
ಶಿವಮೊಗ್ಗ (ಜೂ.19): ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಪ್ರಧಾನಿಗಳು ವಿದೇಶಕ್ಕೆ ಹೋದರೆ ಸಾಲ ಕೇಳೋಕೆ ಬಂದಿದ್ದಾರೆ ಎನ್ನುತ್ತಿದ್ದರು. ಆದರೆ, ಮೋದಿ ಪ್ರಧಾನಿಯಾದ ಬಳಿಕ ವಿದೇಶದವರು ಮೋದಿ ಬಳಿ ಸಾಲ ಕೇಳಿಕೊಂಡು ಬರುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆ ಭಾನುವಾರ ನಗರದ ಸಾಗರ ರಸ್ತೆಯ ಪಿ.ಇ.ಎಸ್. ಕಾಲೇಜು ಆವರಣದ ಪ್ರೇರಣಾ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಜನಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಇಬ್ಬರು ಮೋಸಗಾರರಿದ್ದಾರೆ. ಅದರಲ್ಲಿ ಒಬ್ಬ ಕಳ್ಳ, ಇನ್ನೊಬ್ಬ ಮಳ್ಳ. ಚುನಾವಣೆಗೂ ಮುನ್ನ ಎಲ್ಲರಿಗೂ ಫ್ರೀ ಎಂದು ಈಗ ಎಲ್ಲದಕ್ಕೂ ಕಂಡೀಶನ್ ಹಾಕುತ್ತಿದ್ದಾರೆ. ಚುನಾವಣೆ ಮುಂಚೆಯೇ ಇದೆಲ್ಲ ಹೇಳಬೇಕಿತ್ತು ಎಂದು ಹರಿಹಾಯ್ದರು.
ಯೋಜನೆಗಳ ಫಲಿತಾಂಶದ ಸಮಗ್ರ ವರದಿ ಸಲ್ಲಿಸಿ: ಅಧಿಕಾರಿಗಳಿಗೆ ಸಂಸದ ಡಿ.ಕೆ.ಸುರೇಶ್ ಸೂಚನೆ
ಇಷ್ಟು ದಿನ ಅನ್ನಭಾಗ್ಯ ನಮ್ಮ ಕೊಡುಗೆ ಎನ್ನುತ್ತಿದ್ದ ಕಾಂಗ್ರೆಸ್ನವರ ಬಣ್ಣ ಈಗ ಬಯಲಾಗಿದೆ. ಕೇಂದ್ರ ಸರ್ಕಾರದಿಂದ ಕೊಡುತ್ತಿದ್ದ ಅಕ್ಕಿಯನ್ನು ಇವರು ನಮ್ಮ ಭಾಗ್ಯ ಎನ್ನುತ್ತಿದ್ದರು. ಈಗ ಗ್ಯಾರಂಟಿಯಲ್ಲಿ ಹೇಳಿದಂತೆ 10 ಕೆ.ಜಿ. ಅಕ್ಕಿ ಕೊಡಲು ಒದ್ದಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಬಡವರಿಗೆ ಅಕ್ಕಿ ಕೊಡುತ್ತಿಲ್ಲ ಎಂದು ಹೊಸ ನೆಪ ಹೇಳುತ್ತಿದ್ದಾರೆ. ಇವರಿಗೆ ನರೇಂದ್ರ ಮೋದಿ ಯಾಕೆ ಅಕ್ಕಿ ಕೊಡಬೇಕು? ಇವರೇನೂ ನರೇಂದ್ರ ಮೋದಿ ಅವರನ್ನು ಕೇಳಿ ಗ್ಯಾರಂಟಿ ಘೋಷಣೆ ಮಾಡಿದ್ದರಾ ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಉಚಿತ ಅಕ್ಕಿ ಕೊಡುವ ಕೆಲಸ ಮಾಡುತ್ತಿದೆ. ಇದು ಈಗ ಜನರಿಗೆ ಗೊತ್ತಾಗುತ್ತಿದೆ. ಕಾಂಗ್ರೆಸ್ನವರಿಗೆ ಅಕ್ಕಿ ಕೊಡಲು ಆಗಲ್ಲ ಎಂದರೆ ಅಕ್ಕಿಯ ಹಣವನ್ನು ಜನರ ಬ್ಯಾಂಕ್ ಖಾತೆಗೆ ಹಾಕಲಿ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಮತದಾರರಿಂದ ಬಿಜೆಪಿಗೆ ತಕ್ಕ ಪಾಠ ಸಿಕ್ಕಿದೆ: ಸಚಿವ ಮಹದೇವಪ್ಪ
ಮುಂದಿನ ಚುನಾವಣೆಯಲ್ಲಿ ಜನರೇ ಮೋಸಗಾರರಿಗೆ ತಕ್ಕ ಉತ್ತರ ಕೊಡುತ್ತಾರೆ. ಮುಂದೆ ತಾಪಂ, ಜಿಪಂ, ಲೋಕಸಭಾ ಚುನಾವಣೆಗೆಳು ಬರುತ್ತವೆ. ಆಗ ನಾವು ಈ ರೀತಿಯ ಸುಳ್ಳು ಹೇಳಲ್ಲ. ದೇಶ ಅಭಿವೃದ್ಧಿ ಮಾಡುತ್ತೇವೆ, ದೇಶದ ಗೌರವವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿ ಜನರ ಬಳಿ ಹೋಗುತ್ತೇವೆ. ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡೇ ಮಾಡುತ್ತೇವೆ
- ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.