ಜನರ ದುಡ್ಡಲ್ಲಿ ಬಿಜೆಪಿ ಸರ್ಕಾರ ಮೋಜು: ಕುಮಾರಸ್ವಾಮಿ

By Kannadaprabha NewsFirst Published Dec 22, 2022, 2:30 AM IST
Highlights

ಜೆಡಿಎಸ್‌ ಸರ್ಕಾರ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ಮುಂದಿನ ದಿನಗಳಲ್ಲಿ ಕೃಷಿ ಕಡೆಗೆ ಯುವ ಜನಾಂಗವನ್ನು ಸೆಳೆಯಲು ಪಂಚರತ್ನ ಯೋಜನೆಯಲ್ಲಿ ರೈತ ಬಂಧು ಹೆಸರಿನಲ್ಲಿ ಯೋಜನೆ ಜಾರಿ, ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಅಗತ್ಯಕ್ರಮ, ಆರೋಗ್ಯ ಯೋಜನೆ ಜಾರಿಗೊಳಿಸುವುದು: ಕುಮಾರಸ್ವಾಮಿ 

ಭಾರತೀನಗರ(ಡಿ.22): ರಾಜ್ಯದ ಖಜಾನೆ ತುಂಬಿಸುವ ಜನರು ಸಂಕಷ್ಟದಲ್ಲಿದ್ದರೆ ಬಿಜೆಪಿ ಸರ್ಕಾರ ಖಜಾನೆ ದುಡ್ಡಲ್ಲಿ ಮೋಜು ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಭಾರತೀನಗರಕ್ಕೆ ಆಗಮಿಸಿದ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಸಾರ್ವಜನಿಕರು, ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಸರ್ಕಾರ ರಾಜ್ಯದ ಮುಗ್ದಜನರನ್ನು ವಂಚಿಸುತ್ತಲೇ ಬರುತ್ತಿದೆ. ಜನರಿಗಾಗಿ, ರಾಜ್ಯ ಅಭಿವೃದ್ಧಿಗೆ ಯಾವುದೇ ಮಹತ್ವ ನೀಡಿಲ್ಲ. ಜನರ ತೆರಿಗೆ ಹಣ ದುರುಪಯೋಗವಾಗುತ್ತಿದೆ ಎಂದು ಛೇಡಿಸಿದರು.

ಇಂದು ಕೃಷಿಕರ ಬದುಕು ಸಂಕಷ್ಟದ ಸರಮಾಲೆಯಾಗಿದೆ. ಹವಾಮಾನ ವೈಪರಿತ್ಯದಿಂದ ಅಕಾಲಿಕವಾಗಿ ಮಳೆಯಿಂದಾಗಿ ಬೆಳೆ ಕಳೆದುಕೊಳ್ಳುವ ರೈತರಿಗೆ ಅಧಿಕಾರ ನಡೆಸುವ ಸರ್ಕಾರಗಳು ನೆರವಿಗೆ ಬಾರದಿರುವುದು ವಿಪರ್ಯಾಸದ ಸಂಗತಿ. ಇದರಿಂದ ಯುವ ಜನಾಂಗ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Mandya: ಅಧಿವೇಶನದಲ್ಲಿ ಚರ್ಚಿತ ವಿಷಯಗಳು ಎಷ್ಟು ಜಾರಿಯಾಗಿವೆ?: ಕುಮಾರಸ್ವಾಮಿ ಪ್ರಶ್ನೆ

ಜೆಡಿಎಸ್‌ ಸರ್ಕಾರ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ಮುಂದಿನ ದಿನಗಳಲ್ಲಿ ಕೃಷಿ ಕಡೆಗೆ ಯುವ ಜನಾಂಗವನ್ನು ಸೆಳೆಯಲು ಪಂಚರತ್ನ ಯೋಜನೆಯಲ್ಲಿ ರೈತ ಬಂಧು ಹೆಸರಿನಲ್ಲಿ ಯೋಜನೆ ಜಾರಿ, ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಅಗತ್ಯಕ್ರಮ, ಆರೋಗ್ಯ ಯೋಜನೆ ಜಾರಿಗೊಳಿಸುವುದು. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.ಕಳೆದ ಒಂದು ತಿಂಗಳಿಂದ ಕಬ್ಬಿನ ಬೆಲೆ ನಿಗದಿಗೆ ಒತ್ತಾಯಿಸಿ ಜಿಲ್ಲೆಯ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆಳುವ ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಪ್ರತಿಭಟನಾಕಾರರನ್ನು ಭೇಟಿಮಾಡಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿತ್ತು ಎಂದು ಅಸಮಧಾನ ವ್ಯಕ್ತಪಡಿಸಿದರು.

ಈ ವೇಳೆ ಶಾಸಕ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್‌, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಸ್ತೂರು ಬಿಳಿಯಪ್ಪ, ಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಹೊನ್ನೇಗೌಡ, ತಾಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಡಿ.ಸಿ.ತಮ್ಮಣ್ಣ ಪುತ್ರಿ ಸೌಮ್ಯರಮೇಶ್‌, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಎಚ್‌.ಎಂ.ಮರಿಮಾದೇಗೌಡ, ಅಣ್ಣೂರು ನವೀನ್‌, ಗುರುದೇವರಹಳ್ಳಿ ಅರವಿಂದ್‌ ಸೇರಿದಂತೆ ಇತರರಿದ್ದರು.

click me!