
ಬೆಂಗಳೂರು (ಜೂ.08): ಕಾಂಗ್ರೆಸ್ ಪಕ್ಷ ಗೆಲುವಿನ ಅಮಲಿನಲ್ಲಿ ಆಕಾಶದಲ್ಲಿದೆ. ನಾವು ನೆಲದಲ್ಲಿ ಇದ್ದೇವೆ. ನಾವು ಆಕಾಶಕ್ಕೆ ಏರಲು ಆಗುತ್ತಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ಸಿಗೆ ಟಾಂಗ್ ಕೊಟ್ಟಿದ್ದಾರೆ. ಬುಧವಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಲು ಬಂದಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಬೀಳ್ಕೊಟ್ಟ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲರೂ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆಯೇ ಮಾತನಾಡುತ್ತಿದ್ದಾರೆ. ಎಲ್ಲಿಗೆ ಬರುತ್ತೆ ಎಂದು ನೋಡೋಣ. ನಾವು ಕಾಂಗ್ರೆಸ್ ಜೊತೆ ರಾಜಕೀಯದಲ್ಲಿ ಭಾಗಿಯಾಗಲು ಆಗುತ್ತಾ? ಕಾಂಗ್ರೆಸ್ನವರು ನಮ್ಮನ್ನು ಲೆಕ್ಕಕ್ಕೂ ಇಟ್ಟಿಲ್ಲ.
ಕಾಂಗ್ರೆಸ್ನವರು ಆಕಾಶದ ಮೇಲೆ ಇದ್ದಾರೆ, ನಾವು ಭೂಮಿ ಮೇಲೆ ಇದ್ದೇವೆ. ಅಂತಹವರ ಜೊತೆ ನಾವು ಚರ್ಚೆ ಮಾಡಲು ಆಗುತ್ತಾ ಎಂದರು. ಗ್ಯಾರಂಟಿಗಳ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಚುನಾವಣೆಗಾಗಿ ಜನರ ಮತ ಪಡೆಯಲು ಅಂತಹ ಸಂದರ್ಭದಲ್ಲಿ ಚೀಪ್ ಗಿಮಿಕ್ ಸರ್ವೇಸಾಮಾನ್ಯ ಎಂದು ಅವರು ಹೇಳಿದ್ದಾರೆ. ಆ ವಿಡಿಯೋ ನಾನು ನೋಡಿದ್ದೇನೆ, ಕೇಳಿಸಿಕೊಂಡಿದ್ದೇನೆ. ಸತ್ಯಾಂಶಗಳು ಒಂದೊಂದೇ ಹೊರಗೆ ಬರುತ್ತಿವೆ. ಮತ ಪಡೆಯಲು ನಾಡಿನ ಜನತೆಯನ್ನು ಯಾವ ರೀತಿ ದಾರಿ ತಪ್ಪಿಸಿದ್ದೇವೆ ಎಂದು ಅವರೇ ಹೇಳಿಕೊಂಡಿದ್ದಾರೆ. ಕೊನೆಪಕ್ಷ ಹೀಗೆ ಸತ್ಯ ಒಪ್ಪಿಕೊಳ್ಳುವ ಮೂಲಕ ತಮ್ಮ ಸಾಚಾತನ ತೋರಿಸುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಫ್ರೀ ಬಸ್ ಪಾಸ್ನಲ್ಲಿ ಸ್ತ್ರೀಯರಿಗೆ ದೂರದ ಮಿತಿ ಇಲ್ಲ: ಜೂ.11ಕ್ಕೆ ಶಕ್ತಿ ಯೋಜನೆಗೆ ಸಿಎಂ ಚಾಲನೆ
ಮತ್ತೆ 4 ಜಿಲ್ಲೆಗಳ ಮುಖಂಡರ ಜೊತೆ ಎಚ್ಡಿಕೆ ಸಭೆ: ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ ಜಿಲ್ಲಾವಾರು ಆತ್ಮಾವಲೋಕನ ಸಭೆಗಳನ್ನು ನಡೆಸುತ್ತಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ಸಹ ಕೆಲವು ಜಿಲ್ಲೆಗಳ ಮುಖಂಡರ ಜತೆ ಸಮಾಲೋಚನೆ ನಡೆಸಿದರು. ಮಂಡ್ಯ, ಮೈಸೂರು, ಹಾಸನ, ಕೊಡಗು ಜಿಲ್ಲೆಯ ಮುಖಂಡರ ಜತೆ ಪ್ರತ್ಯೇಕ ಸಭೆ ನಡೆಸಿ ಮುಂಬರುವ ಚುನಾವಣೆಗಳತ್ತ ಹೆಚ್ಚಿನ ಗಮನಹರಿಸುವಂತೆ ನಿರ್ದೇಶನ ನೀಡಿದರು. ವಿಧಾನಸಭೆ ಚುನಾವಣೆಯಲ್ಲಿ ಸಾಕಷ್ಟುಶ್ರಮ ಹಾಕಲಾಯಿತು. ಆದರೂ ಪಕ್ಷದಲ್ಲಿನ ಸಮನ್ವಯತೆ ಕೊರತೆಯಿಂದ ಹಿನ್ನಡೆಯುಂಟಾಗಿದೆ.
ಕಾಡುಹಂದಿಗಳ ದಾಳಿಯಿಂದ ಗಾಯಗೊಂಡಿದ್ದ ನಾಲ್ಕು ವರ್ಷದ ಚಿರತೆ ಸಾವು!
ವಿಧಾನಸಭೆ ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನ ಇಲ್ಲ. ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಚುನಾವಣೆಗಳತ್ತ ಗಮನಹರಿಸಬೇಕು. ಚುನಾವಣೆಯಲ್ಲಿ ಸಂಘಟಿತರಾಗಿ ಕೆಲಸ ಮಾಡಬೇಕು. ಮುಂಬರುವ ಚುನಾವಣೆಯಲ್ಲಿ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವತ್ತ ಕೆಲಸ ಮಾಡಬೇಕು. ಅಲ್ಲದೇ, ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿಯೂ ಕಾರ್ಯೋನ್ಮುಖವಾಗಬೇಕಿದೆ. ಪಕ್ಷವನ್ನು ಬಲಗೊಳಿಸಬೇಕು. ಇದಕ್ಕಾಗಿ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಸೂಚಿಸಿದರು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.