ತು? ಆರೆಸ್ಸೆಸ್‌ನವರು ಬಂದು ಭಾರತ ಪಾಕಿಸ್ತಾನವಾಗುವುದನ್ನು ತಪ್ಪಿಸಿದರಾ ಎಂದು ಕಿಡಿಕಾರಿದರು.

ಚರ್ಚೆಗೆ ಬರಲಿ: 

ಆರ್‌ಎಸ್‌ಎಸ್‌ ಪ್ರಚಾರಕರೇ ಒಬ್ಬ ಲೇಖಕನ ಮುಂದೆ ಹೇಳಿರುವುದನ್ನು ನಾನು ಹೇಳಿದ್ದೇನೆಯೇ ಹೊರತು ಮತ್ತೇನು ಅಲ್ಲ. ನಾನು ಆರ್‌ಎಸ್‌ಎಸ್‌ ಬಗ್ಗೆ ನೀಡಿರುವ ಹೇಳಿಕೆಯ ಕುರಿತು ಬದ್ಧನಾಗಿದ್ದು, ಅವರ ಅಜೆಂಡಾಗಳ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರು ಚರ್ಚೆಗೆ ಬರಲಿ ಎಂದು ತಿಳಿಸಿದರು. ಇದೇವೇಳೆ ಬಿಜೆಪಿ ನಾಯಕರು ಕಾಂಗ್ರೆಸ್‌(Congress) ನಾಯಕರ ಜತೆ ವಾದ ಮಾಡಿದ ರೀತಿಯಲ್ಲಿ ನನ್ನ ಜತೆ ಚರ್ಚೆಗೆ ಬರುವುದು ಬೇಡ. ನಾನು ದಾಖಲೆಗಳನ್ನು ಆಧಾರದಲ್ಲಿ ಇಟ್ಟುಕೊಂಡು ಮಾತನಾಡುತ್ತೇನೆ ಎಂದರು.
 

click me!