
ಬೆಂಗಳೂರು(ಫೆ.08): ಬ್ರಾಹ್ಮಣ ಸಮುದಾಯ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಮಂಗಳವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇವರೆಲ್ಲ ಪತಿವ್ರತೆಯರಾ? ನನ್ನ ಬಗ್ಗೆ ಎಚ್ಚರಿಕೆಯಿಂದ ಮಾತನಾಡಿ’ ಎಂದು ತೀಕ್ಷ$್ಣವಾಗಿ ಹೇಳಿದರು.
ಬಿಎಂಎಸ್ ಸಂಸ್ಥೆಯ ಟ್ರಸ್ಟಿದಯಾನಂದ ಪೈ ಜತೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಊಟ ಮಾಡುತ್ತಿರುವ ಫೋಟೋವೊಂದನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಅಶ್ವತ್ಥನಾರಾಯಣ ಅವರೇನೋ ಹೇಳಿದ್ದಾರೆ. ಬಿಎಂಎಸ್ನಲ್ಲಿ ತಿಂದದ್ದು ನಾನಲ್ಲ. ಟ್ರಸ್ಟ್ ಬರೆದುಕೊಟ್ಟವರ ಜತೆ ಊಟ ಮಾಡುತ್ತಿದ್ದಾರೆ. ಅಧಿವೇಶನದಲ್ಲಿ ನಾನು ದಾಖಲೆ ಕೊಟ್ಟರೆ ಒಬ್ಬರಾದರೂ ಮಾತನಾಡಿದರಾ? ಇದನ್ನು ನಾನು ಇಲ್ಲಿಗೆ ಬಿಡುವುದಿಲ್ಲ. ಸರ್ಕಾರ ಬರಲಿ ಎಂದು ಕಾಯುತ್ತಿದ್ದೇನೆ ಎಂದರು. .
ಬ್ರಾಹ್ಮಣ ಹೇಳಿಕೆಗೆ ಬದ್ಧ, ಕುಮಾರಸ್ವಾಮಿ ಮಾತಿಗೆ ಕರ್ನಾಟಕದಲ್ಲಿ ಯುದ್ಧ!
ಅಮಾಯಕ ಕುಟುಂಬದ ಮೇಷ್ಟು್ರ ಒಬ್ಬರು ಕೆಆರ್ಎಸ್ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಅವರು ಯಾಕೆ ಸಾವನ್ನಪ್ಪಿದರು? ಅದಕ್ಕೂ, ಸಿ.ಟಿ.ರವಿಗೂ ಇರುವ ಸಂಬಂಧ ಏನು? ಇದಕ್ಕೆ ಅವರು ಯಾಕೆ ಉತ್ತರ ಕೊಡುತ್ತಿಲ್ಲ. ಇವರೆಲ್ಲಾ ಸಾಚಾಗಳು, ನಾನು ಕಾಣದೇ ಇರುವವರಾ? ಎಚ್ಚರಿಕೆ ಇರಲಿ ನಮ್ಮ ಬಗ್ಗೆ ಮಾತನಾಡುವಾಗ’ ಎಂದರು.
‘ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಬಂದಾಗ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ವೇದಿಕೆಗೆ ಯಾಕೆ ಹತ್ತಿಸಲಿಲ್ಲ. ಅವರಿಗೆ ಅಪಮಾನ ಮಾಡಿದರು. ನನ್ನ ಮೈತ್ರಿ ಸರ್ಕಾರ ತೆಗೆದು ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ಅವರನ್ನು ಯಾಕೆ ಇಳಿಸಿದರು? ಬಿಜೆಪಿ ಹೈಕಮಾಂಡ್ ಯಾವ ರೀತಿ ನಡೆದುಕೊಳ್ಳುತ್ತಿದೆ? ಮಾತನಾಡಿದರೆ ಇಡಿ, ಐಟಿ ಎಂದು ಹೆದರಿಸುತ್ತಾರೆ. ಅದರ ಹಿಂದೆ ಇರುವ ಕಾಣದ ಕೈಗಳು ಯಾವುವು ಎನ್ನುವ ಮಾಹಿತಿ ನನಗೂ ಇದೆ’ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.
ಎಚ್ಡಿಕೆ ತೀರಾ ಕೆಳಮಟ್ಟಕ್ಕೆ: ಅಶ್ವತ್ಥ ತಿರುಗೇಟು
ಕುಮಾರಸ್ವಾಮಿ ಅವರು ನಾವು ಎಲ್ಲಿ ಊಟ ಮಾಡುತ್ತೇವೆ ಎಂದು ಗೂಢಚಾರಿಕೆ ಪ್ರಾರಂಭಿಸಿದ್ದಾರೆ. ಇಂತಹ ಕೆಳಮಟ್ಟಕ್ಕೂ ಇಳಿಯಬಹುದು ಎಂಬುದಾಗಿ ಅವರು ಸಾಬೀತು ಮಾಡಿದ್ದಾರೆ ಎಂದು ಸಚಿವ ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದಾರೆ.
ಬ್ರಾಹ್ಮಣರು ಮುಖ್ಯಮಂತ್ರಿಯಾದರೆ ತಪ್ಪೇನು?: ಸುಭುದೇಂದ್ರತೀರ್ಥ ಶ್ರೀ ಪ್ರಶ್ನೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಯಾನಂದ ಪೈ ಅವರು ಗೌರವಾನ್ವಿತ ವ್ಯಕ್ತಿ. ಸಾಕಷ್ಟುಸಾಮಾಜಿಕ ಕೊಡುಗೆ ನೀಡಿದ್ದಾರೆ. ದಯಾನಂದ ಪೈ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಪರಿಚಯ ಇದೆ. ಅವರಿಗೆ ಪರಿಚಯ ಇಲ್ಲದವರ ಜತೆ ಏನೂ ಕೂತು ಊಟ ಮಾಡಿಲ್ಲ. ಅವರೊಂದಿಗೆ ಊಟ ಮಾಡಿದ್ದನ್ನೂ ಪ್ರಶ್ನೆ ಮಾಡಿದ್ದಾರೆ. ಊಟ ಮಾಡಿದ್ದನ್ನು ಪ್ರಶ್ನಿಸುವ ಮಟ್ಟಕ್ಕೂ ಕುಮಾರಸ್ವಾಮಿ ಇಳಿದಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಯಾರಿಗೂ ಯಾವುದನ್ನೂ ಬರೆದುಕೊಡಲು ಆಗುವುದಿಲ್ಲ. ಏನೇ ಆದರೂ ಕಾನೂನು ಪ್ರಕಾರವೇ ಆಗಿದೆ. ಕಾನೂನು ಮೀರಿ ಯಾವುದನ್ನೂ ನಾನು ಮಾಡಿಲ್ಲ. ಬಿಎಂಎಸ್ ಸಂಸ್ಥೆಯ ಶೇ.90ರಷ್ಟು ಸೀಟುಗಳು ಸಿಇಟಿ ಮೂಲಕವೇ ಭರ್ತಿಯಾಗುತ್ತಿವೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.