
ಕೊಪ್ಪಳ (ಡಿ.24): ರಾಜ್ಯದಲ್ಲಿ ಹಿಜಾಬ್ ನಿಷೇಧ ವಾಪಸ್ ಪಡೆದಿರುವುದು ಕಾಂಗ್ರೆಸ್ ಪಕ್ಷದ ಕುತಂತ್ರವಾಗಿದೆ. ಅಭಿವೃದ್ಧಿ ಮಾಡದ ಸಿದ್ದರಾಮಯ್ಯ ಹಿಜಾಬ್ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಜನರ ಹಿತ ಮುಖ್ಯವಲ್ಲ. ಇಂಥ ವಿಷಯದಲ್ಲಿ ರಾಜಕೀಯ ಮಾಡಿ, ವೋಟ್ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ದೀನ-ದಲಿತರನ್ನು ಸರಿಯಾಗಿ ನೋಡಿಕೊಳ್ಳುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ ಈಗ ದಲಿತರ ಪರ ಕಾಳಜಿ ತೋರಿಸುತ್ತಿದೆ. ಕಳೆದ 50 ವರ್ಷಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಡೆಸಿಕೊಂಡ ರೀತಿ ಎಲ್ಲರಿಗೂ ಗೊತ್ತಿದೆ.
ಈಗೀಗ ಬಿ.ಕೆ. ಹರಿಪ್ರಸಾದ್ ಅವರನ್ನು ನಡೆಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿದೆ. ದಲಿತರ ಬಗ್ಗೆ ಕಾಂಗ್ರೆಸ್ನಲ್ಲಿ ಕಾಳಜಿಯೇ ಇಲ್ಲ. ವೋಟ್ಬ್ಯಾಂಕ್ ಮತಕ್ಕಾಗಿ ಕುತಂತ್ರ ಮಾಡುತ್ತಲೇ ಬಂದಿದೆ ಎಂದು ಟೀಕಿಸಿದರು. ಕೇಂದ್ರ ಸಚಿವ ನಾರಾಯಣಸ್ವಾಮಿ ರಾಜಕೀಯ ನಿವೃತ್ತಿ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಈಗಾಗಲೇ ದೇಶದಲ್ಲಿ "ಇಂಡಿಯಾ" ಛಿದ್ರವಾಗಿದೆ. ಬಿಜೆಪಿಯ ಎನ್ಡಿಎ ವಿರುದ್ಧ ಕಟ್ಟಿದ "ಇಂಡಿಯಾ" ಸಂಘಟನೆಯಾಗುವ ಮೊದಲೇ ಒಡೆದು ಹೋಗುತ್ತಿದೆ. ಇದು ರಚನೆಯಾದ ಬಳಿಕ ನಡೆದ ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಎಲ್ಲವನ್ನೂ ಸಾರಿ ಹೇಳುತ್ತದೆ ಎಂದರು.
ಟಿಪ್ಪು ಬಳಿಕ 2ನೇ ಅವತಾರವೇ ಸಿದ್ದರಾಮಯ್ಯ: ಶಾಸಕ ಬಸನಗೌಡ ಯತ್ನಾಳ
ಕಾಂಗ್ರೆಸ್ಸಿನಿಂದ ಸಾಮಾಜಿಕ ನ್ಯಾಯ ಅಸಾಧ್ಯ: ದೇಶದಲ್ಲಿ 60 ವರ್ಷಗಳ ಕಾಲ ಆಳ್ವಿಕೆ ನಡೆಸಿರುವ ಕಾಂಗ್ರೆಸ್ ಸರ್ಕಾರ ದಲಿತರನ್ನು ಉದ್ಧಾರ ಮಾಡಲು ಆಗಿಲ್ಲ. ಕಾಂಗ್ರೆಸ್ ಪಕ್ಷದಿಂದ ಸಾಮಾಜಿಕ ನ್ಯಾಯ ಅಸಾಧ್ಯ. ಬಿಜೆಪಿ ಸದಾ ಸಾಮಾಜಿಕ ನ್ಯಾಯದ ಪರವಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. ನಗರದ ಶಿವಶಾಂತ ಮಂಗಲ ಭವನದಲ್ಲಿ ಮಾದಿಗ ಮುನ್ನಡೆ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಸಮಾನತೆಗಾಗಿ ಹಿಂದೆ ದೊಡ್ಡ ಹೋರಾಟ ನಡೆದಿವೆ. ಜಾತಿ, ಧರ್ಮ, ದೇವರ ಹೆಸರಿನಲ್ಲಿ ಶೋಷಣೆ ನಡೆದಿವೆ.
ಶೋಷಿತರ ಮೇಲೆತ್ತಲು ವಿಶ್ವಗುರು ಬಸವಣ್ಣ ಸಾಮಾಜಿಕ ಕ್ರಾಂತಿ ನಡೆಸಿದರು. ಭೂಮಿ ಮೇಲೆ ಜನಿಸಿದವರು ಯಾರೂ ಮೇಲಲ್ಲ, ಕೀಳಲ್ಲ ಎಂದು ಸಾರಿದವರು. ಈ ಸಮಾಜದಲ್ಲಿ ಗಂಡು, ಹೆಣ್ಣು ಎರಡೇ ಜಾತಿ ಎಂದು ಹೇಳಿದವರು. ಆದರೆ 900 ವರ್ಷ ಕಳೆದರೂ ಇನ್ನೂ ಶೋಷಣೆ ನಡೆಯುತ್ತಲೇ ಇದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರ ಪರ ಅಂಬೇಡ್ಕರ್ ಹೋರಾಡಿದರು ಎಂದರು. ದೇಶದಲ್ಲಿ 1950ರಲ್ಲಿ ಮೊದಲಿಗೆ ಮೀಸಲಾತಿ ಹೋರಾಟ ನಡೆಯಿತು. ಆಗ ಎಸ್ಸಿ ಪಟ್ಟಿಯಲ್ಲಿ ಆರು ಜಾತಿಗಳಿದ್ದವು. ಈಗ 101 ಜಾತಿಗಳಾಗಿವೆ. ಇದರಲ್ಲೂ ಅವರಿಗೆ ನ್ಯಾಯ ನೀಡುವ ಬದಲು ವೋಟ್ ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದೆ.
ಪ್ರತಾಪ ಸಿಂಹ ಗುಹೆ ಸೇರಿದ್ರಾ ಅಬ್ಬರಿಸುತ್ತಿದ್ದ ಸಿ.ಟಿ.ರವಿ ಎಲ್ಲಿ: ಸಚಿವ ತಂಗಡಗಿ ಪ್ರಶ್ನೆ
ಮಾದಿಗರ ಮೀಸಲಾತಿಗೆ ರಾಜ್ಯದಲ್ಲಿ ನಿರಂತರ ಹೋರಾಟ ನಡೆದಾಗ ಅಂದಿನ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ ಒಳ ಮೀಸಲಾತಿಗಾಗಿ ನ್ಯಾ.ಸದಾಶಿವ ಆಯೋಗ ರಚಿಸಿ ಆಯೋಗಕ್ಕೆ ಸಿಬ್ಬಂದಿ, ಹಣವನ್ನೂ ಕೊಟ್ಟಿರಲಿಲ್ಲ. ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಾಗ ಆಯೋಗಕ್ಕೆ ₹11 ಕೋಟಿ ನೀಡಿತಲ್ಲದೇ 2012ರಲ್ಲಿ ಆಯೋಗವು ಅಂದಿನ ಸಿಎಂ ಸದಾನಂದ ಗೌಡರಿಗೆ ವರದಿ ಒಪ್ಪಿಸಿತು. ಆಗಲೇ ನಾವು ಕೇಂದ್ರಕ್ಕೆ ಪತ್ರ ಬರೆದು 341 ಕಲಂನಡಿ ಒಳ ಮೀಸಲಾತಿಗೆ ಅಭಿಪ್ರಾಯ ಕೇಳಿದ್ದೆವು. ಆಗ ಸಂಸದ ಮುನಿಯಪ್ಪ ಮಾತೇ ಆಡಲಿಲ್ಲ. ಆಂಜನೇಯ, ತಿಮ್ಮಾಪುರ ಅವರಿಗೂ ಮನವಿ ಮಾಡಿದಾಗ ಮೀಸಲಾತಿ ಬಗ್ಗೆ ಮಾತನಾಡಿಲ್ಲ. ಅವರಿಗೆ ಅಧಿಕಾರ ಇಲ್ಲದಿದ್ದಾಗ ಒಳ ಮೀಸಲು ಕಾಳಜಿ ಇರುತ್ತೆ. ಅಧಿಕಾರ ಇದ್ದಾಗ ಕಾಳಜಿ ಇರಲ್ಲ ಎಂದು ಲೇವಡಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.